Advertisement

ಬಡಗುತಿಟ್ಟಿನ ಅಗ್ರಣಿಯ ಜನ್ಮ ಶತಮಾನೋತ್ಸವ: ಹಾರಾಡಿ ಕುಷ್ಟ ಗಾಣಿಗ

08:30 AM Aug 18, 2017 | |

ಬಡಗುತಿಟ್ಟು ಯಕ್ಷಗಾನದ ಒಂದು ಪ್ರಭೇದವಾದ ನಡುತಿಟ್ಟಿನ ಹಾರಾಡಿ ಶೈಲಿಯ ಕಲಾವಿದನಾಗಿ ಯಕ್ಷಗಾನ ಕಲೆಗೂ ಮೇಳಕ್ಕೂ ಘನತೆಯನ್ನು ತಂದಿತ್ತ ಹಾರಾಡಿ ಕುಷ್ಟ ಗಾಣಿಗರು ಬದುಕಿದ್ದರೆ ಅವರಿಗೀಗ ವಯಸ್ಸು ನೂರರ ಆಸುಪಾಸು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅವರ ಜನ್ಮ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ. ಆಗಸ್ಟ್‌ 20ರಂದು ಕೋಟದಲ್ಲಿ ಸಚಿವ ಪ್ರಮೋದ್‌ ಮಧ್ವರಾಜ್‌ ಸಹಿತ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಈ ಸಂದರ್ಭದಲ್ಲಿ ಕುಷ್ಟ ಗಾಣಿಗರ ಕಲಾ ಬದುಕಿನ ಮೇಲೆ ಬೆಳಕು ಚೆಲ್ಲುವ, ಅವರ ಒಡನಾಡಿಗಳು ಮತ್ತು ಸಹಕಲಾವಿದರ ಲೇಖನಗಳನ್ನೊಳಗೊಂಡ ಗ್ರಂಥವೂ ಬಿಡುಗಡೆಯಾಗಲಿದೆ. ಬಡಗುತಿಟ್ಟಿನ ಬಯಲಾಟದ ಕಲಾವಿದರಿಂದ ಗಾಣಿಗರಿಗೆ ಖ್ಯಾತಿ ತಂದಿತ್ತ ಪುರುಷ ವೇಷಗಳಾದ “ಪ್ರಮೀಳಾರ್ಜುನ’ದ ಅರ್ಜುನ, “ಕರ್ಣಾರ್ಜುನ’ದ ಅರ್ಜುನ ಮತ್ತು “ವೀರಮಣಿ ಕಾಳಗ’ದ ಪುಷ್ಕಳ ಪಾತ್ರಗಳ ಪ್ರಾತ್ಯಕ್ಷಿಕೆ, ಸಭಾಕಾರ್ಯಕ್ರಮದ ಬಳಿಕ ನಡುತಿಟ್ಟಿನ ಪ್ರಸಿದ್ಧ ಬಯಲಾಟದ ಕಲಾವಿದರಿಂದ “ತಾಮ್ರಧ್ವಜ’ ಕಾಳಗ ಪ್ರಸಂಗದ ಪ್ರದರ್ಶನ ನಡೆಯಲಿವೆ.

Advertisement

ಹಾರಾಡಿ ಎನ್ನುವ ಮೂರಕ್ಷರಗಳು ಯಕ್ಷಗಾನ ಪ್ರಿಯರಿಗೆ ರೋಮಾಂಚಕ. ಯಕ್ಷಗಾನಕ್ಕೆ ಹೊಸ ಶೈಲಿಯನ್ನು ಪರಿಚಯಿಸಿದ ಕೀರ್ತಿ ಈ ಮನೆತನಕ್ಕಿದೆ.ಬಡಗುತಿಟ್ಟು ಯಕ್ಷಗಾನಕ್ಕೆ ಗಾಣಿಗ ಕಲಾವಿದರ ಕೊಡುಗೆ ಅಪಾರ. ಬಡಗುತಿಟ್ಟು ಯಕ್ಷಗಾನಕ್ಕೆ ಪ್ರಥಮ ರಾಷ್ಟ್ರ ಪ್ರಶಸ್ತಿ ತಂದಿತ್ತ ರಾಮ ಗಾಣಿಗರು ಮಂದಾರ್ತಿ ಒಂದೇ ಮೇಳದಲ್ಲಿ ದೀರ್ಘ‌ಕಾಲ ಸೇವೆ ಸಲ್ಲಿಸಿ ಮೇಳಕ್ಕೂ ಯಕ್ಷಗಾನಕ್ಕೂ ಘನತೆ ತಂದಿತ್ತವರು. ಅವರ ಸಮೀಪಬಂಧು ಕುಷ್ಟ ಗಾಣಿಗರು ಬದುಕಿರುವಾಗಲೇ ದಂತಕಥೆಯಾದವರು.

