Advertisement

ದ.ಕ.ಜಿಲ್ಲೆಯ 9 ಶಾಲೆಗಳಿಂದ ಬ್ಯಾಟರಿ ಕಳವು ಪ್ರಕರಣ: ನಾಲ್ವರು ಆರೋಪಿಗಳ ಸೆರೆ

09:37 PM May 02, 2023 | Team Udayavani |

ಬೆಳ್ತಂಗಡಿ: ಕೊಕ್ಕಡ ಗ್ರಾಮದ ಸರಕಾರಿ ಪ್ರೌಢ ಶಾಲೆ ಸಹಿತ ದ.ಕ.ಜಿಲ್ಲೆಯ ವಿವಿಧ ಶಾಲೆಗಳಿಂದ ಬ್ಯಾಟರಿ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳ ಸಹಿತ 3 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಆರೋಪಿಗಳಾದ ಕಡಬದ ಕುಟ್ರಪಾಡಿ ನಿವಾಸಿ ರಕ್ಷಿತ್‌ ಡಿ.(24), ಕಡಬ ಮೀನಾಡಿ ನಿವಾಸಿ ತೀರ್ಥೇಶ್‌ ಎಂ. (29), ಕಡಬ ಉರುಂಬಿ ನಿವಾಸಿ ಯಜ್ಞೆಶ್‌ ಯು.ಕೆ.(30) ಮತ್ತು ಹಳ್ಳಿಮನೆ ನಿವಾಸಿ ರೋಹಿತ್‌ ಎಚ್‌.ಶೆಟ್ಟಿ (23)ಯನ್ನು ಬಂಧಿಸಲಾಗಿದೆ.

ಕೊಕ್ಕಡ ಸರಕಾರಿ ಪ್ರೌಢ ಶಾಲೆಯಿಂದ 3.20 ಲಕ್ಷ ರೂ. ಮಾಲ್ಯದ 8 ನಿರುಪಯುಕ್ತ ಬ್ಯಾಟರಿಗಳನ್ನು ಕಳವು ಮಾಡಿದ ಕುರಿತು ಇಲ್ಲಿನ ಪ್ರಭಾರ ಮುಖ್ಯೋಪಾಧ್ಯಾಯ ಹಲ್ಲಿಕೇರಿ ಪ್ರಭಾಕರ ನಾಯ್ಕ ಎಂಬವರು ಧರ್ಮಸ್ಥಳ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಇದರಂತೆ ಪ್ರಕರಣದ ಜಾಡು ಹಿಡಿದ ಠಾಣೆಯ ಉಪನಿರೀಕ್ಷಕರಾದ ಅನಿಲ್‌ ಕುಮಾರ್‌ ಹಾಗೂ ರೇಣುಕಾ ಸೇರಿದಂತೆ ಸಿಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ 4 ಸರಕಾರಿ ಶಾಲೆಗಳಿಂದ, ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯಲ್ಲಿ 2 ಸರಕಾರಿ ಶಾಲೆಗಳಿಂದ, ಪುತ್ತೂರು ನಗರ ಠಾಣಾ ವ್ಯಾಪ್ತಿಯ 1 ಸರಕಾರಿ ಶಾಲೆಯಿಂದ, ಬಂಟ್ವಾಳ ಠಾಣಾ ವ್ಯಾಪ್ತಿಯ 1ಸರಕಾರಿ ಶಾಲೆ ಮತ್ತು ಧರ್ಮಸ್ಥಳ ಠಾಣಾ ವ್ಯಾಪ್ತಿಯ 1 ಸರಕಾರಿ ಶಾಲೆ ಸೇರಿದಂತೆ ಒಟ್ಟು 9 ಸರಕಾರಿ ಪ್ರೌಢ ಶಾಲೆಗಳಿಂದ ಕಳವು ಮಾಡಿದ ಸುಮಾರು 2 ಲಕ್ಷ ರೂ. ಮೌಲ್ಯದ ಬ್ಯಾಟರಿಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳು ಕೃತ್ಯಕ್ಕೆ ಬಳಸಿದ ಸುಮಾರು ಲಕ್ಷ ರೂ. ಮೌಲ್ಯದ ಕಾರು ಸಹಿತ ಇತರ ಒಟ್ಟು ಅಂದಾಜು 3 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next