Advertisement

ದಕ್ಷತೆ ಹೆಚ್ಚಳಕ್ಕೆ ಶಿಬಿರಗಳು ಸಹಕಾರಿ

05:51 AM Feb 10, 2019 | |

ದಾವಣಗೆರೆ: ಸಹಕಾರ ಕ್ಷೇತ್ರದಲ್ಲಿ ಗಣನೀಯ ಬದಲಾವಣೆಗಳಾಗುತ್ತಿವೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಂಡಳ ನಿರ್ದೇಶಕ ಎಸ್‌.ಆರ್‌. ಗಿರೀಶ್‌ ಹೇಳಿದರು.

Advertisement

ಶಾಮನೂರು ರಸ್ತೆಯ ಬಿಐಇಟಿ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ ಸೆಮಿನಾರ್‌ ಹಾಲ್‌ನಲ್ಲಿ ಶನಿವಾರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಜಿಲ್ಲಾ ಸಹಕಾರ ಯೂನಿಯನ್‌, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌, ಜಿಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಮತ್ತು ಪಟ್ಟಣ ಸಹಕಾರ ಬ್ಯಾಂಕುಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಧಾನ ವ್ಯವಸ್ಥಾಪಕರು, ವ್ಯವಸ್ಥಾಪಕರು ಮತ್ತು ಅಧಿಕಾರಿ ವರ್ಗದವರಿಗೆ ಹಮ್ಮಿಕೊಂಡಿದ್ದ ಒಂದು ದಿನದ ರಾಜ್ಯ ಮಟ್ಟದ ವಿಶೇಷ ಕಾರ್ಯದಕ್ಷತೆ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಮಹಾಮಂಡಳವು ಪ್ರತಿ ವರ್ಷವೂ ಕಂಪ್ಯೂಟರೀಕರಣಗೊಳ್ಳುತ್ತಿದೆ. ಇಷ್ಟಾದರೂ ಸಹ ಮೋಸ ಮಾಡುವ ಜನರು ಇದ್ದಾರೆ. ಈ ಮೋಸದಿಂದ ನಾವು ಹೇಗೆ ತಪ್ಪಿಸಿಕೊಳ್ಳಬೇಕು, ಹೊಸ ಕಾನೂನು ತಿದ್ದುಪಡಿಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬುದರ ಮಾಹಿತಿಗೆ ಇಂತಹ ತರಬೇತಿ ಶಿಬಿರಗಳು ಸಹಕಾರಿ ಎಂದರು.

ಸಹಕಾರ ಕ್ಷೇತ್ರದಿಂದ ದೇಶದ ಪ್ರಗತಿ ಸಾಧ್ಯ ಎಂದು ಈ ಹಿಂದೆ ಪ್ರಧಾನಮಂತ್ರಿ ಜವಾಹರ್‌ಲಾಲ್‌ ನೆಹರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಹೆಚ್ಚಿನ ಒತ್ತು ಕೊಟ್ಟು ಶ್ರಮ, ಶ್ರದ್ಧೆಯಿಂದ ಸಹಕಾರ ಮಹಾಮಂಡಳವನ್ನು ಬೆಳೆಸಬೇಕಾಗಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳಿಗೆ ಹೈಟೆಕ್‌ ತರಬೇತಿ ನೀಡಲಾಗುವುದು ಎಂದು ಹೇಳಿದರು.

