Advertisement

ಬದಲಾಯಿತು ಹೂಡಿಕೆ ಯೋಚನೆಗಳು…

03:14 PM Jan 15, 2018 | |

ಕಡಿಮೆ ಅವಧಿಯಲ್ಲಿ ತೆಗೆದು ಕೊಂಡ ಎರಡು ಕ್ರಾಂತಿಕಾರಿ ನಿರ್ಧಾರಗಳು ಎಂದರೆ ನೋಟಿನ ಅಮಾನ್ಯಿಕರಣ ಹಾಗೂ ಸರಕು ಸೇವಾ ತೆರಿಗೆ. ಇದನ್ನು ಪ್ರಶಂಶಿಸುವುದೂ, ಟೀಕಿಸುವುದೂ ಎರಡೂ ಬಹುಸುಲಭ. ಆದರೆ ರಾಜಕೀಯ ಹಿತಾಸಕ್ತಿಯ ಹೊರತಾಗಿಯೂ ಒಟ್ಟಾರೆ ಸಾಮಾಜಿಕ ಸುರಕ್ಷತೆಯನ್ನು ಒದಗಿಸುವ ನಿಟ್ಟಿನಲ್ಲಿ ಇವೆರಡೂ ನಿರ್ಧಾರಗಳು ಬಹುಮುಖ್ಯ.

Advertisement

ದೇಶದ ಸರ್ವತೋಮುಖ ಬೆಳವಣಿಗೆಗೆ ತಳೆದಂತಹ ನಿಲುವುಗಳು ಜಾರಿಯ ಸಮಯದಲ್ಲಾದ ಎಡರುತೊಡರುಗಳನ್ನು ಒತ್ತಟ್ಟಿಗಿಟ್ಟು ನೋಡಿದಾಗ ಇದು ಸಾಮಾನ್ಯ ಜನರ ಮೇಲೆ ಬೀರಿದ ಪರಿಣಾಮಗಳು ಬಹುಮುಖ್ಯವಾಗುತ್ತವೆ . ಹೀಗಾಗಿ ಕಳೆದ ವರ್ಷಕ್ಕಿಂತ ಈ ಸಲದ ಹೂಡಿಕೆ ಮಾಡುವ ವಿಚಾರವಾಗಿ ಸ್ವಲ್ಪ ಬಿಗಿ ಹಿಡಿತವಿರುವುದು ಸುಳ್ಳೇನಲ್ಲ.

ಅಮಾನ್ಯಿಕರಣವು ಕಪ್ಪು ಹಣವನ್ನು ಪತ್ತೆ ಮಾಡಲು ಸಾಧ್ಯವಾಗಬಹುದು ಎನ್ನುವುದು ನಿರೀಕ್ಷಿತ ಫ‌ಲನೀಡದೆ ನಿರಾಶೆಗೊಳಿಸಿತು. ರಾಷ್ಟ್ರ ಅಭಿವೃದ್ಧಿ ವೇಗವನ್ನೂ ಗಮನಾರ್ಹವಾಗಿ ಕುಂಠಿತಗೊಳಿಸಿದೆಯೆಂಬುದು ನಿರ್ವಿವಾದ. ಹಾಗೆಯೇ, ನಮ್ಮ ಹೂಡಿಕೆ ಹಾಗೂ
ಖರ್ಚುವೆಚ್ಚಗಳ ಯೋಚನೆಗಳೂ ಕೂಡ ಇವೆರಡರ ನಿರ್ಧಾರಗಳಿಂದ ಬದಲಾಗಿರುವುದೂ ಅಷ್ಟೇ ಸತ್ಯ.

ನಗರ ಪ್ರದೇಶದ ಬಹುತೇಕ ಜನರು ಕ್ರೆಡಿಟ್‌ ಹಾಗೂ ಡೆಬಿಟ್‌ ಕಾರ್ಡ್‌ ಬಳಸುತ್ತಿದ್ದು ಅಮಾನ್ಯಿಕರಣದ ಅಡ್ಡಪರಿಣಾಮ ಹೆಚ್ಚು
ಬೀರಲಿಲ್ಲವಾದರೂ ಗ್ರಾಮೀಣ ಪ್ರದೇಶದ ಆರ್ಥಿಕತೆಯನ್ನು ಕೆಲಕಾಲ ಅಲುಗಾಡಿಸಿಬಿಟ್ಟಿತು. ಹೀಗಾಗಿ ಹೂಡಿಕೆ ಎಂದರೆ ಕೇವಲ
ಮಡಿಕೆ, ಕುಡಿಕೆಯಲ್ಲಿ ಇಡುವ, ಚೀಟಿಗೆ ಹಾಕಿದ ಹಣ ಎನ್ನುತ್ತಿದ್ದವರು ಬ್ಯಾಂಕಿನ ಕಡೆ ಮುಖಮಾಡುವಂತಾಗಿದೆ. ಹೀಗಾಗಿ ಗ್ರಾಮೀಣ
ಪ್ರದೇಶದಿಂದಲೂ ಹೂಡಿಕೆ ಹೆಚ್ಚಾಗಿದೆ. ಮುಂಬರುವ ದಿನಗಳಲ್ಲಿ ಹಣದುಬ್ಬರ ಕಡಿಮೆಯಾಗಿ ಆರ್‌ಬಿಐ ಬಡ್ಡಿದರವನ್ನು ಕಮ್ಮಿಮಾಡಲಿದೆ. ಹಾಗಾಗಿ ವೈಯಕ್ತಿಕ ನೆಲೆಗಟ್ಟಿನಲ್ಲಿ ಈ ಪರಿಸ್ಥಿತಿಯನ್ನು ಸೂಕ್ಷ್ಮತೆಯಿಂದ ನಿರ್ವಹಿಸಬೇಕಿರೋದು ಈ ಹೊತ್ತಿನ
ಅವಶ್ಯಕತೆ .

