Advertisement

ಅಖಾಡದಲಿ ಕಾದಾಟಕ್ಕೆ ಅಭ್ಯರ್ಥಿಗಳು ಸಿದ್ಧ

04:57 PM Mar 28, 2019 | Team Udayavani |
ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಖಾಡ ಸಿದ್ಧವಾಗಿದೆ. ತ್ರಿಕೋನ ಸ್ಪರ್ಧೆ ಇರುತ್ತಿದ್ದ ಈ ಕ್ಷೇತ್ರದಲ್ಲಿ ಜೆಡಿಎಸ್‌ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಹೀಗಾಗಿ ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್‌ ಅವರ ನಡುವೆ ನೇರ ಹಣಾಹಣಿ ಏರ್ಪಡಲಿದೆ.
ಡಿ.ಕೆ.ಸುರೇಶ್‌ ಮೂರನೇ ಬಾರಿಗೆ ಸ್ಪರ್ಧೆ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌
ಅಭ್ಯರ್ಥಿ ಡಿ.ಕೆ.ಸುರೇಶ್‌ ಇದು ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ.  2009ರಲ್ಲಿ ಅಸ್ಥಿತ್ವಕ್ಕೆ ಬಂದ ಈ ಕ್ಷೇತ್ರದಿಂದ ಎಚ್‌.ಡಿ.ಕುಮಾರಸ್ವಾಮಿ ಆಯ್ಕೆಯಾಗಿ ಲೋಕಸಭೆಯನ್ನು ಪ್ರಥಮ ಬಾರಿಗೆ ಪ್ರವೇಶಿಸಿದ್ದರು. 2013ರಲ್ಲಿ ಅವರು ರಾಜ್ಯ ರಾಜಕಾರಣಕ್ಕೆ ಮರಳಿದ ಕಾರಣ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್‌ ಸ್ಪರ್ಧಿಸಿ ವಿಜೇಯಿಯಾದರು. 2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿಯೂ ಅವರು ಮತ್ತೆ ಸ್ಪರ್ಧಿಸಿ ಗೆಲುವು ಸಾಧಿಸಿದರು.
ಬಿಜೆಪಿ ಅಭ್ಯರ್ಥಿ ಅಶ್ವತ್ಥ ನಾರಾಯಣ್‌ ಅವರು ಲೋಕಸಭೆಗೆ ಸ್ಪರ್ಧಿಸುತ್ತಿರುವುದು ಇದೇ ಮೊದಲು. ಈ ಮೊದಲು
ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದೀಗ ಎರಡನೇ ಬಾರಿಗೆ ಸಾರ್ವತ್ರಿಕ ಚುನಾವಣೆ ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
25 ಲಕ್ಷ ಮತದಾರರನ್ನು ತಲುಪುವ ಸವಾಲಿನ ಕೆಲಸ: ಏಪ್ರಿಲ್‌ 18 ಮತದಾನದ ದಿನವಾಗಿದ್ದು, ಜಿಲ್ಲೆಯಲ್ಲಿ ರಾಜಕೀಯ ಕಾವು ಪಡೆದುಕೊಂಡಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ 25 ಲಕ್ಷ ಮತದಾರರಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಬೆಂಗಳೂರು ನಗರದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 16 ಲಕ್ಷ ಮತದಾರರಿದ್ದಾರೆ. ರಾಮನಗರ ಜಿಲ್ಲೆಯಲ್ಲಿ 9 ಲಕ್ಷ ಮತದಾರರಿದ್ದಾರೆ. ಈ ಪ್ರಮಾಣದಲ್ಲಿರುವ ಮತದಾರರ ಮನವೊಲಿಸುವುದು ಸವಾಲಿನ ಕೆಲಸ. ಹೀಗಾಗಿ ರಾಜಕೀಯ ಪಕ್ಷಗಳು ತಮ್ಮ ಬೂತ್‌ ಮಟ್ಟದ ಕಾರ್ಯಕರ್ತರನ್ನೇ ನೆಚ್ಚಿಕೊಂಡಿದ್ದಾರೆ. ಮೇಲಾಗಿ ಬಿಸಿಲಿನ ಝಳ ತೀವ್ರವಾಗಿದ್ದು, ಪ್ರಚಾರ ಕಾರ್ಯ ಎಂತಹವರನ್ನು ಹೈರಾಣಾಗಿಸುವಂತಿದೆ. ಪಕ್ಷಗಳ ನಾಯಕರು ಕಾರ್ಯಕರ್ತರನ್ನು ಹುರಿದುಂಬಿಸುವ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕಾಗಿದೆ.
