Advertisement

Odisha ದಲ್ಲೂ ಜಾತಿ ಗಣತಿ ವರದಿ ರಿಲೀಸ್‌?- ಸದ್ಯದಲ್ಲೇ ವರದಿ ಬಹಿರಂಗ ಎಂದ ಸರ್ಕಾರದ ಮೂಲಗಳು

09:09 PM Oct 04, 2023 | Team Udayavani |

ನವದೆಹಲಿ/ಭುವನೇಶ್ವರ: ಬಿಹಾರದ ಜಾತಿಗಣತಿ ವರದಿಯು ದೇಶಾದ್ಯಂತ ಸಂಚಲನ ಮೂಡಿಸಿರುವಂತೆಯೇ ಈಗ ಒಡಿಶಾ ಸರ್ಕಾರ ಕೂಡ ತನ್ನ ಹಿಂದುಳಿದ ವರ್ಗಗಳ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಲು ಚಿಂತನೆ ನಡೆಸಿದೆ.

Advertisement

ಪ್ರಸಕ್ತ ವರ್ಷದ ಮೇ ತಿಂಗಳಿಂದ ಜುಲೈವರೆಗಿನ ಅವಧಿಯಲ್ಲಿ ಸಮೀಕ್ಷೆ ನಡೆಸಿರುವ ಒಡಿಶಾ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಇತ್ತೀಚೆಗಷ್ಟೇ ರಾಜ್ಯ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ. ರಾಜ್ಯದ ಒಟ್ಟಾರೆ 4.7 ಕೋಟಿ ಜನಸಂಖ್ಯೆಯ ಪೈಕಿ ಶೇ.42ರಷ್ಟು ಮಂದಿ 208 ಹಿಂದುಳಿದ ವರ್ಗಗಳಿಗೆ ಸೇರಿದವರು ಎಂದು ಮೂಲಗಳು ತಿಳಿಸಿವೆ. ಸದ್ಯದಲ್ಲೇ ಸರ್ಕಾರವು ಈ ವರದಿಯನ್ನು ಬಹಿರಂಗಪಡಿಸಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ತಜ್ಞರು ವರದಿಯಲ್ಲಿನ ದತ್ತಾಂಶಗಳನ್ನು ವಿಶ್ಲೇಷಿಸುತ್ತಿದ್ದಾರೆ. ಈ ಪ್ರಕ್ರಿಯೆ ಮುಗಿದ ಬಳಿಕ ವರದಿಯನ್ನು ಬಿಡುಗಡೆ ಮಾಡಲಾಗುತ್ತದೆ. ಒಬಿಸಿಗಳು ಎಷ್ಟಿದ್ದಾರೆ ಎಂಬುದನ್ನು ಅರಿತು, ಅವರಿಗೆ ಅನುಕೂಲತೆ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಬಿಜೆಡಿ ಹಿರಿಯ ಶಾಸಕ ಮತ್ತು ಮಾಜಿ ಸಚಿವ ದೇಬಿ ಪ್ರಸಾದ್‌ ಮಿಶ್ರಾ ಹೇಳಿದ್ದಾರೆ.

ತಂದೆ-ಮಗನ ತದ್ವಿರುದ್ಧ ನಿಲುವು:
ಜಾತಿಗಣತಿ ವರದಿಯ ವಿಚಾರದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಅವರು ತಮ್ಮ ತಂದೆಯವರಾದ ದಿವಂಗತ ರಾಜೀವ್‌ಗಾಂಧಿ ಅವರಿಗಿಂತ ಭಿನ್ನ ನಿಲುವು ಹೊಂದಿರುವುದು ಅವರ ಇತ್ತೀಚೆಗಿನ ಹೇಳಿಕೆಯಿಂದ ಸ್ಪಷ್ಟವಾಗಿದೆ. ಜಾತಿ ಗಣತಿಯ ಪರ ಮಾತನಾಡಿರುವ ರಾಹುಲ್‌, “ಜನಸಂಖ್ಯೆ ಆಧರಿಸಿ ಹಕ್ಕುಗಳನ್ನು ನೀಡಬೇಕು’ ಎಂದು ಒತ್ತಾಯಿಸಲು ಆರಂಭಿಸಿದ್ದಾರೆ. ಆದರೆ, ಅವರ ತಂದೆ, ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರು 1990ರಲ್ಲಿ ಪ್ರತಿಪಕ್ಷದ ನಾಯಕರಾಗಿದ್ದಾಗ ಸಂಸತ್‌ನಲ್ಲೇ “ಜಾತಿರಹಿತ ಸಮಾಜ’ದ ಕನಸಿನ ಬಗ್ಗೆ ಮಾತನಾಡಿದ್ದರು. ಅಲ್ಲದೇ, ಮಂಡಲ್‌ ಆಯೋಗದ ವರದಿಯೊಂದಿಗೆ ಪ್ರಧಾನಮಂತ್ರಿ ವಿ.ಪಿ.ಸಿಂಗ್‌ ಅವರು ದೇಶವನ್ನು ಜಾತಿಗಳ ನಡುವಿನ ಯುದ್ಧಕ್ಕೆ ಅಣಿಯಾಗಿಸುತ್ತಿದ್ದಾರೆ. ಈ ಸರ್ಕಾರವು ಜಾತಿಯ ಸುತ್ತಲೂ ಗಿರಕಿ ಹೊಡೆಯುತ್ತಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ಸಮಾಜದಲ್ಲಿ ವಿಭಜನೆ ತರುವ ಯತ್ನವಿದು ಎಂದೂ ಆರೋಪಿಸಿದ್ದರು.

