Advertisement

Budget ನವಭಾರತ ಅಭ್ಯುದಯದ ಕನಸು… ಯಾರಿಗೇನು ಕೊಡುಗೆ?

12:34 AM Feb 02, 2024 | Team Udayavani |

ಬಜೆಟ್‌ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು “ಹೊಸ ವರ್ಣ ವ್ಯವಸ್ಥೆ’ಯನ್ನು ಪ್ರಸ್ತುತಪಡಿಸುವ ಮೂಲಕ, ನವ ಭಾರತದ ಅಭಿವೃದ್ಧಿಗೆ ಹೊಸ ಕನಸನ್ನು ಬಿತ್ತಿದ್ದಾರೆ. “ಅನ್ನದಾತರು, ಯುವಕರು, ಬಡವರು, ಮಹಿಳೆಯರೇ ದೇಶದಲ್ಲಿರುವ ನಾಲ್ಕು ಪ್ರಮುಖ ಜಾತಿಗಳು. ಇವರ ಅಗತ್ಯತೆ, ಆಕಾಂಕ್ಷೆ,ಅಭಿವೃದ್ಧಿಯೇ ನಮ್ಮ ಆದ್ಯತೆಯಾಗಿದೆ ಎಂದಿದ್ದಾರೆ. ಈ ಹಿಂದೆ ಪ್ರಧಾನಿ ಮೋದಿ ಅವರು ಪ್ರಸ್ತಾಪಿಸಿದ್ದ ಈ “ನಾಲ್ಕು ಜಾತಿ’ಗಳನ್ನೇ ಈಗ ನಿರ್ಮಲಾ ಬಜೆಟ್‌ನಲ್ಲಿ ಬಳಸಿದ್ದಾರೆ.

Advertisement

ನ್ಯಾನೋ ಡಿಎಪಿ: ಕಡಿಮೆ ಹಣದಲ್ಲಿ ಹೆಚ್ಚು ಪವರ್‌
ರೈತರಿಗೆ ಶೇ.50 ಹಣ ಉಳಿಸುವ ನ್ಯಾನೋ ಡಿಎಪಿ…ಸಾಗಣೆ ವೆಚ್ಚ, ಸೋರಿಕೆ, ನಷ್ಟ ತಗ್ಗಿಸುವ ಉದ್ದೇಶ … ಉತ್ಪಾದನೆ ಶಕ್ತಿ ಹೆಚ್ಚು

ದೇಶದಲ್ಲಿ ನ್ಯಾನೊ ಯೂರಿಯಾ ಬಳಕೆ ಯಶಸ್ವಿಯಾದ ಬೆನ್ನಲ್ಲೇ ಎಲ್ಲಾ ಕೃಷಿ ಹಂಗಾಮಿನಲ್ಲಿ ವಿವಿಧ ಬೆಳೆಗಳ ಮೇಲೆ ನ್ಯಾನೋ ಡಿಎಪಿ ಬಳಕೆಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ.

ಈ ಆಯವ್ಯಯದಲ್ಲಿ ಕೃಷಿ ವಲಯಕ್ಕೆ ಪ್ರಮುಖವಾಗಿರುವ ರಸಗೊಬ್ಬರಕ್ಕೆ 1.64 ಲಕ್ಷ ಕೋಟಿ ರೂ. ಸಬ್ಸಿಡಿ ಮೀಸಲಿರಿಸಲಾಗಿದೆ. ಕಳೆದ ವರ್ಷ ಇದಕ್ಕೆ 1.89 ಲಕ್ಷ ಕೋಟಿ ನಿಗದಿಪಡಿಸಲಾಗಿತ್ತು. ಈ ಬಾರಿ ಸಹಾಯಧನ ಮೊತ್ತವನ್ನು ತಗ್ಗಿಸಿದ್ದರೂ ನ್ಯಾನೊ ಡಿಎಪಿ(ಡಿ ಅಮೋನಿಯಂ ಫಾಸೆ#àಟ್‌) ಬಳಕೆ ಸೇರಿದಂತೆ ಮತ್ತಿತರ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದೆ.

