Advertisement

Chamarajanagar: ಭರಚುಕ್ಕಿ; ಸುರಕ್ಷತಾ ಕ್ರಮಕ್ಕೆ ಡೀಸಿ ಸೂಚನೆ

03:05 PM Sep 10, 2023 | Team Udayavani |

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಹಾಗೂ ವೆಸ್ಲಿ ಸೇತುವೆ ಬಳಿ ಪ್ರವಾಸಿಗರು ನೀರಿಗಿಳಿದು ಸಾವಿಗೀಡಾಗುತ್ತಿರುವ ಪ್ರಕರಣಗಳ ಹಿನ್ನೆಲೆ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಅವರು ಭರಚುಕ್ಕಿ ಹಾಗೂ ಕಾವೇರಿ ನದಿ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

Advertisement

ಪ್ರಸಿದ್ಧ ಪ್ರವಾಸಿ ಸ್ಥಳ ಭರಚುಕ್ಕಿ, ಶಿವನಸಮುದ್ರ, ವೆಸ್ಲಿ, ಸೇತುವೆ ಕಾವೇರಿ ನದಿ ಪ್ರದೇಶಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಅಲ್ಲಿ ಪ್ರವಾಸಿಗರಿಗೆ ಒದಗಿಸಿರುವ ಸೌಲಭ್ಯ ಪರಿಶೀಲನೆ ಮಾಡಿದರು. ಪ್ರವಾಸಿಗರು ವಹಿಸಬೇಕಿರುವ ಮುನ್ನೆಚ್ಚರಿಕೆ, ಸುರಕ್ಷತಾ ಕ್ರಮ ಪಾಲನೆ ಮಾಡುವಂತೆ ಮನವರಿಕೆ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸೆಲ್ಫಿ ವೇಳೆ ಹುಷಾರು: ಅರಣ್ಯ ಇಲಾಖೆ ನದಿ ಪ್ರದೇಶದಲ್ಲಿ ಗಸ್ತನ್ನು ಹೆಚ್ಚಿಸಬೇಕು. ತೆಪ್ಪ ನಡೆಸುವವರು ಜಾಗೃತರಾಗಿರಬೇಕು. ಯಾರೂ ನೀರಿಗಿಳಿಯದಂತೆ ಸೂಚನೆ ನೀಡಬೇಕು. ಯಾರೇ ನದಿಗಿಳಿಯದಂತೆ ಸಾರ್ವಜನಿಕರು ಎಚ್ಚರಿಕೆ ನೀಡಬೇಕು. ಜನರು ನೀರಿಗಿಳಿಯದಂತೆ ಪೊಲೀಸರು, ಅರಣ್ಯಾಧಿಕಾರಿಗಳೇ ಎಚ್ಚರಿಸ ಬೇಕೆಂದೇ ನಿಲ್ಲ. ಜವಾಬ್ದಾರಿಯುತ ನಾಗರಿಕರು ಈ ಬಗ್ಗೆ ಎಚ್ಚರಿಕೆ ನೀಡಬೇಕು. ನದಿ ದಡದಲ್ಲಿ, ಚೈನ್‌ ಬ್ಯಾರಿಕೇಡ್‌ ಹಾಕಬೇಕು. ಸೆಲ್ಫಿ ತೆಗೆದುಕೊಳ್ಳುವಾಗ ಪ್ರವಾಸಿಗರು ಸುರಕ್ಷಿತ ಸ್ಥಳದಲ್ಲಿ ನಿಲ್ಲ ಬೇಕು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಭರಚುಕ್ಕಿಯಲ್ಲಿ ಪ್ಲಾಸ್ಟಿಕ್‌ ಹೆಚ್ಚಿದ್ದು, ಸ್ವತ್ಛಗೊಳಿಸಿ ಪಾಸ್ಟಿಕ್‌ ಮುಕ್ತ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಭರಚುಕ್ಕಿ ಅಭಿವೃದ್ಧಿ ಸಮಿತಿ ಕಚೇರಿ ವೀಕ್ಷಿಸಿದರು. ನಂತರ ಭರಚುಕ್ಕಿ ಅಭಿವೃದ್ಧಿ ಬಗ್ಗೆ ಗಮನ ಹರಿಸಬೇಕು. ಭರಚುಕ್ಕಿಯಲ್ಲಿ ಶೌಚಾಲಯ ನಿರ್ಮಾಣ ವಾಗಿದ್ದು, ಭಾನುವಾರದಿಂದಲೇ ಸಾರ್ವಜನಿಕರ ಬಳಕೆಗೆ ನೀಡಬೇಕೆಂದು ಶಿಲ್ಪಾನಾಗ್‌ ಸೂಚಿಸಿದರು.

ನೇತ್ರ ತಪಾಸಣೆ ಮಾಡಿಸಿಕೊಳ್ಳಿ: ಬಳಿಕ ಯಳಂದೂರು ತಾಲೂಕಿನ ಆಲ್ಕೆರೆ ಅಗ್ರಹಾರ ಗ್ರಾಮಕ್ಕೆ ಭೇಟಿ ನೀಡಿ ಅಂಧತ್ವ ಪ್ರಮಾಣ ತಗ್ಗಿಸಲು ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ ನಡೆಸಲಾಗುತ್ತಿರುವ ನೇತ್ರ ತಪಾಸಣೆ ಆಂದೋಲನ ಕಾರ್ಯವನ್ನು ಜಿಲ್ಲಾಧಿಕಾರಿಯವರು ವೀಕ್ಷಿಸಿದರು. ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ ಪೈಲಟ್‌ ಯೋಜನೆಯಲ್ಲಿ 4 ಜಿಲ್ಲೆ ಆಯ್ಕೆಯಾಗಿದ್ದು ಚಾಮರಾಜನಗರ ಜಿಲ್ಲೆಯೂ ಒಂದು. ಆಶಾ ಕಾರ್ಯಕರ್ತೆಯರು ಕಣ್ಣಿನ ತಪಾಸಣೆಯನ್ನು ಸರಿಯಾಗಿ ಮಾಡುತ್ತಿದ್ದಾರೆಯೇ ಎಂದು ಜಿಲ್ಲಾಧಿಕಾರಿ ಅಂತರ ಪರೀಕ್ಷೆ ಮಾಡಿ ಪರಿಶೀಲಿಸಿದರು. ಬಳಿಕ ಜಿಲ್ಲಾಧಿಕಾರಿ ತಾವೇ ಖುದ್ದಾಗಿ ಎರಡು ಮನೆಗಳಲ್ಲಿ ಸಮೀಕ್ಷೆ ನಡೆಸಿದರು.

