Advertisement

ಜನೋಪಯೋಗಕ್ಕಾಗಿ ಚಂದ್ರ-ಮಂಗಳಯಾನ: ಡಾ|ಪ್ರಸಾದ

11:49 AM Dec 17, 2018 | |

ಕಲಬುರಗಿ: ಚಂದ್ರ ಮತ್ತು ಮಂಗಳಯಾನಗಳನ್ನು ಜನೋಪಯೋಗಕ್ಕಾಗಿ ಕೈಗೊಳ್ಳಲಾಗಿದೆ. ಅನ್ಯ ಗ್ರಹಗಳಲ್ಲಿನ ಶೋಧನಾ ಸ್ಥಳಗಳೆಲ್ಲವೂ ನಮ್ಮ ಸ್ವತ್ತುಗಳೇ ಆಗಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿವೃತ್ತ ವಿಜ್ಞಾನಿ ಡಾ| ಸಿ.ಡಿ.ಪ್ರಸಾದ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಮೂರು ದಿನಗಳ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದ ಎರಡನೇ ದಿನವಾದ ರವಿವಾರ “ಬಾಹ್ಯಾಕಾಶದ ಸಂಶೋಧನೆಗಳು’ ವಿಷಯದ ಕುರಿತು ಮಾತನಾಡಿದ ಅವರು, ಬಾಹ್ಯಾಕಾಶ ಮತ್ತು ಇಸ್ರೋ ಬೆಳೆದು ಬಂದ ದಾರಿ ಬಗ್ಗೆ ಮಾಹಿತಿ ನೀಡಿದರು.
 
ಚಂದ್ರಯಾನ-1 ಕೈಗೊಳ್ಳುವ ಮುನ್ನ ಚಂದ್ರಯಾನದಿಂದ ಜನತೆಗೆ ಏನು ಪ್ರಯೋಜನ? ನೂರಾರು ಕೋಟಿ ರೂ. ವೆಚ್ಚ ಮಾಡಿ ಚಂದ್ರನಲ್ಲಿ ಅಧ್ಯಯನ ನಡೆಸುವ ಅವಶ್ಯಕತೆ ಏನಿದೆ ಎನ್ನುವ ಪ್ರಶ್ನೆಗಳು ಉದ್ಭವಿಸಿದ್ದವು. ಆದರೆ, ಅನ್ಯ ಗ್ರಹಗಳಲ್ಲಿ ಶೋಧನೆ ಮಾಡಿದ ಸ್ಥಳಗಳು ಆಯಾ ರಾಷ್ಟ್ರಗಳಿಗೆ ಸೇರಿದ್ದು ಎಂದು ಜಿನಿವಾ ಕನ್ವೆನ್ಷನಲ್‌ ಒಪ್ಪಂದ ಮಾಡಿಕೊಳ್ಳಲಾಗಿದೆ. ಈಗಾಗಲೇ ಚಂದ್ರನ ಮೇಲೆ ಒಂದು ಘನ ಅಡಿ ಭಾಗ ಭಾರತಕ್ಕೆ ಸೇರಿದೆ ಎಂದರು.

ಸದ್ಯ ಭಾರತ ಚಂದ್ರಯಾನ-2ಕ್ಕೆ ಸಜ್ಜಾಗಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ನಡೆಸಿದ ಚಂದ್ರಯಾನ-2 ನೌಕೆ ಪರೀಕ್ಷಾರ್ಥ ಪ್ರಯೋಗ ಪ್ರತಿಶತ ಯಶಸ್ವಿಯಾಗಿದೆ. ಮುಂದಿನ ಜನವರಿ 26ರಂದು ರೋವರ್‌ ಕಳುಹಿಸಲು ಇಸ್ರೋ ಅಂತಿಮ ತಯಾರಿ ನಡೆಸಿದೆ ಎಂದು ತಿಳಿಸಿದರು.

ಎಲ್ಲ ರಾಕೆಟ್‌ಗಳು ಯಶಸ್ವಿ: ಇಸ್ರೋ ಸಂಸ್ಥೆ ಇದುವರೆಗೂ ಕೈಗೊಂಡ ಪಿಎಸ್‌ಎಲ್‌ವಿ 46 ರಾಕೆಟ್‌ಗಳ ಉಡಾವಣೆಯಶಸ್ವಿಯಾಗಿವೆ. ಈ ಹಿಂದೆ ಆರು ಬಿಲಿಯನ್‌ ಡಾಲರ್‌ ಕೊಟ್ಟು ಅಮೆರಿಕಾದಿಂದ ರಾಕೆಟ್‌ಗಳ ಉಡಾವಣೆ
ಮಾಡಿಸಲಾಗುತ್ತಿತ್ತು. ಆದರೆ, ಅದಕ್ಕೂ ದುಪ್ಪಟ್ಟು ಹಣವನ್ನು ನಾವು ಗಳಿಸುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳಿದರು.

