Advertisement

2022ರ ವೇಳೆಗೆ ಎಲ್ಲರಿಗೂ ಸೂರು

11:29 AM Aug 30, 2017 | Team Udayavani |

ಕೆ.ಆರ್‌.ಪುರ: 2022ರ ವೇಳೆಗೆ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸೂರು ಕಲ್ಪಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಹೇಳಿದರು.

Advertisement

ನಗರದ ಐಟಿಐ ಕ್ರೀಡಾಂಗಣದಲ್ಲಿ ಕ್ವಿಟ್‌ ಇಂಡಿಯಾ ಚಳವಳಿಯ 75ನೇ ವಾರ್ಷಿಕೋತ್ಸವದ ಅಂಗವಾಗಿ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯಲ್ಲಿ ಮಾತನಾಡಿ, 2022ರ ವೇಳೆಗೆ ದೇಶದ ಪ್ರತಿಯೊಬ್ಬ ನಾಗರಿಕನೂ ತನ್ನ ಸ್ವಂತ ಸೂರು ಹೊಂದುವ ಮಹತ್ವದ ನಿರ್ಧಾರವನ್ನು ಪ್ರಧಾನಿ ಮೋದಿ ಹೊಂದಿದ್ದಾರೆ ಎಂದರು.

ಕಾರ್ಮಿಕ ಭವಿಷ್ಯ ನಿಧಿಯೂ ಅವರ ಧ್ಯೇಯವನ್ನು ಸಾಕಾರಗೊಳಿಸಲು ಪ್ರತಿಯೊಬ್ಬ ಕಾರ್ಮಿಕನೂ ತನ್ನ ನಿವೃತ್ತಿ ವೇಳೆಗೆ ಸ್ವಂತ ಸೂರು ಹೊಂದಲು ಹಲವು ಸೌಲಭ್ಯಗಳನ್ನು ಉನ್ನತೀಕರಿಸಲಾಗಿದೆ. ಕಾರ್ಮಿಕ ಭವಿಷ್ಯ ನಿಧಿಯೂ ಸಹ ಇದಕ್ಕೆ ಪೂರಕವಾಗಿದೆ, ಕಚೇರಿಗಳನ್ನು ಕಾಗದ ರಹಿತವಾಗಿಸಿ ಆಡಳಿತದಲ್ಲಿ ಪೂರ್ಣ ಪಾರದರ್ಶಕತೆಯನ್ನು ಅಳವಡಿಸಿಕೊಳ್ಳುವ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.

ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಗಾಂಧೀಜಿ ಬ್ರಿಟೀಷರೆ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ ಹೋರಾಡಿದ್ದರು, ನಾವಿಂದು ಸಂಕಲ್ಪ$ ಸಿದ್ಧಿಯಡಿ ಭ್ರಷ್ಟಾಚಾರ, ಭಯೋತ್ಪಾದನೆ, ಜಾತಿವಾದ, ಕೋಮುವಾದ ತೊಲಗಿಸಿ ಎಂಬ ಘೋಷಣೆಯೊಡನೆ ಮುನ್ನುಗ್ಗಬೇಕಿದೆ ಎಂದು ಹೇಳಿದರು. ದೇಶಾದ್ಯಂತ 5 ಕೋಟಿ ಸದಸ್ಯರನ್ನು ಹೊಂದುವ ಮೂಲಕ ಭವಿಷ್ಯ ನಿಧಿ ವಿಶ್ವದ ಅತೀ ದೊಡ್ಡ ಸಾಮಾಜಿಕ ಭದ್ರತೆಯ ಸಂಘಟನೆ ಎಂಬ ಹೆಗ್ಗಳಿಕೆ ಗಳಿಸಿದೆ, ನಮ್ಮ ಆವೃತ್ತ ನಿಧಿ 1050 ಲಕ್ಷ ಕೋಟಿ ರೂ. ಗಳಾಗಿವೆ ಎಂದರು.

ಕೇಂದ್ರ ಸರ್ಕಾರ ಕಾರ್ಮಿಕರ ಪರವಾಗಿದ್ದು ಭವಿಷ್ಯ ನಿಧಿಯ ಬೋನಸ್‌ನ್ನು ಹೆಚ್ಚಿಸಿದ್ದೇವೆ, ಮಹಿಳಾ ಕಾರ್ಮಿಕರಿಗೆ ಹೆರಿಗೆ ರಜೆಯನ್ನು 12 ವಾರಗಳಿಂದ 26 ವಾರಗಳಿಗೆ ಹೆಚ್ಚಿಸಿದೆ, ಸಾಮಾಜಿಕ ಭದ್ರತೆಯ ಅತಿ ಪ್ರಮುಖ ವ್ಯವಸ್ಥೆಯಿಂದ ಭವಿಷ್ಯ ನಿಧಿಯಾಗಿದೆ ಎಂದು ಹೇಳಿದರು.

