Advertisement

ಜಿಡಿಪಿ ಪ್ರಗತಿಗೆ ಪೂರಕ ಬಜೆಟ್‌: ಯಡಿಯೂರಪ್ಪ

10:02 AM Feb 03, 2020 | Lakshmi GovindaRaj |

ಬೆಂಗಳೂರು: ಕೇಂದ್ರ ಸರ್ಕಾರದ ಬಜೆಟ್‌ ಜನಪರ ಹಾಗೂ ಕೃಷಿ ಕ್ಷೇತ್ರ ಹಾಗೂ ರೈತರ ಪರ. ದೇಶದ ಜಿಡಿಪಿ ಪ್ರಗತಿಗೆ ಪೂರಕವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ. ತೆರಿಗೆ ಭಾರ ದೇಶದ ಜನತೆ ಮೇಲೆ ಹಾಕದೆ ಸಾಕಷ್ಟು ಅನುಕೂಲ ಕಲ್ಪಿಸಿದ್ದಾರೆ. ರೈತರಿಗೆ ಬಡವರಿಗೆ ಹಳ್ಳಿಗಳಿಗೆ ಆದ್ಯತೆ ನೀಡಿರುವ ಬಜೆಟ್‌ ಇದಾಗಿದೆ. ವಿಶೇಷವಾಗಿ ರೈತರಿಗೆ ಆಯವ್ಯಯ ಒಂದು ರೀತಿ ವರದಾನವಾಗಿದೆ.

Advertisement

ರಾಜ್ಯದ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಪ್ರತಿ ಜಿಲ್ಲೆ ಎಕ್ಸ್‌ಪೋರ್ಟ್‌ ಹಬ್‌ ಮಾಡಿರುವುದು ಸ್ವಾಗತಾರ್ಹ. ಮೂಲ ಸೌಕರ್ಯಕ್ಕೆ 1 ಲಕ್ಷ ಕೋಟಿ ರೂ. ಒದಗಿಸಿರುವುದು ಹೂಡಿಕೆದಾರರಿಗೆ ಒಳ್ಳೆಯ ಸಂದೇಶ ರವಾನಿಸಲಾಗಿದೆ. ಬೆಂಗಳೂರು ಸಬ್‌ ಅರ್ಬನ್‌ ರೈಲು ಯೋಜನೆಗೆ ನೆರವು ಘೋಷಿಸಿರುವುದು, ಬೆಂಗಳೂರು -ಚೆನ್ನೈ ಕಾರಿಡಾರ್‌ ಎಕ್ಸ್‌ಪ್ರೆಸ್‌ ಘೋಷಿಸಿರುವುದು ಸಂತೋಷದಾಯಕ ಎಂದು ಹೇಳಿದ್ದಾರೆ.

ದೇಶದ ಉತ್ಪನ್ನ ಎರಡು ಪಟ್ಟು ಹೆಚ್ಚಿಸುವ ಪ್ರಧಾನಿ ಮೋದಿ ಅವರ ಕಲ್ಪನೆ ಸಾಕಾರಗೊಳಿಸುವ ಬಜೆಟ್‌ ಇದಾಗಿದೆ. ನೂರು ಜಲಕ್ಷಾಮ ಜಿಲ್ಲೆಗಳಿಗೆ ವಿಶೇಷ ಯೋಜನೆ, ವಿದ್ಯುತ್‌ ಸ್ವಾವಲಂಬನೆಗೆ ಒತ್ತು ಕೊಡಲಾಗಿದೆ. ರೈತರಿಗೆ 20 ಲಕ್ಷ ಸೌರ ಪಂಪ್‌ಸೆಟ್‌ ಒದಗಿಸುವುದು, ರೈತರ ಕೃಷಿ ಉತ್ಪನ್ನ ಸಾಗಿಸಲು ಕಿಸಾನ್‌ ರೈಲ್‌ ಕಿಸಾನ್‌ ಉಡಾನ್‌, 2.83 ಲಕ್ಷ ಕೋಟಿ ರೂ. ದೊಡ್ಡ ಬಜೆಟ್‌ ಕೃಷಿಗೆ ಆದ್ಯತೆ ಎಷ್ಟು ನೀಡಲಾಗಿದೆ ಎಂಬುದನ್ನು ತೋರಿಸುತ್ತದೆ.

