Advertisement

ಮನೆಮಂದಿಗೆ ಗುಂಡು ಹಾರಿಸಿ ಕೊಂದು ಉದ್ಯಮಿ ಆತ್ಮಹತ್ಯೆ

11:42 PM Aug 16, 2019 | Lakshmi GovindaRaj |

ಗುಂಡ್ಲುಪೇಟೆ: ಸಾಲಬಾಧೆ ತಾಳಲಾರದೆ ಉದ್ಯಮಿಯೊಬ್ಬ ತನ್ನ ಕುಟುಂಬದ ನಾಲ್ವರನ್ನು ಪಿಸ್ತೂಲಿನಲ್ಲಿ ಗುಂಡು ಹಾರಿಸಿ ಕೊಂದು, ತಾನೂ ಗುಂಡು ಹಾರಿಸಿ ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಂಡ್ಲುಪೇಟೆ ಹೊರವಲಯದಲ್ಲಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ.

Advertisement

ಮೈಸೂರಿನ ದಟ್ಟಗಳ್ಳಿ ಬಡಾವಣೆಯ ನಿವಾಸಿ ಓಂ ಪ್ರಕಾಶ್‌ (35), ಆತನ ಪತ್ನಿ ನಿಹಾರಿಕಾ (30), ಪುತ್ರ ಆರ್ಯಕೃಷ್ಣ (6), ತಂದೆ ನಾಗರಾಜ ಭಟ್ಟಾಚಾರ್ಯ, ತಾಯಿ ಹೇಮಾರಾಜ್‌ (56) ಮೃತಪಟ್ಟವರು. ಸಾಮೂಹಿಕ ಆತ್ಮಹತ್ಯೆಗೆ ನಿರ್ಧಾರ ಕೈಗೊಂಡು, ಮೊದಲಿಗೆ ಕುಟುಂಬದ ನಾಲ್ವರ ಹಣೆಗೆ ಗುಂಡು ಹಾರಿಸಿ, ನಂತರ ಓಂಪ್ರಕಾಶ್‌ ತನ್ನ ಬಾಯಿಗೆ ಪಿಸ್ತೂಲಿ ನಲ್ಲಿ ಗುಂಡು ಹೊಡೆದುಕೊಂಡು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಐವರೂ ಆ.13ರಂದು ಬೆಳಗ್ಗೆ ಮೈಸೂರಿನಿಂದ ಎರಡು ವಾಹನಗಳಲ್ಲಿ ಹೊರಟು, ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಬಳಿಯ ಮಂಗಲ ಗ್ರಾಮದ ಪರಿಚಯಸ್ಥರಾದ ವೆಂಕಟೇಶ್‌ ಎಂಬುವರ ಗೆಸ್ಟ್‌ಹೌಸ್‌ನಲ್ಲಿ ತಂಗಿದ್ದರು. ಇವರ ಜೊತೆ ನೌಕರರಾದ ಚೇತನ್‌ ಮತ್ತು ಸುರೇಶ್‌ ಸಹ ಇದ್ದರು.

ಆ.15ರಂದು ಗೆಳೆಯ ವೆಂಕಟೇಶ್‌ ಅವರ ಗೆಸ್ಟ್‌ಹೌಸ್‌ ಬಿಟ್ಟು, ಗುಂಡ್ಲುಪೇಟೆಗೆ ಬಂದು, ಊಟ ಪಾರ್ಸೆಲ್‌ ತೆಗೆದುಕೊಂಡು ಪಟ್ಟಣದ ಹೊರವಲಯದಲ್ಲಿರುವ ಮಹೇಶ್ಚಂದ್ರ ಗುರು ಎಂಬು ವರಿಗೆ ಸೇರಿದ ಜಮೀನಿಗೆ ಆಗಮಿಸಿದರು. ಮ.2.30ರಲ್ಲಿ ಅಲ್ಲಿ ಊಟ ಮಾಡಿ ನಂತರ, ಪಟ್ಟಣದ ಕಲ್ಲಿಕೋಟೆ ರಸ್ತೆ ಬಳಿ ನಂದಿ ರೆಸಿಡೆನ್ಸಿ ಲಾಡ್ಜ್ನಲ್ಲಿ ತಂಗಿದ್ದರು. ತಮ್ಮ ಜೊತೆ ಬಂದಿದ್ದ ಚೇತನ್‌ ಹಾಗೂ ಸುರೇಶ್‌ಗೆ ಹೋಟೆಲ್‌ ಗೇಟ್‌ ವೇ ನಲ್ಲಿ ತಂಗಲು ವ್ಯವಸ್ಥೆ ಮಾಡಿದ್ದರು.

