Advertisement

ಚಂದ್ರಗಿರಿ ನದಿ ತಟ ಪ್ರವಾಸಿ ಯೋಜನೆ ಮೂಲೆಗುಂಪು?

01:55 AM Dec 01, 2018 | Karthik A |

ಕಾಸರಗೋಡು: ಅತ್ಯಂತ ರಮಣೀಯ ಪ್ರದೇಶವಾಗಿರುವ ಚಂದ್ರಗಿರಿ ಜಲಾಶಯ ಮತ್ತು ಕೋಟೆಯನ್ನು ಕೇಂದ್ರೀಕರಿಸಿ ಕಲೆ ಮತ್ತು ಪ್ರಕೃತಿಯನ್ನು ಜೊತೆಗೂಡಿಸಿ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಮಹತ್ವದ ಯೋಜನೆ ಕಡತದಲ್ಲೇ ಉಳಿದು ಕೊಂಡಿದೆ. 2017ರ ಜುಲೈ ತಿಂಗಳಲ್ಲಿ ಪರಂಪರಾಗತ ಕಲೆ, ಸಂಸ್ಕೃತಿ ಯನ್ನು ಮೇಳೈಸಿಕೊಂಡಿರುವ ಚಂದ್ರಗಿರಿ ನದಿ ತಟ ಪ್ರವಾಸಿ ಕೇಂದ್ರವನ್ನು ಅಭಿವೃದ್ಧಿ ಪಡಿಸಲು ಸರಕಾರ ಮುಂದೆ ಬಂದಿತ್ತು. ಆದರೆ ಈವರೆಗೂ ಈ ಬಗ್ಗೆ ಪ್ರಾಥಮಿಕ ಪ್ರಕ್ರಿಯೆಯೂ ನಡೆದಿಲ್ಲ. ಏಶ್ಯಾದಲ್ಲೇ ವೀಕ್ಷಿಸಬೇಕಾದ ಹತ್ತು ಪ್ರವಾಸಿ ಸ್ಥಳಗಳಲ್ಲಿ ಗುರುತಿಸಿಕೊಂಡಿರುವ ಮಲಬಾರ್‌ ಪ್ರದೇಶದ ಕಾಸರಗೋಡು ಜಿಲ್ಲೆಯ ಚಂದ್ರಗಿರಿ ಜಲಾಶಯವನ್ನು ಮುಖ್ಯಧಾರೆಯಲ್ಲಿರಿಸಿ ಕಲೆ ಮತ್ತು ಪ್ರಕೃತಿಯನ್ನು ಜತೆಗೂಡಿಸಿ ಪ್ರವಾಸಿ ಯೋಜನೆಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಸರಕಾರ ಘೋಷಿಸಿತ್ತು.

Advertisement

ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರಗಳ ಪ್ರಕಟನೆಯಾಗಿರುವ ‘ಲೋನ್ಸಿ ಪ್ಲಾನೆಟ್‌’ ತಯಾರಿಸಿದ ವಾರ್ಷಿಕ ಯಾದಿಯಲ್ಲಿ ಚೈನಾದ ಗಾನ್‌ಶೂ ಪ್ರಥಮ ಸ್ಥಾನವನ್ನು ಪಡೆದಿದ್ದರೆ, ಜಪಾನ್‌ನ ಸೌತ್‌ ಟೋಕಿಯೋ ದ್ವಿತೀಯ ಸ್ಥಾನವನ್ನು ಪಡೆದಿದೆ. ಆ ಬಳಿಕ ಮೂರನೇ ಸ್ಥಾನವನ್ನು ಉತ್ತರ ಕೇರಳ ಪ್ರದೇಶ ಪಡೆದುಕೊಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದ ಪ್ರವಾಸಿ ಲೇಖಕರು ಉತ್ತರ ಕೇರಳದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಇಲ್ಲಿನ ಪ್ರವಾಸಿ ಸ್ಥಳಗಳು ರಮ್ಯವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತದ್ದು ಎಂದು ನಮೂದಿಸಿದ್ದಾರೆ. ಇದರಿಂದಾಗಿ ಉತ್ತರ ಕೇರಳ ವಿಶ್ವ ಮಟ್ಟದಲ್ಲಿ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಹೊಂದಲು ಬಹಳಷ್ಟು ಸಾಧ್ಯತೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಮಲಬಾರು ಪ್ರದೇಶದಲ್ಲಿರುವ ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲು 600 ಕೋಟಿ ರೂಪಾಯಿಯ ಯೋಜನೆಗಳಿಗೆ ಕೇರಳ ಪ್ರವಾಸೋದ್ಯಮ ಇಲಾಖೆ ರೂಪು ನೀಡಿತ್ತು. ಮಲಬಾರ್‌ ಕ್ರೂಯಿಸ್‌ ಟೂರಿಸಂ ಯೋಜನೆಯ ಪ್ರಥಮ ಹಂತದಲ್ಲಿ ಪರಶ್ಶಿನಕಡವು ಮತ್ತು ಪಳಯಂಗಾಡಿಯಲ್ಲಿ ಬೋಟ್‌ ಜೆಟ್ಟಿಗಳನ್ನು ಹಾಗೂ ಹೊಳೆಗೆ ನದೀ ತಟ ಕಾಲು ದಾರಿ ನಿರ್ಮಿಸಲು 15 ಕೋಟಿ ರೂಪಾಯಿಯನ್ನು ಕೇರಳ ಸರಕಾರ ಮಂಜೂರು ಮಾಡಿತ್ತು.


ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಾಕಾರಗೊಳ್ಳುವುದರೊಂದಿಗೆ ಉತ್ತರ ಕೇರಳದ ಪ್ರವಾಸೋದ್ಯಮ ಅಭಿವೃದ್ಧಿಗೆ ಬಹಳಷ್ಟು ಸಾಧ್ಯತೆಯ ಹಿನ್ನೆಲೆಯಲ್ಲಿ ಮಲಬಾರು ಪ್ರದೇಶದ ಪ್ರವಾಸೋದ್ಯಮ ಯೋಜನೆಗಳನ್ನು ಆವಿಷ್ಕರಿಸಲಾಗಿದೆ. ಉತ್ತರ ಕೇರಳದ ಬೀಚ್‌ಗಳು ಗೋವಾ ಬೀಚ್‌ಗಳಿಗಿಂತ ಅತ್ಯಂತ ಸೌಂದರ್ಯವನ್ನು ಪಡೆದು ಕೊಂಡಿದೆ ಮತ್ತು ಸ್ವಚ್ಛವಾಗಿದೆ ಎಂದು ಲೋನ್ಲಿ ಪ್ಲಾನೆಟ್‌ ವರದಿಯಲ್ಲಿ ಹೇಳಿದೆ. ಮುಳಪ್ಪಿಲಂಗಾಟ್‌ ಬೀಚ್‌ನಲ್ಲಿ ಸ್ವಾಧೀನ ಪಡಿಸಿಕೊಂಡಿರುವ 3.5 ಎಕರೆ ಸ್ಥಳದಲ್ಲಿ 43.20 ಕೋ.ರೂ. ವೆಚ್ಚದಲ್ಲಿ ಅತ್ಯಾಧುನಿಕ ಸೌಕರ್ಯಗಳೊಂದಿಗೆ ರಿಸೋರ್ಟ್‌ ಗಳನ್ನು ನಿರ್ಮಿಸಲು, ಪಯ್ಯಂಬಲಂ ಬೀಚ್‌ ಆಕರ್ಷಣೀಯವನ್ನಾಗಿ ಮಾಡುವುದು ಅಲ್ಲದೆ ಮಲಬಾರು ಪ್ರದೇಶದ ಬೀಚ್‌ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವುದಾಗಿ ಹೇಳಲಾಗಿತ್ತು.

ಲೋನ್ಲಿ ಪ್ಲಾನೆಟ್‌ ವಿಶೇಷವಾಗಿ ಗುರುತಿಸಿರುವ ವಯನಾಡು ಜಿಲ್ಲೆಯಲ್ಲಿ ಹತ್ತು ಹಲವು ಪ್ರವಾಸಿ ಯೋಜನೆಗಳಿಗೆ ರಾಜ್ಯ ಸರಕಾರ ಅನುಮತಿ ನೀಡಿದೆ. ಕಲ್ಪಟ್ಟದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸಲು 4.5 ಕೋಟಿ ರೂಪಾಯಿ ಮಂಜೂರು ಮಾಡಿದೆ. ಸುಲ್ತಾನ್‌ ಬತ್ತೇರಿಯಲ್ಲಿ ರೋಕ್‌ ಅಡ್ವಂಚರ್‌ ಯೋಜನೆ, ಪಯಶ್ಶಿ ಸ್ಮಾರಕ, ಕುರುವ ದ್ವೀಪ ಪ್ರದೇಶದಲ್ಲಿ ಗ್ರೀನ್‌ ಕಾರ್ಪೆಟ್‌ ಯೋಜನೆಗೆ ಅನುದಾನ ಕಾದಿರಿಸಿರುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಧ್ಯತೆ ಅಧಿಕವಾಗಿದೆ.

ಲೋನ್ಲಿ ಪ್ಲಾನೆಟ್‌ ಪಟ್ಟಿಯಲ್ಲಿ ತೃತೀಯ ಸ್ಥಾನ
ಏಶ್ಯಾದಲ್ಲಿ ವೀಕ್ಷಿಸಬೇಕಾದ ಹತ್ತು ಪ್ರದೇಶಗಳ ‘ಲೋನ್ಲಿ ಪ್ಲಾನೆಟ್‌’ ಯಾದಿಯಲ್ಲಿ ಕಾಸರಗೋಡು ಜಿಲ್ಲೆಯ ಬೇಕಲಕೋಟೆ, ಚಂದ್ರಗಿರಿ ಕೋಟೆ ಮತ್ತು ಹೊಳೆ ಸಹಿತ ಕೇರಳದ ಉತ್ತರ ಭಾಗ (ಮಲಬಾರ್‌ ಪ್ರದೇಶ) ತೃತೀಯ ಸ್ಥಾನವನ್ನು ಪಡೆದುಕೊಂಡಿದೆ. ಉತ್ತರ ಕೇರಳದ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು 600 ಕೋಟಿ ರೂಪಾಯಿಯ ಯೋಜನೆ ಸಾಕಾರಗೊಳಿಸಲು ಈ ವಿಶ್ವಮಟ್ಟದ ಮಾನ್ಯತೆ  ಪ್ರೋತ್ಸಾಹ ಲಭಿಸಿತ್ತು. ಆದರೆ ಅಭಿವೃದ್ಧಿ ಯೋಜನೆಯ ಬಗ್ಗೆ ಅವಗಣನೆಯಿಂದಾಗಿ ಸಾಕಷ್ಟು ನಿರೀಕ್ಷೆಗಳೆಲ್ಲ ಮೂಲೆಗುಂಪಾದವು.

