Advertisement

Congress Govt., ಸಿಐಡಿಗೆ ಪ್ರಕರಣಗಳ ಹೊರೆ: ವಿಚಾರಣೆ, ತನಿಖೆ ವಿಳಂಬ!

11:45 PM Sep 15, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಆಡಳಿತದ ಚುಕ್ಕಾಣಿ ಹಿಡಿದ ಬೆನ್ನಲ್ಲೇ ಸಾಲು-ಸಾಲು ಪ್ರಕರಣಗಳು ಅಪರಾಧ ತನಿಖಾ ವಿಭಾಗದ (ಸಿಐಡಿ) ಅಂಗಳಕ್ಕೆ ಬಂದು ಬೀಳಲಾರಂಭಿಸಿವೆ. ಪರಿಣಾಮ ಸಿಐಡಿ ಅಧಿಕಾರಿ ಗಳಿಗೆ ಕಾರ್ಯದೊತ್ತಡ ಹೆಚ್ಚಾಗಿ ಗಂಭೀರ ಸ್ವರೂಪದ ಪ್ರಕರಣಗಳ ವಿಚಾರಣೆ, ತನಿಖೆ ನಡೆಸಿ ಚಾರ್ಜ್‌ಶೀಟ್‌ ಸಲ್ಲಿಕೆ ಕೂಡ ವಿಳಂಬ
ವಾಗುತ್ತಿದೆ.

Advertisement

ಪ್ರಸ್ತುತ ಸಿಐಡಿಯಲ್ಲಿರುವ 371 ಪ್ರಕರಣಗಳ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿವೆ. ಚಾರ್ಜ್‌ಶೀಟ್‌ ಸಲ್ಲಿಸಿರುವ 1,307 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ಈ ಎಲ್ಲ ಪ್ರಕರಣಗಳನ್ನು ಇಲ್ಲಿರುವ 539 ಅಧಿಕಾರಿ ಹಾಗೂ ಸಿಬಂದಿಯೇ ನಿರ್ವಹಿಸಬೇಕಿರುವುದು ಸವಾಲಾಗಿದೆ.

ವಿಳಂಬವೇಕೆ?
ಸಿಐಡಿ ತನಿಖೆ ನಡೆಸುತ್ತಿರುವ ಶೇ. 80ರಷ್ಟು ಪ್ರಕರಣಗಳು ಕೋಟ್ಯಂತರ ರೂ. ವಂಚನೆ, ಸೈಬರ್‌ ಕ್ರೈಂ, ಕೊಲೆ, ಅನುಮಾನಾಸ್ಪದ ಸಾವು, ಲೈಂಗಿಕ ದೌರ್ಜನ್ಯ, ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದ್ದಾಗಿವೆ. ಅಲ್ಲಿ ಡಿಜಿಟಲ್‌ ಸಾಕ್ಷ್ಯಗಳೇ ಹೆಚ್ಚಿನ ಮಹತ್ವ ಪಡೆದಿವೆ. ಅವುಗಳನ್ನು ಕಲೆ ಹಾಕಲು ಹಲವು ದಿನಗಳೇ ಹಿಡಿಯುತ್ತವೆ. ಹೀಗಾಗಿ ಕಾಲಮಿತಿಯೊಳಗೆ ವಿಚಾರಣೆ, ತನಿಖೆ ನಡೆಸಿ ಚಾರ್ಜ್‌ಶೀಟ್‌ ಸಲ್ಲಿಸುವುದು ಸವಾಲಾಗಿದೆ. ಹಲವು ವರ್ಷಗಳಿಂದ ಖಾಲಿ ಇರುವ ಶೇ. 12ರಷ್ಟು ಹುದ್ದೆ ಭರ್ತಿಗೆ ಸಂಸ್ಥೆಗೆ ಬಲ ತುಂಬಲು ಸರಕಾರ ಆಸಕ್ತಿ ತೋರುತ್ತಿಲ್ಲ.