Advertisement

ಸದ್ಬಳಕೆ ಮಾಡಿಕೊಳ್ಳಿ: ಆಶಾ ಕಾರ್ಯಕರ್ತೆಯರು ಆರೋಗ್ಯ ಸಿಬ್ಬಂದಿಯವರೊಂದಿಗೆ ಗ್ರಾಮದಲ್ಲಿ ಸಂಚರಿಸಿ, ಕಣ್ಣಿನ ಆರೋಗ್ಯ ಸಂರಕ್ಷಣೆಗೆ ಕೈಗೊಂಡಿರುವ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು. ಕಣ್ಣಿನ ತೊಂದರೆ ಪರಿಹರಿಸಲು ವಿಶೇಷವಾಗಿ ನಡೆಸುತ್ತಿರುವ ಆಶಾಕಿರಣ ಕಾರ್ಯಕ್ರಮ ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಿದರು. ಇದೇ ವೇಳೆ ಗ್ರಾಮದ ಶಾಲಾ ಮಕ್ಕಳೊಂದಿಗೆ ಜಿಲ್ಲಾಧಿಕಾರಿ ಆತ್ಮೀಯವಾಗಿ ಮಾತನಾಡಿದರು.

ಇದಲ್ಲದೇ, ಸತ್ತೇಗಾಲ, ಜಾಗೇರಿಗೆ ತೆರಳಿ ಅಲ್ಲಿನ ರೈತರಿಗೆ ಅಕ್ರಮ ಸಕ್ರಮ ಹಕ್ಕುಪತ್ರ ನೀಡುವ ಸಂಬಂಧ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಭೇಟಿ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಮಹೇಶ್‌, ತಹಶೀಲ್ದಾರ್‌ ಮಂಜುಳಾ, ಅರಣ್ಯ ಎಸಿಎಫ್ ಶಶಿಧರ್‌, ಇನ್ಸ್ ಪೆಕ್ಟರ್‌ ಕೃಷ್ಣಪ್ಪ, ಮತ್ತಿತರ ಅಧಿಕಾರಿಗಳು ಇದ್ದರು. ‌

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ: ಯಳಂದೂರು ತಾಲೂಕಿನ ವಡಗೆರೆಯ ಅಗರ-ಮಾಂಬಳ್ಳಿ ಹೋಬಳಿಗೆ ಸೇರಿದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ಅಲ್ಲಿನ ಕೊಠಡಿ, ಸಭಾಂಗಣ ಇತರೆ ಸ್ಥಳ ವೀಕ್ಷಣೆ ಮಾಡಿದರು. ವಿದ್ಯಾರ್ಥಿನಿಯರಿಗೆ ವಸತಿ ಶಾಲೆಯಲ್ಲಿ ಕಲ್ಪಿಸಲಾಗಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿ ಶಿಲ್ಪಾನಾಗ್‌, ಗುಣಮಟ್ಟದ ಊಟ-ಉಪಾಹಾರ ನೀಡಲಾಗುತ್ತಿದೆಯೇ, ಕೊಠಡಿಗಳು, ಶೌಚಾಲಯ ಮತ್ತಿತರ ಕಡೆ ಶುಚಿತ್ವ ಕಾಪಾಡಿಕೊಳ್ಳಲಾಗುತ್ತಿದೆಯೇ? ಶೈಕ್ಷಣಿಕ ಸೌಕರ್ಯ ಸಮರ್ಪಕವಾಗಿ ಒದಗಿಸಲಾಗುತ್ತಿದೆಯೇ ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿ ತಿಳಿದುಕೊಂಡರು. ವಿದ್ಯಾರ್ಥಿನಿಯರು ಶ್ರಮಪಟ್ಟು ಓದಬೇಕು. ಹೆಚ್ಚು ಅಂಕಗಳಿಸಿ ನಿಮಗೆ ಆಸಕ್ತಿ ಇರುವ ವಿಷಯಗಳನ್ನು ಕಾಲೇಜು ಹಂತದಲ್ಲಿ ಆಯ್ಕೆ ಮಾಡಿಕೊಳ್ಳಿ. ನಾನೂ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡು ಐಎಎಸ್‌ ತೇರ್ಗಡೆಯಾದೆ. ಹಾಗೆಯೇ ನೀವೂ, ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿ ಉನ್ನತ ಹುದ್ದೆಯನ್ನು ಅಲಂಕರಿಸಬೇಕು. ವಿದ್ಯಾರ್ಥಿಯ ಜೀವನವನ್ನು ಸಾರ್ಥಕಪಡಿಸಿಕೊಂಡರೆ ಮುಂದಿನ ಭವಿಷ್ಯ ಉತ್ತಮವಾಗಲಿದೆ ಎಂದು ಸಲಹೆ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next