Advertisement

ಪ್ರಕೃತಿ ಸೌಂದರ್ಯದ ನಾಡು
ಕಾಸರಗೋಡು ಜಿಲ್ಲೆಯ ಚಂದ್ರಗಿರಿ ಹೊಳೆ, ನೀಲೇಶ್ವರ, ತೇಜಸ್ವಿನಿ, ವಿಲಯ, ಪರಂಬಾತ್‌ ತಟಾಕ ಮತ್ತು ಕಣ್ಣೂರು ಜಿಲ್ಲೆಯ ವಳಪಟ್ಟಣಂ, ಕುಪ್ಪಂ, ಪೇರುಂಬ, ಅಂಜರಿಕಂಡಿ, ಮಾಹಿ, ತಲಶೆÏàರಿ ಜಲಾಶಯಗಳನ್ನು ಮತ್ತು ಸ್ಥಳೀಯ ಕಲೆಗಳನ್ನು, ಪ್ರಕೃತಿ ಸೌಂದರ್ಯವನ್ನು ಪರಿಚಯಿಸುವ ನದೀ ತಟ ಪ್ರವಾಸಿ ಯೋಜನೆಯನ್ನು ಸಾಕಾರಗೊಳಿಸುವ ಮೂಲಕ ಪ್ರವಾಸಿಗರನ್ನು ಹೆಚ್ಚೆಚ್ಚು ಕೈಬೀಸಿ ಕರೆಯಲು ಸಾಧ್ಯವಾಗಬಹುದೆಂದು ನಿರೀಕ್ಷಿಸಲಾಗಿತ್ತು. 197 ಕಿ.ಮೀ. ನೀಳದ ನದಿಯಲ್ಲಿ ದೋಣಿ ವಿಹಾರ, ಪ್ರತೀಯೊಂದು ನದಿ ತಟದಲ್ಲಿ ಆಯಾಯ ಪ್ರದೇಶದ ವಿಶೇಷ ಕಲೆ, ಕರಕುಶಲ ಮೊದಲಾದವುಗಳನ್ನು ಸೇರ್ಪಡೆಗೊಳಿಸಿ ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಕಲಾ ರೂಪಕಗಳನ್ನು ಹಾಗೂ ಕರಕುಶಲ ಸಾಮಗ್ರಿಗಳನ್ನು ನಿರ್ಮಿಸುವ ಕೇಂದ್ರಗಳನ್ನು ಸ್ಥಾಪಿಸಲು ನಿರ್ಣಯಿಸಲಾಗಿತ್ತು.

ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳ‌ಲು ಸಾಧ್ಯ
ಲೋನ್ಲಿ ಪ್ಲಾನೆಟ್‌ನಲ್ಲಿ ತೃತೀಯ ಸ್ಥಾನವನ್ನು ಪಡೆದಿರುವ ಮಲಬಾರು ಪ್ರದೇಶದಲ್ಲಿ ಪ್ರವಾಸೋದ್ಯಮ ಉತ್ತಮ ಮಟ್ಟದಲ್ಲಿ ಅಭಿವೃದ್ಧಿ ಸಾಧ್ಯವಾಗುವುದು. ವಿಶ್ವ ಮಟ್ಟದ ಮಾನ್ಯತೆಯಿಂದ ಸರಕಾರ ಪ್ರವಾಸೋದ್ಯಮಕ್ಕೆ ಹೆಚ್ಚೆಚ್ಚು ಹಣವನ್ನು ವ್ಯಯಿಸಲು ಪ್ರೋತ್ಸಾಹ ಲಭಿಸಿದೆ. ಕಾಸರಗೋಡು, ವಯನಾಡು ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಮೂಲಕ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳಲು ಎಲ್ಲ ಸಾಧ್ಯತೆಗಳಿವೆ ಎಂದು 2017ರ ಜುಲೈ ತಿಂಗಳಲ್ಲಿ ಕೇರಳ ಪ್ರವಾಸೋದ್ಯಮ ಸಚಿವ ಕಡಕಂಪಳ್ಳಿ ಸುರೇಂದ್ರನ್‌ ಹೇಳಿದ್ದರು.

— ಪ್ರದೀಪ್‌ ಬೇಕಲ್‌

Advertisement

Udayavani is now on Telegram. Click here to join our channel and stay updated with the latest news.

Next