Advertisement

ನಾಯಕತ್ವಕ್ಕೆ ಇನ್ನೊಂದು ಹೆಸರೇ ಬಂಟ ಸಮಾಜ:ಒಡಿಯೂರು ಶ್ರೀ

04:07 PM Apr 11, 2018 | |

ಪುಣೆ: ಮನುಷ್ಯನ  ಬದುಕಿಗೆ ನಿಜವಾಗಿಯೂ ಬೇಕಾದುದು ಸಂತೋಷ. ಆ ಸಂತೋಷವನ್ನು ನಾವಿಂದು ಪುಣೆಯಲ್ಲಿ ಕಾಣುವಂತಾಗಿದೆ. ಸಮಾಜದಲ್ಲಿ ಮೂರು ವರ್ಗದ ಜನರನ್ನು ನಾವು ಕಾಣಬಹುದಾಗಿದೆ. ಮೊದಲನೆಯವರು ಯಾವುದೇ ಕೆಲಸ ಮಾಡಲು ಹಿಂಜರಿಯುವವರು, ಎರಡನೆಯವರು ಕಾರ್ಯ ಮಾಡಲು ಆರಂಭಿಸಿ ಅರ್ಧದಲ್ಲಿ ಕೈಬಿಡುವವರು, ಮೂರನೆಯದಾಗಿ ಆರಂಭಿಸಿದ ಕೆಲಸವನ್ನು ಮಾಡಿ ತೋರಿಸುವ ಗುಣವುಳ್ಳ ಉತ್ತಮರು. ಪುಣೆಯಲ್ಲಿ ಬಹುಶ ಉತ್ತಮರ ಸಂಖ್ಯೆ ಹೆಚ್ಚಿದ್ದರಿಂದ  ಸಮಾಜದ ಭವ್ಯವಾದ ಛಾವಡಿಯನ್ನು ನಿರ್ಮಿಸಲು ಸಾಧ್ಯವಾಗಿದೆ. ನಾಯಕತ್ವವೆಂದರೆ ಬಲು ಕಷ್ಟದ ಕೆಲಸ. ಕಹಿ ನುಂಗಿದರೆ ಸಿಹಿ ಹಂಚಲು ಸಾಧ್ಯ ಎಂಬುದನ್ನು  ನಾವು ಸಂತೋಷ್‌ ಶೆಟ್ಟಿಯವರ ಕಾರ್ಯ ವೈಖರಿಯಿಂದ ತಿಳಿಯಬಹುದಾಗಿದೆ. ಸಹನೆ ತಾಳ್ಮೆಯೊಂದಿಗೆ ಚಾಣಾಕ್ಷತೆಯೊಂದಿಗೆ ಎಲ್ಲರಲ್ಲೂ ವ್ಯವಹರಿಸಿ ಭವನ ನಿರ್ಮಾಣವನ್ನು ಮಾಡಿದ ಸಂತೋಷ್‌ ಶೆಟ್ಟಿಯವರ ಚಾತುರ್ಯಕ್ಕೆ ಅಭಿನಂದನೆಗಳು ಸಲ್ಲಬೇಕಾಗಿದೆ. ಇಲ್ಲಿ ಸುಂದರ ವಿನ್ಯಾಸದೊಂದಿಗೆ ಅವಧೂತ ಗುರುವರ್ಯರ ಚಿಂತನೆಯೊಂದಿಗೆ, ಸಮಾಜದ ಸಾಧಕರನ್ನು ನೆನಪಿಸುವ ಮೂಲಕ   ನಿರ್ಮಾಣಗೊಂಡ ಚಾವಡಿಯು ತುಳುನಾಡನ್ನು ನೆನಪಿಸುವಂತೆ ಕಂಗೊಳಿಸುತ್ತಿದ್ದು ತುಳುನಾಡಿನಲ್ಲಿಯೇ ಇದ್ದೇನೆ ಎಂದು ಭಾಸವಾಗುತ್ತಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ  ಗುರುದೇವಾನಂದ ಸ್ವಾಮೀಜಿ ನುಡಿದರು.

