Advertisement

ಬರ್ಮಾ ದೇಶದ ಕತೆ: ಮೋಸಗಾರ ನರಿ

06:00 AM Jul 29, 2018 | |

ಒಂದು ಕಾಡಿನಲ್ಲಿದ್ದ ಮೋಸಗಾರ ನರಿಗೆ ಎಲ್ಲಿಯೂ ಆಹಾರ ಸಿಕ್ಕಿರಲಿಲ್ಲ. ತುಂಬ ಹಸಿವಾಗಿತ್ತು. ಸುಲಭವಾಗಿ ಆಹಾರ ಸಿಗುತ್ತದೆಯೋ ಎಂದು ಹುಡುಕುತ್ತ ಹಳ್ಳಿಯ ಕಡೆಗೆ ಹೊರಟಿತು. ಹೊಲದ ಸುತ್ತಲೂ ರೈತರು ಹಾಕಿದ್ದ ಬೇಲಿಯೊಳಗೆ ನುಸುಳಿ ಮನೆಗಳ ಬಳಿಗೆ ಬಂದಿತು. ಅಲ್ಲಿ ಕೋಳಿಯೊಂದು ಮರಿಗಳನ್ನು ಕೂಡಿಕೊಂಡು ತಿಪ್ಪೆಯಲ್ಲಿ ಕೆದಕುತ್ತ ಇತ್ತು. “ವ್ಹಾಹ್‌! ಇದು ಪುಷ್ಕಳ ಭೋಜನ ಮಾಡಲು ಸುಸಂಧಿ’ ಎಂದು ಯೋಚಿಸಿ ಕಳ್ಳ ಹೆಜ್ಜೆಯಿಡುತ್ತ ಕೋಳಿಗಳ ಸನಿಹ ಹೋಗುತ್ತ ಇತ್ತು. ಅಷ್ಟರಲ್ಲಿ ಅಲ್ಲಿ ಏನೋ ಕೆಲಸ ಮಾಡುತ್ತಿದ್ದ ರೈತ ನರಿಯನ್ನು ನೋಡಿದ. ದೊಡ್ಡದಾಗಿ ಬೊಬ್ಬೆ ಹೊಡೆದ. ಒಡೆಯನ ಕೂಗು ಕೇಳಿ ನಾಲ್ಕಾರು ನಾಯಿಗಳು ಓಡೋಡಿ ಬಂದವು. ಜೀವ ಉಳಿದರೆ ಬೇಡಿ ತಿಂದೇನು ಎಂದು ನರಿ ದಿಕ್ಕು ಕಂಡತ್ತ ಓಡತೊಡಗಿತು. ಒಂದು ದೊಡ್ಡ ಕೆಸರಿನ ಹೊಂಡಕ್ಕೆ ಬಿದ್ದು ಕೊರಳಿನ ತನಕ ಕೆಸರಿನಲ್ಲಿ ಮುಳುಗಿತು.

Advertisement

    ನರಿ ಮೇಲೆ ಬರುತ್ತದೆಂದು ನಾಯಿಗಳು ತುಂಬ ಹೊತ್ತು ಕಾದವು. ಆದರೆ ನರಿ ಪ್ರಾಣಭಯದಿಂದ ಕೆಸರಿನಲ್ಲೇ ಹುದುಗಿಕೊಂಡಿತು. ನಾಯಿಗಳು ಕಾದು ಕಾದು ಬೇಸತ್ತು ಹೊರಟುಹೋದವು. ಬಂದೆರಗಿದ ಅಪಾಯ ತೊಲಗಿದ ಮೇಲೆ ನರಿ ಕಷ್ಟಪಟ್ಟು ಮೇಲೆ ಬಂದಿತು. ಕಾಡಿನ ಕಡೆಗೆ ಹೊರಟಿತು. ಆಗ ಅದರ ಮೂಗಿಗೆ ಅನ್ನ ಮತ್ತು ಕೋಳಿ ಪದಾರ್ಥದ ಘಮ್ಮನೆ ಪರಿಮಳ ಬಂದಿತು. ಹಸಿವಿನಿಂದ ಶಕ್ತಿ ಕಳೆದುಕೊಂಡಿದ್ದ ನರಿ ಆ ಪರಿಮಳದ ಜಾಡು ಹಿಡಿದು ಹೋದಾಗ ಒಂದು ಮರದ ಪೊಟರೆಯಲ್ಲಿ ಪೊಟ್ಟಣವೊಂದು ಕಾಣಿಸಿತು. ಅದರಲ್ಲಿ ಆಹಾರವಿದೆಯೆಂಬುದು ನರಿಗೆ ಅರ್ಥವಾಯಿತು. ಯಾರೂ ನೋಡಬಾರದೆಂದು ನರಿ ಪೊಟರೆಯೊಳಗೆ ಹೋಯಿತು. ಅಲ್ಲಿರುವ ಆಹಾರವನ್ನು ಗಬಗಬನೆ ತಿಂದಿತು.

