Advertisement

“ಜಿಲ್ಲೆಯ ಎಲ್ಲ ಸರಕಾರಿ ಶಾಲೆಗಳಲ್ಲಿ ಆಟದ ಮೈದಾನ ನಿರ್ಮಿಸಿ’

01:27 AM Feb 01, 2020 | Sriram |

ಉಡುಪಿ: ಜಿಲ್ಲೆಯಲ್ಲಿರುವ ಎಲ್ಲ ಸರಕಾರಿ ಶಾಲೆಗಳಿಗೆ ಆಟದ ಮೈದಾನವನ್ನು ನಿರ್ಮಿಸಿ, ಆಟೋಟಗಳಿಗೆ ಒತ್ತು ನೀಡಿ ಮಕ್ಕಳ ಸಂಪೂರ್ಣ ಬೆಳವಣಿಗೆಗೆ ಆದ್ಯತೆ ನೀಡಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ. ಮಹೇಶ್ವರ ರಾವ್‌ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಗುರುವಾರ ರಜತಾದ್ರಿಯ ಜಿಲ್ಲಾ ಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ನಡೆದ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಒಟ್ಟು 580 ಸರಕಾರಿ ಶಾಲೆಗಳಿದ್ದು, ಅದರಲ್ಲಿ ಮೊದಲನೇ ಹಂತದಲ್ಲಿ ಕನಿಷ್ಠ 30 ಶಾಲೆಗಳ ಗುರಿ ನಿಗದಿ ಮಾಡಿಕೊಂಡು ಶಾಲಾ ಮಕ್ಕಳ ಆಟ-ಪಾಠಕ್ಕೆ ಉಪಯೋಗವಾಗುವಂತಹ ವಿಶಾಲ ವಾದ ಆಟದ ಮೈದಾನಗಳನ್ನು ನಿರ್ಮಿಸಿಕೊಡಬೇಕು. ಎಲ್ಲ ಶಾಲೆಗಳ ದೈಹಿಕ ಶಿಕ್ಷಕರು ಮತ್ತು ಯುವಜನ ಸಬಲೀಕರಣ ಇಲಾಖಾಧಿಕಾರಿಗಳು ಜತೆಯಾಗಿ ಸೇರಿ ಸಮಾಲೋಚನೆ ನಡೆಸಿ ಈ ಕೆಲಸವನ್ನು ಅನುಷ್ಠಾನಗೊಳಿಸಿ ಮುಂದಿನ ಸಭೆಯ ಅವಧಿಯಲ್ಲಿ ಕಾರ್ಯಗತಗೊಳಿಸಿದ ವರದಿಯ ಜತೆ ಹಾಜರಾಗಬೇಕು ಎಂದು ನಿರ್ದೇಶನ ನೀಡಿದರು.

ಮಳೆಯಿಂದ ಹಾನಿಗೊಳಗಾದ ರಸ್ತೆಗಳ ದುರಸ್ತಿ ಕಾಮಗಾರಿ ಮತ್ತು ನಿರ್ಮಿತಿ ಕೇಂದ್ರದಿಂದ ಬಾಕಿ ಉಳಿದಿರುವ ಶಾಲಾ ಕಟ್ಟಡದ ದುರಸ್ತಿ ಕಾರ್ಯಗಳನ್ನು ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಸೂಚಿಸಿದರು.

ಅಂಗನವಾಡಿ ಭೇಟಿ ಕಾರ್ಯ ಕ್ರಮಗಳನ್ನು ಜಿಲ್ಲೆಯಾದ್ಯಂತ ಹಮ್ಮಿ ಕೊಳ್ಳಲಾಗಿದೆ. 39 ಅಧಿಕಾರಿಗಳನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದ್ದು , 22 ಅಧಿಕಾರಿಗಳು ಮೊದಲನೇ ಸುತ್ತಿನ ವರದಿಯನ್ನು ಇಲಾಖೆಗೆ ನೀಡಿರುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಆರ್‌. ಶೇಷಪ್ಪ ಹೇಳಿದರು.

Advertisement

ಜಿಲ್ಲೆಯಲ್ಲಿ 299 ವೈದ್ಯಕೀಯ ಯಂತ್ರೋಪಕರಣಗಳು ಕಾರ್ಯ ನಿರ್ವಹಿಸುತ್ತಿದ್ದು, 40 ಉಪಕರಣಗಳು ಹಾಳಾಗಿವೆ ಎಂದು ಜಿಲ್ಲಾ ಸರ್ಜನ್‌ ಮಧುಸೂಧನ್‌ ನಾಯಕ್‌ ತಿಳಿಸಿದರು.

