Advertisement

Today Champa Shashti; ಲೋಕಕಲ್ಯಾಣಕ್ಕಾಗಿ ಕಾಳಸರ್ಪವಾದ ಕುಮಾರ

01:02 AM Dec 18, 2023 | Team Udayavani |

ಸುಬ್ರಹ್ಮಣ್ಯ ಸ್ವಾಮಿಯು ಶ್ರೀಮನ್ನಾರಾಯಣನ ಪುತ್ರನಾದ ಮನ್ಮಥನ ಅವತಾರ.
ಸುದರ್ಶನಶ್ಚ ಭರತಃ ಪ್ರದ್ಯುಮ್ನಃ
ಸಾಂಬ ಏವ ಚ|
ಸನತ್ಕುಮಾರ ಸ್ಕಂದಶ್ಚ ಷಡೇತೇ ಕಾಮ ರೂಪಕಾಃ|| (ಗರುಡ ಪುರಾಣ)
ವಿಷ್ಣು ಚಕ್ರನಾದ ಸುದರ್ಶನ, ರಾಮನ ಅನುಜ ಭರತ, ಕೃಷ್ಣ ರುಕ್ಮಿಣಿಯರ ಪುತ್ರ ಪ್ರದ್ಯುಮ್ನ, ಕೃಷ್ಣ ಜಾಂಬವತಿಯರ ಪುತ್ರ ಸಾಂಬ, ಬ್ರಹ್ಮ ಮಾನಸ ಪುತ್ರ ಸನತ್ಕುಮಾರ, ರುದ್ರ ಪುತ್ರ ಸ್ಕಂದ -ಇವಿಷ್ಟು ಕಾಮನ ರೂಪಗಳು. ತನ್ನ ನಿಜ ಭಕ್ತರ ಶತ್ರುಗಳನ್ನು ಆಕ್ರಂದಿಸುವುದರಿಂದ ಅಂದರೆ ಅವರನ್ನು ನಾಶ ಮಾಡುವವನಾದ್ದರಿಂದ “ಸ್ಕಂದ’ ಎಂದು ಹೆಸರಾಗಿದೆ.

Advertisement

ಯೋ ರುದ್ರ ಪುತ್ರ ಸ್ಕಂದಸ್ತು ಕಾಮ ಏವ ಪ್ರಕೀರ್ತಿತಃ|
ರೀಪೂನಕ್ರಂದತೇ ನಿತ್ಯಂ ಅತಃ ಸ್ಕಂದಃ ಇತಿ ಸ್ಮತಃ|| (ಗರುಡ ಪುರಾಣ)
ಹಿರಣ್ಯಾಕ್ಷನೆಂಬ ದೈತ್ಯನ ಮಗನಾದ ಅತಿದುಷ್ಟನಾದ ತಾರಕಾಸುರನೆಂಬ ರಾಕ್ಷಸನು ತನ್ನ ತಂದೆಯನ್ನು ಶ್ರೀ ಹರಿಯು ಕೊಂದನೆಂ ಬುದನ್ನು ಅರಿತು ತನಗೆ ಯಾರಿಂದಲೂ ಮರಣ ಬರ ಬಾರದೆಂದು ಗೋಕರ್ಣ ಪರ್ವತವನ್ನು ಸೇರಿ ರುದ್ರ ದೇವರನ್ನು ತಪಸ್ಸಿನಿಂದ ಒಲಿಸಿಕೊಂಡು ನಿನ್ನಿಂದಲ್ಲದೇ ಬೇರಾರಿಂದಲೂ ನನಗೆ ಮರಣ ಬರಬಾರದೆಂದು ವರವನ್ನು ಕೇಳಿದಾಗ ಶಿವನು ತಥಾಸ್ತು ಎಂದನು.

