Advertisement

By Election: ಸಿಪಿವೈ ನಡೆಯತ್ತ ಎಲ್ತರ ಚಿತ್ತ

12:11 PM Aug 25, 2024 | Team Udayavani |

ರಾಮನಗರ: ಚನ್ನಪಟ್ಟಣ ಉಪಚುನಾವಣೆ ಘೋಷಣೆಗೂ ಮುನ್ನಾ ಕಾಂಗ್ರೆಸ್‌ ಮತ್ತು ಎನ್‌ಡಿಎ ಪಾಳಯದಲ್ಲಿ ನಿರಂತರ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆಯಾದರೂ ಅಭ್ಯರ್ಥಿ ಅಖೈರು ಗೊಳಿಸುವುದಕ್ಕೆ ಯೋಗೇಶ್ವರ್‌ ನಡೆಯೇ ಅಡ್ಡಿಯಾಗಿದೆ.

Advertisement

ಹೌದು, ಎನ್‌ಡಿಎ ಪಾಳಯದಲ್ಲಿ ಬಂಡೆದ್ದಿರುವ ಯೋಗೇಶ್ವರ್‌ ನನಗೆ ಎನ್‌ಡಿಎ ಟಿಕೆಟ್‌ ಸಿಗಲಿ ಸಿಗದೇ ಇರಲಿ ಸ್ಪರ್ಧೆಮಾಡುವುದು ಖಚಿತ ಎಂದು ಘೋಷಿಸಿದ್ದಾರೆ.

ಸೈನಿಕನ ಈ ನಡೆ ಒಂದೆಡೆ ದಳಪತಿಗಳಿಗೆ, ಮತ್ತೂಂದೆಡೆ ಕೈ ಪಾಳಯಕ್ಕೆ ಗೊಂದಲ ತಂದಿಟ್ಟಿದ್ದು, ಯೋಗೇಶ್ವರ್‌ ನಡೆಯನ್ನು ನಿರ್ಧರಿಸಿ ಅಭ್ಯರ್ಥಿಯನ್ನು ಆಯ್ಕೆಮಾಡುವ ಬಗ್ಗೆ ಎರಡೂ ಪಕ್ಷಗಳು ಕಾಯ್ದು ನೋಡುತ್ತಿದ್ದಾರೆ.

ಯೋಗೇಶ್ವರ್‌ಗೆ ಅಲ್ಟಿಮೇಟ್‌ ವಾರ್‌: ಚನ್ನಪಟ್ಟಣ ಉಪಚುನಾವಣೆ ಯೋಗೇಶ್ವರ್‌ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ನಿರ್ಣಾಯಕ ಕಣವಾಗಿ ಪರಿಣಮಿಸಿದೆ. ಈ ಕಾರಣದಿಂದಾಗಿ ಯೋಗೇಶ್ವರ್‌ ನಾನು ಸ್ಪರ್ಧೆಮಾಡಲೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ಈ ಚುನಾವಣೆಯಲ್ಲಿ ಕ್ಷೇತ್ರ ಬಿಟ್ಟುಕೊಟ್ಟರೆ ಮತ್ತೆ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಲು ಯೋಗೇಶ್ವರ್‌ ಸಾಕಷ್ಟು ನೀರು ಕುಡಿಯಬೇಕು. ಈ ಕಾರಣದಿಂದಾಗಿ ಯೋಗೇಶ್ವರ್‌ ಕ್ಷೇತ್ರ ಬಿಟ್ಟುಕೊಡಲು ಜಪ್ಪಯ್ಯ ಎಂದರೂ ಒಪ್ಪುತ್ತಿಲ್ಲ. ಯೋಗೇಶ್ವರ್‌ ಎಚ್‌.ಡಿ.ಕುಮಾರಸ್ವಾಮಿ ಮಾತಿಗೆ ಒಪ್ಪಿ ನಿಖಿಲ್‌ ಕುಮಾರಸ್ವಾಮಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟರೆ, ತಾವಾಗೇ ಚನ್ನಪಟ್ಟಣವನ್ನು ಜನತಾದಳಕ್ಕೆ ಧಾರೆ ಎರೆದಂತಾಗುತ್ತೆ. ಮತ್ತೆ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಸಾಧ್ಯವಾಗುವುದಿಲ್ಲ ಎಂಬುದು ಯೋಗೇಶ್ವರ್‌ ಲೆಕ್ಕಾಚಾರ.