Advertisement

ನಮ್ಮ ಇಲಾಖೆಯ ಪ್ರಮುಖ ಅಜೆಂಡಾ ಉದ್ಯೋಗ ಸೃಷ್ಟೀಕರಣ, ಕೈಗಾರಿಕಾ ಸಂಸ್ಥೆಗಳು ಮತ್ತು ಕಾರ್ಮಿಕರ ನಡುವೆ ಉತ್ತಮ ಸಂಬಂಧವನ್ನಿರಿಸುವುದು, ಕಾರ್ಮಿಕರ ಹಿತದೃಷ್ಟಿಯಿಂದ ಸುಧಾರಣೆಗಳನ್ನು ನಿರಂತರವಾಗಿ ಮಾಡಲಾಗುತ್ತಿದೆ. ಕಾರ್ಮಿಕರ ಸಂಬಳ ಮತ್ತು ಕೈಗಾರಿಕಗೆಳೊಂದಿಗೆ ಇರಬೇಕಾದ ನಂಟನ್ನು ಮುಂದಿನ ಲೋಕ ಮತ್ತು ರಾಜ್ಯಸಭೆಯ ಚರ್ಚೆಗಳಲ್ಲಿ ನಡೆಯಲಿದ್ದು ಹಲವು ಸುಧಾರಣೆಗಳು ನಡೆಯಲಿವೆ ಎಂದರು.

ದೇಶದಲ್ಲಿರುವ 42 ಕೋಟಿ ಅಸಂಘಟಿತ ಕಾರ್ಮಿಕರನ್ನು ದೃಷ್ಟಿಯಲ್ಲಿರಿಸಿರುವ ಕೇಂದ್ರ ಬಹುಸಂಖ್ಯೆಯಲ್ಲಿರುವ ಅವರ ಕ್ಷೇಮಾಭಿವೃದ್ಧಿಗೆ ಹಲವು ಯೋಜನೆಗಳ ಫ‌ಲ ನೀಡಲಿದ್ದು ಯುವಿಲ್‌ ಎಂಬ ಗುರಿತಿನ ಚೀಟಿ ನೀಡುವ ಸಾಮಾಜಿಕ ಭದ್ರತೆಗೆ ಅಗತ್ಯವಿರುವ ಆರೋಗ್ಯ, ವಿಮೆ ಸೇರಿ ಹಲವು ಸೌಲಭ್ಯಗಳನ್ನು ಅಸಂಘಟಿತ ಕಾರ್ಮಿಕರು ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಜಾತಿ, ಧರ್ಮ, ಅಧಿಕಾರಗಳ ನಡುವೆ ವಿಭಜನೆಯಾಗಿರುವ ಪ್ರಜೆಗಳು ನಾವು ಭಾರತೀತಯರೆಂದು ಹೇಳಿಕೊಳ್ಳುವ ಏಕತೆ ಮೂಡಬೇಕಿದೆ ಎಂದರು. ಕೇಂದ್ರ ಭವಿಷ್ಯನಿಧಿ ಆಯುಕ್ತ ಡಾ.ವಿ.ಪಿ ಜಾಯ್‌  ಮಾತನಾಡಿ, ದೇಶದಲ್ಲಿ ಇದುವರೆಗೂ 1 ಕೋಟಿ ಸದಸ್ಯರನ್ನು ಭವಿಷ್ಯ ನಿಧಿಗೆ ನೋಂದಣಿ ಮಾಡಿದ್ದು, ಕರ್ನಾಟಕದಲ್ಲಿ 13 ಲಕ್ಷ ಸದಸ್ಯರನ್ನು ನೋಂದಾಯಿಸಲಾಗಿದೆ.

ರಾಜ್ಯದಲ್ಲಿ 17 ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ, ಬಳ್ಳಾರಿ ಹಾಗೂ ರಾಯಚೂರಿನಲ್ಲಿ ಆಡಳಿತ ಕಚೇರಿಗಳನ್ನು ಶೀಘ್ರದಲ್ಲೇ ಪ್ರಾರಂಭ ಮಾಡಲಿದ್ದೇವೆ. ಕೆಆರ್‌ಪುರದಲ್ಲಿ ಪ್ರಾದೇಶಿಕ ಕಚೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿದ್ದು, ಚಿಕ್ಕಮಗಳೂರಿನ ಪ್ರಾದೇಶಿಕ ಕಚೇರಿಗೆ ಶಂಕು ಸ್ಥಾಪನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಐಟಿಐ ಕ್ರೀಡಾಂಗಣದಿಂದ ಅಂಚೆ ಕಚೇರಿಯವರಗೆ ತಿರಂಗ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು ವಿದ್ಯಾಮಂದಿರ, ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಥಮ ದರ್ಜೆ ಕಾಲೇಜು. ಎಸ್‌ಇಎ ಶಾಲೆ ಸೇರಿದಂತೆ ಕೆಆರ್‌ಪುರ ಭಾಗದ ವಿದ್ಯಾರ್ಥಿಗಳು ಭಾಗವಹಿಸಿದರು.

ಶಾಸಕ ಬಿ.ಎ ಬಸವರಾಜ್‌, ಸಂಸದ ಪಿ.ಸಿ ಮೋಹನ್‌, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ಕಾರ್ಯದರ್ಶಿ ಸತ್ಯವತಿ, ಕೇಂದ್ರ ಭವಿಷ್ಯ ನಿಧಿ ಅಪರ ಆಯುಕ್ತ  ವಿಜಯ್ ಕುಮಾರ್‌, ಪಾಲಿಕೆ ಸದಸ್ಯ ಪೂರ್ಣಿಮಾ ಶ್ರೀನಿವಾಸ್‌, ಬಂಡೆ ರಾಜು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next