ಪ್ರಸ್ತುತ ಸಾಂಪ್ರದಾಯಿಕ ಡಿಎಪಿಯ ಒಂದು ಚೀಲದ ಬೆಲೆ(50 ಕೆ.ಜಿ) 1,300 ರೂ. ಆಗಿದೆ. 500 ಎಂಎಲ್‌ನ ದ್ರವ ರೂಪದ ನ್ಯಾನೋ ಡಿಪಿ 50 ಕೆ.ಜಿ.ಗೆ ಸಮಾನವಾಗಿದೆ. ಇದರ ಬೆಲೆ 600 ರೂ. ಆಗಿದೆ. ಇದರಿಂದ ರೈತರಿಗೆ ಶೇ.50ಕ್ಕಿಂತ ಹೆಚ್ಚು ಹಣ ಉಳಿತಾಯವಾಗಲಿದೆ.

Advertisement

ಈಗಾಗಲೇ ಗುಜರಾತ್‌ನ ಗಾಂಧಿನಗರಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಇಫೊRà ವತಿಯಿಂದ 300 ಕೋಟಿ ರೂ. ವೆಚ್ಚದಲ್ಲಿ ನ್ಯಾನೊ ಡಿಎಪಿ ಸ್ಥಾವರವನ್ನು ಉದ್ಘಾಟಿಸಲಾಗಿದೆ. ಇದು ವಿಶ್ವದಲ್ಲೇ ಮೊದಲ ನ್ಯಾನೊ ಡಿಎಪಿ ಉತ್ಪಾದನಾ ಘಟಕವಾಗಿದೆ. ಈ ಸ್ಥಾಪರವು 25 ಟನ್‌ ಡಿಎಪಿಗೆ ಸಮಾನವಾದ 5 ಕೋಟಿ ಬಾಟಲಿಗಳ ನ್ಯಾನೊ ಡ್ಯಾಪ್‌ ದ್ರವವನ್ನು ಉತ್ಪಾದಿಸುತ್ತಿದೆ.

ಅನ್ನದಾತರಿಗೆ ಏನು ಲಾಭ?
ಪರಿಸರ ಹಾಗೂ ರೈತ ಸ್ನೇಹಿಯಾಗಿರುವ ನ್ಯಾನೊ ಡಿಎಪಿ ಬಳಕೆಯಿಂದ ಬೆಳೆಗಳ ಉತ್ಪಾದನೆ ಶಕ್ತಿ ಹೆಚ್ಚುತ್ತದೆ. ಅಡ್ಡ ಪರಿಣಾಮ ಇರುವುದಿಲ್ಲ.
ರೈತರಿಗೆ ಅಗ್ಗದ ದರದಲ್ಲಿ ರಸಗೊಬ್ಬರ ಸಿಕ್ಕಂತಾಗುತ್ತದೆ. ತಪ್ಪಲಿದೆ ಅಲೆದಾಟ.
ಸಾಗಣೆ ವೆಚ್ಚ, ಸೋರಿಕೆಯಾಗುವುದು ಇತ್ಯಾದಿಯನ್ನು ತಪ್ಪಿಸುತ್ತದೆ.
ಶೂನ್ಯ ಹಾನಿಕಾರಕಗುಣವನ್ನು ಹೊಂದಿರುವ ನ್ಯಾನೊ ಡಿಎಪಿ ಮಣ್ಣಿನಲ್ಲಿರುವ ಪೋಷಕಾಂಶ ಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಈ ತಂತ್ರಜ್ಞಾನ ದೇಶದ ಕೃಷಿ ವಲಯದಲ್ಲಿ ಮಹತ್ವದ ಬದಲಾವಣೆ ತರುವ ಸಾಧ್ಯತೆ ಇದೆ.

