ಮುಂಬಯಿ: ಬಂಟರು ಪರಿಶ್ರಮ ಮತ್ತು ಸಾಹಸದಿಂದ ಮುಂದೆ ಬಂದಿರುವುದನ್ನು ನಾನು ಗಮನಿಸಿದ್ದೇನೆ. ಶತಮಾನಗಳ ಹಿಂದೆ ತಾವು ಮುಂಬಯಿಗೆ ಬಂದಿದ್ದೀರಿ. ಮುಂಬಯಿ ಮತ್ತು ಮಹಾರಾಷ್ಟ್ರದ ಸಂಸ್ಕೃತಿಯನ್ನು ಸಮೃದ್ಧಗೊಳಿಸಿದ್ದೀರಿ. ಮುಂಬಯಿ ಜನತೆಯ ಹೊಟ್ಟೆ ತುಂಬಿಸುವ ಕಾರ್ಯವನ್ನು ಶೆಟ್ಟಿ ಸಮಾಜ ಮಾಡಿದೆ. ಬಂಟರು ಮೂಲ ಸಂಸ್ಕೃತಿಯನ್ನು ಜೀವಂತವಾಗಿಟ್ಟಿರುವುದು ಅಭಿನಂದನೀಯ. ಭಾರತವು ದೇಶವು ಬೇರೆ ಬೇರೆ ಜಾತಿ, ಧರ್ಮವನ್ನು, ಸಂಸ್ಕೃತಿ-ಸಂಸ್ಕಾರವನ್ನು ಜೋಡಿ ಸುವ ದಾರವಾಗಿದೆ. ಸಂಪೂರ್ಣ ದೇಶವು ಈ ಒಂದೇ ದಾರದಲ್ಲಿ ಜೋಡಣೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್ ಅಭಿಪ್ರಾಯಿಸಿದರು.
ಜೂ. 29 ರಂದು ಅಪರಾಹ್ನ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆದ ಬಂಟರ ಸಂಘ ಮುಂಬಯಿ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ 13 ನೇ ಆರ್ಥಿಕ ಸಹಾಯ ಮೇಳದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಸಂಘವು ಶಿಕ್ಷಣಕ್ಕೆ ನೀಡುತ್ತಿರುವ ದೇಣಿಗೆ ಮಹತ್ವಪೂರ್ಣದ್ದಾಗಿದೆ. ಎರಡೂ ಕೋ. ರೂ. ಗಳಿಗೆ ಅಧಿಕ ದೇಣಿಗೆಯನ್ನು ಶಿಕ್ಷಣಕ್ಕೆ ವಿನಿಯೋಗಿಸುತ್ತಿರುವುದು ಮಹತ್ವದ ವಿಷಯವಾಗಿದೆ. ಸಂಘವು ನೀಡಿದ ಈ ದೇಣಿಗೆ ಯನ್ನು ವಿದ್ಯಾರ್ಥಿಗಳು ಪಡೆದು ಭವಿಷ್ಯದಲ್ಲಿ ಸಮಾಜಕ್ಕೆ ವಾಪಸು ನೀಡುವುದು ಬಹು ದೊಡ್ಡ ವಿಚಾರವಾಗಿದೆ. ಸಜ್ಜನರ ಶಕ್ತಿಗೆ ಸರಕಾರ ಯಾವತ್ತೂ ಪುರಸ್ಕಾರ ನೀಡುತ್ತದೆ. ನಿಮ್ಮ ಈ ಸಜ್ಜನ ಶಕ್ತಿಗೆ ಪ್ರೋತ್ಸಾಹದಾಯಕವಾಗಿ ನಿಮಗೆ ಆವಶ್ಯಕವಾಗಿರುವ ಕಾನೂನು ಕಾಲೇಜಿನ ಮಾನ್ಯತೆಗಾಗಿ ಪ್ರಯತ್ನಿಸುತ್ತೇನೆ ಎಂದರು. ಬಂಟ ಸಮಾಜದ ಮಕ್ಕಳು ಜೀವನದಲ್ಲಿ ಸಫಲರಾಗಲಿ ಇದಕ್ಕೆ ಬೇಕಾಗುವ ಎಲ್ಲ ರೀತಿಯ ಸಹಕಾರ ನಿಮಗೆ ಸದಾಯಿದೆ ಎಂದರು.
ದಿ| ವಾಸು ಕೆ. ಶೆಟ್ಟಿ ಅವರ ಸ್ಮರಣಾರ್ಥಕವಾಗಿ ನಡೆದ ಸಮಾರಂಭದ ಪ್ರಾಯೋಜಕತ್ವವನ್ನು ಚರಿಷ್ಮಾ ಬಿಲ್ಡರ್ನ ಸಿಎಂಡಿ ಸುಧೀರ್ ವಿ. ಶೆಟ್ಟಿ ವಹಿಸಿದ್ದರು. ಸಂಘದ ಅಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಸಂಸದ ಗೋಪಾಲ್ ಶೆಟ್ಟಿ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಚರಿಷ್ಮಾ ಬಿಲ್ಡರ್ನ ಸಿಎಂಡಿ ಸುಧೀರ್ ವಿ. ಶೆಟ್ಟಿ, ತುಂಗಾ ಗ್ರೂಪ್ ಆಫ್ ಹೊಟೇಲ್ಸ್ನ ಸಿಎಂಡಿ ಸುಧಾಕರ ಎಸ್. ಹೆಗ್ಡೆ, ಎಂಆರ್ಐ ಹಾಸ್ಪಿಟಾಲಿಟಿ ಬೆಂಗಳೂರು ಇದರ ಸಿಎಂಡಿ ಪ್ರಕಾಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ, ಸಂಘದ ಉಪಾಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಗೌರವ ಪ್ರಧಾನ ಕಾರ್ಯದರ್ಶಿ ಉಳೂ¤ರು ಮೋಹನ್ದಾಸ್ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಐ. ಆರ್. ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್ ಕುಮಾರ್ ಕುತ್ಯಾರ್, ಜತೆ ಕೋಶಾಧಿಕಾರಿ ಮಹೇಶ್ ಎಸ್. ಶೆಟ್ಟಿ, ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಉಪ ಕಾರ್ಯಾಧ್ಯಕ್ಷ ಅಪ್ಪಣ್ಣ ಎಂ. ಶೆಟ್ಟಿ, ಕಾರ್ಯದರ್ಶಿ ಭಾಸ್ಕರ್ ಶೆಟ್ಟಿ ಕಾರ್ನಾಡ್, ಕೋಶಾಧಿಕಾರಿ ಸಿಎ ರಮೇಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯ ರಾಮ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ವಿವೇಕ್ ವಿ. ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಂಟರವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್ ಪಕ್ಕಳ, ವಿಜೇತಾ ಸಂಜೀವ ಶೆಟ್ಟಿ, ಜಯ ಎ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಉಳೂ¤ರು ಮೋಹನ್ದಾಸ್ ಶೆಟ್ಟಿ ವಂದಿಸಿದರು. ಮುಖ್ಯಮಂತ್ರಿ ಫಡ್ನವೀಸ್ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಅಪರಾಹ್ನ 3.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ನಮ್ಮ ಟಿವಿ ಮಂಗಳೂರು ತಂಡದವರಿಂದ ಬಲೆ ತೆಲಿಪಾಲೆ ನಡೆಯಿತು. ಸಮಾಜದ ಸಾವಿರಾರು ಮಕ್ಕಳಿಗೆ ಇದೇ ಸಂದರ್ಭದಲ್ಲಿ ಶೈಕ್ಷಣಿಕ ನೆರವು ನೀಡಲಾಯಿತು.