ದೆಹಲಿಗೆ ಟಿಕೆಟ್‌ ಯಾತ್ರೆ: ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟುಕೊಡಬಾರದು ಎಂದು ತೀರ್ಮಾನಿಸಿರುವ ಯೋಗೇಶ್ವರ್‌, ತಮಗೆ ಆಪ್ತವಾಗಿರುವ ರಾಜ್ಯ ಬಿಜೆಪಿ ನಾಯಕರ ಬೆಂಬಲ ಪಡೆದು ದೆಹಲಿಯಲ್ಲಿ ಲಾಭಿ ನಡೆಸಲು ಮುಂದಾಗಿದ್ದಾರೆ. ಸೋಮವಾರ ಬಿಜೆಪಿ ವರಿಷ್ಠರ ಮನವೊಲಿಸಲು ಯೋಗೇಶ್ವರ್‌ ದೆಹಲಿಗೆ ಪ್ರಯಾಣಿಸುವುದಾಗಿ ತಿಳಿಸಿದ್ದು, ಸೈನಿಕನ ದೆಹಲಿ ಯಾತ್ರೆ ಯಶಸ್ವಿಯಾಗುವುದೇ, ಟಿಕೆಟ್‌ ಪಡೆಯಲು ಬಿಜೆಪಿ ವರಿಷ್ಠರು ಮತ್ತು ಎಚ್‌.ಡಿ.ಕುಮಾರಸ್ವಾಮಿ ಬೆಂಬಲ ಪಡೆಯುವಲ್ಲಿ ಸಫಲವಾಗುವರೇ ಎಂಬ ಕುತೂಹಲ ಸದ್ಯಕ್ಕೆ ಎದುರಾಗಿದೆ.

Advertisement

ಜೆಡಿಎಸ್‌ ಮುಖಂಡರ ಬಿಗಿಪಟ್ಟು: ಯೋಗೇಶ್ವರ್‌ಗೆ ಟಿಕೆಟ್‌ ಕೊಡಲು ಚನ್ನಪಟ್ಟಣದ ಕೆಲ ಜೆಡಿಎಸ್‌ ಮುಖಂಡರು ಸುತಾರಾಂ ಒಪ್ಪುತ್ತಿಲ್ಲ. ಈ ತಂಡದಲ್ಲಿ ತಾಲೂಕು ಜೆಡಿಎಸ್‌ ಅಧ್ಯಕ್ಷ ಎಚ್‌.ಸಿ.ಜಯಮುತ್ತು ಮತ್ತು ಮುಖಂಡ ಹಾಪ್‌ಕಾಮ್ಸ್‌ ದೇವರಾಜು ಮುಂಚೂಣಿಯಲ್ಲಿದ್ದಾರೆ. ಸ್ಥಳೀಯರಿಗೆ ಟಿಕೆಟ್‌ ಎಂದರೆ ಕೆಲ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಾರೆ ಎಂಬ ಕಾರಣಕ್ಕೆ ನಿಖಿಲ್‌ ಕುಮಾರಸ್ವಾಮಿ ಹೆಸರು ಮುಂಚೂಣಿಗೆ ತಂದಿದ್ದಾರೆ. ನಿಖಿಲ್‌ ಸ್ಪರ್ಧಿಸುವುದಿಲ್ಲ ಎಂದು ಹೇಳುತ್ತಿದ್ದಾರಾದರೂ, ಯೋಗೇಶ್ವರ್‌ಗೆ ಕ್ಷೇತ್ರ ಬಿಟ್ಟುಕೊಟ್ಟರೆ ಪಕ್ಷಕ್ಕೆ ಮುಂದೆ ಚನ್ನಪಟ್ಟಣದಲ್ಲಿ ಬಲ ಇರುವುದಿಲ್ಲ ಎಂದು ಕುಮಾರಸ್ವಾಮಿಗೆ ಮನದಟ್ಟು ಮಾಡುವಲ್ಲಿ ಈ ತಂಡ ಸಫಲಗೊಂಡಿದೆ.

ನಾಬಿಡೆ, ನೀಕೊಡೆ: ಚನ್ನಪಟ್ಟಣ ಉಪಚುನಾವಣೆಗೆ ಸಂಬಂಧಿಸಿದಂತೆ ಚನ್ನಪಟ್ಟಣ ರಾಜಕೀಯ ಪಾಳಯದಲ್ಲಿ ನಾಬಿಡೆ, ನೀಕೊಡೆ ಎಂಬ ವಾತಾವರಣ ನಿರ್ಮಾಣಗೊಂಡಿದೆ. ಎನ್‌ಡಿಎಯಿಂದ ಟಿಕೆಟ್‌ ನೀಡದೇ ಇದ್ದರೂ ಸ್ವತಂತ್ರ್ಯವಾಗಿಯಾಗಲಿ, ಬೇರೆ ಯಾವುದೇ ಚಿಹ್ನೆಯಿಂದಾಗಲಿ ಸ್ಪರ್ಧೆಮಾಡುವ ಬಗ್ಗೆ ಯೋಗೇಶ್ವರ್‌ ತಿಳಿಸಿದ್ದಾರೆ.

