Advertisement

Puttur; ಮಹಿಳೆಯರಿಬ್ಬರಿಗೆ ಹಲ್ಲೆ ಪ್ರಕರಣ: ದರೋಡೆ, ಕೊಲೆ ಯತ್ನ ದಾಖಲು

10:49 PM Aug 23, 2023 | Team Udayavani |

ಪುತ್ತೂರು: ಬಡಗನ್ನೂರು ಗ್ರಾಮದ ನೇರೋಳ್ತಡ್ಕ ಎಂಬಲ್ಲಿ ಮಹಿಳೆಯರಿಬ್ಬರಿಗೆ ಹಲ್ಲೆ ನಡೆಸಿದ ವಿಚಾರಕ್ಕೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಚಿನ್ನಾಭರಣ ದರೋಡೆ, ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

Advertisement

ಬಡಗನ್ನೂರು ಗ್ರಾಮದ ನೇರೋಳ್ತಡ್ಕ ನಿವಾಸಿ ಸುರೇಖಾ ಮತ್ತು ಕೆಲಸದಾಕೆ ಗಿರಿಜಾ ಅವರು ಹಲ್ಲೆಗೊಳಗಾಗಿ ಅಸ್ವಸ್ಥಗೊಂಡವರು. ಸುರೇಖಾ ಅವರ ಮನೆಗೆ ಕೆಲವೊಮ್ಮೆ ಕೆಲಸಕ್ಕೆಂದು ಬರುತ್ತಿದ್ದ ಸುರೇಶ್‌ ನಾಯ್ಕ ಎಂಬಾತ ಮನೆಯಲ್ಲಿನ ಚಿನ್ನಾಭರಣಗಳನ್ನು ದೋಚುವ ಉದ್ದೇಶದಿಂದ ಸುರೇಖಾ ಮತ್ತು ಕೆಲಸದಾಕೆ ಗಿರಿಜಾ ಅವರಿಗೆ ಹಲ್ಲೆ ನಡೆಸಿದ್ದಾರೆ. ಘಟನೆ ಕುರಿತು ಸುರೇಖಾ ಅವರ ಅಕ್ಕನ ಮಗ ರವಿಚಂದ್ರ ನೀಡಿದ ದೂರಿನಂತೆ ಸಂಪ್ಯ ಪೊಲೀಸರು ದರೋಡೆ ಮತ್ತು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ ಎನ್ನಲಾಗಿದೆ.

ರವಿಚಂದ್ರ ಅವರು ಚಿಕ್ಕಮ್ಮ ಸುರೇಖಾ ಅವರನ್ನು ನೋಡಿಕೊಂಡು ಅವರೊಟ್ಟಿಗೆ ವಾಸವಾಗಿದ್ದರು. ಆ. 22ರಂದು ರವಿಚಂದ್ರ ಅವರು ಬೆಳಗ್ಗೆ ಕೆಲಸಕ್ಕೆ ಹೋಗಿ ಮಧ್ಯಾಹ್ನ ಮನೆಗೆ ಹಿಂದಿರುಗಿದಾಗ ಚಿಕ್ಕಮ್ಮ ಮನೆಯಲ್ಲಿ ಕಾಣದಿದ್ದಾಗ ಪಕ್ಕದ ಮನೆಯ ಗಂಗಾಧರ ಅವರು ಕರೆ ಮಾಡಿ ತಿಳಿಸಿದಂತೆ ತೋಟದಲ್ಲಿ ಚಿಕ್ಕಮ್ಮ ಮತ್ತು ಕೆಲಸದಾಕೆ ಗಿರಿಜಾ ಅವರು ಅಸ್ವಸ್ಥಗೊಂಡು ಬಿದ್ದಿರುವುದು ಬೆಳಕಿಗೆ ಬಂದಿತ್ತು. ಗಿರಿಜಾ ಅವರ ಕುತ್ತಿಗೆಗೆ ಬೈರಾಸ್‌ ಅನ್ನು ಬಿಗಿಯಾಗಿ ಕಟ್ಟಲಾಗಿತ್ತು. ಕಣ್ಣುಗಳಿಗೆ, ಮುಖಕ್ಕೆ ಗುದ್ದಿದ ಗಾಯವಾಗಿತ್ತು. ಎಡ ಕಿವಿ ಹರಿದು ಹೋಗಿತ್ತು. ಈ ಕುರಿತು ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next