ಈ ದಿನ ರಾತ್ರಿ ನಾವು ಸೇಲಂಗೆ ಹೋಗಬೇಕಾಗಿದ್ದು, ತಯಾರಾಗಿರುವಂತೆ ಚಾಲಕ ಮತ್ತು ಸಹಾಯಕನಿಗೆ ಓಂಪ್ರಕಾಶ್‌ ತಿಳಿಸಿ ಮಲಗಿದ್ದರು. ನಂತರ ಆ.16ರ ಬೆಳಗಿನ ಜಾವ 3ರ ವೇಳೆ ಚಾಲಕ ಸುರೇಶ್‌ ಮೊಬೈಲ್‌ಗೆ ಕರೆ ಮಾಡಿ, ಸಿದ್ಧರಾಗಿರುವಂತೆ ತಿಳಿಸಿ ಕರೆ ಸ್ಥಗಿತ ಗೊಳಿಸಿದರು.

Advertisement

10 ನಿಮಿಷದ ನಂತರ ಮತ್ತೆ ಸುರೇಶ್‌ಗೆ ಕರೆ ಮಾಡಿದ ಓಂಪ್ರಕಾಶ್‌, “ನಮ್ಮನ್ನು ಕ್ಷಮಿಸಿ. ನಮಗೆ ತುಂಬಾ ಮೋಸ ಆಗಿದೆ. ನಾವು ಜೀವನದಲ್ಲಿ ಸೋತಿ ದ್ದೇವೆ. ನಮ್ಮನ್ನು ಹುಡುಕುವ ಪ್ರಯತ್ನ ಮಾಡಬೇಡಿ. ನಿಮ್ಮ ಇನ್ನೋವಾ ವಾಹನವನ್ನು ಮಧ್ಯಾಹ್ನ ಊಟ ಮಾಡಿದ ಸ್ಥಳದಲ್ಲಿಯೇ ನಿಲ್ಲಿಸಿದ್ದೇವೆ. ಅದರ ಕೀಯನ್ನು ವಾಹನದ ವೈಪರ್‌ಗೆ ತಗುಲಿ ಹಾಕಿದ್ದೇವೆ. ಗಾಡಿಯನ್ನು ತೆಗೆದುಕೊಂಡು ಹೋಗಿ’ ಎಂದು ಕರೆಯನ್ನು ಕಡಿತಗೊಳಿಸಿದರು.

ಆಗ ಚಾಲಕ ಸುರೇಶ್‌ ಮತ್ತು ಚೇತನ್‌ ಪಟ್ಟಣದ ಹೊರ ವಲಯದಲ್ಲಿ ಮಧ್ಯಾಹ್ನ ಊಟ ಮಾಡಿದ ಸ್ಥಳದಲ್ಲಿ ಬಂದು ನೋಡಿದಾಗ ಅಲ್ಲಿ ಇನ್ನೋವಾ ವಾಹನ ನಿಂತಿ ರುವುದು ಕಂಡಿತು. ಓಂಪ್ರಕಾಶ್‌ ಮತ್ತು ಕುಟುಂಬದವರು ಅಲ್ಲಿರಲಿಲ್ಲ. ಅವರಿಗಾಗಿ ಹುಡುಕಾಡಿದರೂ, ಸುಳಿವು ಸಿಗಲಿಲ್ಲ. ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದರು.

ರಸ್ತೆಯಿಂದ ಸುಮಾರು 200 ಮೀಟರ್‌ ಅಂತರದಲ್ಲಿ ಮಹೇಶ್ಚಂದ್ರ ಗುರು ಅವರ ಜಮೀನಿನ ಮಧ್ಯಭಾಗದಲ್ಲಿ ಐವರ ಶವ ಕಂಡು ಬಂತು. ಓಂಪ್ರಕಾಶ್‌ ಹೊರತುಪಡಿಸಿ ಇನ್ನುಳಿದ ನಾಲ್ವರ ಹಣೆಗೆ ಗುಂಡೇಟು ಬಿದ್ದಿತ್ತು. ಓಂಪ್ರಕಾಶ್‌ ಅವರ ಶವ ಬಾಯಿಗೆ ಗುಂಡೇಟಿನಿಂದ ಹೊಡೆದುಕೊಂಡು ಸಾವನ್ನಪ್ಪಿರುವ ರೀತಿಯಲ್ಲಿತ್ತು. ಈ ಕೃತ್ಯಕ್ಕೆ ಬಳಸಿದ ಪಿಸ್ತೂಲು ನಿವೃತ್ತ ಯೋಧ ಹಾಸನ ಮೂಲದ ನಾಗೇಶ್‌ಗೆ ಸೇರಿದ್ದೆಂದು ತಿಳಿದು ಬಂದಿದೆ. ನಾಗೇಶ್‌, ಮೃತ ಓಂಪ್ರಕಾಶ್‌ರ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು ಎನ್ನಲಾಗಿದೆ.

