Advertisement

ಅಭ್ಯರ್ಥಿ ಆಯ್ಕೆ ಅಂತಿಮ: ಘೋಷಣೆಯಷ್ಟೇ ಬಾಕಿ

09:53 AM Mar 21, 2019 | |

ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು ಅಂತಿಮಗೊಂಡಿದ್ದು, ಅಧಿಕೃತ ಘೋಷಣೆ ಬಾಕಿ
ಉಳಿದಿದೆ. ಬಹುತೇಕ ಹಾಲಿ ಸಂಸದರಿಗೆ ಮತ್ತೆ ಟಿಕೆಟ್‌ ಸಿಗುವ ನಿರೀಕ್ಷೆಯಿದ್ದು, ಅಂತಿಮ ಹಂತದಲ್ಲಿ ವರಿಷ್ಠರು ಕೆಲ ಬದಲಾವಣೆ ಮಾಡಿದರೂ ಅಚ್ಚರಿ ಇಲ್ಲ.

Advertisement

ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸಮ್ಮುಖದಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿಯಲ್ಲಿ ಮಂಗಳವಾರ ತಡರಾತ್ರಿ 1 ಗಂಟೆ ಸುಮಾರಿಗೆ ಕರ್ನಾಟಕದ ಅಭ್ಯರ್ಥಿಗಳ ಬಗ್ಗೆ ಕುರಿತು ಚರ್ಚೆ ನಡೆಯಿತು. ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ ಸೇರಿದಂತೆ ಕೆಲ ಕ್ಷೇತ್ರಗಳಲ್ಲಿ ಹಾಲಿ ಸಂಸದರ ಬಗೆಗಿನ ಅಸಮಾಧಾನದ ಕುರಿತು ಚರ್ಚೆ ನಡೆಯಿತು. ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಂಡಿದೆ ಎನ್ನಲಾಗಿದ್ದು, ತೀವ್ರ ಕುತೂಹಲ ಮೂಡಿಸಿದೆ. 

ಕೇಂದ್ರ ಚುನಾವಣಾ ಸಮಿತಿ ಸಭೆಗೂ ಮೊದಲು ಪೂರ್ವಭಾವಿಯಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೇರಿದಂತೆ ಕೆಲ ಹಿರಿಯ ನಾಯಕರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಆಯ್ದ ನಾಯಕರು ಚರ್ಚೆ ನಡೆಸಿದರು. ಚಿಕ್ಕೋಡಿಯಿಂದ ಚಾಮರಾಜನಗರ ಕ್ಷೇತ್ರದವರೆಗೆ ಸರದಿಯಂತೆ ಎಲ್ಲ 28 ಕ್ಷೇತ್ರಗಳ ಅಭ್ಯರ್ಥಿಗಳ ಕುರಿತಂತೆ ಚರ್ಚೆ ನಡೆಯಿತು. ನಡುರಾತ್ರಿ ಕೇಂದ್ರ ಚುನಾವಣಾ ಸಮಿತಿಯಲ್ಲಿ ಕರ್ನಾಟಕದ ಅಭ್ಯರ್ಥಿಗಳ ಆಯ್ಕೆ ಚರ್ಚೆ ಶುರುವಾಯಿತು. ಆ ಸಭೆಯಲ್ಲಿ
ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌.ಸಂತೋಷ್‌ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಅರುಣ್‌ ಕುಮಾರ್‌ ಪಾಲ್ಗೊಂಡು ಚರ್ಚಿಸಿದ್ದು, ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿದ್ದಾರೆ. ಇತರೆ ರಾಜ್ಯಗಳ ಅಭ್ಯರ್ಥಿ ಆಯ್ಕೆ ಕುರಿತಂತೆ ಚರ್ಚೆ ಮುಂದುವರಿದು ಬುಧವಾರ ನಸುಕಿನ 4 ಗಂಟೆ ಸುಮಾರಿಗೆ ಸಭೆ ಮುಕ್ತಾಯವಾಯಿತು ಎಂದು ಮೂಲಗಳು ತಿಳಿಸಿವೆ.

ಅಮಿಶ್‌ ಶಾ ಸೇರಿದಂತೆ ಇತರೆ ರಾಷ್ಟ್ರೀಯ ನಾಯಕರೊಂದಿಗೆ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಗೆ ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ಹಾಲಿ ಕೆಲ ಸಂಸದರ ಬಗೆಗಿನ ಅಪಸ್ವರಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು. ಮುಖ್ಯವಾಗಿ ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್‌ ಕುಮಾರ್‌ ಕಟೀಲು, ಕೇಂದ್ರ ಸಚಿವ ಅನಂತ ಕುಮಾರ್‌ ಹೆಗಡೆ, ಸಂಸದ ಸುರೇಶ್‌ ಅಂಗಡಿಯವರ ವಿರುದ್ಧ ಕಾರ್ಯಕರ್ತರು, ಜನರಲ್ಲಿನ ಅಸಮಾಧಾನ, ಕ್ಷೇತ್ರ- ಜನ ಸಂಪರ್ಕ ಕೊರತೆ, ಅಭಿವೃದ್ಧಿ ಕಾರ್ಯಗಳು ನಿರೀಕ್ಷಿತ
ಮಟ್ಟದಲ್ಲಿ ನಡೆದಿರುವ ಬಗ್ಗೆಯೂ ಸಮಗ್ರ ಚರ್ಚೆ ನಡೆಯಿತು ಮೂಲಗಳು ತಿಳಿಸಿವೆ. 