ವ್ಯವಸ್ಥೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ದ್ರವ್ಯತೆ (ಹಣದ ಹರಿವು)ಉಂಟಾದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ತುಸು ಜಾಣ್ಮೆ ತೋರುವುದು ಅನಿವಾರ್ಯ. ದ್ರವ್ಯತೆಯ ಅಸ್ತವ್ಯಸ್ತತೆಯನ್ನು ಅನುಭವಿಸಿದ್ದ ಜನರ ಖರೀದಿ ಹಂಬಲಗಳು ಸಾಮರ್ಥ್ಯಕ್ಕೆ ಹೊರತಾದ ಚಿಂತನೆಗಳಾಗಿ ಬದಲಾಗಿದ್ದು ಸಕಾರಾತ್ಮಕ ಬದಲಾವಣೆಯೇ . ಪರಿಸ್ಥಿತಿ ಹೀಗಿರಬೇಕಾದರೆ ಹೂಡಿಕೆ ಮಾಡಬೇಕೋ ಬೇಡವೋ, ಮಾಡಿದರೆ ಹೇಗೆ, ಇಂಥ ಚಿಂತನೆ ಮಾಡಬಹುದು. 

Advertisement

1 ಬದಲಾದ ಸನ್ನಿವೇಶದಲ್ಲಿ ಸಾಮಾನ್ಯ ಹೂಡಿಕೆದಾರರಿಗೆ ಸಾಂಪ್ರದಾಯಿಕ ತೊಡಗಿಸುವಿಕೆಯಾದ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಹಾಗೂ ನಿಗದಿತ ಠೇವಣಿಗಳು ಉತ್ತಮ ಆಯ್ಕೆಗಳೇ ಆದರೂ, ಇತರ ಹೂಡಿಕೆ ಉತ್ಪನ್ನಗಳಿಗೆ ಹೋಲಿಸಿದಲ್ಲಿ ಹೆಚ್ಚಿನ ಆದಾಯ ತರುವ ಈಕ್ವಿಟಿ ಪರವಾಗಿ ಯೋಜಿತರೀತಿಯಲ್ಲಿ ಯೋಚಿಸುವುದು ಉತ್ತಮ. ಅಂತೆಯೇ ಅನಿರೀಕ್ಷಿತವಾದ ಆಪತ್ತಿಗೆ ಬೇಕಾಗುವ ಹಣವನ್ನು ತ್ವರಿತವಾಗಿ ಮುರಿದುಕೊಳ್ಳಲು ಸಾಧ್ಯವಾಗುವಂತಹ ದೀರ್ಘ‌ಕಾಲೀನ ‘ಬಂಡವಾಳ ನಿರ್ವಹಣಾ ಸೇವೆ’ಯಲ್ಲಿ ಹೂಡಿಕೆ ಮಾಡಬಹುದು.

