Advertisement

Udayavani: ಕಾವೇರಿ ಕಗ್ಗಂಟಿಗೆ ಸರಕಾರದ ಎಡವಟ್ಟುಗಳೇ ಕಾರಣ: ಬಸವರಾಜ ಬೊಮ್ಮಾಯಿ ಆಕ್ರೋಶ

12:10 AM Sep 21, 2023 | Team Udayavani |

ಕಾವೇರಿ ವಿಚಾರದಲ್ಲಿ ಪದೇ ಪದೆ ತಪ್ಪು ಹೆಜ್ಜೆ ಇಟ್ಟಿರುವ ರಾಜ್ಯ ಸರಕಾರ ತನ್ನ ವೈಫ‌ಲ್ಯ ಮುಚ್ಚಿಕೊಳ್ಳುವುದಕ್ಕಾಗಿ ಈಗ  “ಪ್ರಧಾನಿ ಮಧ್ಯಸ್ಥಿಕೆ’ ಎಂಬ ಪ್ರಹಸನ ಸೃಷ್ಟಿ ಮಾಡಲು ಹೊರಟಿದೆ. ಅಂತಾರಾಜ್ಯ ಜಲವಿವಾದ ಸುಪ್ರೀಂ ಕೋರ್ಟ್‌  ಮುಂದಿರುವಾಗ ಪ್ರಧಾನಿ ಮಧ್ಯ ಪ್ರವೇಶ ಅಸಾಧ್ಯ ಎಂಬ ರಾಜಕೀಯ ಸಾಮಾನ್ಯ ಜ್ಞಾನವೇ ಈ ಸರಕಾರಕ್ಕೆ ಇಲ್ಲ ಎಂದು ಮಾಜಿ

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. “ಉದಯವಾಣಿ’ಗೆ ನೀಡಿದ ನೇರಾನೇರ ಸಂದರ್ಶನದಲ್ಲಿ ಅವರು  ಕೊರತೆ ಬಜೆಟ್‌ ಕೊಟ್ಟು ರಾಜ್ಯ ಸುಭಿಕ್ಷವಾಗಿದೆ ಎಂದು ಬಿಂಬಿಸಲು ಹೊರಟಿರುವ ಸರಕಾರ ಆರ್ಥಿಕವಾಗಿ ಕರ್ನಾಟಕವನ್ನು ಅಧೋಗತಿಗೆ ದೂಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಕಾವೇರಿ ನದಿ ನಿರ್ವಹಣ ಪ್ರಾಧಿಕಾರದ  ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರಕಾರವೇ ಮೊದಲು ಮೇಲ್ಮನವಿ ಸಲ್ಲಿಸಿ ವಸ್ತುಸ್ಥಿತಿ ಮನವರಿಕೆ ಮಾಡುವುದನ್ನು ಬಿಟ್ಟು  ತಮಿಳುನಾಡಿಗೆ ಎಲ್ಲ ರೀತಿ ಯಿಂದಲೂ ಗೋಲು ಹೊಡೆಯುವುದಕ್ಕೆ ಅವಕಾಶ ಮಾಡಿ ಕೊಟ್ಟರು. ಇದು  ರಾಜ್ಯ ಸರಕಾರದ ವೈಫ‌ಲ್ಯವಲ್ಲವೇ?

          ಕಾವೇರಿ ವಿಚಾರ ರಾಜ್ಯವನ್ನು ಮತ್ತೆ ಕಾಡುತ್ತಿದೆ. ಅಡಿಗಡಿಗೂ ನಮಗೆ ಹಿನ್ನಡೆಯಾಗುತ್ತಿದೆ. ನಿಮ್ಮ ಪ್ರಕಾರ ರಾಜ್ಯ ಸರಕಾರ ಎಡವಿದ್ದೆಲ್ಲಿ?