    ಅಷ್ಟು ರುಚಿಯಾದ ಆಹಾರವನ್ನು ನರಿ ಹುಟ್ಟಿದ ಮೇಲೆ ತಿಂದಿರಲಿಲ್ಲ. ಹೊಟ್ಟೆ ತುಂಬಿದ ಸಂತಸದಲ್ಲಿ ಸಣ್ಣ ನಿದ್ರೆಯನ್ನೂ ಮಾಡಿತು. ಆದರೆ ಎಚ್ಚರವಾದಾಗ ಪೊಟರೆಯಿಂದ ಹೊರಗೆ ಬರಲು ನೋಡಿದರೆ ಸಾಧ್ಯವೇ ಆಗಲಿಲ್ಲ. ಆಹಾರ ತಿನ್ನುವ ಮೊದಲು ಸಪೂರವಾಗಿದ್ದ ಅದು ಸುಲಭವಾಗಿ ಒಳಗೆ ಹೋಗಿತ್ತು. ಈಗ ದಪ್ಪವಾಗಿರುವ  ಕಾರಣ ಎಷ್ಟೇ ಪ್ರಯತ್ನಿಸಿದರೂ ಪಾರಾಗುವ ದಾರಿ ಕಾಣಿಸಲಿಲ್ಲ. ಪೊಟರೆಯ ಒಳಗೆ ಆಹಾರದ ಪೊಟ್ಟಣವಿರಿಸಿದವನು ಒಬ್ಬ ಮರ ಕಡಿಯುವ ಕೆಲಸದವನು. ಅವನು ಕೆಲಸ ನಿಲ್ಲಿಸಿ, ಮಧ್ಯಾಹ್ನದ ಊಟ ಮಾಡಲು ಮರದ ಬಳಿಗೆ ಬಂದಾಗ ಆಹಾರ ಕಾಣಿಸಲಿಲ್ಲ. “”ನನ್ನ ಊಟ ಏನಾಯಿತು, ಯಾರು ತೆಗೆದರು?” ಎಂದು ಅವನು ಗೊಣಗಿಕೊಂಡ. ಈ ಮಾತುಗಳು ಒಳಗಿದ್ದ ನರಿಯ ಕಿವಿಗೆ ಬಿದ್ದಿತು. ಏನಾದರೂ ಉಪಾಯ ಮಾಡದಿದ್ದರೆ ಈ ಮನುಷ್ಯ ತನ್ನನ್ನು ಕೊಲ್ಲುವುದು ಖಂಡಿತ ಎಂದು ಅದಕ್ಕೆ ಅರ್ಥವಾಯಿತು. ಇಂತಹ ರುಚಿಕರವಾದ ಆಹಾರವನ್ನು ದಿನವೂ ಊಟ ಮಾಡುತ್ತ ಹಾಯಾಗಿ ಈ ಪೊಟರೆಯೊಳಗೆ ಇರುವ ಯೋಚನೆಯೂ ಅದರೊಂದಿಗೆ ಅದಕ್ಕೆ ಬಂದಿತು.