ಹಿಮ್ಮೇಳ ಸಹಿತ ಯಕ್ಷಗಾನದ ಎಲ್ಲ ಅಂಗಗಳಲ್ಲಿ ಕಲಾವಿದರನ್ನು ನೀಡಿದ ಪ್ರಖ್ಯಾತ ಹಾರಾಡಿ ಕುಟುಂಬದವರು ಕುಷ್ಟ ಗಾಣಿಗರು. ಇವರು ಮೇಳಕ್ಕೆ ಸೇರುವಾಗ ಈ ಮನೆತನದ ಇಪ್ಪತ್ತು ಮಂದಿ ರಂಗಸ್ಥಳದಲ್ಲಿದ್ದರು. ಹಾಗಾಗಿ ರಂಗಸ್ಥಳವೇ ಇವರ ಗುರುಕುಲವಾಯಿತು. ರಾಷ್ಟ್ರ ಪ್ರಶಸ್ತಿ ವಿಜೇತ ಹಾರಾಡಿ ರಾಮ ಗಾಣಿಗರು, ಅವರ ಮಾವ ಶೇಷ ಗಾಣಿಗರು, ಅವರ ಮಾವ ಮಂಜ ಗಾಣಿಗರು- ಹೀಗೆ ಹಾರಾಡಿ ಕುಟುಂಬದ ಏಳು ತಲೆಮಾರಿನ ಕಲಾವಿದರು ಯಕ್ಷಲೋಕದಲ್ಲಿ ಮೆರೆದವರು. ಕುಷ್ಟ ಗಾಣಿಗರ ಅನಂತರದ ಪೀಳಿಗೆಯವರಾದ ಉದ್ಯಾವರ ಬಸವ ಗಾಣಿಗರು, ಕೋಡಿ ಶಂಕರ ಗಾಣಿಗರು, ಹಾರಾಡಿ ಮಹಾಬಲ ಗಾಣಿಗರು, ಹಾರಾಡಿ ಬಸವ ಗಾಣಿಗರು, ಬಾಬು ಗಾಣಿಗರು, ಆ ಬಳಿಕದ ತಲೆಮಾರಿನವರಾದ  ಹಾರಾಡಿ ಸರ್ವೋತ್ತಮ ಗಾಣಿಗ, ಹಾರಾಡಿ ರಮೇಶ ಗಾಣಿಗ, ಪ್ರವೀಣ ಗಾಣಿಗ… ಹೀಗೆ ಹಾರಾಡಿ ಕುಟುಂಬಕ್ಕೂ ಯಕ್ಷಗಾನಕ್ಕೂ ಇರುವ ನಂಟು ಮುಂದುವರಿದಿದೆ. 

