Advertisement

ಸಂಪುಟ ವಿಸ್ತರಣೆ: ದೆಹಲಿಗೆ ಶಿಫ್ಟ್

06:27 AM Dec 27, 2018 | |

ಬೆಂಗಳೂರು: ಸಂಪುಟ ವಿಸ್ತರಣೆಯ ಅಸಮಾಧಾನ ಇನ್ನೂ ಬೂದಿ ಮುಚ್ಚಿದ ಕೆಂಡದಂತಿರುವಾಗಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಖಾತೆ ಹಂಚಿಕೆ ಬಿಕ್ಕಟ್ಟು ತೀವ್ರಗೊಂಡಿದೆ. ಬುಧವಾರ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ನೇತೃತ್ವದಲ್ಲಿ ನಡೆದ
ಸಭೆ ವಿಫ‌ಲವಾಗಿದ್ದು, ಖಾತೆ ಹಂಚಿಕೆ ಹಗ್ಗ ಜಗ್ಗಾಟ “ಚೆಂಡು’ ಹೈಕಮಾಂಡ್‌ ಅಂಗಳಕ್ಕೆ ಹೋಗಿದೆ. ಪ್ರಮುಖವಾಗಿ ಹೊಸದಾಗಿ ಸಂಪುಟ ಸೇರ್ಪಡೆಯಾಗಿರುವ ಹಿರಿಯ ಸಚಿವರಾದ ಎಂ.ಬಿ.ಪಾಟೀಲ್‌ ಜಲ ಸಂಪನ್ಮೂಲ ಅಥವಾ ಗೃಹ ಖಾತೆ ಹಾಗೂ ಸತೀಶ್‌ ಜಾರಕಿಹೊಳಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗಳಿಗೆ ಪಟ್ಟು ಹಿಡಿದಿರುವುದೇ ಬಿಕ್ಕಟ್ಟಿಗೆ ಕಾರಣವಾಗಿದೆ.

Advertisement

ಖಾತೆ ಹಂಚಿಕೆ ಕುರಿತು ಸಹಮತ ಏರ್ಪಡದ ಹಿನ್ನೆಲೆಯಲ್ಲಿ ಎಲ್ಲ ನಾಯಕರ ಅಭಿಪ್ರಾಯದೊಂದಿಗೆ ಕೆ.ಸಿ.ವೇಣುಗೋಪಾಲ್‌ ದೆಹಲಿಗೆ
ತೆರಳಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯೇ ಇತ್ಯರ್ಥಪಡಿಸಬೇಕಾಗಿದೆ. ಅಲ್ಲಿಂದ ಸೂಚನೆ ಬಂದ ನಂತರವಷ್ಟೇ ಖಾತೆ ಹಂಚಿಕೆ ಪಟ್ಟಿ ರಾಜಭವನಕ್ಕೆ ಹೋಗಲಿದೆ. ಬಹುತೇಕ ಗುರುವಾರ ಖಾತೆ ಹಂಚಿಕೆ ಅಧಿಕೃತ ಘೋಷಣೆಯಾಗುವ ಸಾಧ್ಯತೆಯಿದೆ.

ಸಿದ್ದು-ಪರಂ ಚಕಮಕಿ?: ಈ ನಡುವೆ ಗೃಹ ಖಾತೆ ಬಿಟ್ಟುಕೊಡುವ ಸಂಬಂಧ ಉಪ ಮುಖ್ಯಮಂತ್ರಿ ಪರಮೇಶ್ವರ್‌ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಮಾತಿನ ಚಕಮಕಿಯೇ ನಡಿದಿದೆ ಎಂದು ಹೇಳಲಾಗುತ್ತಿದೆ. ಪರಮೇಶ್ವರ್‌ ಅವರ ಬಳಿ ಬೆಂಗಳೂರು ನಗರಾಭಿವೃದ್ಧಿ, ಗೃಹ , ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಇದ್ದು, ಗೃಹ ಅಥವಾ ಬೆಂಗಳೂರು ನಗರಾಭಿವೃದ್ಧಿ ಖಾತೆಯಲ್ಲಿ ಒಂದನ್ನು ಬಿಟ್ಟು ಕೊಡುವಂತೆ ಸಿದ್ದರಾಮಯ್ಯ ಸೂಚಿಸಿದರು. ಆದರೆ ಅವರ ಬೇಡಿಕೆಗೆ ಸ್ವಲ್ಪ ಖಾರವಾಗಿಯೇ ಪರಮೇಶ್ವರ್‌ ಪ್ರತಿಕ್ರಿಯಿಸಿದ್ದಾರೆ. ಸರ್ಕಾರ ರಚನೆಯ ಸಂದರ್ಭದಲ್ಲಿಯೇ ಉಪಮುಖ್ಯಮಂತ್ರಿಗೆ ಎರಡು ಖಾತೆ ನೀಡಬೇಕು ಎಂದು
ನಿರ್ಧರಿಸಲಾಗಿದೆ. ನಾನೂ ಎಂಟು ವರ್ಷ ರಾಜ್ಯಾಧ್ಯಕ್ಷನಾಗಿ ಪಕ್ಷ ಸಂಘಟನೆ ಮಾಡಿದ್ದೇನೆ. ಪಕ್ಷವನ್ನು ಅಧಿಕಾರಕ್ಕೆ ತಂದಾಗಲೂ ನನ್ನನ್ನು ಒಂದೂವರೆ ವರ್ಷ ಸಂಪುಟದಿಂದ ಹೊರಗಿಟ್ಟಿದ್ದೀರಿ, ಈಗ ಸರ್ಕಾರ ಬಂದು ಆರು ತಿಂಗಳಾಗಿಲ್ಲ. ಖಾತೆ ಬಿಟ್ಟುಕೊಡಿ ಎಂದರೆ ಹೇಗೆ? ಎಲ್ಲವೂ ನೀವೇ ಹೇಳಿದಂತೆ ನಡೆಯಬೇಕೆಂದರೆ ಹೇಗೆ? ಎಂದು ಖಾರವಾಗಿಯೇ ಆಕ್ರೋಶವನ್ನು ಹೊರ ಹಾಕಿದ್ದಾರೆ ಎಂದು
ತಿಳಿದು ಬಂದಿದೆ. ಪರಮೇಶ್ವರ್‌ ಅವರ ಮಾತಿನ ವರಸೆಗೆ ವೇಣುಗೋಪಾಲ್‌ ಕೂಡ ಕೆಲ ಕ್ಷಣ ಆಶ್ಚರ್ಯ ಚಕಿತರಾಗಿದ್ದರು ಎನ್ನಲಾಗಿದೆ.

