Advertisement

ವಾರ್ಡ್‌ 10ರಲ್ಲಿ ಪುರಭವನ; 11ರಲ್ಲಿ ಶ್ಮಶಾನ

10:24 PM May 21, 2019 | mahesh |

ಸುಳ್ಯ: ಇವೆರೆಡು ನಗರ ಪಂಚಾಯತ್‌ ಅಧೀನದ ಸ್ವತ್ತುಗಳು. ಒಂದು ಶ್ಮಶಾನ, ಇನ್ನೊಂದು ಪುರಭವನ. ಪ್ರತಿ ಬಾರಿಯೂ ಕಾಯಕಲ್ಪದ ನಿರೀಕ್ಷೆಯಲ್ಲೇ ಇವೆರಡು ಕಾಯುತ್ತಿವೆ. ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಪುರಭವನದ ಸಭಾಂಗಣಕ್ಕೆ ಎಳ್ಳಷ್ಟು ರಕ್ಷಣೆ ಇಲ್ಲ. ಹಾಗೆಯೇ ಹಿಂದೂ ರುದ್ರಭೂಮಿ ಕೇರ್ಪಳ ಶ್ಮಶಾನಕ್ಕೂ ಹೇಳುವವರು, ಕೇಳುವವರು ಇಲ್ಲದ ಕಥೆ. ಹಾಗಾಗಿ ವಾರ್ಡ್‌-10 (ಪುರಭವನ) ಹಾಗೂ 11 ( ಕುರುಂಜಿಗುಡ್ಡೆ) ಈ ಎರಡು ಸಮಸ್ಯೆಗೆ ನೂತನ ನಗರಾಡಳಿತ ಸ್ಪಂದಿಸಬೇಕು ಎನ್ನುವುದು ಸ್ಥಳೀಯರ ಬೇಡಿಕೆ.

Advertisement

ವಾರ್ಡ್‌ 10 ಪುರಭವನದಲ್ಲಿ (ಕುರುಂಜಿಗುಡ್ಡೆ) ಹೆಸರೇ ಸೂಚಿಸುವಂತೆ ಲಕ್ಷಾಂತರ ರೂ. ವೆಚ್ಚದ ಪುರಭವನ ಇದೆ. ಸುಳ್ಯ ತಹಶೀಲ್ದಾರ್‌ ಆಗಿದ್ದ ಕೋಚಣ್ಣ ರೈ ಅವರ ಕಾಲದಲ್ಲಿ ಪುರಭವನ ಅಭಿವೃದ್ಧಿ ಸಮಿತಿ ರಚಿಸಿ ಒಂದು ಎಕ್ರೆ ಜಮೀನು ಮಂಜೂರು ಮಾಡಲಾಗಿತ್ತು. ಸರಕಾರದ ಅನುದಾನ, ಸಾರ್ವಜನಿಕ ದೇಣಿಗೆಯಿಂದ ಕಟ್ಟಡ ಕಾಮಗಾರಿ ಆರಂಭವಾಗಿ, ಆರ್ಥಿಕ ಅಡಚಣೆಯಿಂದ ಕಾಮಗಾರಿ ಕುಂಠಿತವಾದ ಸಂದರ್ಭ ಸುಳ್ಯದ ಅಕಾಡೆಮಿ ಆಫ್‌ ಲಿಬರಲ್‌ ಎಜುಕೇಶನ್‌ ಸ್ಥಾಪಕಾಧ್ಯಕ್ಷ ಡಾ| ಕುರುಂಜಿ ವೆಂಕಟ್ರಮಣ ಗೌಡರು ಆರ್ಥಿಕ ನೆರವು ನೀಡಿ ಕಟ್ಟಡ ಪೂರ್ಣಗೊಳಿಸುವಲ್ಲಿ ಸಹಕಾರ ನೀಡಿದ್ದರು.

ಆಸನದ ಕೊರತೆ
ನಗರ ಪಂಚಾಯತ್‌ ಸುಪರ್ದಿಗೆ ಒಳಪಟ್ಟಿರುವ ಪುರಭವನ ಸಭಾಂಗಣದಲ್ಲಿ ಕುಳಿತುಕೊಳ್ಳಲು ಆಸನದ ಕೊರತೆ ಇದೆ. ಕನಿಷ್ಠ 750 ಆಸನಗಳ ವ್ಯವಸ್ಥೆ ಇಲ್ಲಿಗೆ ಬೇಕು. ವಿದ್ಯುತ್‌ ಕೈ ಕೊಟ್ಟರೆ ಪರ್ಯಾಯವಾಗಿ ಬಳಸಲು ಜನರೇಟರ್‌ ವ್ಯವಸ್ಥೆ ಇಲ್ಲ. ಛಾವಣಿಗೆ ಹಾಕಿರುವ ಶೀಟು ಹಲವು ಭಾಗದಲ್ಲಿ ಒಡೆದಿವೆ. ಇಂತಹ ಹಲವು ಸಮಸ್ಯೆಗಳನ್ನು ಹೊತ್ತಿರುವ ಪುರಭವನದ ಕಾಯಕಲ್ಪ ಮಾಡಿದಲ್ಲಿ ನ.ಪಂ.ಗೂ ಆದಾಯ ಕಟ್ಟಿಟ್ಟ ಬುತ್ತಿ. ಇಲ್ಲಿ ವಿಸ್ತಾರವಾದ ಪಾರ್ಕಿಂಗ್‌, ಸಭಾಂಗಣವಿದ್ದು, ಸೀಮಿತ ದರದಲ್ಲಿ ಸಮಾರಂಭ ಹಮ್ಮಿಕೊಳ್ಳಲು ಸಾಧ್ಯವಿದೆ.