Advertisement

ಎ. 8 ರಂದು ಬಾರ್ಣೇಯಲ್ಲಿ ಪುಣೆ ಬಂಟರ ಸಂಘವು ನಿರ್ಮಿಸಿದ ಬಂಟರ ಸಾಂಸ್ಕೃತಿಕ ಭವನದ ಶ್ರೀಮತಿ ಲತಾ ಸುಧೀರ್‌  ಶೆಟ್ಟಿ ಸಭಾಗೃಹದಲ್ಲಿ ನಡೆದ ಉದ್ಘಾಟನಾ ಸಂಭ್ರಮದ ಸಮಾರೋಪವನ್ನು ದೀಪಪ್ರಜ್ವಲಿಸಿ ಆಶೀರ್ವಚನ ನೀಡಿದ ಅವರು, ಬಂಟ ಸಮಾಜವು ತನ್ನ ಸಮಾಜಕ್ಕೆ ಬಹಳಷ್ಟು ಕೊಡುಗೆ ನೀಡುತ್ತಾ ಬಂದಿದೆ. ಅದರೊಂದಿಗೆ ಅನ್ಯ ಸಮಾಜದವರಿಗೂ ನೆರಳಾಗಿ ನಿಂತಿದೆ ಎನ್ನಲು ಹರ್ಷವಾಗುತ್ತಿದೆ. ತುಳುನಾಡಿನಲ್ಲಿ ಯಾವುದೇ ಬ್ರಹ್ಮಕಲಶವೇ ಇರಲಿ ಜೀರ್ಣೋದ್ಧಾರದ ಕಾರ್ಯವೇ ಆಗಲಿ ಅದರಲ್ಲಿ ಬಂಟರ ನಾಯಕತ್ವ ಎದ್ದು ಕಾಣುತ್ತದೆ. ನಾಯಕತ್ವಕ್ಕೆ ಇನ್ನೊಂದು ಹೆಸರೇ ಬಂಟ ಸಮಾಜ. ಭಗವಂತ ನೀಡಿದ ಸಂಪತ್ತಿನ ಅಂಶವನ್ನು ಸಮಾಜದ ಹಿತಕ್ಕಾಗಿ ಬಳಕೆ ಮಾಡಬೇಕಾಗಿದೆ. ಇಹಪರದಲ್ಲಿ ಸುಖ ಸಂತೋಷಗಳನ್ನು ಪಡೆಯಬೇಕಾದರೆ ಧರ್ಮದ ಅನುಷ್ಠಾನವಾಗಬೇಕಾಗಿದೆ. ಯಾವಾಗ ನಮ್ಮನ್ನು ಆಧ್ಯಾತ್ಮಿಕ ಬದುಕಿಗೆ ಒಗ್ಗಿಕೊಳ್ಳುತ್ತೇವೆಯೋ ಅವಾಗ ಬದುಕು ಸುಂದರವಾಗುತ್ತದೆ. ಭವಿಷ್ಯದಲ್ಲಿ  ಈ ಚಾವಡಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಬೆಳವಣಿಗೆಗೆ ಸಾಧ್ಯವಾಗಬಹುದು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘ ಅಧ್ಯಕ್ಷ ಸಂತೋಷ್‌ ಶೆಟ್ಟಿ ಮಾತನಾಡಿ, ಮೊದಲಾಗಿ ಭವನದ ಉದ್ಘಾಟನಾ ಸಮಾರಂಭಕ್ಕೆ ನಮ್ಮ ಆಮಂತ್ರಣಕ್ಕೆ ಸ್ಪಂದಿಸಿ ಪ್ರೀತಿಯಿಂದ  ಆಗಮಿಸಿದ ಮಹಾದಾನಿ ಅತಿಥಿಗಣ್ಯರಿಗೆ ತುಂಬುಹೃದಯದ ಕೃತಜ್ಞತೆಗಳು. ಬಂಟರೆಂಬ ಅಭಿಮಾನ ನಮ್ಮೆಲ್ಲರನ್ನೂ ಇಲ್ಲಿ ಒಂದುಗೂಡಿಸಿದೆ. ಮಾತು ಕೇವಲ ಮಾತಾಗಬಾರದು, ಮಾತು ಸಾಧನೆಯಾಗಬೇಕು, ಮಾತು ಸಾಧನೆಗೆ ಸೇತುವೆಯಾಗಬೇಕೆಂಬ ಅಭಿಮತ ನನ್ನದಾಗಿದೆ. ಭಗವಂತ ನೀಡಿದ ವಿಶೇಷ ಶಕ್ತಿಯೊಂದು ಇಲ್ಲಿ ನನಗೆ ಪ್ರೇರಣೆ ನೀಡಿದ್ದು,  ಸಮಾಜಸೇವೆಗೆ ಸಿಕ್ಕಿದ ಅವಕಾಶವೆಂದು ಪರಿಗಣಿಸಿ ಭವನದ ಕಾರ್ಯ ಪೂರ್ಣಗೊಳ್ಳುವಂತಾಗಿದೆ. ದಾನಿಗಳಿಗೆ ವಂದನೆಗಳು. ಭವಿಷ್ಯದಲ್ಲಿ ಸಮಾಜ ಸೇವೆಗನುಗುಣವಾಗಿ ಕಲ್ಪವೃಕ್ಷ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ  ಮೀರಾ-ದಹಾಣು ಬಂಟ್ಸ್‌ ಇದರ ಗೌರವಾಧ್ಯಕ್ಷ ವಿರಾರ್‌ ಶಂಕರ್‌ ಶೆಟ್ಟಿ ಇವರು  ಮಾತನಾಡಿ, ಪುಣೆ ಬಂಟರ ಅಭಿಮಾನದ  ಭವನವನ್ನು ಪ್ರವೇಶಿಸುವಂತೆಯೇ ಆಧ್ಯಾತ್ಮಿಕ ಸೆಳೆತ ನಮ್ಮದಾಗುತ್ತದೆ. ಭವಿಷ್ಯದಲ್ಲಿ ಈ ವೇದಿಕೆಯೊಂದಿಗೆ ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ, ಜನಪರ ಕಾರ್ಯಗಳನ್ನು ಸಂಸ್ಥೆ ಮಾಡುವಂತಾಗಲಿ ಎಂದರು.