ಕುಷ್ಟ ಗಾಣಿಗರೆಂದೇ ಖ್ಯಾತಿವೆತ್ತ ಹಾರಾಡಿ ಕೃಷ್ಣ ಗಾಣಿಗರ ತಿರುಗಾಟಕಾಲ ಯಕ್ಷಗಾನದ ಸುವರ್ಣ ಯುಗವಾಗಿತ್ತು. ಬಡಗಿನ¤ ನಡುತಿಟ್ಟು ಭರತ ಖಂಡವನ್ನಾಳಿದ ಸೂರ್ಯ ಮತ್ತು ಚಂದ್ರವಂಶಗಳಂತೆ ಎರಡು ಸಮರ್ಥ ಶೈಲಿಗಳಿಂದ ಕಂಗೊಳಿಸುತ್ತಿತ್ತು- ಒಂದು ಹಾರಾಡಿ ತಿಟ್ಟು, ಇನ್ನೊಂದು ಮಟಾ³ಡಿ ತಿಟ್ಟು. ಹಾರಾಡಿ ತಿಟ್ಟಿನಲ್ಲಿ ಪ್ರಬಲರಾದ ನಾರಾಯಣ ಗಾಣಿಗ, ರಾಮ ಗಾಣಿಗರ ಸಹಿತ ಅನೇಕ ಕಲಾವಿದರಿದ್ದರೆ, ಮಟಾ³ಡಿ ತಿಟ್ಟಿನಲ್ಲಿ ಗುರು ವೀರಭದ್ರ ನಾಯಕ್‌, ಶ್ರೀನಿವಾಸ ನಾಯ್ಕ, ಚಂದು ನಾಯ್ಕರಂಥ ಘಟಾನುಘಟಿಗಳಿದ್ದರು. ಮಟಪಾಡಿ ಕಲಾವಿದರು ಮಾರಣಕಟ್ಟೆ ಮೇಳದಲ್ಲೂ ಹಾರಾಡಿ ಕಲಾವಿದರು ಮಂದಾರ್ತಿ ಮೇಳದಲ್ಲೂ ಸೇವೆ ಸಲ್ಲಿಸುತ್ತಿದ್ದರು. ಜೋಡಾಟಗಳಲ್ಲಿ ಕುಷ್ಟ ಗಾಣಿಗರ ವೇಷ ಮಂದಾರ್ತಿ ಮೇಳದಲ್ಲೂ ವೀರಭದ್ರ ನಾಯ್ಕರ ವೇಷ ಮಾರಣಕಟ್ಟೆ ಮೇಳದಲ್ಲೂ ಪರಸ್ಪರ ಎದುರಾಗುವ ಸನ್ನಿವೇಶ ಗಳ ವೈಭವವನ್ನು ಹಿರಿಯರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

 ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಹಾರಾಡಿಯಲ್ಲಿ 1916ರಲ್ಲಿ ಜನಿಸಿದ ಕುಷ್ಟ ಗಾಣಿಗರು ಶಾಲೆಯ ಮೆಟ್ಟಿಲನ್ನೂ ಏರಿದವರಲ್ಲ. ಆಗಿನ ಹಿರಿಯ ಕಲಾವಿದರಂತೆ ಸುತ್ತಮುತ್ತಲೂ ಮನೆತನದಲ್ಲೂ ಯಕ್ಷಗಾನದ ವಾತಾವರಣ ದಟ್ಟವಾಗಿದ್ದುದರಿಂದ ತಮ್ಮ ಮಾವ ಹಾರಾಡಿ ರಾಮ ಗಾಣಿಗರ ಅನುಜ್ಞೆಯಂತೆ ಮಂದಾರ್ತಿ ಮೇಳದಲ್ಲಿ ಗೆಜ್ಜೆ ಕಟ್ಟಿದರು. ಮಟಪಾಡಿ ಮುಕುಂದ ನಾಯ್ಕರನ್ನು ಗುರುವಾಗಿ ಸ್ವೀಕರಿಸಿ ಯಕ್ಷಗಾನದ ಸರ್ವಾಂಗಗಳಲ್ಲೂ ಪರಿಪೂರ್ಣತೆ ಪಡೆದರು. ಕೋಡಂಗಿ, ಬಾಲಗೋಪಾಲ, ಪೀಠಿಕಾ ವೇಷ, ಒಡ್ಡೋಲಗ -ಹೀಗೆ ಹಂತ ಹಂತವಾಗಿ ಮೇಲೇರಿ ಪುರುಷ ವೇಷಧಾರಿಯಾಗಿ ಮೆರೆದರು. ರಾಮ ಗಾಣಿಗರ ಎರಡನೇ ವೇಷ, ಕುಷ್ಟ ಗಾಣಿಗರ ಪುರುಷ ವೇಷ, ನಾರಾಯಣ ಗಾಣಿಗರ ಸ್ತ್ರೀವೇಷ, ಮಹಾಬಲ ಗಾಣಿಗರ ಮುಂಡಾಸು ವೇಷ ಆಗಿನ ಮಂದಾರ್ತಿ ಮೇಳಕ್ಕೆ ಕೀರ್ತಿ- ಘನತೆಯನ್ನು ತಂದಿತ್ತಿತು.