ಈ ವಿಚಾರದಲ್ಲಿ ರಾಜ್ಯ ಸರಕಾರ ಒಂದು ಕಡೆ ಎಡವಿಲ್ಲ, ಅಡಿಗಡಿಗೂ ಎಡವುತ್ತಲೇ ಇದೆ. ವಾಡಿಕೆ ಪ್ರಕಾರ ಜಲವರ್ಷ ಪ್ರಾರಂಭವಾಗುವುದು ಜೂನ್‌ 1ರಿಂದ. ಈ ವರ್ಷ ಮಳೆ ಕಡಿಮೆಯಾಗುತ್ತದೆ ಎಂಬ ಮಾಹಿತಿ ನಮಗೆ ಮೊದಲೇ ಗೊತ್ತಿತ್ತು. ಮೆಟ್ಟೂರು ಡ್ಯಾಂನಲ್ಲಿ 60 ಟಿಎಂಸಿ ನೀರು ಇದ್ದರೂ 1.8 ಲಕ್ಷ ಹೆಕ್ಟೇರ್‌ ಬದಲು 4 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಅಕ್ರಮ­ವಾಗಿ ಬೆಳೆ ಬೆಳೆದು 33 ಟಿಎಂಸಿ ಬದಲು 66 ಟಿಎಂಸಿ ನೀರನ್ನು ತಮಿಳುನಾಡು ಸರಕಾರ ಬಳಸಿಕೊಂಡಿದೆ. ಆದರೆ ರಾಜ್ಯ ಈ ವಿಚಾರವನ್ನು ಸಿಡಬ್ಲ್ಯುಆರ್‌ಸಿ ಮತ್ತು ಸಿಡಬ್ಲ್ಯುಎಂಎ ಮುಂದೆ ಸಮರ್ಪಕವಾಗಿ ಮಂಡಿಸುವಲ್ಲಿ ವಿಫ‌ಲವಾಯಿತು. ಸಿಡಬ್ಲ್ಯುಎಂಎ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ರಾಜ್ಯವೇ ಮೊದಲು ಮೇಲ್ಮನವಿ ಸಲ್ಲಿಸಿ ವಸ್ತುಸ್ಥಿತಿ ಮನವರಿಕೆ ಮಾಡಿಕೊಡುವುದನ್ನು ಬಿಟ್ಟು  ತಮಿಳುನಾಡಿಗೆ ಎಲ್ಲ ರೀತಿಯಿಂದಲೂ ಗೋಲು ಹೊಡೆಯುವುದಕ್ಕೆ ಅವಕಾಶ ಮಾಡಿಕೊಟ್ಟರು. ಇದು ರಾಜ್ಯ ಸರಕಾರದ ವೈಫ‌ಲ್ಯವಲ್ಲವೇ? ಮೇಲ್ಮನವಿಗೆ ಕಾನೂನು ಪ್ರಕಾರ ಅವಕಾಶವಿದ್ದರೂ ಪ್ರಾಧಿಕಾರದ ಆದೇಶ ಪಾಲನೆಯೇ ನಮ್ಮ ಕರ್ತವ್ಯ ಎಂದು ನೀರು ಬಿಡುತ್ತಿದ್ದಾರೆ. ಪ್ರತಿ­ಭಟನ ಮನೋಭಾವವನ್ನೇ ಇದುವರೆಗೆ ತೋರಿಲ್ಲ.

Advertisement

          ಪ್ರಧಾನಿ ಮಧ್ಯಸ್ಥಿಕೆಗೆ ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

ಅಲ್ಲಾರಿ, ಅಂತಾರಾಜ್ಯ ಜಲ ವ್ಯಾಜ್ಯ ಸುಪ್ರೀಂ ಮೆಟ್ಟಿಲು ಏರಿರುವಾಗ ಪ್ರಧಾನಿ ಮಧ್ಯಸ್ಥಿಕೆ ಸಾಧ್ಯವೇ? ರಾತೋರಾತ್ರಿ ನೀರು ಬಿಟ್ಟು ಕಾವೇರಿ ಕೊಳ್ಳದ ಮಣ್ಣಿನ ಮಕ್ಕಳಿಗೆ ಅನ್ಯಾಯ ಮಾಡಿದ ಮೇಲೆ ಈಗ ಪ್ರಧಾನಿ ಮಧ್ಯಸ್ಥಿಕೆ ಎಂಬ ಪ್ರಹಸನ ಸೃಷ್ಟಿ ಮಾಡುತ್ತಿದ್ದಾರೆ. ಇಂಥ ಅಗ್ಗದ ರಾಜಕೀಯ ತಂತ್ರಗಾರಿಕೆ ನಡೆಸುವ ಅಗತ್ಯವಿಲ್ಲ. ನಿಮ್ಮ ಬೇಡಿಕೆಯ ಪ್ರಕಾರ ಪ್ರಧಾನಿ ಮಧ್ಯಸ್ಥಿಕೆಗೆ ಒಪ್ಪಿದರು ಎಂದಿಟ್ಟುಕೊಳ್ಳಿ, ಆಗ ತಮಿಳುನಾಡು ಒಪ್ಪಬೇಕಲ್ಲ ? ಕಾವೇರಿ ವಿಚಾರದಲ್ಲಿ 20 ವರ್ಷಗಳ ವಿಚಾರಣೆ ನಡೆದು ನ್ಯಾಯಮಂಡಳಿಯ ಆದೇಶವೂ ನೋಟಿಫೈ

