ಬೆಂಗಳೂರು: “ಸ್ವಾಮಿ, ನಾನು ಕೋಪದ ಕೈಗೆ ಬುದ್ಧಿ ಕೊಟ್ಟು ಜೀವನ ಹಾಳು ಮಾಡಿಕೊಂಡೆ. ನನ್ನ ಕೈಯಾರೆ ನನ್ನ ಮಗನನ್ನು ಕೊಂದುಬಿಟ್ಟೆ.
-ಇದು ಚಾಮರಾಜ ಪೇಟೆಯ ಆಜಾದ್ ನಗರ ದಲ್ಲಿ ಮಗನನ್ನು ಕೊಂದು ಜೈಲಿಗೆ ಹೋದಾಗ ಆತನ ತಂದೆ ಸುರೇಂದ್ರ ಪೊಲೀಸರ ಮುಂದೆ ಕಣ್ಣೀರು ಹಾಕಿ ನೋವಿನಿಂದ ಹೇಳಿಕೊಂಡ ಮಾತುಗಳಿವು.
ನನ್ನ ಮಗ ಜೀವನದಲ್ಲಿ ಏನೂ ಸರಿಯಾದದ್ದನ್ನು ಮಾಡಲಿಲ್ಲ. ಸಿಎ ಓದು ಅರ್ಧಕ್ಕೆ ನಿಲ್ಲಿಸಿದ್ದ. ವ್ಯವಹಾರ ನೋಡಿಕೊಳ್ಳಲು ಹೇಳಿದ್ದೆ. ಅಲ್ಲಿಯೂ ಸರಿಯಾಗಿ ಮಾಡಲಿಲ್ಲ. ಹಣಕಾಸು ಲೆಕ್ಕಾಚಾರದಲ್ಲೂ ತಪ್ಪು ಮಾಡುತ್ತಲೇ ಇದ್ದ. ಮಗ ಹಾಳಾಗಿ ಹೋಗುತ್ತಾನೆ ಎಂದು ನೋವು ತಿನ್ನುತ್ತಿದ್ದೆ ಎಂದರು.
ಇದನ್ನೂ ಓದಿ:ಮಂಗಳೂರು: ಡಿವೈಡರ್ ಹಾರಿ ಕಾರು,ಸ್ಕೂಟರ್ ಗೆ ಢಿಕ್ಕಿ ಹೊಡೆದ ಬಿಎಂಡಬ್ಲ್ಯು ಕಾರು: ಓರ್ವ ಗಂಭೀರ
ನನ್ನ ಮಗನನ್ನು ಹೆದರಿಸಿ ಸರಿ ಪಡಿಸುವ ಉದ್ದೇಶದಿಂದ ಥಿನ್ನರ್ ಹಾಕಿದೆ. ನನ್ನ ಕೈಯಾರೆ ನನ್ನ ಮಗನನ್ನು ಕೊಂದು ಬಿಟ್ಟೆ. ಕೋಪಗೊಂಡು ಅವನ ಮೇಲೆ ಥಿನ್ನರ್ ಹಾಕಿದೆ. ಮೊದಲ ಸಲ ಬೆಂಕಿ ಕಡ್ಡಿ ಗೀರಿದಾಗ ಅವನು ಅಲುಗಾಡಲಿಲ್ಲ, ಎರಡನೇ ಸಲ ಕಡ್ಡಿ ಅವನ ಮೇಲೆ ಬಿತ್ತು ಎಂದು ಹೇಳಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆಸ್ಪತ್ರೆಯಲ್ಲಿ ಅಪ್ಪನಿಗೆ ಒಳಿತು ಬಯಸಿದ ಪುತ್ರ: ಅಪ್ಪ ಬೆಂಕಿ ಹಚ್ಚಿ ಕೊಂದರೂ ತನ್ನ ತಂದೆಯ ಮೇಲಿನ ಪ್ರೀತಿ ಅರ್ಪಿತ್ಗೆ ಕಡಿಮೆ ಇರಲಿಲ್ಲ. ನಾನು ಸತ್ತರೂ ಪರವಾಗಿಲ್ಲ ನನ್ನ ತಂದೆಗೆ ಏನೂ ಆಗಬಾರದು ಎಂದೇ ಭಾವಿಸಿದ್ದ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯರು ಕೇಳಿದಾಗ, ಆಕಸ್ಮಿಕವಾಗಿ ಬೆಂಕಿ ಅವಘಡ ಆಯಿತು. ನಾನೇ ಬೆಂಕಿ ಇಟ್ಟು ಕೊಂಡೆ ಎಂದು ಹೇಳಿಕೆ ನೀಡಿದ್ದ. ಸಾವು ಬದುಕಿನ ಹೋರಾಟದಲ್ಲೂ ಅಪ್ಪನಿಗೆ ಏನೂ ಆಗಬಾರದು ಎಂದು ಮಗ ಆಸೆ ಪಟ್ಟಿದ್ದ.