2 ಷೇರು ಮಾರುಕಟ್ಟೆಯ ಸ್ಥಿತ್ಯಂತರಗಳ ಸಣ್ಣಮಟ್ಟದ ದುಷ್ಪರಿಣಾಮ ಇದೆಯಾದರೂ , ಕ್ಷಮತೆಯುಳ್ಳ ಸೇವಾ ಸಲಹೆ ಕೊಡುವರರನ್ನು ಆಯ್ದುಕೊಂಡಲ್ಲಿ ಪ್ರತಿಫ‌ಲ ಸಹ ಆಕರ್ಷಕವಾಗಿರುತ್ತದೆ. 3ಗ್ರಾಮೀಣ ಭಾಗದ ಹೂಡಿಕೆಯ ವಿಚಾರದಲ್ಲಿ ಹೆಚ್ಚೇನೂ ಸ್ಥಿತ್ಯಂತರಗಳಾದಂತಿಲ್ಲ. ಈ ಮೊದಲು ಕಾಪಿಟ್ಟ ಹಣ ಪೆಠಾರಿಯಲ್ಲಿ ಸಂಗ್ರಹಣೆಯಾಗುತ್ತಿದ್ದದ್ದು ಈಗ ಬ್ಯಾಂಕಿನ ಖಾತೆಯಲ್ಲಿ ಜಮಾವಣೆಯಾಗುತ್ತಿದೆ. ಅದಕ್ಕೆ ಬಡ್ಡಿ ಸಹ ಕ್ರೂಡೀಕರಣಗೊಳ್ಳುತ್ತಿದೆ. ಅಂತೆಯೇ ಈವರೆಗೆ ಗ್ರಾಮೀಣ ಪ್ರದೇಶದ ಜನರಿಗೆ ತುಟ್ಟಿಯಾಗಿದ್ದ ಬ್ಯಾಂಕ್‌ ಖಾತೆ ಅನಿವಾರ್ಯವಾಗಿದೆ. ಹೀಗಾಗಿ ಅವರೂ ಕೂಡ ಪೋಸ್ಟ್‌ ಆಫಿಸ್‌, ಬ್ಯಾಂಕಿನಲ್ಲಿರುವ ಠೇವಣಿಗಳು,
ಶೇರುಗಳ ಮೇಲೆ ಹೂಡಿಕೆ ಮಾಡಬಹುದು. 

4 ಬೆಳ್ಳಿ, ಬಂಗಾರ ದಂಥ ಹೂಡಿಕೆ ತುಸು ಭಯವಿದ್ದರೂ ಹೂಡಿಕೆ ನಿಂತಿಲ್ಲ. ಇದಕ್ಕೆ ತೆರಿಗೆ ಕಟ್ಟಿ ವ್ಯವಹಾರ ಮುಂದುವರಿಸಬಹುದು. ಶೇ. 12ರಿಂದ 14ರ ತನಕ ತೆರಿಗೆ ಇದೆ. ಇದು ಆಯಾ ಅಂಗಡಿ, ವಹಿವಾಟಿನ ಮೇಲೆ ತೀರ್ಮಾನವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಈ ವರೆಗೆ ಸಣ್ಣ ಪುಟ್ಟ ಬಂಗಾರದ ಅಂಗಡಿಯವರು ತೆರಿಗೆ ಕಟ್ಟದೆಯೇ ವ್ಯವಹಾರ ಮಾಡುತ್ತಿದ್ದರು. ಈಗ ಇದು
ಸಾಧ್ಯವಿಲ್ಲ. ಇಂದು ಹೂಡಿಕೆಯಲ್ಲಿ ತೆರಿಗೆ ಕಟ್ಟದೆಯೇ ಯಾವ ಹೂಡಿಕೆ ಗೇಟುಗಳು ತೆರೆಯುವುದಿಲ್ಲ. ಹಿಂಬಾಗಿಲಿನಿಂದ ಹೂಡಿಕೆ ಮಾಡುತ್ತೇವೆ ಎಂದರೂ ಅದು ಕಪ್ಪು ಹಣವಾದೀತು ಜೋಕೆ. 

5 ವಿಮೆಗಳ ಮೇಲೆ ಅಂದಾಜು ಶೇ.18ರ ತನಕ ತೆರಿಗೆ ಹಾಕಿರುವುದರಿಂದ ಈ ಭಾರಿಯ ಹೂಡಿಕೆ ಕಳೆದ ವರ್ಷಕ್ಕಿಂತ ಹೆಚ್ಚಬಹುದು. ಇದನ್ನು ತುಂಬಿಸಿಲು ಉಳಿತಾಯ ಅನಿವಾರ್ಯ. ಇನ್ನು ಸರಕು ಹಾಗು ಸೇವಾ ತೆರಿಗೆ ನೀತಿಯ ಜಾರಿ ವಿಚಾರದಲ್ಲಿ ಸಣ್ಣ ವ್ಯಾಪಾರಸ್ಥರಲ್ಲಿ ಗೊಂದಲಗಳಿವೆ. ಜಿಎಸ್‌ಟಿ ಯಾರು ಕಟ್ಟಬೇಕು? ಗ್ರಾಹಕರೋ, ವಹಿವಾಟು ನಡೆಸುವವರೋ? ನಿರ್ಧಾರವಾಗಿಲ್ಲ. ವಹಿ ವಾಟು ನಡೆಸುವವರೆಲ್ಲರೂ ಅದನ್ನು ಗ್ರಾಹಕರ ತಲೆಯ ಮೇಲೆಯೇ ಹಾಕುತ್ತಿದ್ದಾರೆ. ಹೀಗಾಗಿ ಹೂಡಿಕೆಯ ಮೊತ್ತ ಇಲ್ಲಿ ಜಾರಿ ಹೋಗುತ್ತಿದೆ.

ಬಿ.ಸಿ. ನಾಗೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next