ಸೈಬರ್‌ ಕಳ್ಳರಿಗೆ ಸಿಐಡಿ ಬಲೆ
ಇತ್ತೀಚೆಗೆ ರಾಜ್ಯದಲ್ಲಿ ಮಿತಿ
ಮೀರುತ್ತಿರುವ ಸೈಬರ್‌ ಕ್ರೈಂ ಪತ್ತೆಗೆ ಸಿಐಡಿ ಪೊಲೀಸರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಕ್ರಿಪ್ಟೋ ಕರೆನ್ಸಿ, ದುಡ್ಡು ಡಬಲ್‌ ಮಾಡುವುದಾಗಿ ಕೋಟ್ಯಂತರ ರೂ. ವಂಚನೆ, ಹ್ಯಾಕಿಂಗ್‌ ಮೂಲಕ ದತ್ತಾಂಶ ಕಳವು, ಉದ್ಯೋಗದ ಹೆಸರಿನಲ್ಲಿ ವಂಚನೆ, ಬ್ಲ್ಯಾಕ್‌ಮೇಲ್ ಮಾಡಿ ದುಡ್ಡು ಲಪಟಾಯಿಸಿರುವುದಕ್ಕೆ ಸಂಬಂಧಿಸಿದ 50ಕ್ಕೂ ಹೆಚ್ಚಿನ ಪ್ರಕರಣಗಳು ತನಿಖಾ ಹಂತದಲ್ಲಿವೆ. ಈ ಪ್ರಕರಣಗಳಲ್ಲಿ ಸಕ್ರಿಯವಾಗಿರುವ ಅಂತಾರಾಜ್ಯ ಸೈಬರ್‌ ಕ್ರೈಂ ಗ್ಯಾಂಗ್‌ಗಳು ಹಾಗೂ ವಿದೇಶಗಳಲ್ಲೇ ಕುಳಿತು ಸ್ಥಳೀಯರ ಮೂಲಕ ಸೈಬರ್‌ ಕ್ರೈಂ ಎಸಗಿ ಲಕ್ಷಾಂತರ ರೂ. ಲಪಟಾಯಿಸಿ ರುವವರ ಸುಳಿವು ಸಿಕ್ಕಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.

ಕಳೆದ 1 ವರ್ಷಧ ಅವಧಿಯಲ್ಲಿ ಸಿಐಡಿಗೆ ವರ್ಗಾವಣೆಯಾದ ಪ್ರಮುಖ ಕೇಸ್‌ಗಳು
– ಉಡುಪಿ ಜಿಲ್ಲೆ ಕಾರ್ಕಳ ಬೈಲೂರಿನ ಪರಶುರಾಮ ಥೀಮ್‌ ಪಾರ್ಕ್‌ ಅವ್ಯವಹಾರ ಹಗರಣ
– ಉಡುಪಿಯ ಕಾಲೇಜೊಂದರಲ್ಲಿ ನಡೆದ ವಿದ್ಯಾರ್ಥಿನಿಯರ ವೀಡಿಯೋ ಪ್ರಕರಣ
-ನಿಷೇಧಿತ ಬಿಟ್‌ಕಾಯಿನ್‌ ಮೂಲಕ ಅಕ್ರಮವಾಗಿ ಕೋಟ್ಯಂತರ ರೂ. ವ್ಯವಹಾರ
– ಹಾಸನದ ಅಶ್ಲೀಲ ವೀಡಿಯೋ ವೈರಲ್‌ ಸಂಬಂಧ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ, ಸೂರಜ್‌ ರೇವಣ್ಣ, ಶಾಸಕ ಎಚ್‌. ಡಿ. ರೇವಣ್ಣ ವಿರುದ್ಧದ ಪ್ರಕರಣ
– ಯಡಿಯೂರಪ್ಪ ವಿರುದ್ಧದಪೋಕ್ಸೋ ಪ್ರಕರಣ
- ಬಾಗಲಕೋಟೆಯ ಐಡಿಬಿಐ ಶಾಖೆಯಲ್ಲಿರುವ 5 ಇಲಾಖೆ ಗಳ ಹಣ ಅಕ್ರಮ ವರ್ಗಾವಣೆ ಪ್ರಕರಣ
– ಬೆಂಗಳೂರಿನಲ್ಲಿ ನಡೆದಿದ್ದ ವಿದ್ಯಾರ್ಥಿನಿ ಪ್ರಬುದ್ಧ ಅವರ ಕೊಲೆ ಪ್ರಕರಣ
– 232.88 ಕೋಟಿ ಸಾಲ ಪಡೆದು ವಂಚಿಸಿದ ಆರೋಪದಡಿ ಬೆಳಗಾವಿಯ ಸೌಭಾಗ್ಯ ಲಕ್ಷ್ಮೀ ಶುಗರ್‌ ಕಂಪೆನಿ ವಿರುದ್ಧ ದಾಖಲಾದ ಪ್ರಕರಣ
– ಯಾದಗಿರಿ ಪಿಎಸ್‌ಐ ಪರಶುರಾಮ್‌ ಅವರ ಅನುಮಾನಾ ಸ್ಪದ ಸಾವಿನ ಪ್ರಕರಣ

Advertisement

ಪ್ರಕರಣಗಳನ್ನು ಅಧಿಕಾರಿಗಳು ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಇತ್ತೀಚೆಗೆ ತಾಂತ್ರಿಕ ಕಾರ್ಯಾಚರಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕಳೆದ 1 ವರ್ಷದ ಹಿಂದೆ ಸಿಐಡಿಯಲ್ಲಿ 903 ಪ್ರಕರಣಗಳಿದ್ದವು. ಸದ್ಯ 371 ತನಿಖಾ ಹಂತದಲ್ಲಿವೆ.
– ಡಾ| ಎಂ.ಎ. ಸಲೀಂ,
ಪೊಲೀಸ್‌ ಮಹಾನಿರ್ದೇಶಕ, ಸಿಐಡಿ

Advertisement

Udayavani is now on Telegram. Click here to join our channel and stay updated with the latest news.

Next