Advertisement

ಬಜೆಟ್‌ನಲ್ಲಿ ಚಾ.ನಗರ ರೈಲ್ವೆ ನಿರೀಕ್ಷೆ ಹುಸಿ

08:39 PM Feb 01, 2020 | Lakshmi GovindaRaj |

ಚಾಮರಾಜನಗರ: ಪ್ರತಿ ಬಾರಿ ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ಖಾತೆಯಿಂದ ಚಾಮರಾಜನಗರಕ್ಕೆ ಯಾವುದಾದರೂ ಹೊಸ ರೈಲು ಅಥವಾ ರೈಲ್ವೆ ಸ್ವಚ್ಛತಾ ಕಾರ್ಯಾಗಾರ ದೊರೆಯಬಹುದೆಂಬ ನಿರೀಕ್ಷೆ ಜಿಲ್ಲೆಯ ಜನರಲ್ಲಿರುತ್ತದೆ. ಆ ನಿರೀಕ್ಷೆ ಎಂದಿನಂತೆ ಈ ಬಾರಿಯೂ ಹುಸಿಯಾಗಿದೆ.

Advertisement

ಬೆಂಗಳೂರಿನ ಹೆಜ್ಜಾಲದಿಂದ, ಕನಕಪುರ, ಮಳವಳ್ಳಿ, ಕೊಳ್ಳೇಗಾಲ ಮೂಲಕ ಚಾಮರಾಜನಗರ ತಲುಪುವ 129 ಕಿ.ಮೀ. ಉದ್ದದ, 1330 ಕೋಟಿ ರೂ. ವೆಚ್ಚದ ನೂತನ ರೈಲ್ವೆ ಮಾರ್ಗವನ್ನು ಕಳೆದ ಯುಪಿಎ ಸರ್ಕಾರದ ಅವಧಿಯಲ್ಲಿ, ಅಂದಿನ ರೈಲ್ವೆ ಸಚಿವ ಮಲ್ಲಿಕಾರ್ಜುನಖರ್ಗೆ ತಮ್ಮ ಬಜೆಟ್‌ನಲ್ಲಿ ಘೋಷಿಸಿದ್ದರು. ಅದಕ್ಕಾಗಿ ಪ್ರಥಮ ಹಂತವಾಗಿ 10 ಕೋಟಿ ರೂ.ಗಳನ್ನೂ ನೀಡಿದ್ದರು. ಅದಾದ ಬಳಿಕ ಇದಕ್ಕೆ ಕೇಂದ್ರ ಅನುದಾನ ನೀಡಿರಲಿಲ್ಲ. ಈ ಬಾರಿ ಒಂದಷ್ಟು ಅನುದಾನದ ನಿರೀಕ್ಷೆಯಿತ್ತು. ಆದರೆ ಆ ನಿರೀಕ್ಷೆಯ ಬಲೂನಿಗೆ ಕೇಂದ್ರ ಬಜೆಟ್‌ ಮುಳ್ಳು ಚುಚ್ಚಿದೆ.

ಈ ರೈಲ್ವೆ ಮಾರ್ಗ ಬೆಂಗಳೂರು ಗ್ರಾಮಾಂತರ, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ಹೀಗಾಗಿ ಮಂಡ್ಯ ಸಂಸದೆ ಸುಮಲತಾ ಕೂಡ ಕೆಲ ತಿಂಗಳ ಹಿಂದೆ ಈ ಯೋಜನೆ ಪುನಶ್ಚೇತನ ಕುರಿತು ರೈಲ್ವೆ ಅಧಿಕಾರಿಗಳ ಸಭೆ ನಡೆಸಿದ್ದರು. ಹೀಗಾಗಿ ಈ ಯೋಜನೆ ಪುನರ್‌ಚಾಲನೆಗೆ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಅನುದಾನ ದೊರೆಕಬಹುದೆಂಬ ನಿರೀಕ್ಷೆಗಳಿತ್ತು.

ಹೊಸ ರೈಲು ಇಲ್ಲ: ಚಾಮರಾಜನಗರವು ರಾಜ್ಯದ ಕೊನೆಯ ರೈಲ್ವೆ ನಿಲ್ದಾಣವಾಗಿದೆ. ಮೈಸೂರಿಗೆ ಬರುವ ಅನೇಕ ರೈಲುಗಳನ್ನು ಚಾಮರಾಜನಗರಕ್ಕೆ ವಿಸ್ತರಿಸಿದರೆ ಪ್ರಯಾಣಿಕರಿಗೆ ಬಹಳ ಅನುಕೂಲವಾಗುತ್ತಿತ್ತು. ಮುಖ್ಯವಾಗಿ ಹುಬ್ಬಳ್ಳಿ-ಧಾರವಾಡದಿಂದ ಮೈಸೂರಿಗೆ ಬರುವ, ಹಾಗೂ ಶಿವಮೊಗ್ಗದಿಂದ ಮೈಸೂರಿಗೆ ಬರುವ ರೈಲನ್ನು ಚಾಮರಾಜನಗರಕ್ಕೆ ವಿಸ್ತರಿಸಬೇಕು ಎಂಬುದು ಪ್ರಯಾಣಿಕರ ಒತ್ತಾಯವಾಗಿತ್ತು. ಈ ಬಗ್ಗೆ ಸಂಸದ ಪ್ರತಾಪ್‌ ಸಿಂಹ ಸಹ ಮನವಿ ಸಲ್ಲಿಸಿದ್ದರು. ಈ ಬಜೆಟ್‌ನಲ್ಲಿ ಆ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ.

