Advertisement

ಮಚ್ಚು ಹಿಡಿದು ರೋಡಿಗಿಳಿದ ಸರಗಳ್ಳರು

10:38 AM May 10, 2019 | pallavi |

ಬೆಂಗಳೂರು: ರಾಜಧಾನಿಯಲ್ಲಿ ಮಹಿಳೆಯರನ್ನು ಹಿಂಬಾಲಿಸಿ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಸರಗಳ್ಳರು ಇದೀಗ ಮಚ್ಚು ಹಿಡಿದುಕೊಂಡು ರಸ್ತೆಗಿಳಿದಿದ್ದಾರೆ. ಮಚ್ಚು ಹಿಡಿದುಕೊಂಡು ಅಂಗಡಿಗೆ ನುಗ್ಗಿದ ಸರಗಳ್ಳರ ತಂಡ, ಮಹಿಳೆಯನ್ನು ಬೆದರಿಸಿ ಸರ ಕಿತ್ತುಕೊಂಡು ಹೋಗಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ಮೇ 5ರಂದು ಮುಂಜಾನೆ ಗಂಗೊಂಡನಹಳ್ಳಿ ಮುಖ್ಯರಸ್ತೆಯಲ್ಲಿ ನಡೆದ ಸರಗಳ್ಳರ ಕೃತ್ಯಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಸರ ಕಿತ್ತುಕೊಂಡ ದುಷ್ಕರ್ಮಿಗಳು ತಪ್ಪಿಸಿಕೊಳ್ಳಲು, ರಸ್ತೆಯ ಮೇಲೆ ತಳ್ಳಿದ ಪರಿಣಾಮ ಕಾಲಿಗೆ ಪೆಟ್ಟು ಮಾಡಿಕೊಂಡಿರುವ ತರಕಾರಿ ವ್ಯಾಪಾರಿ ಪವಿತ್ರಾ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಳ್ಳುತ್ತಿದ್ದಾರೆ.

ದುಷ್ಕರ್ಮಿಗಳು ಎಸಗಿದ ಕೃತ್ಯದ ಬಗ್ಗೆ ‘ಉದಯವಾಣಿ’ ಜತೆ ಮಾತನಾಡಿದ ಪವಿತ್ರಾ ಅವರು, ‘ಸರ ಹೋದರೆ ಹೋಗಲಿ ಪ್ರಾಣ ಉಳಿಯಿತು. ಆ ಘಟನೆ ನೆನಪಿಸಿಕೊಂಡರೆ ಈಗಲೂ ಬೆಚ್ಚಿಬೀಳುವಂತಾಗುತ್ತದೆ,’ ಎಂದು ಆತಂಕವ್ಯಕ್ತಪಡಿಸಿದರು.

ರಕ್ಷಣೆಗೆ ಬಂದವರಿಗೆ ಮಚ್ಚು ತೋರಿಸಿದರು: ‘ಪತಿ ತರಕಾರಿ ತರಲು ಮಾರ್ಕೆಟ್‌ಗೆ ಹೋಗಿದ್ದು ನಾನು ಮುಂಜಾನೆ 5.15ರ ಸುಮಾರಿಗೆ ಅಂಗಡಿ ಬಾಗಿಲು ತೆಗೆದು ತರಕಾರಿ ಜೋಡಿಸಿ ಇಡುತ್ತಿದ್ದೆ. ಈ ವೇಳೆ ಇಬ್ಬರು ವ್ಯಕ್ತಿಗಳು ಕೈಯಲ್ಲಿ ಮಚ್ಚು ಹಿಡಿದು, ಏಕಾಏಕಿ ಒಳಗೆ ನುಗ್ಗಿದರು. ಕತ್ತಿನಲ್ಲಿದ್ದ ಸರ ಕಿತ್ತುಕೊಳ್ಳಲು ಕೈ ಹಾಕಿದರು. ಭಯಗೊಂಡ ನಾನು, ಸರವನ್ನು ಕೈಯಲ್ಲಿ ಹಿಡಿದುಕೊಂಡು ಹೊರಗೆ ಓಡಿಬಂದೆ. ಕೂಡಲೇ ಹೊರಗಡೆ ಇದ್ದ ಇನ್ನಿಬ್ಬರು ದುಷ್ಕರ್ಮಿಗಳು ನನ್ನನ್ನು ಸುತ್ತುವರಿದು ಚೈನು ಕಿತ್ತುಕೊಳ್ಳಲು ಯತ್ನಿಸಿದರು. ನಾನು ಬಿಗಿಯಾಗಿ ಹಿಡಿದ ಪರಿಣಾಮ ಚೈನು ತುಂಡಾಯಿತು. ಚೈನು ಕಿತ್ತುಕೊಳ್ಳುವಾಗ ಜೋರಾಗಿ ತಳ್ಳಿದ ಪರಿಣಾಮ ನಡುರಸ್ತೆಯಲ್ಲಿ ಬಿದ್ದು ಮುಂಗೈ ಹಾಗೂ ಕಾಲಿಗೆ ಪೆಟ್ಟಾಗಿದೆ’.