ಸಾಲದಿಂದ ಬಳಲಿದ್ದರು: ಓಂಪ್ರಕಾಶ್‌ ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯವರು. 4-5 ವರ್ಷದ ಹಿಂದೆ ಮೈಸೂರು ಪಟ್ಟಣದ ಹೊರವಲಯದ ದಟ್ಟಗಳ್ಳಿ ಬಡಾವಣೆಯಲ್ಲಿ ಮನೆ ಮಾಡಿಕೊಂಡು ತಂದೆ-ತಾಯಿ ಹೆಂಡತಿ ಹಾಗೂ ಮಗನೊಂದಿಗೆ ವಾಸವಿದ್ದರು. ಮೈಸೂರಿನ ಕುವೆಂಪು ನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದ ಬಳಿ, ಜಿ.ವಿ.ಇನ್ಫೋಟೆಕ್‌ ಕಂಪನಿ ಸ್ಥಾಪಿಸಿದ್ದರು. ಜತೆಗೆ, ರಾಜರಾಜೇಶ್ವರಿ ನಗರದಲ್ಲಿ ವಿಬ್ರಾನ್‌ ಎಫೆಕ್ಸ್‌ ಅನಿಮೇಷನ್‌ ಕಂಪನಿ ನಡೆಸುತ್ತಿದ್ದರು.

ಈ ಕಂಪನಿ ಮೂಲಕ ಅನಿಮೇಷನ್‌ ಚಿತ್ರ ತೆಗೆಯಲು ಹೋಗಿ ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದರು. ಜತೆಗೆ, ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲೂ ಸಾಕಷ್ಟು ನಷ್ಟವಾಗಿತ್ತು ಎನ್ನಲಾಗಿದೆ. ಈ ಎಲ್ಲಾ ಉದ್ದೇಶಕ್ಕಾಗಿ ಹಲವರ ಬಳಿ ಸಾಲ ಮಾಡಿದ್ದು, ಸಾಲದ ಹಣವನ್ನು ಆ.16ರಂದು ಮರುಪಾವತಿ ಮಾಡುವುದಾಗಿ ಸಾಲಗಾರರಿಗೆ ಭರವಸೆ ನೀಡಿದ್ದರು. ಸಾಲದ ಹಣ ಹೊಂದಿಸಲು ಸಾಧ್ಯವಾಗದ ಕಾರಣ, ಓಂಪ್ರಕಾಶ್‌ ಮನೆಯವರನ್ನು ಪಿಸ್ತೂಲಿನಿಂದ ಕೊಂದು, ತಾವು ಆತ್ಮಹತ್ಯೆ ಮಾಡಿಕೊಂಡಿದ್ಧಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬಕ್ಕೆ ಪ್ರಾಣ ಬೆದರಿಕೆ?: ಮೃತ ಓಂಪ್ರಕಾಶ್‌ ಬಳಿ ಮೂವರು ಬೌನ್ಸರ್‌ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು, ಇಡೀ ಕುಟುಂಬ ಸಾರ್ವಜನಿಕ ಸಂಪರ್ಕದಿಂದ ದೂರ ಉಳಿದಿತ್ತು ಎನ್ನಲಾಗಿದೆ. ಜೊತೆಗೆ ಬಳ್ಳಾರಿ ಗಣಿ ಅದಿರು ವ್ಯವಹಾರಕ್ಕೆ ಸಂಬಂಧಿಸಿದಂತೆ ಭೂಗತ ಲೋಕದ ವ್ಯಕ್ತಿಗಳಿಂದ ಆಗಾಗ್ಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಮೈಸೂರಿನ ಹಿಂದಿನ ಪೊಲೀಸ್‌ ಆಯುಕ್ತರನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ. ತನ್ನ ಮಗ ಆರ್ಯನ್‌ಗೆ 5 ವರ್ಷವಾದರೂ ಆತನನ್ನು ಶಾಲೆಗೆ ದಾಖಲಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಭೂಗತ ಲೋಕದ ವ್ಯಕ್ತಿಗಳಿಂದ ಕುಟುಂಬಕ್ಕೆ ಪ್ರಾಣ ಬೆದರಿಕೆ ಇತ್ತು ಎಂಬ ವದಂತಿ ಹರಡಿದೆ.

Advertisement

Udayavani is now on Telegram. Click here to join our channel and stay updated with the latest news.

Next