Advertisement

ಉಡುಪಿಯ ಮಾಜಿ ಸಂಸದರಾದ ಜಯಪ್ರಕಾಶ್‌ ಹೆಗ್ಡೆ ಇವರು ಮಾತನಾಡಿ, ಸಮಾಜದ ಆಸ್ತಿಯಾದ ಈ ಭವನ ಸುಂದರವಾಗಿ ನಿರ್ಮಾಣಗೊಂಡಿದ್ದು, ಭವಿಷ್ಯದಲ್ಲಿ ಮಕ್ಕಳಲ್ಲಿ ಕಲಾ, ಕ್ರೀಡಾಸಕ್ತಿಯನ್ನು ಬೆಳೆಸುವಲ್ಲಿ ವೇದಿಕೆಯಾಗಲಿ. ಸ್ಥಳೀಯ ಜನರಿಗೂ ಗೌರವ ನೀಡುತ್ತಾ ಬಂದರೆ ಶಾಶ್ವತವಾಗಿ ಸಮಾಜದ ನೆನಪು ಉಳಿಯುವಂತಾಗುತ್ತದೆ ಎಂದರು.  ಬಂಟವಾಳ ಬಂಟರ ಸಂಘದ ಅಧ್ಯಕ್ಷ  ನಗ್ರಿಗುತ್ತು ವಿವೇಕ್‌ ಶೆಟ್ಟಿ ಮಾತನಾಡಿ,  ಈ ಭವನವನ್ನು ಭವ್ಯವಾಗಿ ನಿರ್ಮಿಸಿ ಸಂತೋಷ್‌ ಶೆಟ್ಟಿಯವರು ಮಾಡಿದ ಸಾಧನೆ  ಚರಿತ್ರೆಯ ಪುಟಗಳಲ್ಲಿ ದಾಖಲಾಗುವಂತೆ ಆಗಿದೆ ಎಂದರು.