2022ರಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಆದಾಯ ತೆರಿಗೆದಾರರಿಗೆ ಇದ್ದ ಅಡಚಣೆ ತೆಗೆಯಲಾಗಿದೆ. ತೆರಿಗೆದಾರರಿಗೆ ಕಿರುಕುಳ ತಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅನುಮತಿ ನೀಡಿ ರಾಜ್ಯದ ವಿಶ್ವವಿದ್ಯಾಲಯಗಳಿಗೆ ಅನುಕೂಲವಾಗಲಿದೆ. ಬಡವರಿಗೆ ಆನ್‌ಲೈನ್‌ ಮೂಲಕ ಪದವಿ ಶಿಕ್ಷಣ ಕ್ಷೇತ್ರದ ಕ್ರಾಂತಿಯಾಗಿದೆ ಎಂದು ಬಣ್ಣಿಸಿದರು.

ಆಯವ್ಯಯ ಆಶಾದಾಯಕವಾಗಿಲ್ಲ
ಮೈಸೂರು: ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಬಜೆಟ್‌ ಬಡವರು, ರೈತರು, ಯುವ ಜನರಿಗೆ ಪೂರಕವಾಗಿಲ್ಲ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಬಜೆಟ್‌ ಆಶಾದಾಯಕವಾಗಿಲ್ಲ. ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳ ಹೆಸರು ಆಕರ್ಷಕವಾಗಿಯಷ್ಟೇ. ಆದರೆ, ಅವುಗಳನ್ನು ಅನುಷ್ಠಾನಗೊಳಿಸುವುದು ಸುಲಭವಲ್ಲ ಎಂದು ಹೇಳಿದರು.

Advertisement

30 ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ ಮಂಡಿಸಿದ್ದಾರೆ. ಕಳೆದ ಬಜೆಟ್‌ಗೂ ಈ ಬಜೆಟ್‌ಗೂ 3ಲಕ್ಷ ಕೋಟಿ ರೂ. ವ್ಯತ್ಯಾಸವಿದೆ. ಕಳೆದ ಬಜೆಟ್‌ ಅಂದಾಜುವೆಚ್ಚದಲ್ಲಿ 2ಲಕ್ಷ ಕೋಟಿ ಕಡಿಮೆ ಖರ್ಚಾಗಿದೆ. ತೆರಿಗೆ ಸಂಗ್ರಹದಲ್ಲಿ ನಿರೀಕ್ಷಿತ ಪ್ರಮಾಣದ ಆದಾಯ ಬಂದಿಲ್ಲ. ಇದರಿಂದ ರಾಜ್ಯಗಳಿಗೆ ಬರಬೇಕಾದ ಪಾಲೂ ಖೋತಾ ಆಗಿದೆ. ದೇಶದ ಆದಾಯವನ್ನು 5 ಟ್ರಿಲಿಯನ್‌ ಡಾಲರ್‌ ಮಾಡುತೇವೆ ಅಂದಿದ್ದರು, ಆದರೆ ಅದು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಈಗ ಗೊತ್ತಾಗುತ್ತಿದೆ.

ಶೇ.3.5ಕ್ಕೆ ಕುಸಿತವಾಗಿರುವ ಜಿಡಿಪಿ ದರವನ್ನು ಶೇ.6ಕ್ಕೆ ಕೊಂಡೊಯ್ಯುತ್ತೇವೆ ಎನ್ನುವುದು ಗಗನಕುಸುಮದಂತಿದೆ. ಜಿಡಿಪಿ ಮೇಲೆತ್ತಲು ಸಾಧ್ಯವೇ ಇಲ್ಲ ಎಂದರು. ಮನಮೋಹನ್‌ಸಿಂಗ್‌ ಸೇರಿ ಯಾವ ಆರ್ಥಿಕ ತಜ್ಞರ ಸಲಹೆಯನ್ನೂ ಪಡೆದಿಲ್ಲ. ನಿರ್ಮಲಾ ಸೀತಾರಾಮನ್‌ ಅವರಿಗೆ ಆರ್ಥಿಕ ಪರಿಸ್ಥಿತಿಯ ಮುನ್ನೋಟವೇ ಗೊತ್ತಿಲ್ಲ. ನಮ್ಮ ನಿರೀಕ್ಷೆಗಳೆಲ್ಲ ಹುಸಿಯಾಗಿದೆ. ಇದೊಂದು ನಿರಾಶದಾಯಕ ಬಜೆಟ್‌ ಎಂದು ತಿಳಿಸಿದರು.

