Advertisement

ಪ್ರಕಾಶ್‌ ರಾಜ್‌ ವಿರುದ್ಧ ಪ್ರಕರಣ ದಾಖಲು

06:39 AM Mar 22, 2019 | Team Udayavani |

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಸಂಭವನೀಯ ಅಭ್ಯರ್ಥಿ, ನಟ ಪ್ರಕಾಶ್‌ ರಾಜ್‌ ಸೇರಿ ಮೂವರ ವಿರುದ್ಧ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಶಾಂತಿನಗರ ವಿಧಾನಸಭಾ ಕ್ಷೇತ್ರದ ವಿಚಕ್ಷಣಾ ದಳದ ಅಧಿಕಾರಿ ಡಿ.ಮೂರ್ತಿ ಅವರು ನೀಡಿದ ದೂರಿನ ಆಧಾರದ ಮೇಲೆ ನಟ ಕೆ.ಪ್ರವೀಣ್‌, ಸಿ.ಎ.ಅಭಿಲಾಷ್‌ ಹಾಗೂ  ಪ್ರಕಾಶ್‌ ರಾಜ್‌ ವಿರುದ್ಧ ಕಬ್ಬನ್‌ಪಾರ್ಕ್‌ ಪೊಲೀಸರು ಎಫ್ಐಆರ್‌ ದಾಖಲಿಸಿದ್ದಾರೆ.

ಪ್ರವೀಣ್‌ ಮತ್ತು ಅಭಿಲಾಷ್‌ ಮಾ.12ರಂದು ಸಂಜೆ 4.30ರ ಸುಮಾರಿಗೆ ಎಂ.ಜಿ.ರಸ್ತೆಯಲ್ಲಿರುವ ಮಹಾತ್ಮಗಾಂಧಿ ವೃತ್ತದ ಬಳಿ ಒಂದು ಗಂಟೆಗಳ ಕಾಲ ಶಾಂತಿಯುತ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಪ್ರತಿಭಟನೆಯಲ್ಲಿ ನಟ ಪ್ರಕಾಶ್‌ ರಾಜ್‌, ಕೆಲ ಲೇಖಕರು, ಕಲಾವಿದರು, ಹೋರಾಟಗಾರರು ಭಾಗಿಯಾಗಿದ್ದರು. ಪ್ರತಿಭಟನೆಯಲ್ಲಿ  ಪ್ರಕಾಶ್‌ ರಾಜ್‌, ಲೋಕಸಭಾ ಚುನಾವಣೆ ಕುರಿತ ಮತದಾನದ ಬಗ್ಗೆ ಮಾತನಾಡಿದ್ದರು.

ಈ ಕುರಿತು ಕೆಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಪ್ರತಿಭಟನೆಯಲ್ಲಿ ಸುಮಾರು 25-30 ಮಂದಿ ಜನ ಸೇರಿದ ಪರಿಣಾಮ ಪಾದಚಾರಿ ಮಾರ್ಗದಲ್ಲಿ ಸಾರ್ವಜನಿಕರ ಓಡಾಡಕ್ಕೆ ತೊಂದರೆಯಾಗಿತ್ತು. ಈ ಮೂಲಕ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪ ಮೇಲೆ ಡಿ.ಮೂರ್ತಿ ಅವರು ನೀಡಿದ ದೂರಿನ ಆಧಾರದ ಮೇಲೆ ಮೂವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದು ಕಬ್ಬನ್‌ಪಾರ್ಕ್‌ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next