Advertisement

ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಲು ಕರೆ

01:07 PM Apr 21, 2017 | Team Udayavani |

ಹೊನ್ನಾಳಿ: ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮಹತ್ತರವಾದದ್ದು ಎಂದು ಹಿರೇಕಲ್ಮಠದ ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಇಲ್ಲಿನ ಹಿರೇಕಲ್ಮಠದ ಆವರಣದಲ್ಲಿ ನಡೆದ ಸಂಸ್ಕೃತಿ-ಸಂಸ್ಕಾರ ತರಬೇತಿ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. 

Advertisement

ಯುವಜನತೆ ಇತ್ತೀಚೆಗೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದು, ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳಿಂದ ವಿಮುಖರಾಗುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳ ಬೆಳವಣಿಗೆಗೆ  ಪೂರಕವಾದ ವಾತಾವರಣ ನಿರ್ಮಾಣ ಮಾಡದೇ ತಮ್ಮ ಕೆಲಸದ ಒತ್ತಡದ ಮಧ್ಯೆ ಕಾಲಹರಣ ಮಾಡುತ್ತಾ ತಮ್ಮ ಮಕ್ಕಳ ಈ ಸ್ಥಿತಿಗೆ ಅನಗತ್ಯವಾಗಿ ಸಮಾಜವನ್ನು ದೂರುತ್ತಿದ್ದಾರೆ ಎಂದರು.  

ಮಹಿಳೆಯರು ಧಾರಾವಾಹಿಗಳು ಸೇರಿದಂತೆ ದೃಶ್ಯ ಮಾಧ್ಯಮಗಳ ಪ್ರಭಾವಕ್ಕೆ ಒಳಗಾಗಿ ತಮ್ಮ ಮಕ್ಕಳ ಒಳಿತು-ಕೆಡುಕುಗಳ ಬಗ್ಗೆ ಚಿಂತಿಸದೇ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಇದು ಸಲ್ಲದು. ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಮಕ್ಕಳ ಶ್ರೇಯೋಭಿವೃದ್ಧಿಗೆ ಎಲ್ಲರೂ ಮುಂದಾಗಬೇಕು.

ಮಕ್ಕಳ ಮನಸ್ಸು ಚಂಚಲವಾಗಿರುತ್ತದೆ. ಅವರನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಬೇಕು ಎಂದರು. ಮಕ್ಕಳನ್ನು ಸಂಸ್ಕಾರವಂತರನ್ನಾಗಿಸಲು ಪ್ರತಿ ಭಾನುವಾರ ಸಂಜೆ ವಿವಿಧ ಉಪನ್ಯಾಸಕರನ್ನು ಕರೆಸಿ ಮಾರ್ಗದರ್ಶನ ನೀಡಲಾಗುವುದು. ದಾರಿ ತಪ್ಪುತ್ತಿರುವ ಯುವಸಮೂಹವನ್ನು ಬದುಕಿನಲ್ಲಿ ಸರಿದಾರಿಗೆ ತರುವ ಉದ್ದೇಶದಿಂದ ಮಠದ ವತಿಯಿಂದ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.

ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಯುವಕರು ತಮ್ಮ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಲು ಸೂಕ್ತ  ತರಬೇತಿ ನೀಡಲಾಗುವುದು. ಪ್ರತಿ ದಿನ ಬೆಳಿಗ್ಗೆ 6ರಿಂದ 7ರವರೆಗೆ ಮತ್ತು ಸಂಜೆ 5.30ರಿಂದ 6.30ರವರೆಗೆ ಉಚಿತ ಯೋಗಾಸನ ತರಬೇತಿ ಶಿಬಿರ ಆಯೋಜಿಸಲಾಗುವುದು. 

Advertisement

ಎಲ್ಲರೂ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ನಿವೃತ್ತ ಪಾಂಶುಪಾಲ ಪ್ರೊ| ಆರ್‌ .ಸಿ. ದೊಡ್ಡಗೌಡರ್‌, ರಂಗಕರ್ಮಿ ಪ್ರೇಮ್‌ಕುಮಾರ್‌ ಭಂಡಿಗಡಿ ಮಾತನಾಡಿದರು.  ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಹೊಸಕೇರಿ ಸುರೇಶ್‌, ಉದ್ಯಮಿ ನ್ಯಾಮತಿಯ ಹವಳದ ಲಿಂಗರಾಜ್‌,

ನಿವೃತ್ತ ಉಪನ್ಯಾಸಕ ಎಸ್‌.ಎ. ಹುಡೇದ್‌, ಪಪಂ ಸದಸ್ಯ ಸರಳಿನಮನೆ ಮಂಜುನಾಥ್‌, ಬಿ.ಎಲ್‌. ಕುಮಾರಸ್ವಾಮಿ, ರಾಜು, ಅನ್ನದಾನಯ್ಯ ಶಾಸ್ತ್ರೀ, ಸುರೇಶ್‌ ಕುಂಬಾರ್‌, ಜಗದೀಶ್‌ಆಚಾರ್‌ ಉಪಸ್ಥಿತರಿದ್ದರು. ಬಲಮುರಿ ಗ್ರಾಮದ ಬಸವೇಶ್ವರ ಭಜನಾ ಮಂಡಳಿಯ ಕಲಾವಿದರು ಮಕ್ಕಳಿಗೆ ಭಜನಾ ತರಬೇತಿ ನೀಡಿದರು.  

Advertisement

Udayavani is now on Telegram. Click here to join our channel and stay updated with the latest news.

Next