Advertisement

ಸಾವಿರಾರು ಪ್ರಯೋಗ ಕಂಡು ರಾಮ ಗಾಣಿಗರಿಗೆ ಕೀರ್ತಿ ತಂದಿತ್ತ “ಕರ್ಣಾರ್ಜುನ ಕಾಳಗ’ ಪ್ರಸಂಗದಲ್ಲಿ ರಾಮ ಗಾಣಿಗರ ಕರ್ಣನಿಗೆ ಕುಷ್ಟ ಗಾಣಿಗರ ಅರ್ಜುನ, ನಾರಾಯಣ ಗಾಣಿಗರ ಕೃಷ್ಣ, ವಂಡ್ಸೆ ಮುತ್ತ ಗಾಣಿಗರ ಶಲ್ಯ ಒಂದು ಅಪೂರ್ವ ಸಂಯೋಜನೆಯಾಗಿತ್ತು. ಸ್ವಲ್ಪ ಕಾಲ ಸೌಕೂರು ಮೇಳದಲ್ಲೂ ಸೇವೆ ಸಲ್ಲಿಸಿದ ಗಾಣಿಗರು ಕೆಲವು ವರ್ಷ ಅಮೃತೇಶ್ವರಿ ಮೇಳದಲ್ಲೂ ಯಜಮಾನ ಮತ್ತು ಕಲಾವಿದರಾಗಿ ಸೇವೆ ಸಲ್ಲಿಸಿ ಬಳಿಕ ಜೀವಿತದ ಕೊನೆಯವರೆಗೂ ಶ್ರೀ ಮಂದಾರ್ತಿ ಮೇಳದಲ್ಲಿ ಸೇವೆ ಸಲ್ಲಿಸಿದರು. ಮಂದಾರ್ತಿ ಮೇಳದಲ್ಲಿ ಅವರ ಯಶಸ್ಸಿಗೆ ಕುಂಜಾಲು ಶೇಷಗಿರಿ ಕಿಣಿ, ಜಾನುವಾರುಕಟ್ಟೆ ಗೋಪಾಲ ಕಾಮತ್‌, ಗೋರ್ಪಾಡಿ ವಿಠಲ ಪಾಟೀಲರ ಭಾಗವತಿಕೆ, ಹಿರಿಯಡ್ಕ ಗೋಪಾಲರಾಯರ ಮದ್ದಳೆ, ಚೆಂಡೆ ಕಿಟ್ಟುವಿನ ಚೆಂಡೆಯ ಅಪೂರ್ವ ಹಿಮ್ಮೇಳ ಪೂರಕವಾಗಿದ್ದವು.