ಅತಿಥಿಗಳಾಗಿ ಪಾಲ್ಗೊಂಡ ಉಡುಪಿ ಬಡಗಬೆಟ್ಟು ಕ್ರೆಡಿಟ್‌ ಕೋ. ಆಪರೇಟಿವ್‌ ಸೊಸೈಟಿಯ ಪ್ರಧಾನ ವ್ಯವಸ್ಥಾಪಕರಾದ ಜಯಕರ ಶೆಟ್ಟಿ ಇಂದ್ರಾಳಿ,     ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ಸಾಂತೂರು ಭಾಸ್ಕರ್‌ ಶೆಟ್ಟಿ,   ಬಂಟ್ಸ್‌ ಅಸೋಸಿಯೇಶನ್‌ ಥಾಣೆ  ಅಧ್ಯಕ್ಷ ಕುಶಲ್‌ ಸಿ. ಭಂಡಾರಿ, ಪುಣೆ ರಾಜಾಪುರ ಸಾರಸ್ವತ ಸಂಘದ ಅಧ್ಯಕ್ಷ ಸದಾನಂದ ನಾಯಕ್‌, ಪುಣೆ ಕನ್ನಡ ಸಂಘದ ಉಪಾಧ್ಯಕ್ಷೆ  ಇಂದಿರಾ ಸಾಲ್ಯಾನ್‌,   ತುಳು ಸಂಘ ಬರೋಡದ ಅಧ್ಯಕ್ಷ ಶಶಿಧರ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಮನೋಹರ ಶೆಟ್ಟಿ, ಪುಣೆ ಕುಲಾಲ ಸಂಘದ ಅಧ್ಯಕ್ಷ ಸದಾಶಿವ್‌ ಬಂಜನ್‌ ಮೊದಲಾದವರು ಸಂದಭೋìಚಿತವಾಗಿ ಮಾತನಾಡಿ ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ಪ್ರಶಂಸಿಸಿ, ಅಧ್ಯಕ್ಷ ಸಂತೋಷ್‌ ಶೆಟ್ಟಿ ಅವರನ್ನು ಅಭಿನಂದಿಸಿ ಶುಭಹಾರೈಸಿದರು.

ವೇದಿಕೆಯಲ್ಲಿ ಖ್ಯಾತ ಸಂಗೀತ ನಿರ್ದೇಶಕ, ನಟ ಗುರುಕಿರಣ್‌ ಶೆಟ್ಟಿ, ಸಂಘದ ಉಪಾಧ್ಯಕ್ಷರಾದ ರಾಮಕೃಷ್ಣ ಶೆಟ್ಟಿ, ಮಾಧವ ಆರ್‌.  ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ, ಕೋಶಾಧಿಕಾರಿ ವೈ. ಚಂದ್ರಹಾಸ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ ಉಪಸ್ಥಿತರಿದ್ದರು.

ಒಡಿಯೂರು ಶ್ರೀಗಳನ್ನು ಸಂತೋಷ್‌ ಶೆಟ್ಟಿ ದಂಪತಿ  ಶಾಲು ಹೊದೆಸಿ, ಹಾರಾರ್ಪಣೆ ಹಾಗೂ ಫಲಪುಷ್ಪಗಳನ್ನು ನೀಡಿ ಗೌರವಿಸಿದರು. ಅತಿಥಿ-ಗಣ್ಯರನ್ನು ಶಾಲು ಹೊದೆಸಿ, ನೆನಪಿನ ಕಾಣಿಕೆಯನ್ನಿತ್ತು ಸಮ್ಮಾನಿಸಲಾಯಿತು. ಈ ಸಂದರ್ಭ ಸಂಘದ ಪದಾಧಿಕಾರಿಗಳು ಹಾಗೂ ಬಂಟ್ಸ್‌ ಅಸೋಸಿಯೇಶನ್‌ ಪುಣೆ ವತಿಯಿಂದ ಸಂತೋಷ್‌ ಶೆಟ್ಟಿ ದಂಪತಿಯನ್ನು  ಸಮ್ಮಾನಿಸಲಾಯಿತು. ಸಂಘದ ಮಹಿಳಾ ವಿಭಾಗದ ವತಿಯಿಂದ ಮಹಿಳಾ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿಯವರನ್ನು ಸಮ್ಮಾನಿಸಿದರು. ಸಾಂಸ್ಕೃತಿಕ ಕಾರ್ಯಾಧ್ಯಕ್ಷ ಪ್ರವೀಣ್‌ ಶೆಟ್ಟಿ ಪುತ್ತೂರು ವಂದಿಸಿದರು. ಕಾರ್ಯಕ್ರಮವನ್ನು ಕರ್ನೂರು ಮೋಹನ್‌ ರೈ ಹಾಗೂ ನಮ್ಮ ಟಿವಿ ನಿರೂಪಕ ನವೀನ್‌  ಶೆಟ್ಟಿ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪಟ್ಲ ಸತೀಶ್‌ ಶೆಟ್ಟಿ ಮತ್ತು ಬಳಗದಿಂದ ಯಕ್ಷಗಾನ ನಾಟ್ಯ ವೈಭವ  ಹಾಗೂ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್‌ ಶೆಟ್ಟಿ ಬಳಗದಿಂದ ಗುರುಕಿರಣ್‌ ನೈಟ್ಸ್‌ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಸಮಾಜ ಬಾಂಧವರು, ತುಳು-ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 