ಆದರೆ, ಜೆಡಿಎಸ್‌ ಪಾಳಯ ಟಿಕೆಟ್‌ ಕೊಡುವುದಿಲ್ಲ ಎಂದು ನೇರವಾಗಿ ಹೇಳುತ್ತಿಲ್ಲ. ಯೋಗೇಶ್ವರ್‌ ಬಿಟ್ಟು ಹೋದ ಬಳಿಕ ಅವರಿಗೆ ಅಪವಾದ ಕಟ್ಟುವುದು ಜೆಡಿಎಸ್‌ ತಂತ್ರ. ಇತ್ತ ಯೋಗೇಶ್ವರ್‌ ಸಹ ನಾನಾಗೇ ಬಿಟ್ಟು ಹೋಗಬಾರದು ಎನ್‌ಡಿಎ ಟಿಕೆಟ್‌ ಇಲ್ಲ ಎಂದು ಖಚಿತ ಪಡಿಸಿದ ಬಳಿಕ ಬಿಟ್ಟು ಹೋದರೆ ಅನುಕೂಲವಾಗುತ್ತದೆ ಎಂಬುದು ಯೋಗೇಶ್ವರ್‌ ಲೆಕ್ಕಾಚಾರ. ಹೀಗಾಗಿ ಎರಡು ಪಾಳಯದಲ್ಲಿ ಕಾಯ್ದು ನೋಡುವ ತಂತ್ರ ಅನುಸರಿಸಲಾಗುತ್ತಿದೆ. ಯೋಗೇಶ್ವರ್‌ ನಿರ್ಧಾರ ಪ್ರಕಟಿಸಿದರೆ, ಇಲ್ಲ ಜೆಡಿಎಸ್‌ ನಿರ್ಧಾರ ಪ್ರಕಟಿಸಿದರೆ ಅಭ್ಯರ್ಥಿ ಆಯ್ಕೆ ಸುಗಮವಾಗುತ್ತದೆ.

ಕೈ ಪಾಳಯದಲ್ಲಿ ಕಾದು ನೋಡುವ ತಂತ್ರ:

ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಎಂದು ಸ್ಟ್ರಾಂಗ್‌ ಎಂಟ್ರಿ ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಸಂಘಟನೆಯನ್ನು ಚುರುಕು ಗೊಳಿಸಿದ್ದಾರಾದರೂ ಅಭ್ಯರ್ಥಿ ಯಾರು ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಕೈ ನಾಯಕರು ಚನ್ನಪಟ್ಟಣಕ್ಕೆ ಅಭ್ಯರ್ಥಿ ಕಣಕ್ಕಿಳಿಸುವ ವಿಚಾರದಲ್ಲಿ ಹೊಂದಿಸಿ, ಬರೆಯುವ ತಂತ್ರ ಅನುಸರಿಸುತ್ತಿದ್ದಾರೆ. ಈಗಾಗಲೇ ಡಿ.ಕೆ.ಸುರೇಶ್‌, ರಘುನಂದನ್‌ ರಾಮಣ್ಣ ಜೊತೆಗೆ ಒಂದಿಷ್ಟು ಹೆಸರುಗಳು ಕೇಳಿಬಂದಿವೆಯಾಗದರೂ ಯಾವುದನ್ನೂ ಅಧಿಕೃತಗೊಳಿಸಿಲ್ಲ. ಒಂದು ವೇಳೆ ಎನ್‌ಡಿಎ ಪಾಳಯದಿಂದ ಯೋಗೇಶ್ವರ್‌ ಸಿಡಿದು ಬಂದರೆ ಏನು ಮಾಡಬಹುದು ಎಂಬ ಲೆಕ್ಕಾಚಾರ ಡಿಕೆಎಸ್‌ ಸಹೋದರರದ್ದಾಗಿದೆ. ಯೋಗೇಶ್ವರ್‌ ಬಂಡಾಯವಾಗಿ ಸ್ಪರ್ಧೆಮಾಡಿದರೆ ಅವರಿಗೆ ಹೊರಗಿನಿಂದ ಬೆಂಬಲ ನೀಡುವುದಾ, ಇಲ್ಲ ಯೋಗೇಶ್ವರ್‌ರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವುದಾ ಅಥವಾ ಇಬ್ಬರ ಜಗಳದಲ್ಲಿ ಕ್ಷೇತ್ರವನ್ನು ಕಾಂಗ್ರೆಸ್‌ ಗೆದ್ದುಕೊಳ್ಳುವುದಾ ಎಂಬ ಆಯ್ಕೆಗಳನ್ನು ಮುಕ್ತವಾಗಿರಿಸಿಕೊಂಡು ಕಾಯ್ದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಒಟ್ಟಾರೆ ಯೋಗೇಶ್ವರ್‌ ಮತ್ತು ಕುಮಾರಸ್ವಾಮಿ ನಡುವೆ ಆಗುವ ತೀರ್ಮಾನದ ಮೇಲೆ ಚನ್ನಪಟ್ಟಣ ಮಿನಿಸಮರಕ್ಕೆ ಹುರಿಯಾಳುಗಳು ಅಖೈರುಗೊಳ್ಳಲಿದ್ದಾರೆ.

ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next