Advertisement

ಸುಳ್ಯ ಅರಂಬೂರಿನಲ್ಲಿ ಬಸ್‌ಗೆ ಕಾರು ಢಿಕ್ಕಿ :ಚನ್ನಪಟ್ಟಣದ ಮೂವರ ಸಾವು; ಇಬ್ಬರಿಗೆ ಗಾಯ

01:43 AM Jul 15, 2019 | sudhir |

ಸುಳ್ಯ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಳ್ಯ ನಗರದ ಹೊರವಲಯದ ಅರಂಬೂರಿನಲ್ಲಿ ಕಾರೊಂದು ಕೆಎಸ್‌ಆರ್‌ಟಿಸಿ ಬಸ್‌ಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ರವಿವಾರ ಬೆಳಗ್ಗೆ ಸಂಭವಿಸಿದೆ.

Advertisement

ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲೂಕಿನ ಕೊಲೂರು ನಿವಾಸಿ ನಾಗೇಂದ್ರ (42), ಮುದಗೆರೆ ನಿವಾಸಿ ಸೋಮಶೇಖರ (42) ಮತ್ತು ಮೂಲತಃ ಕೊಲೂರಿನವರಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದ ಮಂಜುಳಾ (55) ಮೃತಪಟ್ಟವರು. ನಾಗೇಂದ್ರ ಅವರ ಪತ್ನಿ ಜಯಶೀಲಾ ಮತ್ತು 12 ವರ್ಷ ಪ್ರಾಯದ ಪುತ್ರಿ ತನ್ಮಯಿ ಗಾಯಗೊಂಡಿದ್ದು, ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ
ಬೆಳಗ್ಗೆ 10.30ರ ಸುಮಾರಿಗೆ ಚನ್ನಪಟ್ಟಣದಿಂದ ಸುಳ್ಯ ತಾಲೂಕಿನ ಚೊಕ್ಕಾಡಿಗೆ ಬರುತ್ತಿದ್ದ ರಿಟ್ಸ್‌ ಕಾರು ಆಟೋ ರಿಕ್ಷಾವನ್ನು ಓವರ್‌ಟೇಕ್‌ ಮಾಡುವ ಯತ್ನದಲ್ಲಿ ಮಂಗಳೂರಿನಿಂದ ಮಡಿಕೇರಿ ಮಾರ್ಗವಾಗಿ ಕೊಳ್ಳೆಗಾಲಕ್ಕೆ
ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಕೊಳ್ಳೆಗಾಲ ಡಿಪೋದ ಬಸ್‌ಗೆ ಢಿಕ್ಕಿ ಹೊಡೆಯಿತು.
ಪರಿಣಾಮ ಕಾರಿನಲ್ಲಿದ್ದ ಮಂಜುಳಾ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತಪಟ್ಟರು.

ಕಾರು ಚಾಲಕ ನಾಗೇಂದ್ರ ಮತ್ತು ಸಹ ಪ್ರಯಾಣಿಕ ಸೋಮಶೇಖರ ಅವರಿಗೆ ಗಂಭೀರ ಗಾಯವಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ಕರೆದು ಕೊಂಡು ಹೋಗುತ್ತಿದ್ದ ಸಂದರ್ಭ ಮೃತಪಟ್ಟರು.

ಹಗ್ಗ ಬಳಸಿ ಕಾರು ಎಳೆದರು!
ಅಪಘಾತದ ತೀವ್ರತೆಗೆ ಕಾರು ಬಸ್‌ನ ಮುಂಭಾಗ ಸಿಲುಕಿಕೊಂಡಿದ್ದು, ಬಳಿಕ ಹಗ್ಗದ ಸಹಾಯದಿಂದ ಕಾರನ್ನು ಎಳೆಯಲಾಯಿತು. ಕಾರಿನೊಳಗೆ ಸಿಲುಕಿದ್ದ ಐವರನ್ನು ಸ್ಥಳೀಯರು ಸತತ ಪ್ರಯತ್ನದಿಂದ ಹೊರ ತೆಗೆಯುವಲ್ಲಿ ಸಫಲರಾದರು. ಎಂ.ಎ. ಶರೀಫ್‌ ಹಳೆಗೇಟು, ಖಲಂದರ್‌ ಅರಂಬೂರು ನೇತೃತ್ವದ ತಂಡ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಯಿತು.