ರಾಜ್ಯ ಕೋರ್‌ ಕಮಿಟಿಯ ಶಿಫಾರಸು ವರದಿ, ವರಿಷ್ಠರ ಸಮೀಕ್ಷಾ ವರದಿಗಳು, ಸಂಘಪರಿವಾರ, ಕಾರ್ಯಕರ್ತರು- ಮುಖಂಡರ ಅಭಿಪ್ರಾಯಗಳನ್ನು ತಾಳೆ ಹಾಕಿ ಪರಿಶೀಲಿಸುವ ಪ್ರಕ್ರಿಯೆ ನಡೆಯಿತು. ಕೆಲ ಸಂಸದರಿಗೆ ಟಿಕೆಟ್‌ ನಿರಾಕರಣೆ ಹಾಗೂ ಟಿಕೆಟ್‌ ನೀಡಿಕೆಯಿಂದಾಗುವ ಸಾಧಕ- ಬಾಧಕಗಳ ಬಗ್ಗೆಯೂ ವಿಸ್ತೃತ ಚರ್ಚೆ ನಡೆಯಿತು. ವರಿಷ್ಠರ ಮಾತಿನ ಧಾಟಿ, ಚರ್ಚೆಯ ಅಂಶಗಳನ್ನು ಆಧರಿಸಿದರೆ ಬಹುತೇಕ ಸಂಸದರಿಗೆ ಮತ್ತೆ ಟಿಕೆಟ್‌ ಸಿಗುವ ನಿರೀಕ್ಷೆ ಇದೆ. ಆದರೆ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ವರಿಷ್ಠರು ಕೆಲ ಬದಲಾವಣೆ ಮಾಡಿ ಕೆಲವರಿಗೆ ಟಿಕೆಟ್‌ ಕೈತಪ್ಪಿದರೂ ಅಚ್ಚರಿ ಇಲ್ಲ ಎಂದು ಮೂಲಗಳು ಹೇಳಿವೆ.

Advertisement

ಅಚ್ಚರಿ: ರಾಜ್ಯ ಕೋರ್‌ ಕಮಿಟಿ ಶಿಫಾರಸು ವರದಿಯೊಂದಿಗೆ ತೆರಳಿದ ರಾಜ್ಯ ನಾಯಕರಿಗೆ ಅಚ್ಚರಿ ಕಾದಿತ್ತು. ವರಿಷ್ಠರ ಬಳಿ ಹಾಲಿ ಸಂಸದರಿಗಿರುವ ಜನಪ್ರಿಯತೆ, ಗೆಲುವಿನ ಸಾಧ್ಯಾಸಾಧ್ಯತೆ ಇತರೆ ಅಂಶಗಳ ಶೇಕಡಾವಾರು ಮಾಹಿತಿಯೊಂದಿಗೆ ಅಮಿತ್‌ ಶಾ ಅವರು ಚರ್ಚೆ ಆರಂಭಿಸುತ್ತಿದ್ದಂತೆ ಕೆಲ ನಾಯಕರು ಗಲಿಬಿಲಿಗೊಂಡರು. ಬಳಿಕ ಎಲ್ಲ 28 ಕ್ಷೇತ್ರಗಳ ಅಭ್ಯರ್ಥಿಗಳ ಕುರಿತೂ ಸುದೀರ್ಘ‌ ಚರ್ಚೆ ನಡೆಯಿತು ಎನ್ನಲಾಗಿದೆ.

