Advertisement

India: ಕ್ಯಾನ್ಸರ್‌ ಕಾಯಿಲೆ; ನಿರಂತರ ಜಾಗೃತಿ ಅಗತ್ಯ

12:17 AM Oct 16, 2024 | Team Udayavani |

ದೇಶದಲ್ಲಿ ಕ್ಯಾನ್ಸರ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿರುವುದನ್ನು ಈಗ ಮತ್ತೊಂದು ಅಧ್ಯಯನ ವರದಿ ದೃಢಪಡಿಸಿದೆ. ಪುರುಷರಲ್ಲಿ ಬಾಯಿಯ ಕ್ಯಾನ್ಸರ್‌ ಮತ್ತು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ ಪ್ರಕರಣಗಳು ಅಧಿಕವಾಗಿವೆ ಎಂದು ಇ ಕ್ಯಾನ್ಸರ್‌ ಜರ್ನಲ್‌ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

Advertisement

ಮಾರಣಾಂತಿಕ ಕ್ಯಾನ್ಸರ್‌ ಕಾಯಿಲೆ ವಿರುದ್ಧ ವಿಶ್ವದ ಬಡ ರಾಷ್ಟ್ರಗಳು ಸೆಣಸಾಟ ನಡೆಸುತ್ತಲೇ ಬಂದಿದ್ದು, ಭಾರತದ ಪರಿಸ್ಥಿತಿ ದಕ್ಷಿಣ ಆಫ್ರಿಕಾ ರಾಷ್ಟ್ರಗಳಿಗಿಂತ ಭಿನ್ನವಾಗಿಲ್ಲ ಎಂದು ವರದಿಯಲ್ಲಿ ಬೆಟ್ಟು ಮಾಡಲಾಗಿದ್ದು ಇದು ನಿಜಕ್ಕೂ ಆತಂಕಕಾರಿ ವಿಷಯವೇ.

ಬ್ರಿಕ್ಸ್‌ ರಾಷ್ಟ್ರಗಳಲ್ಲಿ ದಾಖಲಾಗುತ್ತಿರುವ ಕ್ಯಾನ್ಸರ್‌ ಪ್ರಕರಣಗಳ ತುಲನಾತ್ಮಕ ಅಧ್ಯಯನ ನಡೆಸಿ ಈ ವರದಿಯನ್ನು ಸಿದ್ಧಪಡಿಸಲಾಗಿದ್ದು, ಮುಂದಿನ ಎರಡು ದಶಕ ಗಳ ಅವಧಿಯಲ್ಲಿ ಭಾರತದಲ್ಲಿ ಕ್ಯಾನ್ಸರ್‌ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಕಾಣಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಇನ್ನು ಕ್ಯಾನ್ಸರ್‌ನಿಂದ ದೇಶದಲ್ಲಿ ಸಾವಿಗೀಡಾಗುತ್ತಿರುವವರಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದ್ದಾಗಿದೆ ಎಂಬ ಅಂಶವನ್ನೂ ಈ ಅಧ್ಯಯನ ವರದಿ ಯಲ್ಲಿ ಉಲ್ಲೇಖೀಸಲಾಗಿದೆ. ಭವಿಷ್ಯದಲ್ಲಿ ದೇಶದ ಒಟ್ಟಾರೆ ಆರೋಗ್ಯ ವ್ಯವಸ್ಥೆಗೆ ಕ್ಯಾನ್ಸರ್‌ ಕಾಯಿಲೆ ಬಲು ದೊಡ್ಡ ಸವಾಲಾಗಲಿದೆ ಎಂದೂ ವರದಿ ಕಳವಳ ವ್ಯಕ್ತಪಡಿಸಿದೆ.