ಮನವಿಗೆ ಕೇಂದ್ರ ಸ್ಪಂದಿಸಿಲ್ಲ: ಚಾಮರಾಜನಗರದಿಂದ ನಂಜನಗೂಡಿಗೆ 35 ಕಿ.ಮೀ. ಅಂತರವಿದೆ. ಈ ಮಾರ್ಗದಲ್ಲಿ ಯಾವುದೇ ಕ್ರಾಸಿಂಗ್‌ ಪಾಯಿಂಟ್‌ ಇಲ್ಲ. ಹೀಗಾಗಿ ರೈಲು ತಡವಾಗಿ ಹೊರಟಾಗ, ರೈಲ್ವೆ ವ್ಯಾಗನ್‌ಗಳು ಸಂಚರಿಸಿದಾಗ ರೈಲುಗಳು ನಂಜನಗೂಡು ಅಥವಾ ನಗರದಲ್ಲೇ ತಡವಾಗಿ ಹೊರಡಬೇಕಾಗಿದೆ. ಕವಲಂದೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ,

Advertisement

ರೈಲ್ವೆ ಕ್ರಾಸಿಂಗ್‌ ಪಾಯಿಂಟ್‌ ಮಾಡಿದರೆ ಬಹಳ ಅನುಕೂಲವಾಗಲಿದೆ ಎಂದು ಹಿಂದಿನ ಸಂಸದ ಧ್ರುವನಾರಾಯಣ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು. ಅದು ಸಹ ಈಡೇರಿಲ್ಲ. ಚಾಮರಾಜನಗರದಿಂದ ಮೈಸೂರಿಗೆ ಬೆಳಗ್ಗೆ 10.30ರ ನಂತರ ಮಧ್ಯಾಹ್ನ 3 ಗಂಟೆಯವರೆಗೆ ರೈಲು ಸಂಚಾರ ಇಲ್ಲ. ಈ ಅವಧಿಯಲ್ಲಿ ಇನ್ನೊಂದು ಹೆಚ್ಚುವರಿ ರೈಲನ್ನು ಓಡಿಸಬೇಕೆಂಬ ಬೇಡಿಕೆಗೂ ಕಿಮ್ಮತ್ತು ಸಿಕ್ಕಿಲ್ಲ.

ಸ್ವಚ್ಛತಾ ಘಟಕ ಸಹ ಇಲ್ಲ: ಮೈಸೂರಿನಲ್ಲಿರುವ ಸ್ವಚ್ಛತಾ ಘಟಕದಲ್ಲಿ ಈಗ ಹೆಚ್ಚು ಒತ್ತಡವಿದೆ. ಅನೇಕ ರೈಲುಗಳು ಅಲ್ಲೇ ನಿಲ್ಲಬೇಕಾಗಿದೆ. ಅದಕ್ಕೆ ಸ್ಥಳಾವಕಾಶವೂ ಇಲ್ಲದಂತಾಗಿದೆ. ಚಾ.ನಗರದಲ್ಲಿ ಸ್ವಚ್ಛತಾ ಘಟಕ ಸ್ಥಾಪಿಸಿದರೆ ಮೈಸೂರಿನಲ್ಲಿ ನಿಲ್ಲುವ ರೈಲುಗಳು ಚಾ.ನಗರಕ್ಕೆ ಬರುತ್ತವೆ. ಪ್ರಯಾಣಿಕರಿಗೂ ಇದರಿಂದ ಬಹಳ ಅನುಕೂಲವಾಗುತ್ತದೆ. ಅಲ್ಲದೇ ಇಲ್ಲಿನ ನಿಲ್ದಾಣದಲ್ಲಿ ರೈಲುಗಳೂ ತಂಗಲು ಅವಕಾಶವಾಗುತ್ತದೆ ಎಂಬ ಕಾರಣದಿಂದ ಚಾಮರಾಜನಗರದಲ್ಲಿ ರೈಲುಗಳ ಸ್ವಚ್ಛತಾ ಘಟಕ ಸ್ಥಾಪಿಸಬೇಕೆಂಬ ಬೇಡಿಕೆ ಇತ್ತು. ಅದು ಸಹ ಈಡೇರಿಲ್ಲ.