ಜಲಕೃಷಿ ಉತ್ಪಾದನೆ ರಫ್ತು ದ್ವಿಗುಣ ಗುರಿ
ಮೀನುಗಾರಿಕೆ ವಲಯ ಬಲವರ್ಧನೆಗೆ ಕೇಂದ್ರ ಸರಕಾರ ಈಗಾಗಲೇ ಪ್ರಧಾನ ಮಂತ್ರಿ ಮತ್ಸéಸಂಪದ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಬಾರಿ ಬಜೆಟ್‌ನಲ್ಲಿ ಮತ್ತಷ್ಟು ಪ್ರೋತ್ಸಾಹ ಕ್ರಮಗಳನ್ನು ಕೈಗೊಂಡಿದೆ. 5 ಇಂಟಿಗ್ರೇಟೆಡ್‌ ಅಕ್ವಾಪಾರ್ಕ್‌(ಜಲಚರ ಸಾಕಾಣಿಕೆ)ಗಳನ್ನು ಸ್ಥಾಪಿಸಲಾಗುತ್ತಿದೆ. 6,000 ಕೋಟಿ ರೂ ಹೂಡಿಕೆ ಗುರಿಯೊಂದಿಗೆ ಉಪ ಯೋಜನೆ ಕೈಗೊಳ್ಳಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.
ಪ್ರಸ್ತುತ ಅಕ್ವಾಕಲ್ಚರ್‌ ಉತ್ಪಾದನೆ ಪ್ರತಿ ಹೆಕ್ಟೇರ್‌ಗೆ 3 ಟನ್‌ ಇದ್ದು, ಈ ಪ್ರಮಾಣವನ್ನು 5 ಟನ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಮತ್ಸéಸಂಪದ ಯೋಜನೆಯಡಿ 1 ಲಕ್ಷ ಕೋಟಿ ರಫ್ತು ದ್ವಿಗುಣ ಗುರಿ ಜತೆಗೆ ಭವಿಷ್ಯದಲ್ಲಿ 55 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಉದ್ದೇಶಿಸಲಾಗಿದೆ.

ಮತ್ಸ್ಯ ಸಂಪದ ಯೋಜನೆ ಜಾರಿ ಬಳಿಕ 2013-14 ಅವಧಿಯಲ್ಲಿ ಮೀನುಗಾರಿಕೆ ಒಳನಾಡು ಹಾಗೂ ಜಲಕೃಷಿ ಉತ್ಪಾದನೆ ದ್ವಿಗುಣ ಆಗಿದೆ. ಜತೆಗೆ ಸಮುದ್ರಾಹಾರ ರಫ್ತು ಕೂಡ ಡಬಲ್‌ ಆಗಿದೆ ಎಂದು ಉಲ್ಲೇಖೀಸಿರುವ ನಿರ್ಮಲಾ ಸೀತಾರಾಮನ್‌ ಅವರು, ಮೀನುಗಾರರು, ಮೀನು ವ್ಯಾಪಾರ, ಹಾಗೂ ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳ ಚಟುವಟಿಕೆಗಳನ್ನು ಮತ್ತಷ್ಟು ಸಕ್ರಿಯಗೊಳಿಸಲು 6,000 ಕೋಟಿ ರೂ ಹೂಡಿಕೆ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರಕಾರ 2020-21 ಹಾಗೂ 2024-25ರ ಆರ್ಥಿಕ ಐದು ವರ್ಷಗಳ ಅವಧಿಯಲ್ಲಿ 20,050 ಕೋಟಿ ರೂ. ಹೂಡಿಕೆಯೊಂದಿಗೆ ಮೀನುಗಾರಿಕೆ ವಲಯದಲ್ಲಿ ಸುಸ್ಥಿರ ಅಭಿವೃದ್ಧಿ ತರುವ ಗುರಿ ಹೊಂದಿದೆ. 2023ರಲ್ಲಿ ಈ ವಲಯಕ್ಕೆ 2,248 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು.

ಮತ್ಸ್ಯ ಸಂಪದ ವಿಸ್ತರಣೆಗೆ ಯೋಜನೆ
55 ಲಕ್ಷ ಉದ್ಯೋಗಾವಕಾಶ ಸೃಷ್ಟಿ ನಿರೀಕ್ಷೆ
ಜಲಚರ ಸಾಕಣೆ ಹೆಕ್ಟೇರ್‌ಗೆ 5 ಟನ್‌ ಹೆಚ್ಚಳಕ್ಕೆ ಕ್ರಮ
ಐದು ಇಂಟಿಗ್ರೇಟೆಡ್‌ ಅಕ್ವಾಪಾರ್ಕ್‌ ಸ್ಥಾಪನೆ
6,000 ಕೋಟಿ ರೂ. ಹೂಡಿಕೆ ಗುರಿ

