Advertisement

ಕೋವಿಡ್ ನಿಯಂತ್ರಣ, ಪರಿಹಾರ ಒದಗಿಸುವಲ್ಲಿ ಕೇಂದ್ರ,ರಾಜ್ಯ ಸರಕಾರಗಳು ವಿಫಲ:ಮಾಜಿ ಸಚಿವ ಸೊರಕೆ

09:55 AM May 15, 2021 | Team Udayavani |

ಕಾಪು: ಕೋವಿಡ್ ಎರಡನೇ ಅಲೆಯ ತೀವ್ರತೆಯ ಬಗ್ಗೆ ತಜ್ಞರ ವರದಿ ಹಾಗೂ ಸಲಹೆ ಸೂಚನೆಯಂತೆ ಸಿದ್ಧತೆ ಮಾಡಿಕೊಳ್ಳದೇ ಅಸಡ್ಡೆ ತೋರಿಸಿ, ಸಹಸ್ರಾರು ಜನರ ಸಾವಿಗೆ ಕಾರಣವಾಗಿರುವ ಮತ್ತು ಜನರನ್ನು ದುಸ್ಥಿತಿಗೆ ತಳ್ಳಿರುವ ಆಡಳಿತಾರೂಢ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಾರ್ಯವೈಖರಿಯಿಂದಾಗಿ ವಿಶ್ವದಾದ್ಯಂತ ಭಾರತ ತಲೆತಗ್ಗಿಸುವಂತಾಗಿದೆ ಎಂದು ಮಾಜಿ ಸಚಿವ  ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

Advertisement

ಆಸ್ಪತ್ರೆಗಳಲ್ಲಿ ಹಾಸಿಗೆ ಇಲ್ಲ, ಆಮ್ಲಜನಕ ಇಲ್ಲ, ವೆಂಟಿಲೇಟರ್ ಇಲ್ಲ, ವ್ಯಾಕ್ಸಿನ್ ಇಲ್ಲ, ಔಷದಿ ಇಲ್ಲ, ಆಂಬ್ಯುಲೆನ್ಸ್ ಇಲ್ಲ ಒಟ್ಟಾರೆ ಕೋವಿಡ್ ನಿರ್ವಹಣೆಗೆ ಯಾವುದು ಅತ್ಯಗತ್ಯವೋ ಅದ್ಯಾವುದೂ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಆಡಳಿತಾರೂಢ ಸರಕಾರಗಳೇ ಪ್ರಮುಖ ಕಾರಣವಾಗಿವೆ ಎಂದು ಅವರು ಹೇಳಿದ್ದಾರೆ.

ರಾಜ್ಯ ಮತ್ತು ಕೇಂದ್ರ ಸರಕಾರಗಳ ಅಸಡ್ಡೆಯನ್ನು ಮನಗಂಡು ಮೂಕಪ್ರೇಕ್ಷಕನಾಗಿರಲು ಬಯಸದ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಮಧ್ಯಸ್ಥಿಕೆ ವಹಿಸಿ ತಜ್ಞರು ಮತ್ತು ಅನುಭವಿ ವೈದ್ಯರನ್ನೊಳಗೊಂಡ ಟಾಸ್ಕ್ ಫೋರ್ಸ್ ರಚಿಸಿ ಕಾರ್ಯಪ್ರವೃತ್ತರಾಗುವಂತೆ ನಿರ್ದೇಶನ ನೀಡಿದ್ದರೂ ನ್ಯಾಯಾಲಯದ ಆದೇಶವನ್ನು ಅರಗಿಸಿಕೊಳ್ಳಲಾಗದೆ, ಬಾಲಿಶವಾಗಿ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಸಂಸದ ಹಾಗೂ ಕೇಂದ್ರ ಮಂತ್ರಿ ಮಂಡಲದ ಹಿರಿಯ ಸಚಿವ ಡಿ.ವಿ. ಸದಾನಂದ ಗೌಡ ಅವರು ನಾವೇನು ನೇಣುಹಾಕಿಕೊಂಡು ಸಾಯಬೇಕಾ ಎಂದು ಕೇಳಿದರೆ, ರಾಜ್ಯದ ಮತ್ತೊಬ್ಬ ಮಹಾನ್ ಬಿಜೆಪಿ ನಾಯಕ / ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಅವರು ನ್ಯಾಯಾಧೀಶರನ್ನೇ ಅಣಕಿಸಿ ಮಾತನಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ ಮತ್ತು ನ್ಯಾಯಾಂಗ ನಿಂದನೆ ಎಸಗಿದ್ದಾರೆ ಎಂದು ಸೊರಕೆ ಆರೋಪಿಸಿದ್ದಾರೆ.

