Advertisement

“ಬಲ್ಕ್ ಕಾಂಪೋಸ್ಟಿಂಗ್‌’ಪ್ರಾಯೋಗಿಕವಾಗಿ ಆರಂಭ

12:17 AM Dec 26, 2019 | Sriram |

ಮಹಾನಗರ: ನಗರಾದ್ಯಂತ 5 ವರ್ಷಗಳ ಕಾಲ ಸ್ವತ್ಛತಾ ಆಂದೋಲನ ನಡೆಸಿರುವ ರಾಮಕೃಷ್ಣ ಮಿಷನ್‌ ಮುಂದಿನ ದಿನಗಳಲ್ಲಿ ತ್ಯಾಜ್ಯವನ್ನು ಅದು ಉತ್ಪಾದನೆಯಾಗುವ ಸ್ಥಳದಲ್ಲಿಯೇ ನಿರ್ವಹಣೆ ಮಾಡುವ ಯೋಜನೆಗೆ ಹೆಚ್ಚು ಆದ್ಯತೆ ನೀಡಲು ನಿರ್ಧರಿಸಿದೆ.

Advertisement

ಮಠದ ಆವರಣದಲ್ಲಿಯೇ ಪ್ರಾಯೋ ಗಿಕವಾಗಿ ಸಾವಯವ ಗೊಬ್ಬರ ಉತ್ಪಾದನೆ ಆರಂಭಿಸಿದೆ. ಅಲ್ಲದೆ ಮನಪಾ ಕೂಡ “ಬಲ್ಕ್ ಕಾಂಪೋಸ್ಟಿಂಗ್‌’ ಕಡ್ಡಾಯಗೊಳಿಸಿದ್ದು ಅದರ ಅನುಷ್ಠಾನಕ್ಕಾಗಿ ಜಾಗೃತಿ ವ್ಯಾಪಕಗೊಳಿಸುತ್ತಿದೆ.

ಸಮೀಕ್ಷೆ ಆರಂಭ
ರಾಮಕೃಷ್ಣ ಮಿಷನ್‌ ವತಿಯಿಂದ 2 ವರ್ಷಗಳ ಹಿಂದೆ ನಗರದ ಸುಮಾರು 2 ಸಾವಿರ ಮನೆಗಳಲ್ಲಿ ಆರಂಭಿಸಲಾದ “ಮಡಕೆ ಗೊಬ್ಬರ’ (ಪಾಟ್‌ ಕಾಂಪೋಸ್ಟಿಂಗ್‌) ಯೋಜನೆಯನ್ನು ನಗರದ ಎಲ್ಲ ಕಟ್ಟಡ, ಮನೆಗಳಿಗೆ ವಿಸ್ತರಿಸಲು ನಿರ್ಧರಿಸಿದೆ.

“ಪಾಟ್‌ ಕಾಂಪೋಸ್ಟಿಂಗ್‌’ನ ಯಶಸ್ಸಿನ ಕುರಿತು 15 ದಿನಗಳಿಂದ ಸಮೀಕ್ಷೆ ನಡೆ ಯುತ್ತಿದ್ದು, ಪ್ರತಿದಿನ 10 ಮನೆಗಳಿಗೆ ಭೇಟಿ ಮಾಡಿ ಸಂಪೂರ್ಣ ಮಾಹಿತಿ ಪಡೆ ಯಲಾಗುತ್ತಿದೆ. ಈ ಯೋಜನೆ ಶೇ. 90 ರಷ್ಟು ಯಶಸ್ಸಾಗಿರುವುದು ಗೊತ್ತಾಗಿದೆ. ಸದ್ಯ ಮಡಕೆ ಗೊಬ್ಬರ ವಿಧಾನದಿಂದ ಉತ್ಪತ್ತಿಯಾಗುವ ಗೊಬ್ಬರವನ್ನು ಗಿಡಗಳಿಗೆ ಬಳಸುತ್ತಿದ್ದಾರೆ. ಒಂದು ವೇಳೆ ಅವರಿಗೆ ಆ ಗೊಬ್ಬರದ ಅಗತ್ಯ ಇಲ್ಲವಾದರೆ ಮುಂದಿನ ದಿನಗಳಲ್ಲಿ ಅದನ್ನು ರಾಮಕೃಷ್ಣ ಮಿಷನ್‌ ವತಿಯಿಂದಲೇ ಸಂಗ್ರಹಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ’ ಮಠದ ಶ್ರೀ ಏಕಗಮ್ಯಾನಂದ ಸ್ವಾಮೀಜಿ ತಿಳಿಸಿದ್ದಾರೆ.