ಆಗಿದೆ. ಸಿಡಬ್ಲ್ಯುಆರ್‌ಸಿ, ಸಿಡಬ್ಲ್ಯುಎಂಎ ರಚನೆ­ಯಾಗಿದೆ. ಅಲ್ಲಿ ನಮ್ಮ ಪರವಾಗಿ ವಾದ ಮಾಡುವ ಮೆÂಕಾನಿಸಂ ನೀವು ಸೃಷ್ಟಿಸದೇ ಈಗ ರಾಜಕಾರಣ ಮಾಡುತ್ತೀರಾ?

          ನಿಮ್ಮ ಸಲಹೆ ಡಿ.ಕೆ.ಶಿವಕುಮಾರ್‌ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆಯಂತೆ?

ನಮ್ಮ ಸಲಹೆಯಲ್ಲ, ಅವರ ಕೃತಿ ರಾಜ್ಯದ ಜನರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅವರು ಹೇಳುವುದೊಂದು, ಮಾಡುವುದು ಇನ್ನೊಂದು. ಜಲಸಂಪನ್ಮೂಲ ಸಚಿವರ ನಡೆ ಕಾವೇರಮ್ಮನ ಮಕ್ಕಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

          ಅಂದರೆ ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಮೈತ್ರಿ ಪಕ್ಷಕ್ಕೆ ವರದಾನವಾಗುತ್ತಿದೆಯೇ?

ಜಲ ವಿವಾದ ವಿಚಾರದಲ್ಲಿ ರಾಜಕೀಯ ತರ ಬಾರದು ಎಂಬುದು ನನ್ನ ಗಟ್ಟಿ ನಿಲುವು. ಆದಾ ಗಿಯೂ ಡಿ.ಕೆ.ಶಿವಕುಮಾರ್‌ ಅವರ ಕೆಲವು ಹೇಳಿಕೆ ಇಂಥದೊಂದು ಅನುಮಾನವನ್ನು ಸೃಷ್ಟಿಸಿದೆ. ತಮಿಳು ನಾಡು ರೈತರ ಬಗ್ಗೆಯೂ ಯೋಚನೆ ಮಾಡಬೇಕಲ್ಲವೇ ಎಂದು ಶಿವಕುಮಾರ್‌ ವ್ಯಕ್ತಪಡಿಸಿ­ರುವ ಕಾಳಜಿಯ ಹಿಂದೆ ಬೇರೇನೋ ಅಡಗಿದೆ. ಐಎನ್‌ಡಿಐಎ ಮೈತ್ರಿಕೂಟದ ಭಾಗವಾಗಿರುವ ಡಿಎಂಕೆ ಸರಕಾರ ವನ್ನು ತೃಪ್ತಿಪಡಿಸುವುದಕ್ಕೆ ಅವರು ಸಹಕರಿಸುತ್ತಿರ ಬಹುದೆಂಬ ಸಂಶಯದ ಮುಳ್ಳು ಇದೆ.

          ನಿಮ್ಮ ಸರಕಾರದ ವಿರುದ್ಧ ಸೃಷ್ಟಿಸಿದ ನರೇಟಿವ್‌ಗಳು ಸಾಬೀತಾಗಿಲ್ಲ. ಬಲಿಪಶುವಾದೆ ಎಂಬ ಭಾವ ಕಾಡುತ್ತಿದೆಯೇ ?

ಬಲಿಪಶುವಾದೆ ಎಂಬ ಪ್ರಶ್ನೆ ಏನಿಲ್ಲ. ನಾವು ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದೆವು. ಆದರೆ ಕಾಂಗ್ರೆಸ್‌ ನೆಗೆಟಿವ್‌ ಅಭಿಯಾನ ನಡೆಸಿ ಅಧಿಕಾರಕ್ಕೆ ಬಂತು. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಹೇಳಿದ್ದೆಲ್ಲ ಸುಳ್ಳು ಎಂದು ಜನಕ್ಕೆ ಈಗಾಗಲೇ ಗೊತ್ತಾಗಿದೆ.

