Advertisement
ರಾಜ್ಯದಲ್ಲಿರುವ ಹೇಮ-ವೇಮ ರೆಡ್ಡಿ ಜನಾಂಗದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಭರವಸೆಗಳಿವು.
Related Articles
Advertisement
ದೇಶದಲ್ಲಿ ಸುಮಾರು ಐದು ಕೋಟಿ ಜನಸಂಖ್ಯೆ ಹೊಂದಿರುವ ರೆಡ್ಡಿ ಜನಾಂಗ ನಾಡಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದೆ. ರಡ್ಡಿಗಳು ಎಂದರೆ ಕೇವಲ ತೆಲುಗು ಭಾಷಿಕರಷ್ಟೇ ಅನ್ನುವ ಭಾವನೆ ಸರಿಯಲ್ಲ ಎಂದ ಅವರು, ವೇಮನ ಹಾಗೂ ಹೇಮರಡ್ಡಿ ಮಲ್ಲಮ್ಮ ಯಾವುದೇ ಒಂದು ಸಮುದಾಯಕ್ಕೆ ಸೀಮಿತರಲ್ಲ. ಅವರ ತತ್ವಗಳು ಇಡೀ ಸಮಾಜಕ್ಕೆ ಪ್ರೇರಣೆಯಾಗಿದೆ ಎಂದು ತಿಳಿಸಿದರು.
ರೆಡ್ಡಿ ಜನಾಂಗದ ಅಭಿವೃದ್ಧಿಗೆ ನಮ್ಮ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಜನಾಂಗದ ಹಾಸ್ಟೆಲ್, ಶಿಕ್ಷಣಕ್ಕೆ ಅನುದಾನ ನೀಡಲು ಸಿದ್ಧ. ನಮ್ಮ ಸರ್ಕಾರದಲ್ಲಿ ರೆಡ್ಡಿ ಜನಾಂಗಕ್ಕೆ ಸಾಕಷ್ಟು ಪ್ರಾತಿನಿಧ್ಯ ನೀಡಲಾಗಿದೆ. ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್, ಬಸವರಾಜ ರಾಯರಡ್ಡಿ ಅವರನ್ನು ಸಚಿವರನ್ನಾಗಿ ಮಾಡಲಾಗಿದೆ. ಸ್ಪೀಕರ್ ಹಾಗೂ ಡೆಪ್ಯೂಟಿ ಸ್ಪೀಕರ್ ಸಹ ಮಾಡಲಾಗಿದೆ. ರೆಡ್ಡಿ ಜನಾಂಗದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡಿ, ಮಾಜಿ ರಾಷ್ಟ್ರಪತಿ ನೀಲಂಸಂಜೀವ ರೆಡ್ಡಿ ಅಂತ್ಯ ಸಂಸ್ಕಾರಕ್ಕೆ 25 ಜನರೂ ಬಂದಿರಲಿಲ್ಲ. ಆಗ ನಾನು ಪ್ರಧಾನಿಯಾಗಿದ್ದೆ. ಹಾಗಾಗಿ ಯಾವುದೇ ಸಮುದಾಯ ಉಳಿಯಬೇಕಾದರೆ ಆ ಸಮುದಾಯ ಒಬ್ಬ ನಾಯಕನನ್ನು ಗುರುತಿಸಬೇಕು. ನನ್ನ ಕಟು ಅನುಭವದಿಂದ ಈ ಮಾತನ್ನು ಹೇಳುತ್ತಿದ್ದೇನೆ. 90ರ ದಶಕದಲ್ಲಿ ಸಿದ್ದರಾಮಯ್ಯ ಅವರಿಗೂ ಇದೇ ಮಾತು ಹೇಳಿದ್ದೆ. ಉಳಿದಂತೆ ರಡ್ಡಿ ಜನಾಂಗವನ್ನು ಪ್ರವರ್ಗ 2ಎಗೆ ಸೇರಿಸಲು ನಾನೂ ಕೇಂದ್ರದ ಮೇಲೆ ಒತ್ತಡ ತರುತ್ತೇನೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಯಾವುದೇ ಒಂದು ಸಮುದಾಯಕ್ಕೆ ಜನಸಂಖ್ಯೆ ಮುಖ್ಯ ಅಲ್ಲ. ಒಗ್ಗಟ್ಟು ಮುಖ್ಯ. ಒಗ್ಗಟ್ಟು ಇದ್ದರೆ ಸರ್ಕಾರದ ಸೌಲಭ್ಯಗಳು ಮತ್ತು ಪ್ರಾತಿನಿಧ್ಯ ಪಡೆದುಕೊಳ್ಳಬಹುದು. ಕೆ.ಸಿ.