ತನ್ನ ಭಕ್ತನಾದ ನನ್ನನ್ನು ಶಿವ ಕೊಲ್ಲುವುದಿಲ್ಲ, ಬೇರೆಯವರಿಂದ ತನ್ನನ್ನು ಕೊಲ್ಲಲು ಸಾಧ್ಯವಿಲ್ಲ; ಆದ್ದರಿಂದ ತಾನು ಅಜೇಯನೆಂದು ತಿಳಿದು ಅಹಂಕಾರದಿಂದ ಲೋಕ ಕಂಡುಕೇಳರಿಯದ ಅನಾಚಾರಗಳನ್ನು ನಡೆಸಿ, ದೇವಲೋಕಕ್ಕೆ ದಾಳಿ ಮಾಡಿ ವಶಪಡಿಸಿಕೊಂಡ. ದಾನವನ ಉಪಟಳ ವನ್ನು ಸಹಿಸಲಾಗದೇ ಸುರರು ಗುರುಗಳಾದ ಬೃಹಸ್ಪತಿಯ ಸಲಹೆಯನ್ನು ಕೇಳಿದಾಗ, ಗುರುವು ರುದ್ರ ದೇವರ ವರಬಲದಿಂದ ಆತನಿಗೆ ರುದ್ರ ನಿಂದಲ್ಲದೆ ಬೇರೆಯವರಿಂದ ಆತನಿಗೆ ಸಾವಿಲ್ಲ, ರುದ್ರನಂತೂ ವಧಿಸಲಾರ. ವಿಷವೃಕ್ಷವನ್ನಾದರೂ ಅದನ್ನು ನೆಟ್ಟವನೇ ಕತ್ತರಿಸಲಾರ. ಆದ್ದರಿಂದ ರುದ್ರ ದೇವರನ್ನು ಪ್ರಾರ್ಥಿಸಿ ತಾರಕನನ್ನು ಸಂಹರಿಸುವ ಮಗನಿಗೆ ಆತ ಜನ್ಮ ನೀಡಿ ಅನುಗ್ರಹಿಸಲಿ. ತಂದೆಯೇ ಮಗನಾಗಿ ಹುಟ್ಟುತ್ತಾನೆ ಎಂದು ವೇದವಾಕ್ಯ ಇರುವುದರಿಂದ ರುದ್ರನೇ ತಾರಕನನ್ನು ಕೊಂದಂತಾಗುವುದು ಎಂದು ಸಲಹೆಯನ್ನು ಕೊಟ್ಟಾಗ ದೇವತೆಗಳು ಅದರಂತೇ ರುದ್ರ ದೇವರಲ್ಲಿ ಪ್ರಾರ್ಥನೆ ಮಾಡಿದರು. “ತಥಾಸ್ತು’ ಅಂದ ಶಿವ.

ಸುತೋತ್ಪಾದನೆಯ ನಿಟ್ಟಿನಲ್ಲಿ ಗೌರಿಯೊಂದಿಗೆ ರಮಿಸುತ್ತಿರುವಾಗ ಕೆಲವು ಕಾಲಗಳೇ ಸಂದವು. ಭೀತರಾದ ದೇವತೆಗಳು ವಾಯುದೇವನನ್ನು ಶಿವನಲ್ಲಿಗೆ ಕಳುಹಿಸಿದರು. ಗೌರಿಯೊಂದಿಗಿನ ತನ್ನ ಏಕಾಂತವನ್ನು ವಾಯುದೇವ ನೋಡಿದ್ದನ್ನು ತಿಳಿದ ಶಿವ ನಾಚಿಕೆಯಿಂದ ಗೌರಿಯಿಂದ ಬೇರಾದ. ಪತ್ನಿಯಿಂದ ಬೇರಾದ ಶಿವ ತನ್ನ ವೀರ್ಯವನ್ನು ಎಲ್ಲಿ ಚೆಲ್ಲಲಿ ಎಂದು ದೇವತೆಗಳನ್ನೇ ಕೇಳಿದ. ದೇವತೆಗಳು ಅಗ್ನಿದೇವರನ್ನು ಪ್ರಾರ್ಥಿಸಿದಾಗ, ಅಗ್ನಿ ಒಪ್ಪಿದನಾದರೂ, ಪ್ರಳಯಾಗ್ನಿಯಂತಿದ್ದ ಶಿವ ವೀರ್ಯವನ್ನು ಧರಿಸಲಾರದೇ ಗಂಗೆಯಲ್ಲಿ ಹಾಕಿದ. ಗಂಗೆ ಶರವನವೆಂಬ ಹುಲ್ಲಿನ (ಬಿದಿರು) ಮೇಲೆ ಇಟ್ಟಳು.

