ಮಣಿಪಾಲದಲ್ಲಿ ಶ್ರೀ ಅಂಭಾ ಭವಾನಿ ಮರಾಠಿ ಸಾಂಸ್ಕೃತಿಕ ಕಲಾ ವೇದಿಕೆ ಪರ್ಕಳ ಇವರು ಬಡರೋಗಿಗಳ ಚಿಕಿತ್ಸೆ ಹಾಗೂ ಬಡ ವಿದ್ಯಾರ್ಥಿಗಳ ಸಹಾಯಾರ್ಥ ನಡೆಸಿದ ಶ್ರೀದೇವಿ ಲಲಿತ ಕಲಾವೃಂದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ನಡೆದ ಬಹುಬೇಡಿಕೆಯ ಪ್ರಸಂಗಗಳಾದ “ಚಂದ್ರಾವಳಿ ವಿಲಾಸ ಮತ್ತು ದಕ್ಷಯಜ್ಞ ಕಲಾವಿದರ ಶ್ರೇಷ್ಠ ಪ್ರದರ್ಶನದಿಂದಾಗಿ ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿದ್ದಲ್ಲದೆ ಪ್ರಾಯೋಜಕರ ಉದ್ದೇಶವನ್ನು ಈಡೇರಿಸಿತು.
ಬಹುಬೇಡಿಕೆಯ “ಚಂದ್ರಾವಳಿ ವಿಲಾಸ’ ಮೊದಲ ಪ್ರಸಂಗವಾಗಿ ಮೂಡಿಬಂದು ರಂಜಿಸಿತು. ಈ ಪ್ರಸಂಗದಲ್ಲಿ ಗೋಪಾಲಕರ ಪ್ರವೇಶದೊಂದಿಗೆ ಆರಂಭವಾಗಿ ಮಂಕಿಯವರ ಕೃಷ್ಣ, ತೆಂಕುತಿಟ್ಟಿನ ಬೊರ್ನಾಡ್ ಅವರ ಚಂದ್ರಾವಳಿ, ವಂಡಾರು ಅವರ ರಾಧೆ, ಪ್ರಸಿದ್ಧ ಹಾಸ್ಯ ಜೋಡಿಯಾಗಿ ಸೀತಾರಾಮ ಕುಮಾರ್ ಅವರ ಚಂದಗೋಪ ಮತ್ತು ರಮೇಶ್ ಭಂಡಾರಿಯವರ ಅಬ್ಬೆ ಪ್ರದರ್ಶನಕ್ಕೆ ಮೆರುಗು ನೀಡಿತು. ಈ ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ದ್ವಂದ್ವ ಭಾಗವತಿಕೆಯಲ್ಲಿ ಸುರೇಶ್ ಶೆಟ್ಟಿ ಮತ್ತು ಚಂದ್ರಕಾಂತ್ ಮೂಡುಬೆಳ್ಳೆ, ಮದ್ದಳೆಯಲ್ಲಿ ರಾಘವೇಂದ್ರ ಹೆಗಡೆ ಯಲ್ಲಾಪುರ, ಚಂಡೆವಾದಕರಾಗಿ ಜನಾರ್ದನ ಆಚಾರ್ಯ ಹಳ್ಳಾಡಿ ಪ್ರದರ್ಶನದ ಹೆಚ್ಚುಗಾರಿಕೆಗೆ ಸಹಕರಿಸಿದರು.
ಎರಡನೆಯದಾಗಿ ಮತ್ತೂಂದು ಚಿರಪರಿಚಿತ ಪ್ರಸಂಗ ದಕ್ಷ ಯಜ್ಞ ನಡೆಯಿತು.ದೇವೇಂದ್ರನ ಒಡ್ಡೋಲಗದೊಂದಿಗೆ ಆರಂಭವಾದ ಕಥಾನಕದಲ್ಲಿ ದೇವೇಂದ್ರನಾಗಿ ಭಾಸ್ಕರ ತುಂಬ್ರಿ , ಈಶ್ವರನಾಗಿ ಪ್ರಸನ್ನ ಶೆಟ್ಟಿಗಾರ್, ದಕ್ಷನಾಗಿ ತೆಂಕುತಿಟ್ಟಿನ ರಾಧಾಕೃಷ್ಣ ನಾವುಡ, ದಾಕ್ಷಾಯಿಣಿಯಾಗಿ ಶಶಿಕಾಂತ್ ಶೆಟ್ಟಿ ಕಾರ್ಕಳ, ಬ್ರಾಹ್ಮಣನಾಗಿ ಹಳ್ಳಾಡಿ, ಹೆಂಡತಿಯಾಗಿ ಅಶೋಕ್ ಭಟ್ ಸಿದ್ಧಾಪುರ, ವೀರಭದ್ರನಾಗಿ ಚಂದ್ರಹಾಸ ಗೌಡ ಕಾಣಿಸಿಕೊಂಡರು. ಈಶ್ವರನ ತಾಂಡವ ನೃತ್ಯ ದಕ್ಷನಾಗಿ ನಾವುಡರ ಗಂಭೀರ ನಡೆ ಮಾತುಗಾರಿಕೆ, ಶಶಿಕಾಂತ್ ಅವರ ದಾಕ್ಷಾಯಿಣಿ ಬ್ರಾಹ್ಮಣ ವೃದ್ಧ ದಂಪತಿಗಳ ಸಂಭಾಷಣೆ (ಹಳ್ಳಾಡಿ ಅವರ ವೃದ್ಧ ಬ್ರಾಹ್ಮಣ, ಅಶೋಕ್ ಭಟ್ ಅವರ ಹೆಂಡತಿ) ವೀರಭದ್ರನ ಅಟ್ಟಹಾಸ ಉತ್ತಮವಾಗಿ ಮೂಡಿಬಂತು. ಏರು ಪದ್ಯಗಳೊಂದಿಗೆ ರಂಜನೆ ನೀಡಿದ ಜನ್ಸಾಲೆ ಮದ್ದಳೆಯಲ್ಲಿ ಪರಮೇಶ್ವರ ಭಂಡಾರಿ, ಚೆಂಡೆಯಲ್ಲಿ ಶಿವಾನಂದ ಕೋಟ ಸಹಕರಿಸಿದರು. ಎರಡೂ ಕಥಾನಕಗಳ ಶ್ರೇಯಸ್ಸು ಕಲಾವಿದರಿಗೆ ನೀಡುವುದಲ್ಲದೆ ಪ್ರಾಯೋಜಕರಿಗೂ ಸಲ್ಲಬೇಕು. ಉತ್ತಮ ಪ್ರಸಂಗ, ಅರ್ಹ ಕಲಾವಿದರ ಆಯ್ಕೆ ಮಾಡಿದರೆ, ಕಲಾಭಿಮಾನಿಗಳ ಸಹಕಾರ ಯಕ್ಷಗಾನಕ್ಕೆ ಇದ್ದೇ ಇದೆ ಎಂಬುದಕ್ಕೆ ನಡೆದ ಪ್ರದರ್ಶನ ಸಾಕ್ಷಿ.
ವಿಷ್ಣುಮೂರ್ತಿ ಉಪಾಧ್ಯ, ಮಾರ್ಪಳ್ಳಿ