Advertisement

ಕೈನಲ್ಲಿ ಹೆಚ್ಚಿದ ಒಳಬೇಗುದಿ; ಸಿಬಲ್‌ ಬಳಿಕ ಈಗ ಚಿದಂಬರಂ ಟೀಕೆ

12:21 AM Nov 19, 2020 | mahesh |

ಹೊಸದಿಲ್ಲಿ: ಬಿಹಾರ ವಿಧಾನಸಭೆ ಚುನಾವಣೆ ಮತ್ತು ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಉಪಚುನಾವಣೆಗಳ . ಹೀನಾಯ ಸೋಲಿನ ಅನಂತರ ಕಾಂಗ್ರೆಸ್‌ನಲ್ಲಿನ ಒಳಬೇಗುದಿ ಸಿಡಿಯುತ್ತಿದೆ. ಮೊನ್ನೆಯಷ್ಟೇ ಕಪಿಲ್‌ ಸಿಬಲ್‌ ಅವರು ನಾಯಕತ್ವದ ಬಗ್ಗೆ ಬಾಂಬ್‌ ಸಿಡಿಸಿದ್ದು, ಬುಧವಾರ ಪಕ್ಷದ ಹಿರಿಯ ನಾಯಕ ಪಿ.ಚಿದಂಬರಂ
ಕೂಡ ಅದೇ ಧಾಟಿಯಲ್ಲಿ ಮಾತನಾಡಿದ್ದಾರೆ.

Advertisement

ಈ ಮಧ್ಯೆ, ನಾಯಕತ್ವದ ವಿರುದ್ಧ ಮಾತನಾಡಿದ ಕಪಿಲ್‌ ಸಿಬಲ್‌ ವಿರುದ್ಧ ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಸಿಡಿದೆದ್ದಿದ್ದಾರೆ. ಇಂಥ ನಾಯಕರಿಗೆ ಕಾಂಗ್ರೆಸ್‌ ಪಕ್ಷ ಸರಿ ಇಲ್ಲ ಅನ್ನಿಸುತ್ತಿದ್ದರೆ, ಅವರು ಬೇರೊಂದು ಪಕ್ಷ ಕಟ್ಟಬಹುದು ಅಥವಾ ಬೇರೆ ಪಕ್ಷಕ್ಕೆ ಸೇರಬಹುದು ಎಂದು ತಿರುಗೇಟು ನೀಡಿದ್ದಾರೆ.

ಚಿದಂಬರಂ ಹೊಸ ಬಾಂಬ್‌: ಚಿದಂಬರಂ ಅವರು, ನೇರವಾಗಿ ನಾಯಕತ್ವದ ಬಗ್ಗೆ ಏನನ್ನೂ ಮಾತನಾಡಿಲ್ಲ. ಆದರೆ, ಪಕ್ಷದ ಸಂಘಟನೆಯಲ್ಲಿನ ವೈಫ‌ಲ್ಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದಿ ದಿನಪತ್ರಿಕೆ ದೈನಿಕ್‌ ಭಾಸ್ಕರ್‌ಗೆ ಸಂದರ್ಶನ ನೀಡಿರುವ ಅವರು, ಪ್ರಮುಖವಾಗಿ ಎರಡು ಅಂಶಗಳ ಬಗ್ಗೆ ಪ್ರಸ್ತಾವಿಸಿದ್ದಾರೆ. ಅಷ್ಟೇ ಅಲ್ಲ, ಕೊರೊನಾ ವೈರಸ್‌ ಸಮಸ್ಯೆ ಮತ್ತು ಆರ್ಥಿಕ ಕುಸಿತದಂಥ ಮಹತ್ವದ ವಿಚಾರಗಳನ್ನು ಇರಿಸಿಕೊಂಡೂ ಉತ್ತಮ ಸಾಧನೆ ಮಾಡಲಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕರ್ನಾಟಕ, ಗುಜರಾತ್‌, ಮಧ್ಯಪ್ರದೇಶ ಸೇರಿದಂತೆ ಉಪ ಚುನಾವಣೆಗಳಲ್ಲಿ ಪಕ್ಷ ಸೋತಿರುವುದು ಆಘಾತ ತಂದಿದೆ ಎಂದಿದ್ದಾರೆ.

ಬಿಹಾರದಲ್ಲಿ ಸಿಪಿಐಎಂ, ಎಐಎಂಐಎಂ ಪಕ್ಷಗಳು ಉತ್ತಮ ಸಾಧನೆ ಮಾಡಿದವು. ಇದಕ್ಕೆ ಕಾರಣ, ಅವುಗಳ ತಳಮಟ್ಟದ ಸಂಘಟನೆ. ಆದರೆ, ನಾವು ಈ ವಿಚಾರದಲ್ಲಿ ಸೋತಿದ್ದೇವೆ. ಆಡಳಿತ ಪಕ್ಷಕ್ಕಿಂತಲೂ ವಿಪಕ್ಷಗಳೇ ಹೆಚ್ಚು ಮತ ಪಡೆದರೂ, ನಾವು ಗೆಲ್ಲಲಾಗಲಿಲ್ಲ. ಇದಕ್ಕೆ ಕಾರಣ, ನಮ್ಮ ಸಂಘಟನೆಯ ಕೊರತೆ ಎಂದು ಪ್ರತಿಪಾದಿಸಿದ್ದಾರೆ.