ಸಂವಿಧಾನ ಬಧ್ಧವಾಗಿ ಪ್ರಮಾಣ ವಚನ ಸ್ವೀಕರಿಸಿರುವ ಜನಪ್ರತಿನಿಧಿಗಳು ತಮ್ಮ ಹೊಣೆಗಾರಿಕೆಯನ್ನು ಮರೆತು ರಾಜ್ಯದ ಮತ್ತು ಜನರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ವಿಫಲರಾಗಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನದ ಸಲುವಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೇಂದ್ರ ಸಚಿವ ಸದಾನಂದ ಗೌಡ ಅವರು ತಾವು ನೇಣಿಗೆ ಶರಣಾಗುವ ಬದಲು ತಮ್ಮ ಸಂಸದ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಜನರಿಗೆ ಶರಣಾಗುವುದು ಒಳಿತು ಹಾಗೂ ಶಾಸಕ ಸಿ. ಟಿ. ರವಿಯವರು ನ್ಯಾಯಾಧೀಶರ ಬಗ್ಗೆ ನೀಡಿರುವ ಹೇಳಿಕೆಯು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಯೋಗ್ಯವಾಗಿರುವುದರಿಂದ ತಮ್ಮ ಶಾಸಕ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕೆಂದು ವಿನಯ್ ಕುಮಾರ್ ಸೊರಕೆ ಆಗ್ರಹಿಸಿದ್ದಾರೆ.

ಪ್ರಸಕ್ತ ಸಂದಿಗ್ಧ ಪರಿಸ್ಥಿತಿಯಲ್ಲಿ ಸೋಂಕಿತರ ಶುಶ್ರೂಷೆಗೆ ಸ್ಪಂದಿಸಿ ಅಗತ್ಯವಿರುವ ಔಷಧಿಗಳು, ಆಮ್ಲಜನಕ, ವೆಂಟಿಲೇಟರ್ ಗಳನ್ನು ಪೂರೈಸುವಲ್ಲಿ ಎಡವಿರುವ ಸರಕಾರ ರೈತರಿಗೆ ಅಗತ್ಯವಿರುವ ರಸಗೊಬ್ಬರದ ಬೆಲೆಯನ್ನು ಏರಿಸುವುದರೊಂದಿಗೆ ಗಾಯದ ಮೇಲೆ ಬರೆ ಎಳೆದಂತೆ ತನ್ನ ಜನವಿರೋಧಿ ಧೋರಣೆಯನ್ನು ಮುಂದುವರಿಸಿದ್ದು, ಲಾಕ್ ಡೌನ್ ನಿಂದಾಗಿ ಕೆಲಸ ಕಳೆದುಕೊಂಡು ಆದಾಯವಿಲ್ಲದೆ ಒಪ್ಪೊತ್ತಿನ ಊಟಕ್ಕೆ ಪರದಾಡುತ್ತಿರುವ ದಿನಗೂಲಿ ಕಾರ್ಮಿಕರಿಗೆ ಯಾವುದೇ ರೀತಿಯ ಪರ್ಯಾಯ ವ್ಯವಸ್ಥೆ ಯನ್ನು ಕಲ್ಪಿಸದೇ ಬಡವರ ವಿರೋಧಿಯಾಗಿ ವರ್ತಿಸುತ್ತಿರುವುದು ಖಂಡನೀಯವಾಗಿದೆ.

Advertisement

ಮಹಾಮಾರಿ ಕೋವಿಡ್ ಸೋಂಕಿನ ಎರಡನೇ ಅಲೆಯಿಂದಾಗಿ ಇಡೀ ವಿಶ್ವವೇ ತತ್ತರಿಸಿ ಹೋಗಿದ್ದು ಆಯಾ ದೇಶದ ಆಡಳಿತಾರೂಢ ಸರಕಾರಗಳು ಸಮಯ ಪ್ರಜ್ಞೆ ಮತ್ತು ಕರ್ತವ್ಯ ಪ್ರಜ್ಞೆಯನ್ನು ಮೆರೆದು ಕಾರ್ಯಪ್ರವೃತ್ತರಾದುದರಿಂದ ಚೇತರಿಸಿಕೊಂಡಿದ್ದರೆ ನಮ್ಮ ದೇಶದ ಸ್ಥಿತಿ ಮಾತ್ರ ದಿನದಿಂದ ದಿನಕ್ಕೆ. ಅಧೋಗತಿಯತ್ತ ಸಾಗುತ್ತಿದೆ. ಸರಕಾರದ ಹೊಣೆಗೇಡಿತನದ ನೀತಿಗಳಿಂದಾಗಿ ಜನ ಜೀವನ ತತ್ತರಿಸಿ ಹೋಗಿದ್ದು ಒಂದು ಕ್ಷಣವೂ ಸರಕಾರ ಅಧಿಕಾರದಲ್ಲಿರಲು ನೈತಿಕತೆಯನ್ನು ಉಳಿಸಿಕೊಂಡಿಲ್ಲ. ಹಾಗಾಗಿ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಸ್ಥಾನಕ್ಕೆ  ರಾಜೀನಾಮೆ ನೀಡಿ ತಮ್ಮ ಹುದ್ದೆಗಳಿಂದ ಕೆಳಗಿಳಿದು ದೇಶ ಮತ್ತು ದೇಶದ ಜನರ ಪ್ರಾಣವನ್ನು ಉಳಿಸುವಂತೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next