          ಚೈತ್ರಾ ಕುಂದಾಪುರ ಪ್ರಕರಣ ಭಾರೀ  ಸದ್ದು ಮಾಡುತ್ತಿದೆ. ಚುನಾವಣೆಗೆ ಮುನ್ನವೇ ಈ ವಿಚಾರ ನಿಮ್ಮ ಗಮನಕ್ಕೆ ಬಂದಿತ್ತೇ ?

ಇಲ್ಲ. ಈ ವಿಚಾರ ನಮ್ಮ ಮಟ್ಟಕ್ಕೆ ಬಂದಿರಲಿಲ್ಲ. ದೊಡ್ಡವರ ಹೆಸರು ಹೇಳಿಕೊಂಡು ವಂಚನೆ ಮಾಡುವವರು ಎಲ್ಲ ಪಕ್ಷದಲ್ಲೂ ಇರುತ್ತಾರೆ. ನನ್ನ ಪ್ರಕಾರ ಈ ಪ್ರಕರಣವನ್ನು ಪೊಲೀಸರು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು. ಹಣಕ್ಕಾಗಿ ಟಿಕೆಟ್‌ ಕೊಡುವ ಸಂಪ್ರದಾಯ ಬಿಜೆಪಿಯಲ್ಲಿ ಇಲ್ಲ.

          ವಿಪಕ್ಷ ನಾಯಕನ ಆಯ್ಕೆ ವಿಚಾರ ಎಲ್ಲಿಗೆ ಬಂತು….

ನನ್ನ ಪ್ರಕಾರ ವಿಪಕ್ಷ ನಾಯಕನ ಆಯ್ಕೆ ಆದಷ್ಟು ಶೀಘ್ರವಾಗಿ ಆಗಬೇಕು. ನಾನು ಈಗಾಗಲೇ ವರಿಷ್ಠ­ರನ್ನು ಭೇಟಿ ಮಾಡಿ ನಿಲುವು ತಿಳಿಸಿದ್ದೇನೆ. ಯಾರನ್ನೇ ಮಾಡಿ ಬೇಗ ಮಾಡಿ. ನನ್ನ ಕಡೆಯಿಂದ ಎಲ್ಲ ಸಹಕಾರ ನೀಡುತ್ತೇನೆ.

          ಬಿಜೆಪಿ-ಜೆಡಿಎಸ್‌ ಮೈತ್ರಿ ವಿಚಾರದಲ್ಲಿ ನಿಮ್ಮ ನಿಲುವೇನು ?

ಅದು ದಿಲ್ಲಿ ನಾಯಕರ ಹಂತದಲ್ಲಿ ನಡೆದಿರುವ ಚರ್ಚೆ. ಅಂತಿಮ ತೀರ್ಮಾನವನ್ನು ಅವರೇ ತೆಗೆದು ಕೊಳ್ಳುತ್ತಾರೆ.

          ನೀವು ಲೋಕಸಭೆಗೆ ಸ್ಪರ್ಧಿಸುತ್ತೀರೆಂಬ ಚರ್ಚೆ ಬಲವಾಗಿದೆ. ಯಾವ ಕ್ಷೇತ್ರ ?

ಖಂಡಿತ ಇಲ್ಲ. ನಾನು ರಾಜ್ಯ ರಾಜಕಾರಣದಲ್ಲೇ ಇರುತ್ತೇನೆ. ಲೋಕಸಭಾ ಚುನಾವಣ ಸ್ಪರ್ಧೆ ವಿಚಾರಕ್ಕೆ ಸಂಬಂಧಪಟ್ಟಂತೆ ನಾನು ಈಗಾಗಲೇ ಸ್ಪಷ್ಟನೆ ನೀಡಿದ್ದೇನೆ. ಅಂಥ ಪ್ರಸ್ತಾವ ಖಂಡಿತ ಇಲ್ಲ.

          ಸರಕಾರ ನೀಡುತ್ತಿರುವ ಟಾರ್ಗೆಟ್‌ಗಳೇ ಮುಂದೆ ಪ್ರತಿಕೂಲವಾಗಬಹುದೇ ?

ಸರಕಾರ ಟಾರ್ಗೆಟ್‌ ಕೊಡಬಹುದು. ಆದರೆ ಗುರಿ ಸಾಧನೆಯಾಗಿದೆಯೇ? ಸರ್ಕಾರ ಸಂಪನ್ಮೂಲ ಕ್ರೋಡೀಕರಣಕ್ಕೆ ನೆಚ್ಚಿಕೊಂಡಿರುವ ಆರು ಕ್ಷೇತ್ರಗಳ ಪೈಕಿ ಒಂದರಲ್ಲೂ ಗುರಿ ಸಾಧಿಸುವುದಕ್ಕೆ ಸಾಧ್ಯವಾಗಿಲ್ಲ. ಅಬಕಾರಿ ಸಂಗ್ರಹ ಶೇ.15ರಷ್ಟು ಕುಸಿದಿದೆ.