Advertisement

ಮಕ್ಕಳನ್ನು ಕಾಣಲೆಂದು ಚೊಕ್ಕಾಡಿಗೆ ಬರುತ್ತಿದ್ದರು!
ನಾಗೇಂದ್ರ ಅವರು ತನ್ನ ಸಹೋದರಿ ಮಂಜುಳಾ, ಪತ್ನಿ ಜಯಶೀಲಾ, ಮಗಳು ತನ್ಮಯಿ ಹಾಗೂ ಸ್ನೇಹಿತ ಸೋಮಶೇಖರ ಜತೆಗೆ ಬೆಳಗ್ಗೆ 5.30ಕ್ಕೆ ಬೆಂಗಳೂರಿನಿಂದ ಸುಳ್ಯಕ್ಕೆ ಹೊರಟಿದ್ದರು. ಚೊಕ್ಕಾಡಿ ಸತ್ಯಸಾಯಿ ವಿದ್ಯಾಕೇಂದ್ರದಲ್ಲಿ ವ್ಯಾಸಂಗ ಮಾಡುತ್ತಿದ್ದ ನಾಗೇಂದ್ರ ಅವರ ಪುತ್ರ ಪೂರ್ವಿಕ್‌ (9ನೇ ತರಗತಿ) ಮತ್ತು ಸೋಮಶೇಖರ ಅವರ ಪುತ್ರ ಎಂ.ಎಸ್‌. ದರ್ಶನ್‌ (10ನೇ ತರಗತಿ) ಅವರನ್ನು ಭೇಟಿ ಮಾಡಲೆಂದು ಮನೆ ಮಂದಿ ಕಾರಿನಲ್ಲಿ ಬಂದಿದ್ದರು. ಬೆಂಗಳೂರಿನಲ್ಲಿರುವ ನಾಗೇಂದ್ರ ಅವರ ಸಹೋದರಿ ಮಂಜುಳಾ ಕೂಡ ಸೋದರನ ಮಗನನ್ನು ಕಾಣಲೆಂದು ಜತೆಗೆ ಬಂದಿದ್ದರು. ಶಾಲೆ ತಲುಪಲು 15 ಕಿ.ಮೀ. ದೂರ ಇರುವಾಗ ಈ ಅಪಘಾತ ಸಂಭವಿಸಿದೆ.

ಅಪಘಾತ ಸ್ಥಳ
ಅರಂಬೂರು ಪ್ರದೇಶದಲ್ಲಿ ಈ ಹಿಂದೆ ಅನೇಕ ಅಪಘಾತ ಸಂಭವಿಸಿತ್ತು. ಅಪಾಯಕಾರಿ ತಿರುವಿನ ಪ್ರದೇಶ ಇದಾಗಿದ್ದು, ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಸೂಕ್ತ ಎಚ್ಚರಿಕೆ ಫಲಕ, ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮಗಳಿಗೆ ಮದುವೆ ನಿಗದಿ ಆಗಿತ್ತು!
ಮಂಜುಳಾ ಅವರು ಬೆಂಗಳೂರಿನಲ್ಲಿ ವಾಸವಾಗಿದ್ದರು. ಪತಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅವರು ಅಗಲಿದ್ದಾರೆ. ಹಿರಿಯ ಪುತ್ರಿಗೆ ವಿವಾಹವಾಗಿದ್ದು, ಕಿರಿಯ ಪುತ್ರಿಗೆ ಕೆಲ ಸಮಯದ ಹಿಂದೆಯಷ್ಟೇ ವಿವಾಹ ನಿಶ್ಚಿತಾರ್ಥ ನಡೆದಿತ್ತು.

ಇಂದು ಹುಟ್ಟು ಹಬ್ಬವಿತ್ತು
ಜು. 15 ಸೋಮಶೇಖರ ಅವರ ಹುಟ್ಟಿದ ದಿನ. ಜೆಡಿಎಸ್‌ ಮುಖಂಡ, ಸ್ಥಳೀಯ ವಿಎಸ್‌ಎಸ್‌ಎನ್‌ಬಿ ಸಂಘಟನೆಯ ಅಧ್ಯಕ್ಷರಾಗಿದ್ದ ಅವರು ಸ್ಥಳೀಯ ಪರಿಸರದಲ್ಲಿ ಜನಾನುರಾಗಿಯಾಗಿದ್ದರು. ಅವರು ಪತ್ನಿ, ಪುತ್ರನನ್ನು ಅಗಲಿದ್ದಾರೆ. ನಾಗೇಂದ್ರ ಅವರು ವಿಎಸ್‌ಎಸ್‌ಎನ್‌ಬಿ ಮಾಜಿ ಅಧ್ಯಕ್ಷರಾಗಿದ್ದು, ಪತ್ನಿ, ಪುತ್ರಿ ಮತ್ತು ಪುತ್ರನನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next