Advertisement

ಪಕ್ಕದ ಮನೆಯ ಕಾಂಪೌಂಡ್‌ ಹತ್ತಬೇಡಿ, ಹೂಕುಂಡ ಬೀಳಿಸಬೇಡಿ…; ದರ್ಶನ್‌

12:08 PM Feb 06, 2018 | Team Udayavani |

ಫೆಬ್ರವರಿ 16 ದರ್ಶನ್‌ ಅಭಿಮಾನಿಗಳ ಪಾಲಿಗೆ ಹಬ್ಬ. ಅದಕ್ಕೆ ಕಾರಣ ಅಂದು ದರ್ಶನ್‌ ಹುಟ್ಟುಹಬ್ಬ. ದರ್ಶನ್‌ ಹುಟ್ಟುಹಬ್ಬ ಎಂದರೆ ಅವರ ಅಭಿಮಾನಿಗಳ ಸಂಭ್ರವನ್ನು ಕೇಳಬೇಕೇ …ದೂರದ ಊರುಗಳಿಂದ ಬರುವ ಅಭಿಮಾನಿಗಳು ಕೇಕ್‌, ದರ್ಶನ್‌ ಅವರ ವಿವಿಧ ಭಂಗಿಯ ಫೋಟೋಗಳನ್ನಿಡಿದು ರಾಜರಾಜೇಶ್ವರಿ ನಗರದ ಮನೆಮುಂದೆ ಸಂಭ್ರಮಿಸುತ್ತಿರುತ್ತಾರೆ. ಆ ಸಂಭ್ರಮದಲ್ಲಿ ಅಕ್ಕಪಕ್ಕದ ಮನೆಯ ಕಾಂಪೌಂಡ್‌ ಹತ್ತೋದು ಕೂಡಾ ನಡೆದು ಹೋಗುತ್ತದೆ. ಈ ಬಾರಿ ದರ್ಶನ್‌ ತಮ್ಮ ಅಭಿಮಾನಿಗಳಿಗೆ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದಲ್ಲಿ ಬರ್ತ್‌ಡೇ ಸಂಭ್ರಮದ ವೇಳೆ ಅಕ್ಕಪಕ್ಕದ ಮನೆಯ ಕಾಂಪಾಂಡ್‌ ಹತ್ತೋದು, ಹೂವಿನಕುಂಡ ಬೀಳಿಸೋದನ್ನು ಮಾಡಬಾರದು ಎಂದು ಮನವಿ ಮಾಡಿದ್ದಾರೆ. ದರ್ಶನ್‌ ತಮ್ಮ ಅಭಿಮಾನಿಗಳಿಗೆ ಬರೆದ “ವಿನಂತಿ’ ಪತ್ರ ಹೀಗಿದೆ ….

Advertisement

ನಲ್ಮೆಯ ಅಭಿಮಾನಿಗಳಲ್ಲಿ … ನಿಮ್ಮ ದಾಸ ದರ್ಶನ್‌ ತೂಗುದೀಪ ಮಾಡುವ ವಿನಂತಿ. ನನ್ನ ಹುಟ್ಟುಹಬ್ಬದ ದಿನ ನೀವೆಲ್ಲ ದೂರದೂರದ ಊರುಗಳಿಂದ ಬಂದು ನನಗೆ ಶುಭಾಶಯ ಕೋರಿ ನಿಮ್ಮದೇ ಹುಟ್ಟುಹಬ್ಬ ಎನ್ನುವಂತೆ ಸಂಭ್ರಮಿಸುವುದು ನನ್ನ ಯಾವುದೋ ಜನ್ಮದ ಪುಣ್ಯ ಫ‌ಲವೆಂದೇ ಭಾವಿಸುತ್ತೇನೆ. ಈ ನಿಮ್ಮ ಪ್ರೀತಿಗೆ ನಾನು ಚಿರಋಣಿ. ನಿಮಗೆಲ್ಲ ತುಂಬು ಹೃದಯದ ಧನ್ಯವಾದ. ಆದರೆ, ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ದಯವಿಟ್ಟು ನೀವೆಲ್ಲರೂ ಅಕ್ಕಪಕ್ಕದ ಮನೆಯ ನಿವಾಸಿಗಳಿಗೆ ತೊಂದರೆ ಆಗದಂತೆ ಶಾಂತಿ ಹಾಗೂ ಶಿಸ್ತಿನಿಂದ ವರ್ತಿಸಬೇಕಾಗಿ ನಿಮ್ಮೆಲ್ಲರಲ್ಲಿ ಕೈ ಮುಗಿದು  ಕೇಳಿಕೊಳ್ಳುತ್ತೇನೆ. 

ದಯವಿಟ್ಟು ಯಾರೂ ನನ್ನ ಅಕ್ಕಪಕ್ಕದ ಮನೆಯ ಕಾಂಪೌಂಡ್‌ ಹತ್ತುವುದು, ಒಳಪ್ರವೇಶಿಸುವುದು, ಹೂಕುಂಡಗಳನ್ನು ಬೀಳಿಸುವುದು, ಅವರ ಸ್ವತ್ತುಗಳಿಗೆ ಹಾನಿ ಮಾಡುವುದು ಇಂತಹ ಅನುಚಿತ ವರ್ತನೆ ತೋರಬಾರದು. ನನ್ನ ಬಗ್ಗೆ ಇಷ್ಟೆಲ್ಲಾ ಪ್ರೀತಿ, ಅಭಿಮಾನ ಇಟ್ಟಿರುವ ನೀವೆಲ್ಲಲ ನನ್ನ ಈ ಕೋರಿಕೆಯನ್ನು ನಡೆಸಿಕೊಡುವಿರಾಗಿ ನಂಬಿರುತ್ತೇನೆ ಹಾಗೂ ಸಂಘದ ಕಾರ್ಯಕರ್ತರಿಗೆ ಮತ್ತು ಪೊಲೀಸ್‌ ಸಿಬ್ಬಂದಿ ವರ್ಗದವರಿಗೆ ಸಹಕರಿಸಬೇಕಾಗಿ ವಿನಂತಿ.
ಇಂತಿ, ನಿಮ್ಮ
ಪ್ರೀತಿಯ ದಾಸ
ದರ್ಶನ್‌

Advertisement

Udayavani is now on Telegram. Click here to join our channel and stay updated with the latest news.

Next