ನೈಪರ್‌ ಬರಲಿಲ್ಲ: ಚಾಮರಾಜನಗರದಲ್ಲಿ ರಾಷ್ಟ್ರೀಯ ಔಷಧ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯನ್ನು (ನೈಪರ್‌) ಬಜೆಟ್‌ನಲ್ಲಿ ಮಂಜೂರು ಮಾಡಿಕೊಡುವಂತೆ ಹಿಂದಿನ ಸಂಸದ ಆರ್‌. ಧ್ರುವನಾರಾಯಣ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು. ಈ ಸಂಸ್ಥೆ ದೇಶದ 7 ರಾಜ್ಯಗಳಲ್ಲಿ ಸ್ಥಾಪಿತವಾಗಿದೆ. ಕರ್ನಾಟಕ ರಾಜ್ಯದಲ್ಲಿ ಮಾತ್ರ ಇಲ್ಲ. ಅಭಿವೃದ್ಧಿ ಹೊಂದುತ್ತಿರುವ ಚಾಮರಾಜನಗರ ಜಿಲ್ಲೆಗೆ ಈ ಸಂಸ್ಥೆಯನ್ನು ಕೇಂದ್ರ ಮಂಜೂರು ಮಾಡುವ ಆಸಕ್ತಿ ತೋರಿಲ್ಲ.

ಕವಲಂದೆ ಲೆವೆಲ್‌ ಕ್ರಾಸಿಂಗ್‌ ಮಿಸ್‌: ಚಾಮರಾಜನಗರದಿಂದ ನಂಜನಗೂಡಿಗೆ 35 ಕಿ.ಮೀ. ಅಂತರವಿದ್ದು, ಯಾವುದೇ ಕ್ರಾಸಿಂಗ್‌ ಪಾಯಿಂಟ್‌ ಇಲ್ಲ. ಹೀಗಾಗಿ ರೈಲು ತಡವಾಗಿ ಹೊರಟಾಗ, ರೈಲ್ವೆ ವ್ಯಾಗನ್‌ಗಳು ಸಂಚರಿಸಿದಾಗ ರೈಲುಗಳು ನಂಜನಗೂಡು ಅಥವಾ ನಗರದಲ್ಲೇ ತಡವಾಗಿ ಹೊರಡಬೇಕಾಗಿದೆ. ಕವಲಂದೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ, ರೈಲ್ವೆ ಕ್ರಾಸಿಂಗ್‌ ಪಾಯಿಂಟ್‌ ಮಾಡಿದರೆ ಬಹಳ ಅನುಕೂಲವಾಗುತ್ತಿತ್ತು.

ಚಾಮರಾಜನಗರದಿಂದ ಬೆಂಗಳೂರಿಗೆ ಸೀಮಿತವಾಗಿ ಎಕ್ಸ್‌ಪ್ರೆಸ್‌ ರೈಲೊಂದನ್ನು ಮಂಜೂರು ಮಾಡಬೇಕೆಂಬುದು ಪ್ರಯಾಣಿಕರ ಒತ್ತಾಯವಾಗಿತ್ತು. ಈ ಬಾರಿಯ ಬಜೆಟ್‌ನಲ್ಲಿ ರೈಲ್ವೆಯ ಈ ಬೇಡಿಕೆಗಳಲ್ಲಿ ಕೆಲವಾದರೂ ಜಾರಿಗೊಳ್ಳಬಹುದೆಂದು ಜಿಲ್ಲೆಯ ಸಾರ್ವಜನಿಕರು ಆಶಾಭಾವನೆ ಹೊಂದಿದ್ದರು. ಅದಾವುದೂ ಈಡೇರಿಲ್ಲ.

ಜಿಲ್ಲೆಯ ರೈಲ್ವೆಯನ್ನು ಬಿಜೆಪಿ ಸರ್ಕಾರ ಕಳೆದ ಅವಧಿಯಿಂದಲೂ ತೀವ್ರವಾಗಿ ಕಡೆಗಣಿಸಿದೆ. ಈ ಬಾರಿ ಅದರ ಮುಂದುವರಿಕೆಯಾಗಿದೆ ಅಷ್ಟೇ. ರಾಜ್ಯಕ್ಕೇ ಹೆಚ್ಚಿನ ಯೋಜನೆಗಳನ್ನು ನೀಡಿಲ್ಲ. ಇನ್ನು ಚಾಮರಾಜನಗರಕ್ಕೆ ಏನಾದರೂ ಅನುದಾನ ದೊರಕಬಹುದು ಎಂದು ನಿರೀಕ್ಷಿಸುವುದು ತಪ್ಪು.
-ಬಿ.ಕೆ. ರವಿಕುಮಾರ್‌, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ

ಇದೊಂದು ಸಮತೋಲನದ ಬಜೆಟ್‌ ಕೃಷಿಗೆ ಒತ್ತು ನೀಡಲಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಎಲ್ಲರಿಗೂ ಆದ್ಯತೆ ನೀಡುವ ಬಜೆಟ್‌ ಮಂಡಿಸಿದ್ದಾರೆ. ಬಜೆಟ್‌ ಸ್ವಾಗತಾರ್ಹ.
-ಎನ್‌. ಜಿ. ಪ್ರಶಾಂತ್‌, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ

* ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next