ಅಲ್ಲಿ ಸಂಚರಿಸುತ್ತಿದ್ದ ಆರು ಜನ ಕೃತ್ತಿಕಾನಾಮಕ ಮುನಿಪತ್ನಿಯರನ್ನು ಬಳಿಗೆ ಕರೆದ ಇಂದ್ರ ಹುಲ್ಲಿನ ಮೇಲೆ ಬಿದ್ದ ವೀರ್ಯವನ್ನು ಪ್ರಯತ್ನದಿಂದ ಪಾಲಿಸುವಂತೆ ಕೇಳಿಕೊಂಡ. ಇದರಿಂದ ಜನಿಸುವ ಮಗ ನಿಮಗೂ ಮಗನೆನಿಸಿಕೊಳ್ಳುವನೆಂದ. ಒಪ್ಪಿದ ಕೃತ್ತಿಕೆಯರು ಅದನ್ನು ರಕ್ಷಿಸಿದರು. ಬಳಿಕ ಒಂದು ದಿನ ದ್ವಾದಶ ಸೂರ್ಯರಂತೆ ಕಾಂತಿಯುತನಾದ, ಎರಡು ಬಾಹು ಒಂದು ಮುಖವುಳ್ಳ ಬಾಲಕ ಚೈತ್ರಮಾಸದ ಶುಕ್ಲ ಷಷ್ಠಿಯಂದು ಜನಿಸಿದ.

Advertisement

ಜಾತಃ ಸ್ಕಂದಶ್ಚ ಷಷ್ಠಾತು ಶುಕ್ಲಾಯಾಂ ಚೈತ್ರನಾಮನಿ (ಬ್ರಹ್ಮ ಪುರಾಣ)
ಮಗುವಿನ ಅಳುಕೇಳಿ ಓಡಿಬಂದ ಆರು ಮಂದಿ ಕೃತ್ತಿಕೆಯರನ್ನು ಕುತೂಹಲದಿಂದ ಆರು ಮುಖ ಹನ್ನೆರಡು ಕಣ್ಣುಗಳಿಂದ ಮಾತೃ ಭಾವದಿಂದ ನೋಡಿದ. ಅವರೂ ಆತನಿಗೆ ಮಾತೃ ವಾತ್ಸಲ್ಯ ತೋರಿದರು. ಶಿವವೀರ್ಯ, ಗಾಂಗೇಯ, ಅಗ್ನಿಗರ್ಭ, ಶರವಣಭವ, ಕಾರ್ತಿಕೇಯ, ಷಣ್ಮುಖ, ಬಾಹುಲೇಯ ಹೆಸರುಗಳನ್ನು ಪಡೆದ. ರೇತಸ್ಸು ಭೂಮಿಯಲ್ಲಿ ಬಿದ್ದು ಜನಿಸಿದವನಾದ್ದರಿಂದ ದೇವತೆಗಳು ಸ್ಕಂದ ಎಂದು ಕರೆದರು. ಅನಂತರ ಬ್ರಹ್ಮ ದೇವ ದೇವಸೇನೆಗೆ ಅಧಿಪತಿಯಾಗಿ ಕಾರ್ತಿಕ ಮಾಸದ ಶುಕ್ಲ ಪಕ್ಷದ ಷಷ್ಠಿಯಂದು ಪಟ್ಟಾಭಿಷೇಕ ಮಾಡಿದ. ಕುಮಾರ, ದೇವಸೇನಾಪತಿ ಎನಿಸಿಕೊಂಡ.

ಶಿವ ಶಕ್ತ್ಯ ಶೀಘ್ರಗಾಮಿಯಾಗಲು ವಾಹನವಾಗಿ ನವಿಲನ್ನು ಕೊಟ್ಟ. ಸ್ಕಂದ ಶಕ್ತಿಹಸ್ತ, ಮಯೂರ ವಾಹನನೆಂದು ಕರೆಸಿಕೊಂಡ. ಶಿವಪುತ್ರ ತಾರಕನೆಡೆಗೆ ಸಾಗಿದ. ಘೋರಯುದ್ಧದೊಂದಿಗೆ ಮಾರ್ಗಶೀರ್ಷ ಮಾಸದ ಶುಕ್ಲ ಷಷ್ಠಿಯಂದು ತಾರಕನನ್ನು ಕೊಂದ. ತಾರಕ ಮಾರಕನೆನಿಸಿಕೊಂಡ. ಸ್ಕಂದನ ಶಕ್ತ್ಯ ಹೊಡೆತದಿಂದ ತಾರಕಾಸುರನ ದೇಹ ರಕ್ತಶೃಂಗ ಪರ್ವತಕ್ಕೆ ಹೋಗಿ ಬಡಿಯಿತು. ಆ ಪರ್ವತ ಕಂಪಿಸಿ ತನ್ನ ಸ್ಥಾನದಿಂದ ಚಲಿಸಿತು. ಇದರಿಂದ ನಿರ್ದೋಷಿ ಜೀವಸಂಕುಲದ ಪ್ರಾಣಹಾನಿಯಾಯಿತು. ಬ್ರಾಹ್ಮಣರ ಅನುಷ್ಠಾನಕ್ಕೆ, ಜೀವಿತಕ್ಕೆ ಭಂಗ ವಾಯಿತು. ಕೋಪಗೊಂಡ ಋಷಿಮುನಿಗಳು ಸ್ಕಂದನಿಗೆ ಶಾಪ ಕೊಟ್ಟರು.