    ನರಿ ಒಳಗಿನಿಂದಲೇ ದೊಡ್ಡ ದನಿಯಲ್ಲಿ, “”ನಿನ್ನ ಊಟವನ್ನು ನಾನು ಭಕ್ಷಿಸಿದ್ದೇನೆ. ನಾನೊಂದು ಪಿಶಾಚಿ. ನಿನ್ನ ಅಡುಗೆ ನನಗೆ ಬಹಳ ಇಷ್ಟವಾಗಿದೆ. ಇದಕ್ಕಾಗಿ ನಿನಗೆ ಚಿನ್ನದ ನಾಣ್ಯಗಳಿರುವ ಒಂದು ನಿಧಿಯನ್ನು ಕೊಡಬೇಕೆಂದು ಆಶಿಸಿದ್ದೇನೆ” ಎಂದು ಕೂಗಿ ಹೇಳಿತು. ನಿಧಿಯ ಹೆಸರು ಕೇಳಿ ಮರ ಕಡಿಯುವವನಿಗೆ ಸಂತೋಷವಾಯಿತು. ತನ್ನ ಬಡತನ ನೀಗುವ ಸಮಯ ಸನ್ನಿಹಿತವಾಯಿತೆಂದುಕೊಂಡ. “”ಏನೋ ಬಡವನ ಮನೆಯ ಊಟ. ತಮಗೆ ಸಂತೋಷವಾದರೆ ನನಗೂ ಸಂತಸವೇ. ಎಲ್ಲಿ, ನಿಧಿಯನ್ನು ಕೊಟ್ಟುಬಿಡಿ. ಮನೆಗೆ ಕೊಂಡುಹೋಗಿ ನನ್ನ ಬಡತನದ ಬದುಕಿಗೆ ಕೊನೆ ಹೇಳಿಬಿಡುತ್ತೇನೆ” ಎಂದ ಅವನು.

”    “ಹಾಗೆ ಅವಸರಿಸಿದರೆ ಹೇಗೆ? ನಿಧಿ ಈಗಲೇ ಕೊಟ್ಟರೆ ನೀನು ನಾಳೆ ಊಟ ತಂದುಕೊಡುತ್ತೀಯಾ? ಇಲ್ಲ ತಾನೆ? ನಾಳೆಯಿಂದ ನಲುವತ್ತೇಳು ದಿನಗಳ ಕಾಲ ಹೀಗೆಯೇ ಕೋಳಿ ಪದಾರ್ಥ ಮತ್ತು ಅನ್ನವನ್ನು ಪೊಟ್ಟಣ ಕಟ್ಟಿ ತಂದು ಈ ಪೊಟರೆಯಲ್ಲಿರಿಸಿ ಹಿಂತಿರುಗಿ ನೋಡದೆ ಹೋಗಬೇಕು. ನಲುವತ್ತೆಂಟನೆಯ ದಿನ ಒಂದು ಗಾಡಿಯೊಂದಿಗೆ ಬಂದರೆ ಚಿನ್ನದ ನಾಣ್ಯಗಳನ್ನು ಹೇರಿಕೊಂಡು ಹೋಗಬಹುದು. ಆದರೆ ಎರಡನೆಯ ದಿನ ಎರಡು ಕೋಳಿ, ಮೂರನೆಯ ದಿನ ನಾಲ್ಕು ಕೋಳಿ, ನಾಲ್ಕನೆಯ ದಿನ ಎಂಟು ಕೋಳಿ ಹೀಗೆ ಹಿಂದಿನ ದಿನಕ್ಕಿಂತ ಇಮ್ಮಡಿ ಸಂಖ್ಯೆಯ ಕೋಳಿಗಳನ್ನು ಬೇಯಿಸಿ ತರಬೇಕು” ಎಂದು ಹೇಳಿತು ನರಿ.