ಡೇರಿ ಅಭಿವೃದ್ಧಿಗೆ ಯೋಜನೆ
ದೇಶದಲ್ಲಿ ಡೇರಿ ಅಭಿವೃದ್ಧಿ ಹಾಗೂ ಹಾಲು ಉತ್ಪಾದನೆ ಹೆಚ್ಚಿಸಲು ಸಮಗ್ರ ಯೋಜನೆ ರೂಪಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. ಭಾರತ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುತ್ತಿದೆ. ಆದರೆ, ವಿಶ್ವದಲ್ಲೇ ಭಾರಿ ಕಡಿಮೆ ಉತ್ಪಾದಕತೆ ಹೊಂದಿದೆ. 2022-2023ರಲ್ಲಿ 230 ದಶಲಕ್ಷ ಟನ್‌ ಹಾಲು ಉತ್ಪಾದನೆಯೊಂದಿಗೆ ಶೇ.4ರಷ್ಟು ಏರಿಕೆಯಾಗಿದೆ. ಹೈನುಗಾರರನ್ನು ಬೆಂಬಲಿಸಲು ಶ್ರಮಿಸಲಾಗುತ್ತಿದ್ದು, ಜಾನುವಾರುಗಳಿಗೆ ತಗಲುವ ಕಾಲುಬಾಯಿ ರೋಗ ನಿಯಂತ್ರಿಸಲು ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ. ಈಗಾಗಲೇ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಗೋಕುಲ್‌ ಮಿಷನ್‌, ರಾಷ್ಟ್ರೀಯ ಜಾನುವಾರು ಮಿಷನ್‌ ಹಾಗೂ ಡೇರಿ ಸಂಸ್ಕರಣೆ, ಪಶುಸಂಗೋಪನೆ ನಿಧಿಯಡಿ ಮೂಲಸೌಲರ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

11.8 ಕೋಟಿ ರೈತರಿಗೆ ಕಿಸಾನ್‌ ಸಮ್ಮಾನ್‌ ಯೋಜನೆ
ರೈತರು ನಮ್ಮ “ಅನ್ನದಾತ’ರಾಗಿದ್ದು, ಸದ್ಯ 11.8 ಕೋಟಿ ರೈತರು ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ ಫ‌ಲಾನುಭವಿಗಳಾಗಿದ್ದಾರೆ ಹಾಗೂ ಫ‌ಸಲ್‌ ಬಿಮಾ ಯೋಜನೆಯಡಿ 4 ಕೋಟಿ ರೈತರಿಗೆ ಬೆಳೆ ಪರಿಹಾರ ವಿತರಿಸಲಾಗಿದೆ. ಜತೆಗೆ ಪ್ರಧಾನ ಮಂತ್ರಿ ಕಿಸಾನ್‌ ಸಂಪದ ಯೋಜನೆಯ ಅನುಕೂಲತೆಯನ್ನು 38 ಲಕ್ಷ ರೈತರು ಪಡೆದಿದ್ದು, 10 ಲಕ್ಷ ಉದ್ಯೋಗ ಸೃಷ್ಟಿಸಲಾಗಿದೆ. ವಿವಿಧ ಕಾರ್ಯಕ್ರಮಗಳ ಮೂಲಕ ಅನ್ನದಾತರಿಗೆ ಸಾಕಷ್ಟು ಸೌಲಭ್ಯ ಕಲ್ಪಿಸಲಾಗಿದೆ. ಕಿಸಾನ್‌ ಸಮ್ಮಾನ್‌ನಡಿ ಕೃಷಿ ಚಟುವಟಕೆಗೆ ನೆರವು ನೀಡಲು ಸಣ್ಣ ಹಾಗೂ ಮಧ್ಯಮ ವರ್ಗದ ರೈತರಿಗೆ ವಾರ್ಷಿಕ ಮೂರು ಕಂತುಗಳಲ್ಲಿ ತಲಾ 2 ಸಾವಿರ ರೂ.ನಂತೆ 6 ಸಾವಿರ ರೂ.ಗಳನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸಲಾಗುತ್ತಿದೆ.