ಈ ಅಧ್ಯಯನ ವರದಿಯನ್ನು ಸರಕಾರ ಮತ್ತು ಸಮಾಜ ಗಂಭೀರವಾಗಿ ಪರಿಗಣಿಸುವ ತುರ್ತು ಅಗತ್ಯವಿದೆ. ಅಂಕಿಅಂಶಗಳೇನೇ ಇರಲಿ, ಆದರೆ ವರದಿ ಯಲ್ಲಿ ಪ್ರಸ್ತಾವಿಸಲಾಗಿರುವ ವಿಷಯಗಳು, ಕ್ಯಾನ್ಸರ್‌ಗೆ ಕಾರಣವಾಗುತ್ತಿರುವ ಅಂಶಗಳು, ಚಿಕಿತ್ಸೆ ಮತ್ತು ಉಪಶಮನ ವಿಧಾನ, ಔಷಧೋಪಚಾರ ಈ ಎಲ್ಲ ಅಂಶಗಳತ್ತ ಆರೋಗ್ಯ ಇಲಾಖೆ ತುರ್ತು ಗಮನ ಹರಿಸಬೇಕು.
ಬಾಯಿ ಮತ್ತು ಸಂಬಂಧಿತ ಅಂಗಾಂಗಗಳ ಕ್ಯಾನ್ಸರ್‌ಗೆ ಧೂಮಪಾನ ಮತ್ತು ಹೊಗೆ ರಹಿತ ತಂಬಾಕು ಪದಾರ್ಥಗಳ ಸೇವನೆ ಮುಖ್ಯ ಕಾರಣ. ಹೆಚ್ಚಿನ ಸಂಖ್ಯೆಯ ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ಬಾಧಿತರಾಗುತ್ತಿದ್ದರೆ ಗರ್ಭ ಕಂಠ ಕ್ಯಾನ್ಸರ್‌ ಕೂಡ ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತಿದೆ. ಕ್ಯಾನ್ಸರ್‌ ಕಾಯಿಲೆಯ ನಿಯಂ ತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಂಟಿಯಾಗಿ ಶ್ರಮಿಸುತ್ತಿದ್ದರೂ ನಿರೀಕ್ಷಿತ ಫ‌ಲಿತಾಂಶ ಲಭಿಸಿಲ್ಲ.

ಕೇಂದ್ರ ಸರಕಾರ ಕಳೆದ ಕೆಲವು ವರ್ಷಗಳಿಂದ ಕ್ಯಾನ್ಸರ್‌ ಔಷಧಗಳ ಬೆಲೆಯಲ್ಲಿ ಇಳಿಕೆ ಮಾಡುವ ಮೂಲಕ ಜನಸಾಮಾನ್ಯರಿಗೂ ಈ ಔಷಧಗಳು ಅಗ್ಗದ ಬೆಲೆಯಲ್ಲಿ ಲಭಿಸಲು ಕ್ರಮ ಕೈಗೊಂಡಿದೆಯಾದರೂ ದೇಶದ ಜನತೆಯ ಒಟ್ಟಾರೆ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿದರೆ ಈ ಔಷಧಗಳು, ಚಿಕಿತ್ಸಾ ವೆಚ್ಚ, ಉಪಶಮನ ಚಿಕಿತ್ಸೆ ಇವೆಲ್ಲವೂ ಇಂದಿಗೂ ಜನಸಾಮಾನ್ಯರ ಪಾಲಿಗೆ ಕೈಗೆಟುಕುತ್ತಿಲ್ಲ. ಇದೇ ವೇಳೆ ಕ್ಯಾನ್ಸರ್‌ ಕಾಯಿಲೆಯ ಬಗೆಗೆ ಜನಸಾಮಾನ್ಯರಲ್ಲಿ ಇನ್ನೂ ಸಾಕಷ್ಟು ಜಾಗೃತಿ ಮೂಡದಿರುವುದು ಕೂಡ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ಕ್ಯಾನ್ಸರ್‌ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಿರಂತರ ವಾಗಿ ನಡೆಯಬೇಕು. ಕ್ಯಾನ್ಸರ್‌ ಕಾಯಿಲೆಯ ಬಗೆಗೆ ಜನರಲ್ಲಿ ಅರಿವು ಮೂಡಿ ದಾಗ ಕೆಲವೊಂದು ಚಟದಿಂದ ಅವರು ತನ್ನಿಂತಾನೆ ದೂರ ಸರಿಯಲು ಸಾಧ್ಯ. ಜತೆಯಲ್ಲಿ ಕ್ಯಾನ್ಸರ್‌ನಿಂದ ಗುಣಮುಖರಾದವರಲ್ಲಿ ಕಾಯಿಲೆ ಮರುಕಳಿಸದಂತೆ ಹೆಚ್ಚಿನ ಕಾಳಜಿ ವಹಿಸಬೇಕು.

Advertisement

ಈ ಎಲ್ಲ ವಿಷಯಗಳತ್ತ ಸರಕಾರ ಆದ್ಯತೆಯ ಮೇಲೆ ಲಕ್ಷ್ಯ ಹರಿಸಿ, ಈ ಸಮಸ್ಯೆ, ಲೋಪದೋಷಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು. ಕ್ಯಾನ್ಸರ್‌ಗೆ ಪರಿಣಾಮಕಾರಿ ಔಷಧ, ಚಿಕಿತ್ಸಾ ವಿಧಾನಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ, ಅಧ್ಯಯನ ನಡೆಸುವ ಅಗತ್ಯವಿದೆ. ಇದಕ್ಕೆ ಸರಕಾರದಿಂದ ಹೆಚ್ಚಿನ ಉತ್ತೇಜನ ಲಭಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next