ಮಹಾಮಂಡಳವು ಬ್ಯಾಂಕ್‌ನಂತೆ ಕಾರ್ಯನಿರ್ವಹಿಸುವುದು ಬಿಟ್ಟರೆ ಬೇರೆ ಏನೂ ಮಾಡುತ್ತಿಲ್ಲ ಎಂದು ಕೆಲವೆಡೆ ಹೇಳಲಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳು, ತರಕಾರಿ ಮಾರಾಟಗಾರರು ಹೊರಗಡೆ 10 ರಿಂದ 15 ಸಾವಿರಕ್ಕೆ ಶೇ. 10ರಷ್ಟು ಬಡ್ಡಿ ಕಟ್ಟಬೇಕಾಗುತ್ತದೆ. ಬಡ್ಡಿಯಲ್ಲಿಯೇ ಗಳಿಕೆ ಹೋಗುತ್ತದೆ. ಅಂತಹವರಿಗೆ ನಮ್ಮ ಸಹಕಾರ ಬ್ಯಾಂಕ್‌ನಿಂದ ಯಾವುದೇ ಅಡಮಾನವಿಲ್ಲದೆ 10ರಿಂದ 15 ಸಾವಿರ ರೂ. ಸಾಲ ನೀಡಲಾಗುತ್ತಿದೆ. ಅಲ್ಲದೇ, ಪ್ರಸ್ತುತ ಹಾಲು ಉತ್ಪಾದಕರ ಸಹಕಾರ ಸಂಘ ತೆರೆದರೆ ನಾಲ್ಕು ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಹೇಳಿದರು.

Advertisement

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ನಿವೃತ್ತ ಎಜಿಎಂ ಕೆ.ಎಸ್‌. ಮಹದೇವಸ್ವಾಮಿ ಉಪನ್ಯಾಸ ನೀಡಿ, ಯೂನಿಯನ್‌ ಬ್ಯಾಂಕ್‌ವೊಂದರಲ್ಲಿ ಸಿಬ್ಬಂದಿ ಎಫ್‌ಡಿ ಪಾಸ್‌ವರ್ಡ್‌ ಪಡೆದು ಒಂದು ವರ್ಷದಲ್ಲಿ ಒಂದೊಂದು ಬಿಲ್‌ನ್ನು ಎರಡು ಬಾರಿ ಪಡೆಯುವ ಮೂಲಕ ಸುಮಾರು 92 ಲಕ್ಷ ರೂ. ವಂಚಿಸಿದ್ದರು. ಆದ್ದರಿಂದ ಪ್ರತಿಯೊಬ್ಬರು ತಮ್ಮ ಪಾಸ್‌ವರ್ಡ್‌ಗಳನ್ನು 10 ರಿಂದ 15 ದಿನಗಳಿಗೊಮ್ಮೆ ಬದಲಾವಣೆ ಮಾಡಬೇಕು. ಜೊತೆಗೆ ಯಾರಿಗೂ ಪಾಸ್‌ವರ್ಡ್‌ ನೀಡಬಾರದು. ಕೆಲಸ ಕಾರ್ಯಗಳಲ್ಲಿ ಬ್ಯಾಂಕ್‌ ವ್ಯವಸ್ಥಾಪಕರು ಎಚ್ಚರಿಕೆಯಿಂದ ಇರಬೇಕು. ಸಿಬ್ಬಂದಿ ಒಂದೇ ಸ್ಥಳದಲ್ಲಿ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸದಂತೆ ನೋಡಿಕೊಳ್ಳಬೇಕು. ಆಗ ಯಾವುದೇ ಅನಾಹುತಗಳು ಆಗುವುದಿಲ್ಲ ಎಂದು ನುಡಿದರು.

ಜಿಲ್ಲಾ ಸಹಕಾರ ಯೂನಿಯನ್‌ ನಿರ್ದೇಶಕ ಸಿ. ಚಂದ್ರಶೇಖರ್‌ ಮಾತನಾಡಿದರು. ಜಿಲ್ಲಾ ಸಹಕಾರ ಯೂನಿಯನ್‌ನ ಯು.ಜಿ. ಶಿವಕುಮಾರ್‌, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ನಿರ್ದೇಶಕ ಬಿ.ವಿ. ಚಂದ್ರಶೇಖರ್‌, ಜಿಲ್ಲಾ ಸಹಕಾರ ಯೂನಿಯನ್‌ ನಿರ್ದೇಶಕರಾದ ಕೆ. ಉಷಾ, ಎ.ಎಸ್‌. ವೀಣಾ, ಸಿ. ಕವಿತಾ, ಕೆ.ಎಚ್. ಸಂತೋಷ್‌ ಕುಮಾರ್‌, ಕೆ.ಎಂ. ಜಗದೀಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next