ರೆಡ್ಡಿ ಅವರ ಪ್ರತಿಮೆ ಸ್ಥಾಪನೆಗೆ ಇರುವ ಕಾನೂನು ತೊಡಕನ್ನು ಆದಷ್ಟು ಬೇಗ ನಿವಾರಿಸಬೇಕು. ರಡ್ಡಿ ಜನಾಂಗವನ್ನು ಪ್ರವರ್ಗ 2ಎ ಗೆ ಸೇರಿಸುವ ಸಂಬಂಧ ನಾನೂ ಮತ್ತು ಕೇಂದ್ರ ಸಚಿವ ಅನಂತಕುಮಾರ್ ಕೇಂದ್ರ ಸರ್ಕಾರ ಮಟ್ಟದಲ್ಲಿ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಡ್ಡಿ ಜನಾಂಗದ ಸಾಧಕರಿಗೆ ಸನ್ಮಾನಿಸಲಾಯಿತು. ರಡ್ಡಿ ಸಮುದಾಯದ ವೆಬ್ಸೈಟ್, ಹೇಮರಡ್ಡಿ ಮಲ್ಲಮ್ಮ ಕುರಿತ ಸಿ.ಡಿ., ರೆಡ್ಡಿ ಅನ್ನದಾತ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವ ಅನಂತಕುಮಾರ್, ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ, ಉಪಾಧ್ಯಕ್ಷ ಎನ್.ಎಚ್.ಶಿವಶಂಕರ ರಡ್ಡಿ, ಸಂಸದರಾದ ಎಂ.ವೀರಪ್ಪ ಮೊಯ್ಲಿ, ಪಿ.ಸಿ. ಮೋಹನ್, ರಾಜ್ಯಸಭೆ ಸದಸ್ಯ ಕೆ.ಸಿ. ರಾಮಮೂರ್ತಿ, ಸಚಿವರಾದ ಎಚ್.ಕೆ.ಪಾಟೀಲ್, ರಾಮಲಿಂಗಾರಡ್ಡಿ, ಡಿ.ಕೆ.ಶಿವಕುಮಾರ್ ಸೇರಿದಂತೆ ರಡ್ಡಿ ಸಮುದಾಯದ ಮಠಾಧೀಶರು, ಶಾಸಕರು, ಜನಪ್ರತಿನಿಧಿಗಳು, ಮುಖಂಡರು ಉಪಸ್ಥಿತರಿದ್ದರು. ಸಮುದಾಯದ ನಾಯಕನಾಗಲು ಸಿದ್ಧ: ಜನಾರ್ದನ ರೆಡ್ಡಿ
ಬಿಜೆಪಿಯ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಅವರು ಎಂದು ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಹೇಳಿದ್ದಾರೆ. ಸಮಾವೇಶದಲ್ಲಿ ಮಾತನಾಡಿದ ಅವರು, ಮಂತ್ರಿ ಆಗಬೇಕು, ಮುಖ್ಯಮಂತ್ರಿ ಆಗಬೇಕು ಎಂಬ ಯಾವ ರಾಜಕೀಯ ಆಸೆಯೂ ಈಗ ನನಗಿಲ್ಲ. ಆದರೆ, ರೆಡ್ಡಿ ಸಮುದಾಯದ ನಾಯಕತ್ವ ವಹಿಸಿಕೊಳ್ಳಲು ಸಿದ್ಧ ಎಂದರು. ಕಳೆದ ಐದು ವರ್ಷಗಲ್ಲಿ ಇದೇ ಮೊದಲ ಬಾರಿ ಸಾರ್ವಜನಿಕ ಸಮಾರಂಭದಲ್ಲಿ, ಮುಖ್ಯವಾಗಿ ರಡ್ಡಿ ಜನಾಂಗದ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ. ದೇಶದಲ್ಲಿ ಈಗ ಎಲ್ಲಡೆ “ಮೋದಿ..ಮೋದಿ’ ಎಂದು ಕೇಳುತ್ತಿರುವಂತೆ “ರೆಡ್ಡಿ ಅಂದರೆ ಬಂಗಾರದ ಕಡ್ಡಿ’ ಎಂದು ಕೇಳುತ್ತಿರಬೇಕು ಎಂದರು. ನನ್ನನ್ನೂ ನಾಯಕ ಎಂದು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಸಮುದಾಯದವರ ಜತೆ ಸೇರಿ ಸಂಘಟನೆ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತೇನೆ. ಮಾಜಿ ಪ್ರಧಾನಿ ದೇವೇಗೌಡರು ಯಾವುದೇ ಒಂದು ಸಮುದಾಯ ಉಳಿಯಬೇಕಾದರೆ ಆ ಸಮುದಾಯ ಒಬ್ಬ ನಾಯಕನನ್ನು ಗುರುತಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಆ ನಾಯಕತ್ವದ ಜವಾಬ್ದಾರಿ ಹೊರಲು ನಾನು ಸಿದ್ಧ ಎಂದು ತಿಳಿಸಿದರು.