‘ನನ್ನ ಕಿರುಚಾಟ ಕೇಳಿಸಿಕೊಂಡ ನೆರೆಹೊರೆಯರು ಸ್ಥಳಕ್ಕೆ ಧಾವಿಸಿದರು. ಕಾರಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಸಹ ಬನೆರವಿಗೆ ಬಂದರು. ಆದರೆ, ಅವರಿಗೆ ದುಷ್ಕರ್ಮಿಗಳು ಮಚ್ಚು ತೋರಿಸಿದ್ದರಿಂದ ಎಲ್ಲರೂ ಹೆದರಿ ಹಿಂದೆ ಸರಿದರು. ಕಾರಿನ ಗ್ಲಾಸ್‌ಗೆ ಕೂಡ ಮಚ್ಚಿನಿಂದ ಹೊಡೆದ ದುಷ್ಕರ್ಮಿಗಳು, ತಡ ಮಾಡದೆ ಎರಡು ಬೈಕ್‌ಗಳಲ್ಲಿ ಪರಾರಿಯಾದರು. ಬಳಿಕ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದೇನೆ,’ ಎಂದು ಪವಿತ್ರಾ ಘಟನೆಯನ್ನು ವಿವರಿಸಿದರು.

Advertisement

ದುಷ್ಕರ್ಮಿಗಳೆಲ್ಲರೂ 25ರ ವಯೋಮಾನದವರು. ಅವರ ಕೈಯಲ್ಲಿ ಮಚ್ಚು ನೋಡಿ ಸಾಕಷ್ಟು ಭಯವಾಗಿತ್ತು. ಸರ ಹೋದರೆ ಹೋಯಿತು, ಜೀವ ಉಳಿದಿದೆ. ಈ ಭಾಗದಲ್ಲಿ ಸರಗಳವು ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಅವರ ಹಾವಳಿಗೆ ಕಡಿವಾಣ ಬಿದ್ದಿಲ್ಲ. ಇಂತಹ ಕೃತ್ಯಗಳು ನಡೆದರೆ ಮಹಿಳೆಯರು ನಿರ್ಭಯವಾಗಿ ಓಡಾಡುವುದು ಹೇಗೆ? ಸರಗಳ್ಳರ ಹಾವಳಿ ತಡೆಗೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಪವಿತ್ರಾ ತಿಳಿಸಿದರು.

ದುಷ್ಕರ್ಮಿಗಳಿಗಾಗಿ ಶೋಧ: ಘಟನೆ ಸಂಬಂಧ ಪವಿತ್ರಾ ಅವರು ನೀಡಿರುವ ದೂರು ಆಧರಿಸಿ, ಚಂದ್ರ ಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಯಾವುದೇ ಸಿಸಿ ಕ್ಯಾಮೆರಾ ಇರಲಿಲ್ಲ. ಆರೋಪಿಗಳ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂಭಾಗಕ್ಕೆ ಚಾಕು ಚುಚ್ಚಿ ಸರ ಕಿತ್ತರು!: ಅದೇ ದಿನ (ಮೇ 5ರಂದು) ಮುಂಜಾನೆ 4.45ರ ಸುಮಾರಿಗೆ ವಿಜಯನಗರದ ಕೆಜಿಎಸ್‌ ಲೇಔಟ್‌ನಲ್ಲಿ ಅಂಗಡಿ ಬಾಗಿಲು ತೆಗೆಯುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು, ಅವರ ಹಿಂಭಾಗಕ್ಕೆ ಚಾಕುವಿನಿಂದ ಚುಚ್ಚಿ ದುಷ್ಕರ್ಮಿಗಳು ಸರ ಕಿತ್ತೂಯ್ದಿದ್ದಾರೆ.

ನಾಗರಬಾವಿ ಪ್ರಿಯದರ್ಶಿನಿ ಲೇಔಟ್ ನಿವಾಸಿ ಕಿಶೋರ್‌ಕುಮಾರ್‌ ಕೆಜಿಎಸ್‌ ಲೇಔಟ್‌ನ ಮುಖ್ಯರಸ್ತೆಯಲ್ಲಿ ಪ್ರಾವಿಷನ್‌ ಸ್ಟೋರ್‌ ಹೊಂದಿದ್ದಾರೆ. ಎಂದಿನಂತೆ ಮೇ 5ರಂದು ಮುಂಜಾನೆ 4.45ರ ಸುಮಾರಿಗೆ ಬಾಗಿಲು ತೆರೆದಿದ್ದ ಅವರು, ಹಾಲು ಸರಬರಾಜುದಾರರಿಗಾಗಿ ಕಾಯುತ್ತಿದ್ದರು.