ದೇಸಿ ಎಣ್ಣೆಬೀಜ ಉತ್ಪಾದನೆಗೆ ಒತ್ತು: ಆತ್ಮನಿರ್ಭರ ಅಭಿಯಾನ
ಎಣ್ಣೆಕಾಳುಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಭಾರತವನ್ನು ಖಾದ್ಯ ತೈಲಗಳಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದು ಸರಕಾರ ಹೇಳಿದೆ. ದೇಶೀಯ ಬೇಡಿಕೆಯನ್ನು ಪೂರೈಸಲು ಭಾರತ ದೊಡ್ಡ ಪ್ರಮಾಣದಲ್ಲಿ ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳುತ್ತದೆ. 2022-23ನಲ್ಲಿ ಸುಮಾರು 165 ಲಕ್ಷ ಟನ್‌ ಅಡುಗೆ ಎಣ್ಣೆ ಆಮದು ಮಾಡಿಕೊಂಡಿದೆ. ಇದು 1.38 ಲಕ್ಷ ಕೋಟಿ ರೂ. ಮೌಲ್ಯದ್ದಾಗಿದೆ. ಇದನ್ನು ತಗ್ಗಿಸಲು 2022ರಲ್ಲಿ ರೂಪಿಸಲಾದ ಆತ್ಮನಿರ್ಭರ ಉಪಕ್ರಮದಡಿ ಸಾಸಿವೆ, ಕಡಲೆಕಾಯಿ, ಎಳ್ಳು, ಸೋಯಾಬೀನ್‌ ಮತ್ತು ಸೂರ್ಯಕಾಂತಿ ಹೆಚ್ಚಿನ ಇಳುವರಿ ನೀಡುವ ಪ್ರಭೇದಗಳಿಗೆ ಸಂಶೋಧನೆ ನಡೆಸಲಾಗುತ್ತಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ರೈತರ ಆದಾಯ ವೃದ್ಧಿಗೆ ಹೂಡಿಕೆಗೆ ಹೆಚ್ಚು ಆದ್ಯತೆ
ಕೃಷಿ ಸಚಿವಾಲಯ ಹಾಗೂ ರೈತರ ಕಲ್ಯಾಣಕ್ಕಾಗಿ ಬಜೆಟ್‌ನಲ್ಲಿ 1.27 ಲಕ್ಷ ಕೋಟಿ ರೂ.ಮೀಸಲಿಡಲಾಗಿದೆ. ಕಳೆದ ವರ್ಷ 1.16 ಲಕ್ಷ ಕೋಟಿ ರೂ. ನೀಡಲಾಗಿತ್ತು. ಕೃಷಿ ವಲಯದಲ್ಲಿ ಮೌಲ್ಯವರ್ಧನೆ ಹಾಗೂ ರೈತರ ಆದಾಯ ವೃದ್ಧಿಸಲು ಹೆಚ್ಚು ಪ್ರಯತ್ನಿಸಲಾಗುತ್ತಿದೆ ಎಂದು ಸಚಿವೆ ನಿರ್ಮಲಾ ತಿಳಿಸಿದ್ದಾರೆ. 1,361 ಮಂಡಿಗಳಿಗೆ ಇ-ನ್ಯಾಮ್‌(ಎಲೆಕ್ಟ್ರಾನಿಕ್‌ ನ್ಯಾಷನಲ್‌ ಅಗ್ರಿಕಲ್ಚರ್‌ ಮಾರ್ಕೆಟ್‌) ನೆರವು ನೀಡಲಾಗುತ್ತಿದ್ದು, 1.8 ಕೋಟಿ ರೈತರಿಗೆ 3 ಲಕ್ಷ ಕೋಟಿ ರೂ. ವ್ಯವಹಾರದ ಪ್ರಮಾಣ ಸೇವೆ ಒದಗಿಸಲಾಗುತ್ತಿದೆ. ಆಹಾರ ಸಂಸ್ಕರಣೆ ಹಾಗೂ ರೈತರ ಆದಾಯವನ್ನು ಹೆಚ್ಚಿಸಲು ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಹೂಡಿಕೆಯನ್ನು ಮತ್ತಷ್ಟು ಉತ್ತೇಜಿಸಲಾಗುತ್ತಿದೆ. “ಅನ್ನದಾತ’ರ ಉತ್ಪನ್ನಗಳಿಗೆ ನಿಯತಕಾಲಿಕವಾಗಿ ಕನಿಷ್ಠ ಬೆಂಬಲ ಬೆಲೆಗಳನ್ನು ಹೆಚ್ಚಿಸಲಾಗಿದೆ ಎಂದೂ ತಿಳಿಸಿದ್ದಾರೆ.