ಏಕಕಾಲಕ್ಕೆ ಒಂದೇ ರಾಕೆಟ್‌ನಲ್ಲಿ ಏಳು ರಾಷ್ಟ್ರಗಳ 104 ಉಪಗ್ರಹಗಳ ಉಡಾವಣೆ ಮಾಡಿದ ಕೀರ್ತಿ ಭಾರತಕ್ಕೆ ಸಂದಿದೆ. ರಷ್ಯಾ 38 ಉಪಗ್ರಹಗಳ ಉಡಾವಣೆ ಮಾಡಿದೆ ಅಷ್ಟೆ. ಇಂದು ಭಾರತದ ಸಾಧನೆ ಕಂಡು ಅಮೆರಿಕಾ ಹುಬ್ಬೇರಿಸುತ್ತಿದೆ. 

Advertisement

104 ಉಪಗ್ರಹಗಳ ಉಡಾವಣೆ ಹೇಗೆ ಸಾಧ್ಯ ಎಂದು ವಿಜ್ಞಾನಿಯೊಬ್ಬರು ಕೇಳಿದಾಗ “ಒಂದೇ ಆಟೋದಲ್ಲಿ 20 ಮಕ್ಕಳನ್ನು ಸಾಗಿಸುವ ನಮಗೆ ಇದೊಂದು ಲೆಕ್ಕವೇ’ ಎಂದು ಉತ್ತರಿಸಿದ್ದೇವೆ ಎಂದ ಅವರು, ಡಿ.19ರಂದು ಶ್ರೀಹರಿಕೋಟ್‌ ದಿಂದ ಉನ್ನತ ಮಟ್ಟದ ಜಿಎಸ್‌ಎಲ್‌ವಿ ರಾಕೆಟ್‌ ಉಡಾವಣೆಗೆ ಇಸ್ರೋ ಸನ್ನದ್ಧವಾಗಿದೆ. ಎಲ್ಲರೂ ನೋಡಿ ಕಣ್ತುಂಬಿಕೊಂಡು ಸಂಭ್ರಮಿಸಿ ಎಂದು ಕರೆ ನೀಡಿದರು. ಉಪಗ್ರಹ ತಯಾರಿಕಾ ಘಟಕ ಮತ್ತು ಉಪಗ್ರಹ ಉಡಾವಣೆ ಬಗ್ಗೆ ಸ್ಲೆಡ್ಸ್‌ ಮತ್ತು ವಿಡಿಯೋ ತುಣುಕುಗಳ ಮೂಲಕ ಮಕ್ಕಳಿಗೆ ವಿವರಿಸಿದ ಅವರು, ಬಾಹ್ಯಾಕಾಶಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಂವಾದದಲ್ಲಿ ಉತ್ತರವನ್ನು ಕೊಟ್ಟರು. 

ನಿವೃತ್ತ ಪ್ರಾಧ್ಯಾಪಕರಾದ ವಿಶ್ವನಾಥ ಚಿಮಕೋಡ, ಡಾ| ಬಿ.ಎಸ್‌.ಮಾಕಲ್‌, ಡಾ| ಅಶೋಕ ಜೀವಣಗಿ, ಭರದ್ವಾಜ್‌,
ಚಂದ್ರಕಾಂತ ಕ್ಷೀರಸಾಗರ ಇದ್ದರು. 

ಯುವ ವಿಜ್ಞಾನಿಗಳ ಸಂಖ್ಯೆ ಕಡಿಮೆ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಅತಿ ವೇಗವಾಗಿ ಬೆಳೆಯುತ್ತಿದ್ದು, ಇದರ ವೇಗಕ್ಕೆ ತಕ್ಕಷ್ಟು ಯುವ ವಿಜ್ಞಾನಿಗಳು ಬೆಳೆಯುತ್ತಿಲ್ಲ. ವಿಜ್ಞಾನದ ವಿಷಯದಲ್ಲಿ ವಿದ್ಯಾರ್ಥಿಗಳು ಅಧಿಕ ಸಂಬಳ ಸಿಕ್ಕರೆ ಸಾಕು ಎನ್ನುವ ಮನಸ್ಥಿತಿಯಲ್ಲಿದ್ದಾರೆ. ಇದರಿಂದ ಯುವ ವಿಜ್ಞಾನಿಗಳು, ತಂತ್ರಜ್ಞಾನಿಗಳ ಕೊರತೆ ನೀಗಿಸಲು ಇಸ್ರೋ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತಿದೆ.
 ಡಾ| ಸಿ.ಡಿ.ಪ್ರಸಾದ, ನಿವೃತ್ತ ವಿಜ್ಞಾನಿ, ಇಸ್ರೋ

Advertisement

Udayavani is now on Telegram. Click here to join our channel and stay updated with the latest news.

Next