Advertisement

    ಇದು ಕಳ್ಳ ನರಿಯ ಕುತಂತ್ರವೆಂದು ಮರ ಕಡಿಯುವವನಿಗೆ ಅನುಮಾನವೇ ಬರಲಿಲ್ಲ. ನರಿ ಹೇಳಿದ ಹಾಗೆ ದಿನವೂ ಕೋಳಿಗಳ ಸಂಖ್ಯೆಯನ್ನು ಇಮ್ಮಡಿಗೊಳಿಸುವುದು ಸುಲಭವಾಗಿರಲಿಲ್ಲ. ಗುರುತಿರುವ ಎಲ್ಲರಿಂದಲೂ ಕೋಳಿಗಳನ್ನು ಸಾಲವಾಗಿ ತಂದ. ನಲುವತ್ತೆಂಟು ದಿನಗಳ ಕಾಲವೂ ಪೊಟರೆಯಲ್ಲಿರುವ ನರಿಗೆ ಊಟ ತಂದುಕೊಟ್ಟ. ಕಡೆಯ ದಿನ ಒಂದು ಎತ್ತಿನ ಗಾಡಿಯೊಂದಿಗೆ ಹೊರಟ. “”ನೋಡುತ್ತ ಇರಿ, ಇವತ್ತು ಈ ಗಾಡಿಯ ತುಂಬ ಚಿನ್ನದ ನಾಣ್ಯಗಳನ್ನು ತುಂಬಿಸಿಕೊಂಡು ಬರುತ್ತೇನೆ. ನನಗೆ ನೀವು ಕೋಳಿಗಳನ್ನು ಕೊಟ್ಟಿರಲ್ಲ, ಅದಕ್ಕೆಲ್ಲ ಬೆಲೆಯನ್ನು ಕೊಡುತ್ತೇನೆ” ಎಂದು ಎಲ್ಲರೊಂದಿಗೆ ಹೇಳಿ ಮರದ ಬಳಿಗೆ ಬಂದ. ಪೊಟ್ಟಣವನ್ನು ಪೊಟರೆಯೊಳಗೆ ಇಟ್ಟ.

    ಒಳಗಿದ್ದ ನರಿ, “”ನಲುವತ್ತೆಂಟು ದಿನ ಕಳೆಯಿತು ತಾನೆ? ನಿನಗೆ ಚಂದದ ಮಗಳೊಬ್ಬಳಿರಬೇಕಲ್ಲವೆ? ನಾಳೆ ಅವಳನ್ನು ರೇಷ್ಮೆ ವಸ್ತ್ರ ಉಡಿಸಿ, ಚಿನ್ನಾಭರಣಗಳಿಂದ ಅಲಂಕರಿಸಿ ಇಲ್ಲಿಗೆ ಕರೆತರಬೇಕು. ನಾನು ಅವಳನ್ನು ಮದುವೆಯಾಗಬೇಕೆಂದು ಯೋಚಿಸಿದ್ದೇನೆ” ಎಂದು ಹೇಳಿತು. ಮರ ಕಡಿಯುವವನು ಹೌಹಾರಿದ. ಒಂದು ಪಿಶಾಚಿಗೆ ಮಗಳನ್ನು ಮದುವೆ ಮಾಡಿ ಕೊಡಲು ಅವನ ಮನ ಒಪ್ಪಲಿಲ್ಲ. “”ನೀನು ನಿಧಿ ಕೊಡುವುದಾಗಿ ಹೇಳಿದ್ದೆಯಲ್ಲವೆ? ಅದನ್ನು ಕೊಡು, ನನ್ನ ಮಗಳನ್ನು ಕೇಳಬೇಡ” ಎಂದು ಅಂಗಲಾಚಿದ. ನರಿಯು, “”ನಿಧಿಯೂ ಇಲ್ಲ, ಮಣ್ಣೂ ಇಲ್ಲ. ನಾನೊಂದು ಪಿಶಾಚಿ ಅಂತ ಗೊತ್ತಿದೆ ತಾನೆ? ನಾಳೆ ನನ್ನ ಕೋರಿಕೆ ಈಡೇರದಿದ್ದರೆ ನಿನ್ನ ಗತಿ ಏನಾಗುತ್ತದೆಂದು ಯೋಚಿಸಿದ್ದೀಯಾ?” ಎಂದು ಕೇಳಿತು.

