Advertisement

Chamarajanagar ಚಿಕ್ಕಾಟಿಯವರಾದ ಕವಿ ವಿಮರ್ಶಕ ಡಾ. ಸಿ. ನಾಗಣ್ಣ ಅವರಿಗೆ ರಾಜ್ಯೋತ್ಸವ ಗರಿ

08:09 PM Oct 31, 2023 | Team Udayavani |

ಚಾಮರಾಜನಗರ : ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ ಗ್ರಾಮದವರಾದ ಕವಿ, ಲೇಖಕ ವಿಮರ್ಶಕ, ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಡಾ. ಸಿ. ನಾಗಣ್ಣ ಅವರು ಕರ್ನಾಟಕ ಸರ್ಕಾರದ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Advertisement

ಹುಲಿಗಳ ನಾಡು ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ ಗ್ರಾಮದವರಾದ ಡಾ.ಸಿ.ನಾಗಣ್ಣ ಅವರ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಹುಟ್ಟೂರು ಚಿಕ್ಕಾಟಿ ಗ್ರಾಮದಲ್ಲಿ. ತಂದೆ ಕಾಳಪ್ಪ ತಾಯಿ ಚಿನ್ನಮ್ಮ. ಪ್ರೌಢಶಾಲೆ ಮತ್ತು ಪದವಿಪೂರ್ವ ಶಿಕ್ಷಣ ನಂಜನಗೂಡಿನ ಸರ್ಕಾರಿ ವಿವಿಧೋದ್ದೇಶ ಪ್ರೌಢಶಾಲೆಯಲ್ಲಿ. ಶಾರದಾ ವಿಲಾಸ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ. ಪದವಿ ಓದಿದ್ದು ವಿಜ್ಞಾನ ವಿಷಯದಲ್ಲಾದರೂ, ಸಾಹಿತ್ಯದಲ್ಲಿನ ಆಸಕ್ತಿಯಿಂದಾಗಿ ಮೈಸೂರು ವಿಶ್ವ ವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬಳಿಕ ಮಹಾರಾಜಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಂತರ ಮಾನಸ ಗಂಗೋತ್ರಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಪ್ರಸ್ತುತ ಸಂದರ್ಶಕ ಪ್ರಾಧ್ಯಾಪಕರಾಗಿ ಮುಂದುವರೆದಿದ್ದಾರೆ. ಒಟ್ಟು 42 ವರ್ಷಗಳ ಕಾಲ ಅಧ್ಯಾಪನ ವೃತ್ತಿಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಡಾ. ನಾಗಣ್ಣ ಅವರು ಕವಿ, ವಿಮರ್ಶಕ, ಭಾಷಾಂತರಕಾರರಾಗಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ 30ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ಭಾರತೀಯ ಜ್ಞಾನಪೀಠ, ಸರಸ್ವತಿ ಸವ್ಮಾನ್, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದರು. ಆಫ್ರಿಕನ್ ಲೇಖಕ ಚಿನುವ ಅಚಿಬೆಯ ಥಿಂಗ್ಸ ಫಾಲ್ ಅಪಾರ್ಟ್ ಕೃತಿಯನ್ನು ಭಂಗ ಶೀರ್ಷಿಕೆಯಡಿ ಅನುವಾದಿಸಿದ್ದಾರೆ ಖ್ಯಾತ ಬರಹಗಾರ ಸಿ.ಎನ್. ರಾಮಚಂದ್ರನ್ ಅವರ ಬದುಕು ಬರೆಹ ಕುರಿತ ಕೃತಿ ಪ್ರಕಟಿಸಿದ್ದಾರೆ.

ಇದಲ್ಲದೆ ಅಂಬೇಡ್ಕರ್ ಸಮಗ್ರ ಕೃತಿಗಳ ಅನುವಾದಕ ಸಂಪಾದಕರ ಮಂಡಳಿಯಲ್ಲಿಯೂ ಕೆಲಸ ಮಾಡಿದ್ದರು. ಜಿಲ್ಲೆಯ ಯಳಂದೂರು ಪಟ್ಟಣದಲ್ಲಿ ನಡೆದ 3ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ವರ್ಧಮಾನ ಪ್ರಶಸ್ತಿ, ಶರಣಶ್ರೀ, ರೋಟರಿ ರಾಜ್ಯೋತ್ಸವ ಪ್ರಶಸ್ತಿ, ಚಾಮರಾಜನಗರ ಜಿಲ್ಲಾ ಕನ್ನಡ ರಾಜ್ಯೋತ್ಸವ ಸನ್ಮಾನ. ವಿಶ್ವಮಾನವ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳಿಗೆ ಪಾತ್ರರಾಗಿದ್ದಾರೆ.

ಮೃದು ಮನಸ್ಸಿನ, ಮಿತ ಭಾಷಿ ನಾಗಣ್ಣ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸಾವಿರಾರು ಶಿಷ್ಯರ ಪ್ರೀತಿ ಅಭಿಮಾನ ಗಳಿಸಿದ್ದಾರೆ. ಅವರು ಮರ್ಚೆಂಟ್ ಆಫ್ ವೆನೀಸ್ ಸೇರಿದಂತೆ ಶೇಕ್ಸ್‌ಪಿಯರನ ನಾಟಕಗಳನ್ನು ಬೋಧಿಸುತ್ತಿದ್ದುದನ್ನು ಅವರ ವಿದ್ಯಾರ್ಥಿಗಳು ಈಗಲೂ ನೆನಪಿಸಿಕೊಳ್ಳುತ್ತಾರೆ.

Advertisement

ರಾಜ್ಯೋತ್ಸವ ಪ್ರಶಸ್ತಿ ಕುರಿತು ಉದಯವಾಣಿಯೊಂದಿಗೆ ಮಾತನಾಡಿದ ಅವರು,ಸ್ನೇಹಿತರು ಹಿತೈಷಿಗಳು ಮೊದಲೇ ಈ ಪ್ರಶಸ್ತಿ ಬರಬೇಕಿತ್ತು ಎನ್ನುತ್ತಿದ್ದಾರೆ. ಪ್ರಶಸ್ತಿ, ಗೌರವಗಳು ಯಾವಾಗ ಬರಬೇಕೋ ಆಗಲೇ ಬರೋದು. ಆ ಕ್ಷಣ ಕೂಡಿ ಬರಬೇಕು ಎಂಬುದು ನನ್ನ ಖಚಿತ ನಂಬಿಕೆ. ಸರ್ಕಾರ ಬೇರೆ ಬೇರೆ ಕ್ಷೇತ್ರದಲ್ಲಿರುವ ಪ್ರಗತಿ ಪರ ಆಲೋಚನೆಯುಳ್ಳವರನ್ನು ಗುರುತಿಸಿರುವುದು ಸಂತಸದ ಸಂಗತಿ. ಕರ್ನಾಟಕ ಎಂದು ನಾಮಕರಣವಾಗಿ, ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ನನಗೆ ಪ್ರಶಸ್ತಿ ಬಂದಿರುವುದು ಬಹಳ ಸಂತೋಷ ಅಭಿಮಾನ ಮೂಡಿಸಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next