Advertisement

ಬೆಣ್ಣೆಹಳ್ಳದಲ್ಲಿ ಬಸ್ ಸಿಲುಕಿ, ಪ್ರಯಾಣಿಕರ ಪರದಾಟ

10:00 AM Nov 08, 2019 | sudhir |

ಗದಗ: ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಬೆಣ್ಣೆಹಳ್ಳ ಉಕ್ಕಿ ಹರಿಯುತ್ತಿದ್ದು, ಜಿಲ್ಲೆಯ ಯಾವಗಲ್ ಸಮೀಪದ ಸೇತುವೆ ಜಲಾವೃತಗೊಂಡಿದೆ. ಹಳ್ಳ ಭೋರ್ಗರೆಯುತ್ತಿದ್ದರೂ, ಲೆಕ್ಕಿಸದೇ ಬಸ್ ಚಲಾಯಿಸಿದ್ದರಿಂದ ಕೆಎಸ್‌ಆರ್‌ಟಿಸಿ ಬಸ್ ಸಿಲುಕಿ, ಕೆಲಕಾಲ ಪ್ರಯಾಣಿರು ಪರದಾಡಿದ ಘಟನೆ ಗುರುವಾರ ನಡೆದಿದೆ.

Advertisement

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೆಎ- 26, ಎಫ್ 748 ನೋಂದಣಿಯ ಬಸ್ ಗುರುವಾರ ಮಧ್ಯಾಹ್ನ 3.15ರ ಸುಮಾರಿಗೆ ರೋಣದಿಂದ ನರಗುಂದಕ್ಕೆ ಪ್ರಯಾಣ ಬೆಳೆಸಿತ್ತು. ಯಾವಗಲ್ ಸಮೀಪದ ಬೆಣ್ಣೆಹಳ್ಳ ಉಕ್ಕಿ ಹರಿಯುತ್ತಿದ್ದರೂ, ಚಾಲಕ ಬಸ್ ಚಲಾಯಿಸಿದ್ದಾನೆ. ಸೇತುವೆ ಮಧ್ಯೆ ಸಾಗುತ್ತಿದ್ದಂತೆ ಬಸ್ ನೀರಿನ ಸೆಳೆತಕ್ಕೆ ಒಳಗಾಗಿದೆ. ಬಸ್‌ನ ಮುಂಭಾಗದ ಒಂದು ಚಕ್ರ ಸೇತುವೆಯಿಂದ ಕೆಳಗಿಳಿದಿದ್ದರಿಂದ ಕ್ಷಣಕಾಲ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿತ್ತು.

ಈ ವೇಳೆ ಪ್ರಯಾಣಿಕರ ಚೀರಾಟ, ಕೂಗಾಟ ಶುರುವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಚಾಲಕ, ತಕ್ಷಣ ಬಸ್‌ನ್ನು ಅಷ್ಟಕ್ಕೆ ನಿಲ್ಲಿಸುತ್ತಿದ್ದಾನೆ. ಇದರಿಂದ ಗಾಬರಿಗೊಂಡ ಪ್ರಯಾಣಿಕರು ನೀರು ತುಂಬಿದ ಸೇತುವೆಯಲ್ಲಿ ಪರಸ್ಪರ ಕೈಹಿಡಿದು ಸಾಗಿ ಸುರಕ್ಷಿತವಾಗಿ ದಡ ಸೇರಿದ್ದಾರೆ. ಘಟನೆಗೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಬಳಿಕ ಯಾವಗಲ್ ಗ್ರಾಮದಲ್ಲಿದ್ದ ಜೆಸಿಬಿ ತರಿಸಿ, ಸೇತುವೆಯಲ್ಲಿ ಸಿಲುಕಿದ್ದ ಬಸ್‌ನ್ನು ಎಳೆದು, ದಡ ಸೇರಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನರಗುಂದ ಡಿಪೋ ಮ್ಯಾನೇಜರ್ ದನ್ಯಾಳ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next