Advertisement

ಮನೆ ಮನೆಯಲ್ಲೂ ಸ್ವಾತಂತ್ರ್ಯೋತ್ಸವ ಆಚರಣೆ

04:56 PM Jul 31, 2022 | Team Udayavani |

ಬಾಗಲಕೋಟೆ: ದೇಶದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಆ. 13ರಿಂದ 15ರವರೆಗೆ ದೇಶಾದ್ಯಂತ ಸ್ವಾತಂತ್ರ್ಯದ ಸಂಭ್ರಮವನ್ನು ವೈವಿಧ್ಯಮಯ ಮತ್ತು ವರ್ಣರಂಜಿತವಾಗಿ ಆಚರಿಸಲು ಹರ ಘರ ತಿರಂಗಾ ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಜಿಲ್ಲೆಯ ಮನೆ ಮನೆಯಲ್ಲೂ ತ್ರಿವರ್ಣ ರಾಷ್ಟ್ರ ಧ್ವಜ ಹಾರಿಸುವ ಮೂಲಕ ಜಿಲ್ಲೆಯ ಜನತೆ ತಮ್ಮ ರಾಷ್ಟ್ರ ಪ್ರೇಮ ಅಭಿವ್ಯಕ್ತಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸ್ವಾತಂತ್ರ್ಯೋತ್ಸವ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಈ ಬಾರಿಯ ಸ್ವಾತಂತ್ರ್ಯೋತ್ಸವವು 75ರ ಅಮೃತ ಮಹೋತ್ಸವವಾಗಿರುವುದರಿಂದ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದಕ್ಕಾಗಿ ದೇಶದ ಎಲ್ಲ ರಾಜ್ಯ ಜಿಲ್ಲೆಗಳಲ್ಲೂ ಹರ ಘರ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿರುತ್ತದೆ. ಹರ ಘರ ತಿರಂಗಾ ಅಭಿಯಾನದಡಿ ಬಾಗಲಕೋಟೆ ಜಿಲ್ಲೆಯ 195 ಗ್ರಾಪಂಗಳಿಗೆ ಪ್ರತಿ ಗ್ರಾಮ ಪಂಚಾಯಿತಿಗೆ 450 ರಾಷ್ಟ್ರ ಧ್ವಜ ನೀಡಲಾಗಿರುತ್ತದೆ. ಗ್ರಾಮೀಣ ಭಾಗದಲ್ಲಿ ಆಯಾ ಗ್ರಾಮ ಪಂಚಾಯಿತಿ 20 ರೂ. ಪಾವತಿಸಿ ಧ್ವಜ ಪಡೆದುಕೊಳ್ಳಬಹುದಾಗಿರುತ್ತದೆ ಎಂದರು.

ಕನ್ನಡ ಮತ್ತು ಸಂಸ್ಕೃತ ಇಲಾಖೆ ಕೇಂದ್ರ ಕಚೇರಿಯಿಂದ ಬಾಗಲಕೋಟೆ ಜಿಲ್ಲಾಡಳಿತಕ್ಕೆ 20 ಸಾವಿರ ರಾಷ್ಟ್ರ ಧ್ವಜಗಳು ಪೂರೈಕೆಯಾಗಿರುತ್ತವೆ. ಈ ಧ್ವಜಗಳು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಮಾತ್ರ ವಿತರಿಸಲಾಗುವುದು. ಪಪಂ, ಪುರಸಭೆ ಹಾಗೂ ನಗರ ಸಭೆಗಳಲ್ಲಿ 22 ರೂ. ಪ್ರತಿ ಧ್ವಜಕ್ಕೆ ಪಾವತಿಸಬೇಕಾಗಿರುತ್ತದೆ. ದಿ ಪ್ಲಾಗ್‌ ಕೋಡ್‌ ಆಫ್‌ ಇಂಡಿಯಾ (2021 ) ರ ತಿದ್ದುಪಡಿ ಹಿನ್ನೆಲೆಯಲ್ಲಿ ಧ್ವಜ ನಿಯಾಮಾನುಸಾರ ತಮ್ಮ ತಮ್ಮ ಮನೆಯ ಅಂಗಳದಲ್ಲಿ ಸ್ವಯಂ ಪ್ರೇರಣೆಯಿಂದ ಧ್ವಜವನ್ನು ಹಾರಿಸಿ ಹರ ಘರ ತಿರಂಗಾ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಧ್ವಜದ ನಿಯಾಮಾನುಸಾರ ಧ್ವಜವನ್ನು ಶೀಘ್ರಗತಿಯಲ್ಲಿ ಏರಿಸಬೇಕು ಮತ್ತು ಇಳಿಸುವಾಗ ನಿಧಾನಗತಿಯಲ್ಲಿ ಇಳಿಸಬೇಕು. ರಾಷ್ಟ್ರ ಧ್ವಜಕ್ಕೆ ಯಾವುದೇ ರೀತಿಯ ಬರಹ ಮಾತು ಕೃತ್ಯದ ಮೂಲಕ ಅಗೌರವ ತೋರುವ ರೀತಿಯಲ್ಲಿ ನಡೆದುಕೊಂಡರೆ ರಾಷ್ಟ್ರೀಯ ಗೌರವದ ಅವಮಾನ ವಿರೋಧ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಲಾಗುವುದರಿಂದ ಸಾರ್ವಜನಿಕರು ಸಂಘ ಸಂಸ್ಥೆಗಳು ಸ್ವಸಹಾಯ ಗುಂಪುಗಳು ಶಾಲಾ ಕಾಲೇಜು, ಎಲ್ಲಾ ರಾಷ್ಟ್ರಪ್ರೇಮ ಸಾರುವ ದೇಶಾಭಿಮಾನಿಗಳು ಈ ಅಭಿಯಾನವನ್ನು ಮುನ್ನೆಚ್ಚರಿಕೆಯಿಂದ ಯಶಸ್ವಿಗೊಳಿಸಬೇಕಾಗಿದೆ ಎಂದರು.

Advertisement

ಆ.15ರಂದು ಬೆಳಗ್ಗೆ 9ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ ನಡೆಯಲಿದ್ದು, ನಂತರ ಪಥ ಸಂಚಲನ ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಸನ್ಮಾನ ಸಮಾರಂಭ ಜರುಗಲಿವೆ. 75 ವರ್ಷದ ಅಮೃತ್‌ ಮಹೋತ್ಸವದ ಹಿನ್ನಲೆಯಲ್ಲಿ ಈ ಬಾರಿ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ದೇಶಾಭಿಮಾನಿಗಳು ಭಾಗವಹಿಸಬೇಕು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಯಪ್ರಕಾಶ ಹಕ್ಕರಕಿ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next