ಗೃಹ ಖಾತೆ ಇಟ್ಟುಕೊಳ್ಳುವುದಾದರೆ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನಾದರೂ ಬಿಟ್ಟು ಕೊಡಬೇಕು. ಅದರ ಬದಲು ಬೇರೆ ಯಾವುದಾದರೂ ಸಣ್ಣ ಖಾತೆ ತೆಗೆದುಕೊಳ್ಳಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು ಎನ್ನಲಾಗಿದೆ. ಆದರೆ, ಪರಮೇಶ್ವರ್‌
ಎರಡೂ ಪ್ರಮುಖ ಖಾತೆಗಳನ್ನು ಬಿಟ್ಟುಕೊಡಲು ನಿರಾಕರಿಸಿದರು ಎಂದು ತಿಳಿದು ಬಂದಿದೆ.

ಇಂಧನಕ್ಕೆ ಡಿಕೆಶಿ ಬೇಡಿಕೆ: ಜಲ ಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಹೊಂದಿರುವ ಡಿ.ಕೆ.ಶಿವಕುಮಾರ್‌ ತಾವು ಜಲ ಸಂಪನ್ಮೂಲ ಖಾತೆ ಬಿಟ್ಟುಕೊಡಬೇಕಾದರೆ ಜೆಡಿಎಸ್‌ ಬಳಿ ಇರುವ ಇಂಧನ ಖಾತೆಯನ್ನು ತಮಗೆ ಕೊಡಿಸುವಂತೆ ಕೇಳಿಕೊಂಡಿದ್ದಾರೆ
ಎನ್ನಲಾಗಿದೆ. ಈ ಕುರಿತು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿದು ಬಂದಿದೆ. 

Advertisement

ಆರ್‌ಡಿಪಿಆರ್‌ಗೆ ಸತೀಶ್‌ ಪಟ್ಟು: ಸತೀಶ್‌ ಜಾಕಿಹೊಳಿ ಕೂಡ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಖಾತೆ ನೀಡುವಂತೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದ್ದು, ಆದರೆ, ಈ ಖಾತೆ ಹೊಂದಿರುವ ಕೃಷ್ಣ ಬೈರೇಗೌಡ ಬಿಟ್ಟುಕೊಡಲು ನಿರಾಕರಿಸಿದ್ದಾರೆ ಎನ್ನಲಾಗಿದ್ದು, ತಮ್ಮ ಬಳಿ ಹೆಚ್ಚುವರಿಯಾಗಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಬಿಟ್ಟುಕೊಡುವುದಾಗಿ ಹೇಳಿದ್ದಾರೆ
ಎಂದು ಹೇಳಲಾಗಿದೆ. ಅಲ್ಪ ಸಂಖ್ಯಾತ ಸಮುದಾಯದ ಸಚಿವ ರಹೀಂ ಖಾನ್‌ಗೆ ವಕ್ಫ್ ಅಥವಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ
ನೀಡುವಂತೆ ಈಶ್ವರ್‌ ಖಂಡ್ರೆ ಪಟ್ಟು ಹಿಡಿದಿದ್ದರು. ಆದರೆ, ಜಮೀರ್‌ ಅಹಮದ್‌ ಅವರಿಂದ ಆ ಖಾತೆ ಪಡೆಯಲು ವೇಣುಗೋಪಾಲ್‌ ಸಹ ಒಪ್ಪಲಿಲ್ಲ. ಜತೆಗೆ ಜಮೀರ್‌ ಅಹಮದ್‌ ಅವರಿಗೂ ಆ ಖಾತೆ ಬಿಟ್ಟುಕೊಡಲು ಮನಸ್ಸಿಲ್ಲದ ಕಾರಣ ರಹೀಂಖಾನ್‌ಗೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ನೀಡಲು ತೀರ್ಮಾನಿಸಲಾಗಿದೆ. ಎಂ.ಬಿ. ಪಾಟೀಲ್‌ ಹಾಗೂ ಸತೀಶ್‌ ಜಾರಕಿಹೊಳಿ ಪ್ರಮುಖ ಖಾತೆಗಳನ್ನು ನೀಡದಿದ್ದರೆ, ಸಚಿವ ಸ್ಥಾನವೇ ಬೇಡ ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದ್ದು, ಈ ಕಾರಣಕ್ಕಾಗಿಯೇ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರೊಂದಿಗೆ ಚರ್ಚಿಸಿ ಅಂತಿಮಗೊಳಿಸಲು ದೆಹಲಿಗೆ
ತೆರಳಿದ್ದಾರೆ. ಒಂದು ಹಂತದಲ್ಲಿ ಅರಣ್ಯ ಮತ್ತು ಪರಿಸರ ಖಾತೆ ಪಡೆಯಲು ಸತೀಶ್‌ ಜಾರಕಿಹೊಳಿ ಒಪ್ಪಿಗೆ ನೀಡಿದ್ದು ಎಂ.ಬಿ.ಪಾಟೀಲ್‌ ಅವರಿಗೆ ನೀಡಬೇಕಿರುವ ಖಾತೆ ಬಗ್ಗೆ ಮಾತ್ರ ಗೊಂದಲ ಮುಂದುವರಿದಿದೆ ಎಂದು ಹೇಳಲಾಗಿದೆ.