ಹೊರನಾಡಿನ ತುಳು-ಕನ್ನಡಿಗರ ಸಂಘ ಸಂಸ್ಥೆಗಳು ಒಂದು ರೀತಿಯ ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ. ಸಂಸ್ಕೃತಿ ಮತ್ತು ನಾಗರಿಗತೆ ಜೊತೆ ಜೊತೆಗೆ ರೂಪಾಂತರಗೊಳ್ಳುತ್ತಾ ಹೋಗುತ್ತದೆ. ಪುಣೆಯಲ್ಲಿ ಬಂಟರ ಈ ಭವ್ಯವಾದ ಕಟ್ಟಡ ಹೊರಗೆ ನಾಗರಿಕತೆಯನ್ನು ಪರಿಚಯಿಸಿದರೆ ಒಳಗೆ ಸಾಂಸ್ಕೃತಿಕ ಭವ್ಯತೆಯನ್ನು ಸಾರುತ್ತದೆ. ಭವಿಷ್ಯದಲ್ಲಿ ಇವೆರಡರ ಕೇಂದ್ರವಾಗಿ ಬೆಳೆಯಲಿ  
ಬಾಲಕೃಷ್ಣ ಎ.ವಿ. ಹೊಳ್ಳ , ಉದಯವಾಣಿ

ಪುಣೆಯಲ್ಲಿ ಸಮಾಜ ಬಾಂಧವರ ಸಹಕಾರದೊಂದಿಗೆ ಸಮಾಜದ ಕೊಡುಗೆಯಾಗಿ ಸಂತೋಷ್‌ ಶೆಟ್ಟಿಯವರ ನೇತೃತ್ವದಲ್ಲಿ  ಭವ್ಯವಾದ ಭವನ ನಿರ್ಮಾಣಗೊಂಡಿರು ವುದು ಶ್ಲಾಘನೀಯ ಕಾರ್ಯ ವಾಗಿದೆ. ಪುಣೆ ಬಂಟರ ಚರಿತ್ರೆಯಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಸಮಾಜ ದ ಸೇವೆಗೆ ದಾನಿಗಳ ಕೊಡುಗೆಗೆ ತಲೆ ಬಾಗಬೇಕಾಗಿದೆ
 ಚಂದ್ರಶೇಖರ ಪಾಲೆತ್ತಾಡಿ,ಅಧ್ಯಕ್ಷರು,ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟÅ

ನಾವು ಸಮಾಜದ ಋಣ ಸಂದಾಯ ಮಾಡುವಂತೆ ಈ ಸುಂದರ ಭವನವನ್ನು ಸಮಾಜಕ್ಕೊಪ್ಪಿಸಲಾಗಿದ್ದು, ಎÇÉಾ ಸಮಾಜ ಬಾಂಧವರೊಂದಿಗೂ  ಬೆರೆತು ಬಾಳುವ ಬಂಟ ಸಮಾಜದ ಕಾರ್ಯ ಅಭಿನಂದನೀಯವಾಗಿದೆ  
ಕಡಂದಲೆ  ಸುರೇಶ್‌ ಭಂಡಾರಿ,ಆಡಳಿತ ಮೊಕ್ತೇಸರು, ಶ್ರೀ ಕಚ್ಚಾರು  ನಾಗೇಶ್ವರ ದೇವಸ್ಥಾನ ಬಾಕೂìರು