ಮಂದಾರ್ತಿ ಮೇಳದಲ್ಲಿ ಗಾಣಿಗರು ಹೆಚ್ಚು ಪ್ರಸಿದ್ಧರಾದದ್ದು ಕಟ್ಟು ಮೀಸೆ, ಅಟ್ಟೆ ನಿರ್ಮಿತ ಕೇದಲೆಮುಂದಲೆಯೊಂದಿಗೆ ಕಂಗೊಳಿಸುವ ಪುರುಷ ವೇಷ ಮತ್ತು ಅಪೂರ್ವವೂ ಇಂದು ಅಪರೂಪವೂ ಅಗಿರುವ ಹಾರಾಡಿ ಶೈಲಿಯ ಕಿರುಹಿಜ್ಜೆಗಳಿಂದ. ಚುರುಕಿನ ನಾಟ್ಯ, ಹಾರಾಡಿ ಶೈಲಿಯ ಒಂಟಿ ಕಾಲಿನಲ್ಲಿ ಬಿಲ್ಲುಬಾಣ ಸೊಂಟಕ್ಕೆ ತಾಗಿಸಿ ಕಂಗೊಳಿಸುವ ವಿಶಿಷ್ಟವಾದ ನಿಲುವು, ವೈಶಿಷ್ಟ್ಯಪೂರ್ಣ ನಡೆ, ಪದ್ಯದ ಎತ್ತುಗಡೆ, ಕೈತಟ್ಟಿ ಮಿಂಚಿನಂತೆ ಸೆಳೆಯುವ- ಎಡಗೈ ಮೇಲೆ ಹೋದಾಗ ಎಡಗಣ್ಣು ಅದೇ ಭಂಗಿಯಲ್ಲಿ ತಿರುಗುವ ಅಪೂರ್ವವಾದ ಹಾರಾಡಿ ಶೈಲಿಯ ಏಕತಾಳದ ಪದ್ಯಗಳ ಕಿರುಹೆಜ್ಜೆ, “ಧೀಮ್‌ ತದ್ದೀಂ ಧಿಮಿತಧೀಂ’ ನಡೆಯ ಪದ್ಯಗಳಿಗೆ ಅಪೂರ್ವ ಹೆಜ್ಜೆ ಗಾಣಿಗರ ಸಂಪತ್ತು. ಅಪೂರ್ವವಾದ ಶ್ರುತಿಬದ್ಧತೆ ಅವರ ಇನ್ನೊಂದು ಧನಾತ್ಮಕ ಅಂಶ. “ಕರ್ಣಾರ್ಜುನ’ದ ಅರ್ಜುನ, “ವೀರಮಣಿ ಕಾಳಗ’ದ ಪುಷ್ಕಳ, “ಮೈರಾವಣ’ದ ವಿಭೀಷಣ, “ಸೈಂಧವ ವಧೆ’ಯ ಅರ್ಜುನ ಮುಂತಾದವುಗಳು ಗಾಣಿಗರಿಗೆ ಖ್ಯಾತಿ ತಂದಿತ್ತ ಪಾತ್ರಗಳು. ವಿವಿಧ ಪಾತ್ರಗಳಲ್ಲಿ ಕುಷ್ಟ ಗಾಣಿಗರ ಛಾಯೆಯನ್ನು ಮುಂದಿನ ತಲೆಮಾರಿಗೆ ದಾಟಿಸಿದವರಲ್ಲಿ ಶಿರಿಯಾರ ಮಂಜು ನಾಯ್ಕ, ಮೊಳಹಳ್ಳಿ ಹೆರಿಯ ನಾಯ್ಕ, ನೀಲಾವರ ಮಹಾಬಲ ಶೆಟ್ಟಿ, ಐರೋಡಿ ಗೋವಿಂದಪ್ಪ, ಕೋಟ ಸುರೇಶ, ಐರಬೈಲು ಆನಂದ ಶೆಟ್ಟಿ ಮತ್ತು ಹಾರಾಡಿ ಸರ್ವೋತ್ತಮ ಗಾಣಿಗ ಪ್ರಮುಖರಾಗಿ ನಿಲ್ಲುತ್ತಾರೆ.

ಅಪೂರ್ವ ಮನ್ನಣೆ ಗಳಿಸಿದ ಇಂಥ ಉತ್ಕೃಷ್ಟ ಕಲಾವಿದನ ಜೀವನ -ಸಾಧನೆ ಇದುತನಕ ದಾಖಲಾಗದೆ ಇದ್ದುದು ದೌರ್ಭಾಗ್ಯ. ಮನಸ್ಸಂತೋಷಕ್ಕಾಗಿ ಕಲೆಯನ್ನು ಆರಾಧಿಸಿ ದಂತಕಥೆಯಾದ ಕುಷ್ಟ ಗಾಣಿಗರ ಜೀವನ – ಸಾಧನೆ ಮತ್ತು ವಿಶಿಷ್ಟತೆಗಳನ್ನು ಪುಸ್ತಕರೂಪ ವಾಗಿ ಪ್ರಕಟಿಸುವ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಯೋಜನೆ ಯೋಗ್ಯವಾದದ್ದು. ಗಾಣಿಗರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಇದು ಅವರಿಗೆ ಯುಕ್ತ ಶ್ರದ್ಧಾಂಜಲಿಯಾಗಿದೆ. ಈ ನಿಟ್ಟಿನಲ್ಲಿ ಅಕಾಡೆಮಿಯ ಅಧ್ಯಕ್ಷರೂ ಸರ್ವ ಸದಸ್ಯರೂ ಅಭಿನಂದನೀಯರು.

ಪ್ರೊ| ಎಸ್‌. ವಿ. ಉದಯಕುಮಾರ ಶೆಟ್ಟಿ
ಚಿತ್ರಕೃಪೆ: ಸುದೇಶ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next