ಎಂಸಿಎಂಫ್ ಪ್ರಮಾಣಪತ್ರ
ಮನೆ/ ಫ್ಲ್ಯಾಟ್‌ಗಳಲ್ಲಿ ನಡೆಯುತ್ತಿರುವ “ಮಡಕೆ ಗೊಬ್ಬರ’ (ಪಾಟ್‌ ಕಾಂಪೋಸ್ಟಿಂಗ್‌)ಕ್ಕೆ ಎಂಸಿಎಫ್ ನಿಂದ “ಉತ್ತಮ ಗೊಬ್ಬರ’ ಎಂಬ ಪ್ರಮಾಣಪತ್ರ ದೊರೆತಿದೆ. ಇದೇ ಮಾದರಿಯಲ್ಲಿ ಮಠದಲ್ಲಿ ಸ್ವಲ್ಪ ದೊಡ್ಡ ಮಟ್ಟದಲ್ಲಿ “ಬಲ್ಕ್ ಕಾಂಪೋಸ್ಟಿಂಗ್‌’ ಘಟಕವನ್ನು ನಾಲ್ಕು ತಿಂಗಳು ಹಿಂದೆ ಆರಂಭಿಸಲಾಗಿದೆ. ಇದರಿಂದ ಉತ್ಪತ್ತಿಯಾಗುವ ಗೊಬ್ಬರವನ್ನು ಮಠದ ಸುಮಾರು 7 ಎಕ್ರೆ ತೋಟ, ಉದ್ಯಾನಕ್ಕೆ ಬಳಕೆ ಮಾಡಲಾಗುತ್ತಿದೆ. ಈ ರೀತಿಯ ಗೊಬ್ಬರದಿಂದ ಹಸಿ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ಜತೆಗೆ ಆದಾಯ ಕೂಡ ಗಳಿಸಬಹುದು. ಇಂತಹ ಯೋಜನೆಗಳು ತತ್‌ಕ್ಷಣಕ್ಕೆ ಪೂರ್ಣ ಯಶಸ್ಸಾಗದೇ ಇದ್ದರೂ ಕಾಲಕ್ರಮಾಣ ಖಂಡಿತವಾಗಿಯೂ ಶಾಶ್ವತ ಪರಿಹಾರ ಒದಗಿಸುತ್ತವೆ. ಮಠದಲ್ಲಿ 120 ಮಂದಿ ಇದ್ದಾರೆ. ಇಲ್ಲಿ ಉತ್ಪತ್ತಿಯಾಗುವ ಕಸದಿಂದ ಗೊಬ್ಬರ ಮಾಡುವ ಪ್ರಕ್ರಿಯೆ ಸರಳವಾಗಿ ನಡೆಯುತ್ತದೆ. ಯಾವುದೇ ಯಂತ್ರಗಳನ್ನು ಬಳಸಿಲ್ಲ. ಹೂಡಿಕೆಯನ್ನೂ ಮಾಡಿಲ್ಲ. ಇದರ ನಿರ್ವಹಣೆಗೆ ಓರ್ವ ವ್ಯಕ್ತಿ 5 ನಿಮಿಷ ಮೀಸಲಿಟ್ಟರೆ ಸಾಕಾಗುತ್ತಿದೆ ಎನ್ನುತ್ತಾರೆ ಸ್ವಾಮೀಜಿ.

Advertisement

ಸ್ವಯಂ ಸೇವಕರಿಂದ ಅಭಿಯಾನ ಮುಂದುವರಿಕೆ
ರಾಮಕೃಷ್ಣ ಮಿಷನ್‌ 5 ವರ್ಷಗಳ ಕಾಲ ಸ್ವತ್ಛತಾ ಅಭಿಯಾನಕ್ಕೆ ವೇದಿಕೆ ಒದಗಿಸಿತ್ತು. ಕಳೆದ ಅಕ್ಟೋಬರ್‌ನಲ್ಲಿ ಅಭಿಯಾನ ಕೊನೆಗೊಳಿಸಿತ್ತು. ಆದರೆ 5 ವರ್ಷಗಳಿಂದ ಪ್ರತಿ ರವಿವಾರ ಸ್ವತ್ಛತಾ ಕಾರ್ಯ ಮಾಡುತ್ತಿದ್ದ ಸ್ವಯಂ ಸೇವಕರ ಪೈಕಿ ಸುಮಾರು 100 ಮಂದಿ ಈಗಲೂ ಪ್ರತಿ ರವಿವಾರ ಸ್ವತ್ಛತಾ ಆಂದೋಲನ ನಡೆಸುತ್ತಿದ್ದಾರೆ. ನಗರದ ಶೇ.70ರಿಂದ 80 ಜನರಿಗೆ ಸ್ವತ್ಛತೆಯ ಬಗ್ಗೆ ಜಾಗೃತಿ ಮೂಡಿದೆ. ಮುಂದೆ ಯಾವ ರೀತಿಯ ಕೆಲಸ ಮಾಡಬೇಕು ಎಂಬ ಬಗ್ಗೆ ಫೆಬ್ರವರಿಯಲ್ಲಿ ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ.
-ಶ್ರೀ ಏಕಗಮ್ಯಾನಂದ ಸ್ವಾಮೀಜಿ,
ರಾಮಕೃಷ್ಣ ಮಠ, ಮಂಗಳೂರು

ಬಲ್ಕ್ ವೇಸ್ಟ್‌: ಡಿ. 31 ಕೊನೆಯ ದಿನ
ಬಲ್ಕ್ ವೇಸ್ಟ್‌ ಉತ್ಪಾದನೆಯಾಗುವ ಅಪಾರ್ಟ್‌ಮೆಂಟ್‌, ಹೊಟೇಲ್‌, ಮಾಲ್‌ನವರು ಕಡ್ಡಾಯವಾಗಿ ಕಾಂಪೋಸ್ಟ್‌ ಘಟಕ ಅಳವಡಿಸಿಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ. 1,948 ಕಟ್ಟಡಗಳಿಗೆ ನೋಟೀಸ್‌ ನೀಡಲಾಗಿದೆ. ಈ ರೀತಿ ಘಟಕ ಅಳವಡಿಸಿಕೊಂಡವರಿಗೆ ತೆರಿಗೆ ರಿಯಾಯಿತಿಯ ಲಾಭವೂ ದೊರೆಯುತ್ತದೆ. ಘಟಕ ಅಳವಡಿಸಲು ಡಿ. 31 ಕೊನೆಯ ದಿನಾಂಕವಾಗಿದೆ. ವಿವಿಧೆಡೆ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
– ಮಧು ಮನೋಹರ್‌,
ಪರಿಸರ ಎಂಜಿನಿಯರ್‌, ಮಹಾನಗರ ಪಾಲಿಕೆ

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next