Advertisement

“ವ್ಯವಹಾರ ಮಾದರಿಯಿಂದಾಗಿ ಮಾಧ್ಯಮ ಕವಲು ದಾರಿಯಲ್ಲಿದೆ’

12:46 AM Nov 15, 2019 | Sriram |

ಕುಂದಾಪುರ: ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವ ಏಕೈಕ ವಸ್ತು ಜಗತ್ತಲ್ಲಿದ್ದರೆ ಅದು ಪತ್ರಿಕೆ ಮಾತ್ರ. ಓದುಗನ ಋಣದಲ್ಲಿ ಮಾಧ್ಯಮಗಳು ಇರುವುದಿಲ್ಲ. ಓದುಗ ಕೊಡುವ ಹಣ ಪತ್ರಿಕೆ ನಡೆಸಲು ಸಾಕಾಗುವುದಿಲ್ಲ. ಪತ್ರಿಕೆ ನಡೆಸುವವರಿಗೂ ಓದುಗರಿಗೂ ಸಂಬಂಧವಿದೆ. ಆದರೆ ಚಾನೆಲ್‌ ನಡೆಸುವವರಿಗೂ ವೀಕ್ಷಕರಿಗೂ ಸಂಬಂಧವಿರುವುದಿಲ್ಲ. ಇಂತಹ ವ್ಯವಹಾರ ಮಾದರಿಯನ್ನು ಬದಲಾವಣೆ ಮಾಡುವವರೆಗೆ ಈ ಮಾಧ್ಯಮ ಇದೇ ರೀತಿ ಕವಲು ದಾರಿಯಲ್ಲಿರುತ್ತದೆ, ದಿಕ್ಕೆಟ್ಟು ಕೂತಿರುತ್ತದೆ ಎಂದು ಪತ್ರಕರ್ತ ದಿನೇಶ್‌ ಅಮೀನ್‌ ಮಟ್ಟು ಹೇಳಿದರು.

Advertisement

ಅವರು ಮಂಗಳವಾರ ಸಂಜೆ ಕುಂದಾಪುರ ಜೂನಿಯರ್‌ ಕಾಲೇಜಿನ ಕಲಾಮಂದಿರದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮದಲ್ಲಿ ಕವಲು ದಾರಿಯಲ್ಲಿ ಪತ್ರಕರ್ತ ವಿಷಯದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಜಾಗೃತ ಸಮಾಜದಲ್ಲಿ ಮಾತ್ರ ಒಂದು ಪತ್ರಿಕೆ ಯಶಸ್ವಿಯಾಗಿ ಕೆಲಸ ಮಾಡಲು ಸಾಧ್ಯವಿದೆ. ವಿಶ್ವಾಸಾರ್ಹತೆ ಕಳೆದು ಕೊಂಡರೆ ಪತ್ರಿಕೆ ರದ್ದಿಯಾಗಿ ಬಿಡುತ್ತದೆ. ಓದುಗ ಪತ್ರಿಕೆಗಳನ್ನು ಓದುತ್ತಾನೆ, ಆದರೆ ಆತ ಪತ್ರಿಕೆಗಳನ್ನು ನಂಬುತ್ತಿಲ್ಲ. ನಾನು ಮೂವತ್ತು ವರ್ಷಗಳ ಹಿಂದೆ ವೃತ್ತಿಯನ್ನು ಪ್ರವೇಶಿಸುವಾಗ ಇದ್ದ ಮಾಧ್ಯಮ ಕ್ಷೇತ್ರಕ್ಕೂ ಇವತ್ತು ನಾನು ನಿಂತು ನೋಡುವ ಮಾಧ್ಯಮ ಕ್ಷೇತ್ರಕ್ಕೂ ಶತಮಾನಗಳ ಅಂತರ ಎದ್ದು ಕಾಣುತ್ತಿದೆ ಎಂದರು.

ನೂತನ ಪದಾಧಿಕಾರಿಗಳಿಗೆ ಪ್ರಮಾಣವಿಧಿಯನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಬೋಧಿಸಿದರು.

ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಛಾಯಪತ್ರಕರ್ತ ಸಂತೋಷ್‌ ಕುಂದೇಶ್ವರ ಅವರನ್ನು ಸಮ್ಮಾನಿಸಲಾಯಿತು.

Advertisement

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕುಂದಾಪುರ ಎಎಸ್‌ಪಿ ಹರಿರಾಮ್‌ ಶಂಕರ್‌, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್‌ ಸರಳೆಬೆಟ್ಟು, ಜಿಲ್ಲಾ ಉಪಾಧ್ಯಕ್ಷ ರಾಜೇಶ್‌ ಕೆ.ಸಿ., ಬೈಂದೂರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜನಾರ್ದನ್‌ ಎಸ್‌. ಮರವಂತೆ, ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ, ತಾಲೂಕು ಕಾರ್ಯದರ್ಶಿ ನಾಗರಾಜ ರಾಯಪ್ಪನಮಠ, ಕೋಶಾಧಿಕಾರಿ ಸತೀಶ್‌ ಆಚಾರ್‌ ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತ ರಾಮಕೃಷ್ಣ ಹೇಳೆì ಪ್ರಸ್ತಾವಿಸಿ, ಪತ್ರಕರ್ತ ರಾಘವೇಂದ್ರ ಪೈ ಸ್ವಾಗತಿಸಿ, ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ವಂದಿಸಿ, ಪತ್ರಕರ್ತ ಜಯಶೇಖರ್‌ ಮಡಪ್ಪಾಡಿ ನಿರೂಪಿಸಿದರು.

ಸಮನ್ವಯ ಇರಲಿ
ಮಾಧ್ಯಮ ಕ್ಷೇತ್ರ ಮತ್ತು ಪೊಲೀಸ್‌ ಇಲಾಖೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮಾಧ್ಯಮ ಮತ್ತು ಪೊಲೀಸ್‌ ಇಲಾಖೆ ಪರಸ್ಪರ ಸಮನ್ವಯದಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುವುದರಿಂದ ಸಾಮಾಜಿಕ ಸಾಮರಸ್ಯವನ್ನು ಕಾಪಾಡಲು ಸಹಾಯವಾಗುತ್ತದೆ.
-ಹರಿರಾಮ್‌ ಶಂಕರ್‌,
ಎಎಸ್ಪಿ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next