ಬ್ರಾಹ್ಮಣರ ಮಾತನ್ನು ಕೇಳಿದ ಕುಮಾರ, “ನಾನು ಲೋಕ ಕಲ್ಯಾಣಕ್ಕಾಗಿ ಈ ಕೃತ್ಯವನ್ನು ಮಾಡಿದೆ. ನಿಮಗೆ ತೊಂದರೆ ಕೊಡಬೇಕೆಂಬ ಉದ್ದೇಶದಿಂದ ಅಲ್ಲ. ಕ್ಷಮೆಯಿರಲಿ. ನೀವು ನನ್ನನ್ನು ಆಶೀರ್ವದಿಸಿ. ಮೃತರಾದ ದ್ವಿಜರೆಲ್ಲರನ್ನೂ ಬದುಕಿಸುವೆನು. ಹಾಗೆಯೇ ನನ್ನ ಶಕ್ತ್ಯ ಈ ಪರ್ವತವನ್ನು ಸ್ವಸ್ಥಾನದಿಂದ ಚಲಿಸದಂತೇ ಸ್ಥಿರಗೊಳಿಸುವೆನು. ನಿಮಗಿಂತ ಪ್ರೀತಿಪಾತ್ರರು ನನಗಾರಿಲ್ಲ’ ಎಂದು ನಮಸ್ಕರಿಸಿದ. ಹೇಳಿ ದಂತೆಯೇ ನಡೆದ. ಸಂತುಷ್ಟರಾದ ದ್ವಿಜರು ಸ್ಕಂದನಿಗೆ ವರವನ್ನಿತ್ತರು. ಅನಂತರವೇ ಆತ ಸುಬ್ರಹ್ಮಣ್ಯನಾದ.

ಬ್ರಾಹ್ಮಣರ ಶಾಪದಿಂದ ಸುಬ್ರಹ್ಮಣ್ಯ ಕಾಳಿಂಗ ಸರ್ಪನಾದ. ಪುತ್ರ ಶೋಕಕ್ಕೀಡಾದ ಪಾರ್ವತೀ ದೇವಿಯು ತನ್ನ ಮಗನನ್ನು ಪುನರಪಿ ಪಡೆಯಲು 108 ಷಷ್ಠಿ ವ್ರತವನ್ನು ಮಾಡಿ, ವ್ರತದ ಉದ್ಯಾಪನೆಗೆ ವಿಷ್ಣು ಆದಿಯಾಗಿ ಎಲ್ಲ ದೇವತೆಗಳಿಗೂ ಕರೆಯಿತ್ತಳು. ಸ್ಕಂದನೂ ಕಾಳಸರ್ಪರೂಪದಿಂದ ಬಂದಿದ್ದನು. ವಿಷ್ಣುವಿನ ಸ್ಪರ್ಶದಿಂದ ಹಾಗೂ ಪಾರ್ವತಿಯ ವ್ರತಾಚರಣೆಯಿಂದ ಕುಮಾರನಿಗೆ ಮೊದಲಿನ ರೂಪವೇ ಪ್ರಾಪ್ತವಾಯಿತು. ಷಷ್ಠಿ ವ್ರತವನ್ನು ಲೋಕದಲ್ಲಿ ಮೊದಲಾಗಿ ಆಚರಿಸಿದವಳು ಪಾರ್ವತಿ ದೇವಿ.

-ವಾಸುದೇವ ರಾವ್‌, ಕುಡುಪು

Advertisement

Udayavani is now on Telegram. Click here to join our channel and stay updated with the latest news.

Next