ಸಮಾಧಾನಕ್ಕೆ ರಾಹುಲ್‌ ಯತ್ನ: ಬಂಡಾಯ ಸಾರಿರುವ ರಮೇಶ್‌ ಜಾರಕಿಹೊಳಿ ಅವರನ್ನು ರಾಹುಲ್‌ ಗಾಂಧಿ ದೂರವಾಣಿ ಮೂಲಕ ಸಂಪರ್ಕಿಸಿ, ದುಡುಕಿನ ನಿರ್ಧಾರ ತೆಗೆದುಕೊಳ್ಳದಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ನಿಗಮ-ಮಂಡಳಿನೇಮಕಕ್ಕೆ ಬ್ರೇಕ್‌
ನಿಗಮ- ಮಂಡಳಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ತಮ್ಮ ಜತೆ ಸಮಾಲೋಚನೆ ನಡೆಸದೆ ತೀರ್ಮಾನ ಕೈಗೊಂಡಿರುವ ಬಗ್ಗೆ ಬೇಸರಗೊಂಡಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಕಾಂಗ್ರೆಸ್‌ ನೀಡಿದ್ದ ನಿಗಮ-ಮಂಡಳಿಗಳ ನೇಮಕಾತಿ ಪಟ್ಟಿ ತಡೆಹಿಡಿದಿದ್ದಾರೆ ಎಂದು ತಿಳಿದು ಬಂದಿದೆ. ರೇಷ್ಮೆ ಅಭಿವೃದ್ಧಿ ಮಂಡಳಿ, ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಸೇರಿದಂತೆ ನಾಲ್ಕೈದು ನಿಗಮ ಮಂಡಳಿಗಳು ಜೆಡಿಎಸ್‌ ಸಚಿವರ ಖಾತೆಗಳ ವ್ಯಾಪ್ತಿಗೆ ಬರುತ್ತವೆ. ಅವುಗಳನ್ನು ಕಾಂಗ್ರೆಸ್‌ ಶಾಸಕರಿಗೆ ಹೇಗೆ ನೀಡಲಾಗಿದೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಸಹ ಪ್ರಶ್ನಿಸಿದ್ದಾರೆ. ಹೀಗಾಗಿ, ಪಟ್ಟಿಗೆ ತಡೆ ಹಿಡಿಯಲಾಗಿದೆ ಎಂದು ಹೇಳಲಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಜತೆ ಕುಮಾರಸ್ವಾಮಿ ಸಮಾಲೋಚನೆ ನಂತರವೇ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಹೇಳಲಾಗಿದೆ.

ಖಾತೆ ಹಂಚಿಕೆ ಬಗ್ಗೆ ಚರ್ಚಿಸಿದ್ದೇವೆ. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ರಮೇಶ್‌ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ ಪಕ್ಷದ ಹಿರಿಯ ನಾಯಕರು. ಇಬ್ಬರೂ ಪಕ್ಷ ತೊರೆಯುವುದಿಲ್ಲ.
ಕೆ.ಸಿ.ವೇಣುಗೋಪಾಲ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ

ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್‌ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ವೇಣು ಗೋಪಾಲ್‌ ಖಾತೆಗಳ ಪಟ್ಟಿ ತೆಗೆದುಕೊಂಡು ಹೋಗಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಪಟ್ಟಿ
ಅಂತಿಮಗೊಳಿಸುತ್ತಾರೆ.

 ●ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next