ಘೋಷಣೆಗಳ ಮಹಾಪೂರ
ಬೆಂಗಳೂರು: ಕೇಂದ್ರ ಸರ್ಕಾರದ ಬಜೆಟ್‌ ಬಹುಶಃ ಅತ್ಯಂತ ನಿರಾಶಾದಾಯಕವಾಗಿದ್ದು ದೇಶದ ಪ್ರಗತಿಯನ್ನು ಮುಂದಿನ ದಿನಗಳಲ್ಲಿ ಕಾಣಬಹುದು ಎಂದು ಆಸೆ ಇಟ್ಟುಕೊಳ್ಳಲು ಆಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಬಜೆಟ್‌ ತುಂಬಾ ಅಂಕಿ-ಅಂಶಗಳಿಂದ ಕೂಡಿದೆ. ಆದರೆ, ಹಿಂದಿನ ಐದು ವರ್ಷಗಳಲ್ಲಿ ನೀಡಲಾಗಿದ್ದ ಘೋಷಣೆಗಳ ಪೈಕಿ ಎಷ್ಟು ಈಡೇರಿಸಲಾಗಿದೆ ಎಂಬುದರ ಮಾಹಿತಿಯಿಲ್ಲ.

ಮತ್ತೆ ಘೋಷಣೆಗಳ ಮಹಾಪೂರ ಹರಿಸಲಾಗಿದೆ. 1.30 ಲಕ್ಷ ಕೋಟಿ ಇದ್ದ ಶಿಕ್ಷಣ ಇಲಾಖೆ ಬಜೆಟ್‌ 30 ಸಾವಿರ ಕೋಟಿ ರೂ. ಕಡಿತ ಮಾಡಿದ್ದಾರೆ. ಜಲ ಮಿಷನ್‌ಗೆ ಇಟ್ಟಿರುವ ಹಣ ಜನತೆಗೆ ಉಪಯೋಗ ವಾಗುವುದಿಲ್ಲ. ಕಿಸಾನ್‌ ಉಡಾನ್‌ ಯೋಜನೆ ಉದ್ದೇಶ ಏನು? ನಾಗರಿಕ ವಿಮಾನಯಾನ ಸಚಿವಾಲಯದ ಜತೆ ಸಹಭಾಗಿತ್ವವಾ? ಎಂಬುದರ ಸ್ಪಷ್ಟತೆ ಇಲ್ಲ. ಯುವಕರಿಗೆ ಉದ್ಯೋಗ ಸೃಷ್ಟಿ ಯಾವ ರೀತಿ ಹೇಳಿಲ್ಲ. ಎಂಜಿನಿಯರುಗಳಿಗೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಂದು ವರ್ಷ ಇಂಟರ್ನ್ಶಿಫ್ಗೆ ಅವಕಾಶ ಎಂದು ಹೇಳಿದ್ದಾರೆ,

ಆದರೆ, ಅವರಿಗೆ ಉದ್ಯೋಗ ಕೊಡುವವರು ಯಾರು? 3 ಸಾವಿರ ಕೋಟಿ ರೂ. ಕೌಶಲ್ಯಾಭಿವೃದ್ಧಿಗೆ ಇಟ್ಟು ಏನು ಮಾಡುತ್ತಾರೆ. ಬಜೆಟ್‌ ಮಂಡಿಸುವ ಮುನ್ನ ತಿಳಿವಳಿಕೆ ಇರುವವರ ಬಳಿಯಾದರೂ ಚರ್ಚಿಸಿ ಮಂಡಿಸಬೇಕಿತ್ತು. ದೇಶದ ಆರ್ಥಿಕ ಪರಿಸ್ಥಿತಿ ಕುಸಿತವಾಗಿರುವ ಸಂದರ್ಭದಲ್ಲಿ ಮಂಡಿಸಿರುವ ಬಜೆಟ್‌ ಇನ್ನೂ ಅಧೋಗತಿಗೆ ಹೋಗುವ ದಿಕ್ಸೂಚಿಯಾಗಿದೆ. ದೇಶದ ಅಭಿವೃದ್ಧಿಗೆ ಪೂರಕವಲ್ಲ ಎಂದು ತಿಳಿಸಿದರು.

ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ನಲ್ಲಿ ಯಾವುದೇ ವಿಶೇಷತೆ ಇಲ್ಲ. ಕೇಂದ್ರ ಸರ್ಕಾರ ನಿರುದ್ಯೋಗ ನಿವಾರಣೆ, ಕೈಗಾರಿಕೆ ಅಭಿವೃದ್ಧಿ, ರೈತರಿಗೆ ನೆರವಾಗುವ ನಿದಿಷ್ಟ ಯೋಜನೆ ರೂಪಿಸಿಲ್ಲ. ಇದು ಸಂಪೂರ್ಣ ಜನವಿರೋಧಿ ಬಜೆಟ್‌.
-ದಿನೇಶ್‌ ಗುಂಡೂರಾವ್‌ ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next