Advertisement

ಪೊಲೀಸರ ಮೇಲೆ ಹಲ್ಲೆ ನಡೆಸಿದ ಉದ್ಯಮಿ ಸೆರೆ

12:40 PM Aug 13, 2018 | |

ಬೆಂಗಳೂರು: ರಾತ್ರಿ ಹತ್ತು ಗಂಟೆಗೆ ಮುಗಿಯಬೇಕಿದ್ದ ಪಾರ್ಟಿ ತಡರಾತ್ರಿವರೆಗೂ ಮುಂದುವರಿದ ಕಾರಣ, ಪಾರ್ಟಿ ನಿಲ್ಲಿಸುವಂತೆ ಹೇಳಿದ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆಗೈದ ಆರೋಪ ಸಂಬಂಧ ಕರ್ನಾಟಕ ಪ್ರೀಮಿಯರ್‌ ಲೀಗ್‌ನ (ಕೆಪಿಎಲ್‌) ಬಳ್ಳಾರಿ ಟಸ್ಕರ್ ತಂಡದ ಮಾಲೀಕ, ಉದ್ಯಮಿ ಅರವಿಂದ್‌ ವೆಂಕಟೇಶ್‌ ರೆಡ್ಡಿಯನ್ನು ಎಚ್‌ಎಎಲ್‌ ಪೊಲೀಸರು ಬಂಧಿಸಿದ್ದಾರೆ.

Advertisement

ಉದ್ಯಮಿ ಅರವಿಂದ್‌ ರೆಡ್ಡಿ, ಸ್ನೇಹಿತರ ಜತೆ ಶನಿವಾರ ಮಾರತ್‌ಹಳ್ಳಿ ಮೇಲ್ಸೇತುವೆ ಸಮೀಪವಿರುವ ಇಜೋನ್‌ ಕ್ಲಬ್‌ನಲ್ಲಿ ಪಾರ್ಟಿ ಆಯೋಜಿಸಿದ್ದರು. ಪಾರ್ಟಿ ಮುಗಿಸಲು ನಿಗದಿಪಡಿಸಿರುವ ರಾತ್ರಿ 10 ಗಂಟೆ ಮೀರಿದರೂ, ಪಾರ್ಟಿ ಮುಂದುವರಿದಿತ್ತು. ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರು ಜೋರಾಗಿ ಮ್ಯೂಸಿಕ್‌  ಹಾಕಿಕೊಂಡು ಗದ್ದಲ ಮಾಡುತ್ತಿದ್ದರು. ರಾತ್ರಿ 12 ಗಂಟೆ ಬಳಿಕವೂ ಗದ್ದಲ ಮುಂದುವರಿದಿತ್ತು. ಹೀಗಾಗಿ ಸ್ಥಳೀಯರು ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಮಾಹಿತಿ ನೀಡಿದ್ದರು.

ಈ ಹಿನ್ನೆಲೆಯಲ್ಲಿ ರಾತ್ರಿ ಪಾಳಿ ಗಸ್ತಿನಲ್ಲಿದ್ದ ಎಚ್‌ಎಎಲ್‌ ಠಾಣೆಯ ಹೊಯ್ಸಳ ಸಿಬ್ಬಂದಿ, ಇಜೋನ್‌ ಕ್ಲಬ್‌ಗ ಭೇಟಿ ನೀಡಿ ಪಾರ್ಟಿ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಆದರೆ, ಇದಕ್ಕೊಪ್ಪದ ಅರವಿಂದ ರೆಡ್ಡಿ, ಪೊಲೀಸರಿಗೆ ನಾನು ಯಾರು ಗೊತ್ತಾ ಎಂದು ಧಮಕಿ ಹಾಕಿದ್ದಾನೆ. ಇದೇ ವಿಚಾರಕ್ಕೆ ಪೊಲೀಸರು ಹಾಗೂ ಅರವಿಂದ ರೆಡ್ಡಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಒಬ್ಬ ಸಿಬ್ಬಂದಿ ಮೇಲೆ ರೆಡ್ಡಿ ಹಲ್ಲೆ ಮಾಡಿದ್ದಾರೆ. ಈ ವಿಚಾರ ತಿಳಿದ ಕೂಡಲೇ ಠಾಣಾಧಿಕಾರಿ ಸ್ಥಳಕ್ಕೆ ತೆರಳಿ ಪಾರ್ಟಿ ಸ್ಥಗಿತಗೊಳಿಸಿದ್ದಾರೆ.

ಸರ್ಕಾರಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಹಾಗೂ ಹಲ್ಲೆ ನಡೆಸಿದ ಸಂಬಂಧ ಪ್ರಕರಣ ದಾಖಲಿಸಿಕೊಂಡು ಅರವಿಂದ ರೆಡ್ಡಿಯನ್ನು ಬಂಧಿಸಲಾಯಿತು. ಬಳಿಕ ಭಾನುವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಆರೋಪಿ ಅರವಿಂದ್‌ ರೆಡ್ಡಿಯನ್ನು ಆಗಸ್ಟ್‌ 25ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next