ಈ ವೇಳೆ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು, ಸಿಗರೇಟ್ ಕೊಡಿ ಎಂದು ಕೇಳಿದ್ದಾರೆ. ನಮ್ಮಲ್ಲಿ ಸಿಗರೇಟ್ ಮಾರಾಟ ಮಾಡುವುದಿಲ್ಲ ಎಂದು ಕಿಶೋರ್‌ ತಿಳಿಸಿದ್ದಾರೆ. ಈ ವೇಳೆ ಬೈಕ್‌ನಲ್ಲಿ ಸ್ವಲ್ಪ ದೂರ ಹೋದ ದುಷ್ಕರ್ಮಿಗಳು, ಯೂಟರ್ನ್ ಮಾಡಿಕೊಂಡು ವಾಪಸ್‌ ಬಂದಿದ್ದು, ಒಬ್ಟಾತ ಕಿಶೋರ್‌ ಮೇಲೆ ಹಲ್ಲೆ ನಡೆಸಿ ಸುಮಾರು 25 ಗ್ರಾಂ ತೂಕದ ಸರ ಕಿತ್ತುಕೊಂಡಿದ್ದಾರೆ. ಅಲ್ಲದೆ, ಅವರ ಹಿಂಭಾಗಕ್ಕೆ ಹರಿತವಾದ ವಸ್ತುವಿನಿಂದ ಚುಚ್ಚಿ ಕೆಲವೇ ನಿಮಿಷಗಳಲ್ಲಿ ಪರಾರಿಯಾಗಿದ್ದಾರೆ. ಈ ಕುರಿತು ಕಿಶೋರ್‌ಕುಮಾರ್‌ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ದುಷ್ಕರ್ಮಿಗಳು ಪರಾರಿಯಾಗುತ್ತಲೇ ಪಕ್ಕದ ಮನೆ ನಿವಾಸಿ ಸಹಾಯಕ್ಕೆ ಬಂದರು. ದುಷ್ಕರ್ಮಿಗಳು ಹರಿತವಾದ ವಸ್ತುವಿನಿಂದ ಚುಚ್ಚಿದ್ದರಿಂದ ಗಾಯವಾಗಿ ರಕ್ತ ಬರುತ್ತಿತ್ತು. ಜತೆಗೆ, ಸರ ಕೀಳುವಾಗ ಅವರ ಉಗುರುಗಳು ತಾಗಿ ಕತ್ತಿನ ಬಳಿ ಗಾಯವಾಗಿತ್ತು,’ ಎಂದು ಕಿಶೋರ್‌ಕುಮಾರ್‌ ‘ಉದಯವಾಣಿ’ಗೆ ತಿಳಿಸಿದರು.

ಸರಗಳ್ಳರಿಗೆ ಕಡಿವಾಣ ಯಾವಾಗ?
ನಗರದಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗುತ್ತಲೇ ಇದೆ. ಈ ಹಿಂದೆ ಗಮನ ಬೇರೆಡೆ ಸೆಳೆದು ಸರಕಳವು ಮಾಡುತ್ತಿದ್ದ ದುಷ್ಕರ್ಮಿಗಳು, ಇದೀಗ ಚಾಕು, ಮಚ್ಚು ಸೇರಿದಂತೆ ಮಾರಕಾಸ್ತ್ರ ಹಿಡಿದು ರಸ್ತೆಗಿಳಿಯುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ವಿಜಯನಗರದಲ್ಲಿ ವಾಕ್‌ ಮಾಡುತ್ತಿದ್ದ ವೃದ್ಧೆಯ ಸರ ಕೀಳಲು ಯತ್ನಿಸಿದ ಆರೋಪಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದ. ಸಂಜಯ್‌ನಗರದಲ್ಲಿ ದುಷ್ಕರ್ಮಿಗಳು ವೃದ್ಧೆಯೊಬ್ಬರನ್ನು ಕೆಳಗೆ ಬೀಳಿಸಿ ಸರ ಕಿತ್ತುಕೊಂಡಿದ್ದರಿಂದ ಆಕೆ ಹಾಸಿಗೆ ಹಿಡಿದಿದ್ದರು. ಅವರ ಕಾಲಿಗೆ ಶಸ್ತ್ರಚಿಕಿತ್ಸೆ ಕೂಡ ನಡೆದಿತ್ತು. ಲಾಲ್ಬಾಗ್‌ನಲ್ಲಿ ವೃದ್ಧೆಯೊಬ್ಬರನ್ನು ಬೀಳಿಸಿ ದುಷ್ಕರ್ಮಿ ಸರ ಕಳವು ಮಾಡಿದ್ದ. ನಗರದ ಹಲವು ಕಡೆ ಒಂದೇ ದಿನದಲ್ಲಿ ಎರಡು ಮೂರು ಕಡೆ ಮಹಿಳೆಯನ್ನು ಬೆದರಿಸಿ ಸರಕಿತ್ತ ಪ್ರಕರಣಗಳಿವೆ.

ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next