ಸಂಭಾವ್ಯ ಅಭ್ಯರ್ಥಿಗಳು
ಹಾಲಿ ಸಂಸದರೆಲ್ಲರಿಗೂ ಮತ್ತೆ ಟಿಕೆಟ್‌ ಸಿಗುವ ನಿರೀಕ್ಷೆ ಇದ್ದರೂ ಕೆಲವರಿಗೆ ಟಿಕೆಟ್‌ ಕೈತಪ್ಪಿದ್ದರೆ ಅಚ್ಚರಿ ಇಲ್ಲ ಎನ್ನಲಾಗಿದೆ. ಉಡುಪಿ- ಚಿಕ್ಕಮಗಳೂರು, ದಕ್ಷಿಣ ಕನ್ನಡ ಕ್ಷೇತ್ರಗಳ ಅಭ್ಯರ್ಥಿಗಳ ಬದಲಾವಣೆ ಬಗ್ಗೆ ಚರ್ಚೆ ನಡೆದಿರುವುದು ಕುತೂಹಲ ಮೂಡಿಸಿದೆ. ಉಳಿದಂತೆ ಬಿಜೆಪಿಯೇತರ ಸಂಸದರಿರುವ ಕ್ಷೇತ್ರಗಳ ಪೈಕಿ ಚಿಕ್ಕೋಡಿಯಿಂದ ಅಣ್ಣಾ ಸಾಹೇಬ್‌ ಜೊಲ್ಲೆ, ರಾಯಚೂರಿನಿಂದ ಅಮರೇಶ್‌ ನಾಯಕ್‌, ಬಳ್ಳಾರಿಯಿಂದ ದೇವೇಂದ್ರಪ್ಪ, ಚಿತ್ರದುರ್ಗದಿಂದ ಎ.ನಾರಾಯಣಸ್ವಾಮಿ, ತುಮಕೂರಿನಿಂದ ಬಸವರಾಜು, ಚಿಕ್ಕಬಳ್ಳಾಪುರದಿಂದ ಬಿ.ಎನ್‌.ಬಚ್ಚೇಗೌಡ, ಕೋಲಾರದಿಂದ ಚಲವಾದಿ ನಾರಾಯಣಸ್ವಾಮಿ, ಕಲಬುರಗಿ ಕ್ಷೇತ್ರದಿಂದ ಡಾ.ಉಮೇಶ್‌ ಜಾಧವ್‌, ಚಾಮರಾಜನಗರ ಕ್ಷೇತ್ರದಿಂದ ವಿ.ಶ್ರೀನಿವಾಸ ಪ್ರಸಾದ್‌, ಹಾಸನದಿಂದ ಎ.ಮಂಜು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಸಿ.ಪಿ.ಯೋಗೇಶ್ವರಿ ಪುತ್ರ ನಿಶಾ ಅವರು ಸ್ಪರ್ಧಿಸುವುದು ಬಹುತೇಕ ಖಚಿತ. ಅಂತಿಮ ಕ್ಷಣದಲ್ಲಿ ಬದಲಾವಣೆಯಾದರೂ ಅಚ್ಚರಿ ಇಲ್ಲ ಎನ್ನಲಾಗಿದೆ.

ಕಾದು ನೋಡುವ ತಂತ್ರ
ಮಂಡ್ಯ ಲೋಕಸಭಾ ಕ್ಷೇತ್ರ ಕುರಿತು ಗಂಭೀರ ಚರ್ಚೆ ನಡೆಯಿತು. ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಕೆಲ ನಾಯಕರು ಪ್ರಸ್ತಾಪಿಸಿದರೆ ಇನ್ನೂ ಕೆಲವರು ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಬೆಂಬಲಿಸುವುದು ಸೂಕ್ತ ಎಂಬ ಸಲಹೆಯನ್ನೂ ನೀಡಿದರು. ಕಾದು ನೋಡುವ ತಂತ್ರದ ಮೂಲಕ ಅಂತಿಮವಾಗಿ ವರಿಷ್ಠರ ಸೂಚನೆಯಂತೆ ಮುಂದುವರಿಯಲು ನಿರ್ಧರಿಸಲಾಯಿತು. ರಾಮನಗರ ವಿಧಾನಸಭೆ ಉಪಚುನಾವಣೆಯಲ್ಲಿ ಅಂತಿಮ ಹಂತದಲ್ಲಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದ ಕಹಿ ಘಟನೆ ಹಿನ್ನೆಲೆಯಲ್ಲಿ ಈ ಬಾರಿ ಎಚ್ಚರಿಕೆಯ ಹೆಜ್ಜೆ ಇಡಲಾಗುತ್ತಿದೆ ಎಂದು ಹೇಳಲಾಗಿ¨

ಇಂದು ಅಥವಾ ನಾಳೆ ಪ್ರಕಟ
ಕರ್ನಾಟಕದ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಗಿದಿದ್ದರೂ ದೇಶಾದ್ಯಂತ ಮೊದಲ ಮೂರು ಸುತ್ತಿನಲ್ಲಿ ಮತದಾನ ನಡೆಯುವ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಏಕಕಾಲಕ್ಕೆ ಬಿಡುಗಡೆ ಮಾಡಲು ಬಿಜೆಪಿ ವರಿಷ್ಠರು ಚಿಂತಿಸಿದ್ದಾರೆ. ಹೋಳಿ ಹಬ್ಬವು ಉತ್ತರ ಭಾರತದಲ್ಲಿ ಪ್ರಮುಖ ಆಚರಣೆಯಾಗಿರುವ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಬಹುದು. ಆ ಮೂಲಕ ಹಬ್ಬದ ಸಂಭ್ರಮ ಹೆಚ್ಚಿಸಬಹುದು. ಇಲ್ಲವೇ ಹಬ್ಬ ಕಳೆದ ಬಳಿಕ ಶುಕ್ರವಾರ ಬೆಳಗ್ಗೆ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಯೂ ಇದೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next