ಸಿಬಲ್‌ ವಿರುದ್ಧ ಸಿಡಿದ ಅಧೀರ್‌ ರಂಜನ್‌
ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಗೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆಯಲಿ ಎಂದು ಹೇಳಿದ್ದ ಪಕ್ಷದ ಹಿರಿಯ ನಾಯಕ ಕಪಿಲ್‌ ಸಿಬಲ್‌ ವಿರುದ್ಧ ಕಿಡಿಕಾರಿರುವ ಅಧೀರ್‌ ರಂಜನ್‌ ಚೌಧರಿ, ಪಕ್ಷ ಬಿಟ್ಟು ಹೋಗುವಂತೆ ಸಲಹೆ ನೀಡಿದ್ದಾರೆ. ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರಿಗೆ ಆಪ್ತರು ಎನ್ನಿಸಿಕೊಂಡಿರುವ ಕೆಲವರು ಬಹಿರಂಗವಾಗಿ ನಾಯಕತ್ವದ ವಿರುದ್ಧ ಮಾತನಾಡುತ್ತಿದ್ದಾರೆ. ಇಂಥವರು ನೇರವಾಗಿಯೇ ಈ ಇಬ್ಬರು ನಾಯಕರ ಬಳಿ ಮಾತನಾಡಬಹುದು. ಆದರೆ, ಇದನ್ನು ಬಿಟ್ಟು ಬಹಿರಂಗವಾಗಿ ಮಾತನಾಡಿ ಪಕ್ಷಕ್ಕೆ ಮುಜುಗರ ತರುತ್ತಿದ್ದಾರೆ. ಒಂದು ವೇಳೆ ಈ ನಾಯಕರಿಗೆ ಕಾಂಗ್ರೆಸ್‌ ಸರಿಯಾದ ಪಕ್ಷ ಅಲ್ಲ ಅನ್ನಿಸಿದರೆ, ಪಕ್ಷ ಬಿಟ್ಟು ಹೋಗಬಹುದು, ಇಲ್ಲವೇ ಬೇರೊಂದು ಪಕ್ಷ ಸೇರಬಹುದು ಎಂದು ನೇರವಾಗಿಯೇ ಹೇಳಿದ್ದಾರೆ.

Advertisement

ಮತ್ತಷ್ಟು ದುರ್ಬಲ
ಕರ್ನಾಟಕ, ಉತ್ತರ ಪ್ರದೇಶ, ಗುಜರಾತ್‌ ಮತ್ತು ಮಧ್ಯಪ್ರದೇಶ ರಾಜ್ಯಗಳ ಉಪಚುನಾವಣ ಫ‌ಲಿತಾಂಶ ನನಗೆ ಆಘಾತ ತಂದಿದೆ. ಈ ಫ‌ಲಿತಾಂಶದಿಂದಾಗಿ ನಾವು ಸಂಘಟನಾತ್ಮಕವಾಗಿ ಸಮರ್ಥರೂ ಇಲ್ಲ ಮತ್ತು ದಿನದಿಂದ ದಿನಕ್ಕೆ ದುರ್ಬಲರಾಗುತ್ತಿದ್ದೇವೆ ಎಂಬುದನ್ನು ತೋರಿಸುತ್ತಿದೆ ಎಂದು
ಚಿದಂಬರಂ ಹೇಳಿದ್ದಾರೆ.

45ರಲ್ಲಿ ಸ್ಪರ್ಧೆ ಸಾಕಿತ್ತು
ಬಿಹಾರದಲ್ಲಿ ನಾವು ನಮ್ಮ ಶಕ್ತಿಗಿಂತಲೂ ಹೆಚ್ಚು ಬಲ ಪ್ರದರ್ಶನಕ್ಕೆ ಮುಂದಾದೆವು. ಅಂದರೆ, ನಮ್ಮ ಸಂಘಟನ ಶಕ್ತಿ ಇರುವೆಡೆ ಮಾತ್ರ ಗಮನಹರಿಸಬೇಕಿತ್ತು. ಅಂದರೆ, ಕೇವಲ 45 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೂ ಸಾಕಿತ್ತು. ಆದರೆ, ಕಳೆದ 20 ವರ್ಷಗಳಿಂದ ಬಿಜೆಪಿ ಮತ್ತವರ ಅಂಗಪಕ್ಷಗಳ ವಶದಲ್ಲಿರುವ 25 ಕ್ಷೇತ್ರಗಳಲ್ಲಿ ನಮಗೆ ಟಿಕೆಟ್‌ ನೀಡಲಾಗಿತ್ತು.  ಈ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಕಾಂಗ್ರೆಸ್‌ ಹೇಳಬೇಕಿತ್ತು ಎಂದು ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next