    ಮರ ಕಡಿಯುವವನು ತಲೆಯ ಮೇಲೆ ಕೈ ಹೊತ್ತುಕೊಂಡು ಅಲ್ಲಿಂದ ಹೊರಟ. ದಾರಿಯಲ್ಲಿ ಒಂದು ಮಂಗ ಇತ್ತು. “”ಯಾಕಣ್ಣಾ, ತಲೆಯ ಮೇಲೆ ಕೈ ಹೊತ್ತಿರುವೆ?” ಕೇಳಿತು. ಅವನು “ಗೊಳ್ಳೋ’ ಎಂದು ಅಳುತ್ತ ನಡೆದ ಸಂಗತಿ ಹೇಳಿ, “”ಪಿಶಾಚಿಯಿಂದ ಪಾರಾಗಲು ಏನಾದರೂ ದಾರಿಯಿದ್ದರೆ ಹೇಳು” ಎಂದು ಕೋರಿದ. ಮಂಗ ಪೊಟರೆಯೊಳಗೆ ನರಿ ಇಳಿಯುವುದನ್ನು ನೋಡಿತ್ತು. ಕೋಳಿ ತಿಂದು ಉಬ್ಬಿಕೊಂಡಿರುವ ಅದಕ್ಕೆ ಹೊರಗೆ ಬರಲು ಆಗುವುದಿಲ್ಲವೆಂದೂ ತಿಳಿದಿತ್ತು. ಅದು, “”ನೀನು ಒಂದು ಹಂಡೆ ತುಂಬ ಕುದಿಯುವ ನೀರನ್ನು ತೆಗೆದುಕೊಂಡು ಹೋಗಿ ಆ ಪೊಟರೆಯ ಒಳಗೆ ಸುರಿದುಬಿಡು. ಮುಂದೇನಾಗುತ್ತದೋ ನೋಡು” ಎಂದು ಉಪಾಯ ಹೇಳಿತು. ಮರ ಕಡಿಯುವವ ಮಂಗ ಹೇಳಿದಂತೆಯೇ ಮಾಡಿದ. ಕುದಿಯುವ ನೀರಿನಿಂದ ಒಳಗಿದ್ದ ನರಿ ಹೊರಗೆ ಬರಲಾಗದೆ ಒದ್ದಾಡುತ್ತ ಸತ್ತುಹೋಯಿತು. ಪಿಶಾಚಿಯ ಕಾಟ ನೀಗಿತೆಂದು ಅವನಿಗೆ ಸಂತೋಷವಾಯಿತು.

    ಇನ್ನು ಪಿಶಾಚಿ ವಾಸಿಸುವ ಈ ಮರವೇ ಇರಬಾರದೆಂದು ಟೊಳ್ಳು ಮರವನ್ನು ಮರ ಕಡಿಯುವವನು ಕೊಡಲಿಯಿಂದ ಕಡಿದು ಹಾಕಿದ. ಆಗ ಒಳಗೆ ಸಿಕ್ಕಿಕೊಂಡು ಸತ್ತ ನರಿಯೂ ಕಾಣಿಸಿತು. ಜೊತೆಗೆ ಯಾವುದೋ ಕಾಲದ ಚಿನ್ನದ ನಾಣ್ಯಗಳ ದೊಡ್ಡ ಭಂಡಾರವೇ ಗೋಚರಿಸಿತು. ಅವನು ಎಲ್ಲವನ್ನೂ ಮನೆಗೆ ತಂದು ಬಡತನವನ್ನು ಪರಿಹರಿಸಿಕೊಂಡ. ತನಗೆ ಸಂಪತ್ತು ಬರಲು ಕಾರಣವಾದ ಮಂಗನನ್ನು ಮರೆಯಲಿಲ್ಲ. ಅದರ ಬಳಿಗೆ ಹೋಗಿ, “”ನೀನು ಕಾಡಿನಲ್ಲಿದ್ದು ಯಾಕೆ ಕಷ್ಟಪಡಬೇಕು? ನನ್ನ ಮನೆಗೆ ಬಂದು ಸುಖವಾಗಿ ಇದ್ದುಬಿಡು” ಎಂದು ಹೇಳಿ ಅದನ್ನು ಕರೆದುಕೊಂಡು ಬಂದ.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next