ದುರಸ್ತಿ ಆಗಬೇಕಾದ ಉಪಕರಣಗಳ ಲೆಕ್ಕಪರಿಶೋಧನೆ ನಡೆಸಿ ದುರಸ್ತಿ ಮಾಡಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಉಸ್ತುವಾರಿ ಕಾರ್ಯದರ್ಶಿಗಳು ಸೂಚಿಸಿದರು.

ಮಳೆಯಿಂದಾಗಿ ಹಾನಿಗೊಳಗಾದ ಮನೆ ಪುನರ್‌ನಿರ್ಮಾಣ ಕಾರ್ಯಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದಾಗ ಪ್ರತಿಕ್ರಿಯಿಸಿದ ಉಸ್ತುವಾರಿ ಕಾರ್ಯ ದರ್ಶಿ, ಮನೆ ನಿರ್ಮಾಣ ಮಾಡಲು ಆಸಕ್ತಿ ತೋರುವವರಿಗೆ ಗಡುವು ನೀಡಿ ಬಾಕಿ ಇರುವ ಮನೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಸೂಚಿಸಿದರು.

ಉಸ್ತುವಾರಿ ಕಾರ್ಯದರ್ಶಿಗಳು, ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ಸರ್ವೆಯರ್‌ಗಳು ಜಂಟಿಯಾಗಿ ಸರ್ವೆ ನಡೆಸಿ ಗೊಂದಲಗಳನ್ನು ಪರಿಹರಿಸಿ ಕ್ವಾರಿ ಕ್ರಷರ್‌ಗಳನ್ನು ಸ್ಥಾಪಿಸಲು ಅನುವು ಮಾಡಿಕೊಡಬೇಕು. ಮೊದಲು ಚಿಕ್ಕ ಜಮೀನುಗಳನ್ನು ಸರ್ವೆ ಮಾಡಿ ಮುಂದಿನ ಹಂತದಲ್ಲಿ ದೊಡ್ಡ ಜಮೀನುಗಳ ಸರ್ವೆ ನಡೆಸಬೇಕು ಮತ್ತು ಎಲ್ಲ ತಾಲೂಕುಗಳ ತಹಶೀಲ್ದಾರರು ಮತ್ತು ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಈ ಕಾರ್ಯಗಳು ನಡೆಯಬೇಕು ಎಂದು ಸೂಚಿಸಿದರು.

ಕುಂದಾಪುರ ಎಸಿ ಕೆ. ರಾಜು, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್‌, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕಮಲಾ, ಕಾರ್ಕಳ ಮತ್ತು ಕುದುರೆಮುಖ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ರುಥೆÅàನ್‌, ಎಲ್ಲ ತಾಲೂಕುಗಳ ತಹಸೀಲ್ದಾರ್‌ಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಸ್ತಾವನೆ ಸಲ್ಲಿಸಬೇಕು
ಕೃಷಿ ಮತ್ತು ತೋಟಗಾರಿಕೆ ಕೇಂದ್ರಿತ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಂತಹ ಕಾರ್ಯಕ್ರಮ ಹಮ್ಮಿ ಕೊಳ್ಳಬೇಕು. ಮೀನುಗಾರಿಕೆಯನ್ನು ಉತ್ತೇಜಿಸಬೇಕು. ನಬಾರ್ಡ್‌ ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನಾ ನಿಧಿಯನ್ನು ಸಂಪೂರ್ಣವಾಗಿ ಬಳಕೆ ಮಾಡಲು ಪ್ರಸ್ತಾವನೆಗಳನ್ನು ಸರಕಾರಕ್ಕೆ ಸಲ್ಲಿಸಬೇಕು. ಬೇಸಗೆಯಲ್ಲಿ ನದಿಗಳು ಒಣಗುವ ಸಾಧ್ಯತೆಗಳಿದ್ದು, ನದಿ ಪಾತ್ರದಲ್ಲಿರುವ ರೈತರು ಸೂಕ್ಷ್ಮ ನೀರಾವರಿ ಪದ್ಧತಿ ಯನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಳ್ಳುವಂತೆ ಅವರ ಮನವೊಲಿಸಬೇಕು.
-ಎಂ. ಮಹೇಶ್ವರ ರಾವ್‌, ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next