Advertisement

ಚಂಪಾವತ್‌ ನಲ್ಲಿ ಸಿಎಂ ಧಾಮಿ ಪರ ಸಿಎಂ ಯೋಗಿ ಭರ್ಜರಿ ಪ್ರಚಾರ

03:17 PM May 28, 2022 | Team Udayavani |

ಚಂಪಾವತ್‌ : ಮೇ 31 ರಂದು ಚಂಪಾವತ್ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಪರವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶುಕ್ರವಾರ  ತನಕ್‌ಪುರ ನಗರದಲ್ಲಿ ರೋಡ್‌ ಶೋ ನಡೆಸಿದರು.

Advertisement

”ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಬಿಜೆಪಿ ಸರಕಾರವು ಉತ್ತರಾಖಂಡ ರಾಜ್ಯದಲ್ಲಿ ಅಭಿವೃದ್ಧಿಯ ಮಾದರಿಯನ್ನು ನೀಡಿದೆ. ಉತ್ತರಾಖಂಡದ ಜನರ ಕನಸುಗಳನ್ನು ನನಸಾಗಿಸಲು ಬಿಜೆಪಿ ಅಗತ್ಯ, ಪುಷ್ಕರ್ ಸಿಂಗ್ ಧಾಮಿ ಅವರಂತಹ ಯುವಕರು ಅಗತ್ಯ” ಎಂದು ಆದಿತ್ಯನಾಥ್ ಹೇಳಿದರು.

”ಚಂಪಾವತ್‌ನ ಪುಣ್ಯಭೂಮಿಯಲ್ಲಿ ನೆರೆದಿರುವ ಈ ಜನಸಮೂಹವು ರಾಷ್ಟ್ರೀಯತೆ, ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ವಿಜಯವನ್ನು ಹಾಡುತ್ತಿದೆ.ಇಲ್ಲಿನ ಪ್ರತಿ ಮತಗಟ್ಟೆಯಲ್ಲೂ ಕಮಲದ ಹೂವು ಅರಳುವುದು ಖಚಿತ.ನನ್ನ ಚಂಪಾವತ್ ಜನರಿಗೆ ಧನ್ಯವಾದಗಳು” ಎಂದು ಯೋಗಿ ಹೇಳಿದರು.

ಫೆಬ್ರವರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಖತಿಮಾ ಕ್ಷೇತ್ರದಲ್ಲಿ ಧಾಮಿ ಅವರು ಸೋತಿದ್ದ ಹಿನ್ನೆಲೆಯಲ್ಲಿ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಶಾಸಕ ಕೈಲಾಶ್ ಗೆಹ್ಟೋರಿ ಅವರು ವಿಧಾನಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧೆಗೆ ದಾರಿ ಮಾಡಿಕೊಟ್ಟಿದ್ದರು.

70 ಸದಸ್ಯ ಬಲದ ಉತ್ತರಾಖಂಡದಲ್ಲಿ ಬಿಜೆಪಿ 47 ಸ್ಥಾನಗಳನ್ನು ಗಳಿಸುವ ಮೂಲಕ ಸತತ ಎರಡನೇ ಅವಧಿಗೆ ಜನಾದೇಶ ಪಡೆದಿತ್ತು. ಸೋತರೂ ಸಿಎಂ ಸ್ಥಾನಕ್ಕೆ ಧಾಮಿಯವರನ್ನೇ ಅವಿರೋಧವಾಗಿ ಬಿಜೆಪಿ ಆಯ್ಕೆ ಮಾಡಿತ್ತು.

Advertisement

ಜೂನ್ 3 ರಂದು ಮತ ಎಣಿಕೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next