ಶ್ಮಶಾನ ನಿರ್ವಹಣೆ ಸಮಸ್ಯೆ
ವಾರ್ಡ್‌-11ರ ಭಸ್ಮಡ್ಕದ ವ್ಯಾಪ್ತಿಯಲ್ಲಿರುವ ಕೇರ್ಪಳ ಹಿಂದೂ ರುದ್ರಭೂಮಿ ನಿರ್ವಹಣೆ ಕೊರತೆ ಎದುರಿಸುತ್ತಿದೆ. ನಗರ ಪಂಚಾಯತ್‌ ವ್ಯಾಪ್ತಿಗೆ ಒಳಪಟ್ಟಿರುವ ಏಕೈಕ ಶ್ಮಶಾನ ಇದಾಗಿದೆ. ಕೊಡಗು ಪ್ರಾಕೃತಿಕ ವಿಕೋಪದ ಸಂದರ್ಭ ಮೃತರ ಅಂತ್ಯ ಸಂಸ್ಕಾರ ಈ ಶ್ಮಶಾನದಲ್ಲಿ ನಡೆದಿತ್ತು. ಆದರೆ ಸೂಕ್ತ ನಿರ್ವಹಣೆ ಇಲ್ಲದ ಕಾರಣ ಶುಚಿತ್ವ ಕೊರತೆ ಇಲ್ಲಿದೆ. ಕಟ್ಟಿಗೆ ಸೌಲಭ್ಯವೂ ಸೂಕ್ತವಾಗಿಲ್ಲ ಎನ್ನುವ ಆರೋಪವೂ ಇದೆ. ಕಾಂಪೌಂಡ್‌ ಅಗತ್ಯವಿದ್ದು, ನ.ಪಂ. ಖಾಸಗಿ ಸಂಘ-ಸಂಸ್ಥೆಗಳ ಮೂಲಕ ನಿರ್ವಹಣೆಗೆ ಚಿಂತನೆ ಮಾಡಿದೆ. ಒಂದಷ್ಟು ಮೂಲ ಸೌಕರ್ಯ ಕಲ್ಪಿಸಲು ಅನುದಾನ ಮೀಸಲಿಡಲು ಮುಂದಾಗಿತ್ತು. ಅದಿನ್ನೂ ಕಾರ್ಯಗತಗೊಳ್ಳಬೇಕಿದೆ.

ಕಣದಲ್ಲಿರುವವರು
ವಾರ್ಡ್‌ 10ರಲ್ಲಿ ವಿನಯಕುಮಾರ್‌ ಕಂದಡ್ಕ (ಬಿಜೆಪಿ) ಹಾಗೂ ಎಸ್‌.ಎಂ. ಉಮ್ಮರ್‌ (ಕಾಂಗ್ರೆಸ್‌). ವಾರ್ಡ್‌ 11ರಲ್ಲಿ ಸುಧಾಕರ ಕುರುಂಜಿಬಾಗ್‌ (ಬಿಜೆಪಿ) ಹಾಗೂ ಚಂದ್ರಕುಮಾರ್‌ (ಕಾಂಗ್ರೆಸ್‌) ಕಣದಲ್ಲಿರುವವರು.

Advertisement

ವಾರ್ಡ್‌ 10ರ ಇತರ ಸಮಸ್ಯೆಗಳು
– ನೀರಿನ ಅಭಾವ
– ಚರಂಡಿ ಸಮಸ್ಯೆ
– ಕೋರ್ಟ್‌ ಹಿಂಬದಿ ರಸ್ತೆ ಅಭಿವೃದ್ಧಿಯಾಗಬೇಕಿದೆ
– ಕುರುಂಜಿಗುಡ್ಡೆ ಒಳಾಂಗಣ ಕ್ರೀಡಾಂಗಣ ಸಂಪರ್ಕ ರಸ್ತೆ ಅಭಿವೃದ್ಧಿಯಾಗಬೇಕು

ವಾರ್ಡ್‌ 11ರ ಇತರ ಸಮಸ್ಯೆಗಳು
– ಭಸ್ಮಡ್ಕದಲ್ಲಿ ಮರದ ಗೆಲ್ಲುಗಳು ರಸ್ತೆಗೆ ಅಡ್ಡಲಾಗಿ ಅಪಾಯ ಸ್ಥಿತಿಯಲ್ಲಿವೆ
– ನೆಲ್ಲಿಬಂಗಾರಡ್ಕ-ಕೇರ್ಪಳ ರಸ್ತೆ ದುರಸ್ತಿ ಆಗಬೇಕು
– ಭಸ್ಮಡ್ಕ-ಪಯಸ್ವಿನಿ ನದಿ ಸಂಪರ್ಕ ರಸ್ತೆ ಅಭಿವೃದ್ಧಿ ಆಗಬೇಕು
– ಬೀದಿ ದೀಪ ಸಮರ್ಪಕವಾಗಬೇಕು

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next