ಪ್ರಚಾರಕ್ಕೆ ಸಿದ್ಧತೆ: ಮಂಗಳವಾರ ನಾಮಪತ್ರಗಳ ಸಲ್ಲಿಕೆಗೆ ಕೊನೆ ದಿನವಾಗಿತ್ತು. ಪ್ರಚಾರ ಕಾರ್ಯಕ್ಕೆ ರೂಪುರೇಷೆಗಳನ್ನು ಸಿದ್ಧಪಡಿಸಿಕೊಳ್ಳುವ ಕಾರ್ಯದಲ್ಲಿ ಅಭ್ಯರ್ಥಿಗಳು ತೊಡಗಿಸಿಕೊಂಡರು. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳು ಈಗಾಗಲೇ ಬೂತ್‌ ಮಟ್ಟದ ನಾಯಕರ ಒಂದೆರೆಡು ಸಭೆಗಳನ್ನು ಆಯೋಜಿಸಿದ್ದಾರೆ. ಕೊನೆಗಳಿಗೆಯಲ್ಲಿ ಬಿಜೆಪಿ ಅಭ್ಯರ್ಥಿಯ ಅಖೈರಾದ ಕಾರಣ ಇನ್ನಷ್ಟೇ ಈ ಪಕ್ಷದ ಕಾರ್ಯಕರ್ತರ ಸಭೆಗಳನ್ನು ನಡೆಸಬೇಕಾಗಿದೆ.
ಮಾರ್ಚ್‌ 31ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಕ್ಷಗಳ ಬೃಹತ್‌ ಸಮಾವೇಶವನ್ನು ಹಮ್ಮಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ, ಸಿಎಂ ಕುಮಾರಸ್ವಾಮಿ ಸೇರಿದಂತೆ ಅತಿ ಗಣ್ಯರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬಿಜೆಪಿ ಕಾರ್ಯತಂತ್ರ ಚುರುಕು: ಇನ್ನೊಂದೆಡೆ ಬಿಜೆಪಿ ಕಾರ್ಯಕರ್ತರು ತಾವು ಸಹ ತಮ್ಮ ಕಾರ್ಯತಂತ್ರವನ್ನು ಚುರುಕುಕೊಳಿಸುವುದಾಗಿ ಹೇಳಿದ್ದಾರೆ. ನರೇಂದ್ರ ಮೋದಿಯವರ ಸಭೆಯನ್ನು ಆಯೋಜಿಸಲು ಉದ್ದೇಶಿಸಲಾಗಿದೆ.
ಅಶ್ವತ್ಥನಾರಾಯಣ್‌ ಅವರಿಗೆ ಚುನಾವಣಾ ರಾಜಕೀಯ ಚೆನ್ನಾಗಿ ಪರಿಚಯವಿದೆ. ಕ್ಷೇತ್ರದ ಪರಿಚಯ ಇಲ್ಲ ಎಂಬ ಮೈತ್ರಿ ಪಕ್ಷಗಳ ಟೀಕೆಯನ್ನು ತಳ್ಳಿ ಹಾಕಿರುವ ಬಿಜೆಪಿ ಕಾರ್ಯಕರ್ತರು ಇಡೀ ಕ್ಷೇತ್ರದಲ್ಲಿ ಅಶ್ವತ್ಥನಾರಾಯಣ್‌ ಸಂಭಾವಿತ ಅಭ್ಯರ್ಥಿ ಅಂತಲೇ ಗುರುತಿಸಿಕೊಂಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಕ್ಷೇತ್ರದ ಚುನಾವಣಾ ಅಖಾಡ ಸಿದ್ಧವಾಗಿದೆ. ಇನ್ನೇನಿದ್ದರು ರಣಕಲಿಗಳು ಅಖಾಡದಲ್ಲಿ ಕಾದಾಟ ನಡೆಸಬೇಕಾಗಿದೆ. ಕೇಂದ್ರ ಸರ್ಕಾರದಲ್ಲಿ ತಮ್ಮ ಪ್ರತಿನಿಧಿಯಾರಾಗಬೇಕು ಎಂಬ ಅಂತಿಮ ನಿರ್ಧಾರವನ್ನು ಮತದಾರರು ಏಪ್ರಿಲ್‌ 18ರಂದು
ಬರೆಯಲಿದ್ದಾರೆ. ಮೇ 23ರಂದು ಮತದಾರರ ನಿರ್ಧಾರ ಏನು ಎಂಬುದು ಪ್ರಕಟವಾಗಲಿದೆ.
ರಣತಂತ್ರಕ್ಕೆ ಬಿಜೆಪಿ ಸಿದ್ಧತೆ ಬಿಜೆಪಿ ಕಾರ್ಯಕರ್ತರು ತಾವು ಸಹ ತಮ್ಮ ಕಾರ್ಯತಂತ್ರವನ್ನು ಚುರುಕುಕೊಳಿಸುವುದಾಗಿ
ಹೇಳಿದ್ದಾರೆ. ನರೇಂದ್ರ ಮೋದಿಯವರ ಸಭೆಯನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಅಶ್ವತ್ಥನಾರಾಯಣ್‌ಗೆ ಚುನಾವಣಾ ರಾಜಕೀಯ ಚೆನ್ನಾಗಿ ಪರಿಚಯವಿದೆ. ಇಡೀ ಕ್ಷೇತ್ರದಲ್ಲಿ ಅಶ್ವತ್ಥನಾರಾಯಣ್‌ ಸಂಭಾವಿತ ಅಭ್ಯರ್ಥಿ ಅಂತಲೇ ಗುರುತಿಸಿಕೊಂಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
●ಬಿ.ವಿ.ಸೂರ್ಯ ಪ್ರಕಾಶ್‌
Advertisement

Udayavani is now on Telegram. Click here to join our channel and stay updated with the latest news.

Next