ಮೋಟಾರು ವಾಹನ ತೆರಿಗೆ ಹೆಚ್ಚಳವಾಗಿಲ್ಲ. ನೋಂದಣಿ ಹಾಗೂ ಮುದ್ರಾಂಕ ಶುಲ್ಕವನ್ನು ಶೇ.30 ಹೆಚ್ಚಳ ಮಾಡಿರುವುದರಿಂದ ಈ ವರ್ಷ ಕಡಿಮೆ ಸಾಧನೆಯಾಗುವುದರಲ್ಲಿ ಯಾವುದೇ ಅನುಮಾನ ಬೇಡ. ಇನ್ನು ವಾಣಿಜ್ಯ ತೆರಿಗೆ ಸಂಗ್ರಹಣೆ ವೇಗ ಪಡೆದುಕೊಂಡಿಲ್ಲ. ಬೆಂಗಳೂರಿನ ಆರು ವಿಭಾಗದ ಪೈಕಿ ಐದರಲ್ಲಿ ವಾಣಿಜ್ಯ ತೆರಿಗೆ ಸಂಗ್ರಹಣೆ ಗುರಿ ಸಾಧನೆಯಾಗಿಲ್ಲ. ಹೀಗಿರುವಾಗ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ? ಕೃಷಿ, ಲೋಕೋಪಯೋಗಿ, ಗ್ರಾಮೀ ಣಾಭಿವೃದ್ಧಿ, ಜಲಸಂಪನ್ಮೂಲ ಸೇರಿದಂತೆ ಅಭಿವೃದ್ಧಿ ಕಾರ್ಯಕ್ಕೆ ಇವರ ಬಳಿ ದುಡ್ಡಿಲ್ಲ. ಕಾಂಗ್ರೆಸಿನವರು ರಾಜ್ಯವನ್ನು ಅಧಃಪತನಕ್ಕೆ ತಳ್ಳುವುದು ನಿಶ್ಚಿತ.

ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದಿದೆ. ಗ್ಯಾರಂಟಿಗಳ ಅನುಷ್ಠಾನವಾಗುತ್ತಿದೆ. ರಾಜ್ಯ ಸುಭಿಕ್ಷವಾಗಿದೆಯೇ ಹಾಗಾದರೆ?

ಸುಭಿಕ್ಷೆ ? ಎಲ್ಲಿದೆ. ಹೊಸ ಸರಕಾರ ಅಧಿಕಾರದಲ್ಲಿದೆ ಎಂಬ ಭಾವನೆಯೇ ಜನರಲ್ಲಿ ಇಲ್ಲ.

ಈ ಸರಕಾರದಲ್ಲಿ ಮೆಂಟೆನೆನ್ಸ್‌ ವರ್ಕ್‌ ನಡೆಸುವುದಕ್ಕೂ ದುಡ್ಡಿಲ್ಲ. 12 ಸಾವಿರ ಕೋ.ರೂ. ಕೊರತೆ ಬಜೆಟ್‌ ಮಂಡಿಸಿದ್ದಷ್ಟೇ ಅಲ್ಲದೇ ರಾಜ್ಯದ ಮೇಲೆ ಸಾಲದ ಹೊರೆ ಹೇರಲಾಗುತ್ತಿದೆ. ಕೇಂದ್ರದ ಯೋಜನೆಗಳಿಗೆ ರಾಜ್ಯದ ಪಾಲು ಕೊಡುತ್ತಿಲ್ಲ. ಸರ್ವರ್‌ ಡೌನ್‌ ನೆಪ ಹೇಳಿ ಗ್ಯಾರಂಟಿ ಜಾರಿಗೆ ವಿಳಂಬ ಮಾಡುತ್ತಿದ್ದಾರೆ. ಇದೇ ರೀತಿಯಾದರೆ ಭವಿಷ್ಯದಲ್ಲಿ ” ಝೀರೋ ಕರೆಂಟ್‌, ಝೀರೋ ಬಿಲ್‌” ಆಗುತ್ತದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಜನ ಭ್ರಮನಿರಸನಗೊಂಡಿದ್ದಾರೆ.

 ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next