Advertisement

ಸುರತ್ಕಲ್: ಪ್ರಯಾಣಿಕನ ಜೀವ ಉಳಿಸಲು ದಿನಪೂರ್ತಿ ಆಸ್ಪತ್ರೆಗೆ ಅಲೆದಾಡಿದ ಬಸ್ ನಿರ್ವಾಹಕ

10:49 AM Nov 20, 2020 | keerthan |

ಸುರತ್ಕಲ್: ತನ್ನ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಜೀವ ಉಳಿಸಲು ನಿರ್ವಾಹಕನೋರ್ವ ಆಸ್ಪತ್ರೆ ಸೇರಿಸಿ ಚಿಕಿತ್ಸೆ ಕೊಡಿಸಲು ಸ್ವತಃ ಮುಂದಾಗಿ ಮಾನವೀಯತೆ ಮೆರೆದಿದ್ದಾರೆ.

Advertisement

‘ಶಾನ್’ ಸರ್ವೀಸ್ ಬಸ್ ನ ನಿರ್ವಾಹಕ ಗಣೇಶ್ ಅವರೇ ಮಾನವೀಯತೆ ಮೆರೆದು ಜನಮೆಚ್ಚುಗೆಗೆ ಪಾತ್ರರಾದವರು.

ಅವರು ಕಳೆಧ ನವಂಬರ್ 16 ರಂದು ಬೆಳಗ್ಗೆ ಎಂದಿನಂತೆ ಬಜಪೆ ಕೈಕಂಬ ಮಾರ್ಗವಾಗಿ ಸಂಚರಿಸುವ ಬಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಉತ್ತರ ಪ್ರದೇಶದ ವಾರಣಾಸಿ ನಿವಾಸಿ ರಾಜೇಶ್ ಚೌಹಾಣ್ (40) ಎಂಬವರು ಅದೇ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಬಸ್ ಸುರತ್ಕಲ್ ಸಮೀಪದ ಕಾಟಿಪಳ್ಳ ಬಳಿ ಬರುವಾಗ ರಾಜೇಶ್ ಚೌಹಾಣ್ ದಿಢೀರ್ ಅಸ್ವಸ್ಥಗೊಂಡು ಕುಸಿದು ಬಿದ್ದರು. ತಕ್ಷಣ ಗಣೇಶ್ ಅವರು ಟಿಕೆಟ್ ಕಲೆಕ್ಷನ್ ಕೆಲಸವನ್ನು ಚಾಲಕ ರಮೇಶ್ ಅವರಿಗೆ ವಹಿಸಿ ಅಸ್ವಸ್ಥಗೊಂಡ ಪ್ರಯಾಣಿಕನನ್ನು ಸುರತ್ಕಲ್ ಖಾಸಗಿ ಆಸ್ಪತ್ರೆಗೆ ಕರೆ ತಂದರು.

ಆದರೆ ಆರೋಗ್ಯ ಸ್ಥಿತಿ ಕೈ ಮೀರಿದ್ದರಿಂದ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸಲಹೆ ನೀಡಿದರು. ತಕ್ಷಣ ಆಂಬುಲೆನ್ಸ್ ನಲ್ಲಿ ತಾವೇ ವೆಚ್ಚ ಭರಿಸಿ ವೆನ್ ಲಾಕ್ ಆಸ್ಪತ್ರೆಗೆ ಕರೆ ತಂದರು.ಆದರೆ ಚಿಕಿತ್ಸೆಗೆ ಸ್ಪಂದಿಸದೆ ರಾಜೇಶ್ ಚೌಹಾಣ್ ಮೃತಪಟ್ಟಿದ್ದರು. ಬಳಿಕ ಘಟನೆ ಕುರಿತು ಸುರತ್ಕಲ್ ಪೊಲೀಸರಿಗೆ ಗಣೇಶ್ ಮಾಹಿತಿ ನೀಡಿ ದೂರು ದಾಖಲಿಸಿದರು.

ಇಂದಿನ ಕಾಲದಲ್ಲಿ ಇಂತಹ ಘಟನೆಗಳು ನಡೆದಾಗ ಪೊಲೀಸು, ಕೇಸು ಎಂದು ದೂರ ಸರಿದು ಸುಮ್ಮನಿರುವ ಮಂದಿಯ ನಡುವೆ ಗಣೇಶ್ ಅವರು ಹೊರ ರಾಜ್ಯದ ಕಾರ್ಮಿಕನ ಜೀವ ಉಳಿಸಲು ತನ್ನ ಕೆಲಸವನ್ನು ಬಿಟ್ಟು ದಿನ ಪೂರ್ತಿ ಆತನ ಬಳಿ ಇದ್ದು ಸ್ಪಂದಿಸಿ, ಮಾನವೀಯತೆ ಮೆರೆದಿದ್ದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

Advertisement

ಸುರತ್ಕಲ್ ಪೊಲೀಸ್ ಸಿ ಐ ಚಂದ್ರಪ್ಪ ಹಾಗೂ ಠಾಣೆಯ ಅಧಿಕಾರಿಗಳು, ಸಿಬಂದಿಗಳು ಗಣೇಶ್ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಅಭಿನಂದಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next