ಭಾರತ ದೇಶದ ಎÇÉಾ ಬಂಟರ ಸಂಘಗಳ ಭವನಕ್ಕಿಂತಲೂ ಶ್ರೇಷ್ಠ ರೀತಿಯಲ್ಲಿ ಪುಣೆಯಲ್ಲಿ ನಿರ್ಮಾ ಣಗೊಂಡಿದೆ. ಸಮಾಜದ ಹಿತಕ್ಕಾಗಿ ಸಾಧನೆ ಮಾಡಿದ ಕೆ. ಎಸ್‌. ಹೆಗ್ಡೆ ಹಾಗೂ ಮೂಲ್ಕಿ ಸುಂದರರಾಮ ಶೆಟ್ಟಿ ಯವರ ಪುತ್ಥಳಿ ಅಳವಡಿಸಿರುವುದು ಆದರ್ಶ ಕಾರ್ಯವಾಗಿದೆ 
ಪ್ರವೀಣ್‌ ಶೆಟ್ಟಿ  ವಕ್ವಾಡಿ,ಸಿಎಂಡಿ : ಫೋರ್ಚುನ್‌ ಗ್ರೂಪ್‌ ಆಪ್‌ ಹೊಟೇಲ್ಸ್‌

ಸುಸಜ್ಜಿತ ಭವನವನ್ನು ಸಂಘದ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳ  ಹಾಗೂ ದಾನಿಗಳ ನೆರವಿನೊಂದಿಗೆ ಭಗೀರಥ ಪ್ರಯತ್ನದೊಂದಿಗೆ ಅಧ್ಯಕ್ಷರ ಸಾರಥ್ಯದಲ್ಲಿ ನಿರ್ಮಿಸಿರುವುದು ಸಮಾಜದ ಹೆಮ್ಮೆಯಾಗಿದೆ. ಇದರೊಂದಿಗೆ ನಮ್ಮ ತುಳು ಭಾಷೆ ಸಂಸ್ಕೃತಿಯನ್ನು ಉಳಿಸುವ ಕಾರ್ಯವಾಗಲಿ – 
 ಡಾ|  ಸತ್ಯಪ್ರಕಾಶ್‌ ಶೆಟ್ಟಿ ,ಮಾಜಿ ಅಧ್ಯಕ್ಷರು , ಮುಲುಂಡ್‌ ಬಂಟ್ಸ್‌

ಸಮಾಜಕ್ಕೆ ಯಾವ ರೀತಿಯಲ್ಲಿ ಸೇವೆ ಸಲ್ಲಿಸಬಹುದೆಂದು ಸಂತೋಷ್‌ ಶೆಟ್ಟಿಯವರು ತೋರಿಸಿಕೊಟ್ಟಿ¨ªಾರೆ. ಭವನಕ್ಕೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ನಿರಂತರವಾಗಿ ಇನ್ನಷ್ಟು ಸಮಾಜ ಸೇವೆಗಳು ನಡೆಯುತ್ತಿರಲಿ 
ಮಹೇಶ್‌ ಹೆಗ್ಡೆ ,ಅಧ್ಯಕ್ಷರು ,ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘ

ಮರಾಠಿ ಮಣ್ಣಿನಲ್ಲಿ ಬಂಟರ ಪ್ರಭೆಯನ್ನು ಬೀರಿ  ಭವನ ನಿರ್ಮಿಸಿ ಒಗ್ಗಟ್ಟಿನಲ್ಲಿ ಬಲವಿದೆ ಎಂದು ತೋರಿಸಿಕೊಟ್ಟವರು ಸಂತೋಷ್‌ ಶೆಟ್ಟಿಯವರು. ಪುಣೆಯ ತುಳು-ಕನ್ನಡಿಗರಿಗೆ ಇದೊಂದು ಹೆಮ್ಮೆಯ ವಿಷಯವಾಗಿದೆ. ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಸಮಿತಿಯ ಸದಸ್ಯರು ಅಭಿನಂದನಾರ್ಹರು 
ನ್ಯಾಯವಾದಿ ಸುಭಾಶ್‌ ಶೆಟ್ಟಿ ,ಅಧ್ಯಕ್ಷರು, ಬೋಂಬೆ ಬಂಟ್ಸ್‌ ಅಸೋಸಿಯೇಶನ್‌

ಚಿತ್ರ-ವರದಿ: ಕಿರಣ್‌ ಬಿ. ರೈ ಕರ್ನೂರು.

Advertisement

Udayavani is now on Telegram. Click here to join our channel and stay updated with the latest news.

Next