ಅಲ್ಲದೆ, ಅದಕ್ಕೂ ಮೊದಲು 1980ರಲ್ಲಿ ಇಂದಿರಾ ಗಾಂಧಿಯವರ ನೇತೃತ್ವದ ಕಾಂಗ್ರೆಸ್‌ ಪಕ್ಷವು “ನಾ ಜಾತ್‌ ಪರ್‌, ನಾ ಪಥ್‌ ಪರ್‌'(ಜಾತಿ ಅಥವಾ ಪಂಗಡದ ಹಂಗಿಲ್ಲದೆ) ಎಂಬ ಸ್ಲೋಗನ್‌ ಮೂಲಕ ಜಾತಿರಹಿತ ಸಮಾಜದ ಕನಸು ಕಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Advertisement

ಜಾತಿ ಗಣತಿಯಿಂದ ಅಭಿವೃದ್ಧಿ ಕಾರ್ಯಗಳಿಗೆ ನೆರವು: ಖರ್ಗೆ 
ದೇಶದಲ್ಲಿ ಜಾತಿ ಗಣತಿ ನಡೆಸುವುದರಿಂದ ಹಿಂದುಳಿದ ವರ್ಗದವರು ಎಷ್ಟು ಪ್ರಮಾಣದಲ್ಲಿ ಇದ್ದಾರೆ, ಅವರಿಗೆ ಯಾವ ರೀತಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಲು ನೆರವಾಗುತ್ತದೆ. ಹೀಗೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಛತ್ತೀಸ್‌ಗಢದ ಕೊಡತರಾರಿ ಎಂಬಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇದೇ ಕಾರಣಕ್ಕಾಗಿಯೇ ನಮ್ಮ ಪಕ್ಷ ದೇಶಾದ್ಯಂತ ಜಾತಿ ಗಣತಿ ನಡೆಸುವುದಕ್ಕೆ ಒತ್ತಾಯಿಸುತ್ತಿದೆ ಎಂದರು. ಕಾಂಗ್ರೆಸ್‌ ಹಿಂದೂಗಳನ್ನು ವಿಭಜಿಸುತ್ತಿದೆ ಎಂಬ ಪ್ರಧಾನಿ ಮೋದಿ ಆರೋಪಕ್ಕೆ ಕ್ರುದ್ಧರಾದ ಖರ್ಗೆ, ಮಹಿಳೆಯರ ಅಭ್ಯುದಯದ ಬಗ್ಗೆ ಬಿಜೆಪಿಗೆ ನಿಜವಾಗಿಯೂ ಕಾಳಜಿ ಇದ್ದರೆ ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಸ್ಥಾನಗಳನ್ನು ಮೀಸಲಾಗಿ ಇರುವ ಕಾಯ್ದೆಯನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಸವಾಲು ಹಾಕಿದ್ದಾರೆ. ಜನಸಂಘ ಅಥವಾ ಬಿಜೆಪಿ, ಆರ್‌ಎಸ್‌ಎಸ್‌ ಯಾವತ್ತೂ ಮಹಿಳೆಯರ ವಿರೋಧಿಯೇ ಎಂದು ಹೇಳಿದ್ದಾರೆ ಖರ್ಗೆ.

ಸುಳ್ಳುಗಳ ಸರದಾರ:
ಪ್ರಧಾನಿಯವರನ್ನು ಸುಳ್ಳುಗಳ ಸರದಾರ ಎಂದು ಟೀಕಿಸಿದ ಖರ್ಗೆ, ಛತ್ತೀಸ್‌ಗಢ ಸರ್ಕಾರ ಸಗಣಿ ಮಾರಾಟದಲ್ಲೂ ಭ್ರಷ್ಟಾಚಾರ ಎಸಗುತ್ತಿದೆ ಎಂದು ದೂರಿದ್ದರು. ಬಿಜೆಪಿಯೇ ಗೋವುಗಳ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸಿದೆ ಎಂದು ತಿರುಗೇಟು ನೀಡಿದ್ದಾರೆ.

ಶೀಘ್ರ ಪ್ರಕಟ:
ಕರ್ನಾಟಕದಲ್ಲಿ ನಡೆಸಲಾಗಿದ್ದ ಸಾಮಾಜಿಕ ಮತ್ತು ಆರ್ಥಿಕ ಗಣತಿ ವರದಿ ಸಿದ್ಧಗೊಂಡಿದೆ. ಅದನ್ನು ಶೀಘ್ರದಲ್ಲಿಯೇ ಬಹಿರಂಗಪಡಿಸಲಾಗುತ್ತದೆ ಎಂದು ಖರ್ಗೆ ಪ್ರಕಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next