Advertisement

ಮಳೆ ಬಂದರಷ್ಟೇ ತಮಿಳುನಾಡಿಗೆ ಕಾವೇರಿ ನೀರು

02:02 AM Jun 26, 2019 | Team Udayavani |

ಬೆಂಗಳೂರು: ಕಾವೇರಿ ನೀರು ಬಿಡಿ ಎಂಬ ತಮಿಳುನಾಡು ಸರಕಾರದ ಮೊಂಡಾಟಕ್ಕೆ ಬೆಲೆ ನೀಡದ ಕಾವೇರಿ ನೀರು ನಿರ್ವಹಣ ಪ್ರಾಧಿಕಾರ, ಮಳೆ ಬಂದರಷ್ಟೇ ತಮಿಳುನಾಡಿಗೆ ಜೂನ್‌-ಜುಲೈ ತಿಂಗಳ ಕೋಟಾದ ನೀರು ಬಿಡಿ ಎಂದು ಆದೇಶ ನೀಡಿದೆ. ಈ ಮೂಲಕ ಕರ್ನಾಟಕ ‘ಕಾವೇರಿ’ ನಿಟ್ಟುಸಿರು ಬಿಟ್ಟಿದೆ.

Advertisement

ಕಾವೇರಿ ನೀರು ನಿರ್ವಹಣ ಪ್ರಾಧಿಕಾರದ ಅಧ್ಯಕ್ಷ ಮಸೂದ್‌ ಹುಸೇನ್‌ ಅಧ್ಯಕ್ಷತೆಯಲ್ಲಿ ದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ವಾದ ಆಲಿಸಿ ಸಂಕಷ್ಟ ಪರಿಸ್ಥಿತಿ ಇರುವುದರಿಂದ ಮಳೆ ಬಂದರೆ ನೀರು ಬಿಡುಗಡೆ ಮಾಡಿ ಎಂದು ನಿರ್ದೇಶನ ನೀಡಿತು.

ಈ ಮೂಲಕ ಜೂನ್‌ ತಿಂಗಳ 9.19 ಟಿಎಂಸಿ ನೀರು ಬಿಡುಗಡೆಗೆ ಪಟ್ಟು ಹಿಡಿದಿದ್ದ ತಮಿಳುನಾಡಿನ ವಾದಕ್ಕೆ ಮನ್ನಣೆ ಸಿಗದಿರುವುದು ಕರ್ನಾಟಕಕ್ಕೆ ತುಸು ನಿರಾಳ ತಂದಿದೆ.

ತಮಿಳುನಾಡು ವಾದವೇನು?

ಜೂನ್‌ ತಿಂಗಳ 9.19 ಟಿಎಂಸಿ ನೀರು, ಜುಲೈ ತಿಂಗಳ ಕೋಟಾ 31.24 ಟಿಎಂಸಿ ನೀರು ಕೊಡಬೇಕು. ಮೆಟ್ಟೂರು ಅಣೆಕಟ್ಟೆಗೆ ಕರ್ನಾಟಕ ನೀರು ಬಿಟ್ಟಿಲ್ಲ. ನಮ್ಮ ರೈತರು ಕಾವೇರಿ ನೀರು ನಂಬಿಕೊಂಡಿದ್ದಾರೆ. ಕಳೆದ ಸಭೆಯಲ್ಲಿ ಪ್ರಾಧಿಕಾರ 9.19 ಟಿಎಂಸಿ ನೀರು ಬಿಡಲು ಸೂಚಿಸಿತ್ತು. ಕಳೆದ 20 ದಿನಗಳಲ್ಲಿ ಕೇವಲ 1.77 ಟಿಎಂಸಿ ನೀರು ಮಾತ್ರ ಬಂದಿದೆ. ಕರ್ನಾಟಕ ಪ್ರಾಧಿಕಾರದ ಸೂಚನೆಯನ್ನು ಗಾಳಿಗೆ ತೂರಿದೆ. ಜೂನ್‌ ತಿಂಗಳ ನೀರಿನ ಜತೆಗೆ ಜುಲೈ ನೀರನ್ನು ಬಿಡಲು ಸೂಚಿಸಿ ಎಂದು ತಮಿಳುನಾಡು ವಾದ ಮಂಡಿಸಿತು.

Advertisement

ನಮ್ಮಲ್ಲೇ ನೀರಿಲ್ಲ ಎಂದ ರಾಜ್ಯ

ಮುಂಗಾರು ವಿಳಂಬದಿಂದ ಕರ್ನಾಟಕ ತೀವ್ರ ಬರ ಎದುರಿಸುತ್ತಿದೆ. ಹಾರಂಗಿ, ಕಬಿನಿ, ಹೇಮಾವತಿ, ಕೆ.ಆರ್‌.ಎಸ್‌. ಅಣೆಕಟ್ಟೆಗಳಿಗೆ ನೀರು ಬಂದಿಲ್ಲ. ಇದರ ನಡುವೆಯೂ ತಮಿಳುನಾಡಿಗೆ 1.88 ಟಿಎಂಸಿ ನೀರು ಹರಿಸಲಾಗಿದೆ. ಕಳೆದ ವರ್ಷ ಜೂನ್‌ 1ರಿಂದ 20ರ ವರೆಗೆ ನಾಲ್ಕೂ ಜಲಾಶಯಗಳಲ್ಲಿ 68 ಟಿಎಂಸಿ ನೀರು ಸಂಗ್ರಹವಾಗಿತ್ತು. ಈ ಬಾರಿ ನೀರು ಸಂಗ್ರಹವಾಗಿಲ್ಲ, 1.77 ಟಿಎಂಸಿ ಮಾತ್ರ ಒಳಹರಿವು ಇದೆ. ಮುಂದೆ ಮಳೆ ಬಂದರೆ ತಮಿಳುನಾಡಿಗೆ ನೀರು ಬಿಡಲು ತಕರಾರಿಲ್ಲ . ಸುಪ್ರೀಂ ಕೋರ್ಟ್‌ ಆದೇಶ ಪಾಲಿಸಲು ಸದಾ ಸಿದ್ಧ ಎಂದು ಕರ್ನಾಟಕ ವಾದ ಮಂಡಿಸಿತು.

Advertisement

Udayavani is now on Telegram. Click here to join our channel and stay updated with the latest news.

Next