ಮೆಡಿಕಲ್‌ ಕಾಲೇಜುಗಳ ಸ್ಥಾಪನೆಗೆ ವಿಶೇಷ ಸಮಿತಿ
ಆರೋಗ್ಯ ಸೇವೆಯತ್ತ ಕಾಳಜಿ ವಹಿಸಿರುವ ಕೇಂದ್ರ ಸರಕಾರ ನೂತನ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪನೆಗೆ ವಿಶೇಷ ಸಮಿತಿ ರಚಿಸಲು ನಿರ್ಧರಿಸಿದೆ. ಈಗಿರುವ ವೈದ್ಯಕೀಯ ಕಾಲೇಜುಗಳಲ್ಲಿನ ಸೌಕರ್ಯ ಬಳಸಿಕೊಳ್ಳುವುದರ ಜತೆಗೆ ಹೊಸ ವೈದ್ಯ ಕಾಲೇಜುಗಳ ಸ್ಥಾಪನೆಗೆ ಉತ್ತೇಜಿಸಲಿದೆೆ. ಹಲವಾರು ಯುವಕರು ವೈದ್ಯಕೀಯ ಶಿಕ್ಷಣ ಕಲಿಯಲು ಉತ್ಸುಕರಾಗಿದ್ದಾರೆ. ಉತ್ತಮ ವೈದ್ಯಕೀಯ ಸೌಕರ್ಯಗಳ ಮೂಲಕ ಆರೋಗ್ಯ ಸೇವೆ ನೀಡಲು ಅನುಕೂಲವಾಗಲು ಈಗಿರುವ ವೈದ್ಯ ಕಾಲೇಜುಗಳ ಸೌಕರ್ಯ ಬಳಸಿಕೊಂಡು ಹೊಸ ವೈದ್ಯ ಕಾಲೇಜು ಸ್ಥಾಪಿಸಲು ಸಮಿತಿ ರಚಿಸಲಾಗುವುದು ಎಂದು ಸರಕಾರ ಹೇಳಿದೆ. ಈ ಸಮಿತಿ ಪರಿಶೀಲಿಸಿ ಕಾಲ ಕಾಲಕ್ಕೆ ಸೂಕ್ತ ಶಿಫಾರಸುಗಳನ್ನು ಮಾಡಲಿದೆ.

ಮುದ್ರಾ ಯೋಜನೆಯಿಂದ 43 ಕೋಟಿ ರೂ. ಸಾಲ
ಮುದ್ರಾ ಯೋಜನೆಯಿಂದ ಯುವಜನತೆಗೆ ಇನ್ನು 43 ಕೋ.ರೂ. ಸಾಲ ಸಿಗಲಿದೆ. ಇದಕ್ಕಾಗಿ 22.5 ಕೋ. ರೂ. ಒದಗಿಸುವು ದಾಗಿ ಘೋಷಿಸಲಾಗಿದೆ. ಜನ್‌ಧನ್‌ ಖಾತೆ ಮೂಲಕ ಜನರಿಗೆ 34 ಲಕ್ಷ ಕೋಟಿ ರೂ. ನೇರ ನಗದು ವರ್ಗಾ ಯಿಸಲಾಗಿದೆ. ಈಗ ಆ ಖಾತೆಗಳಲ್ಲಿ 2.7 ಲಕ್ಷ ಕೋಟಿ ರೂ. ಉಳಿತಾಯವಾಗಿದ್ದು ಫ‌ಲ ನೀಡಿದೆ. ಸಾಮಾಜಿಕ ನ್ಯಾಯ ಎಂಬುದನ್ನು ಘೋಷಣೆ ಸೀಮಿತಗೊಳಿಸದೆ ನೈಜವಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ!

1.4 ಕೋಟಿ ಯುವ ಜನತೆಗೆ ಸ್ಕಿಲ್‌ ಇಂಡಿಯಾ ಫ‌ಲ
ಕೌಶಲಾಭಿವೃದ್ಧಿಗೆ ಕೇಂದ್ರ ಸರಕಾರ ಜಾರಿಗೊಳಿಸಿದ್ದ ಸ್ಕಿಲ್‌ ಇಂಡಿಯಾ ಯೋಜನೆಯಡಿ 1.4 ಕೋಟಿ ಯುವಜನತೆ ಇದರ ಲಾಭ ಪಡೆದಿದ್ದಾರೆ. ಸುಮಾರು 20 ಸಚಿವಾಲಯ ಹಾಗೂ ವಿಭಾಗಗಳು ದೇಶಾದ್ಯಂತ ಈ ಯೋಜನೆಯಡಿ ವಿವಿಧ ಕ್ಷೇತ್ರಗಳಲ್ಲಿ ಯುವ ಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿದ್ದವು. ಸುಮಾರು 54 ಲಕ್ಷ ಯುವಜನತೆ ಮರು ಕೌಶಲ್ಯ ತರಬೇತಿ ಪಡೆದಿದ್ದಾರೆ. ಅಲ್ಲದೇ 3000 ಹೊಸ ಐಟಿಐ ಆರಂಭಿಸಲಾಗಿದೆ. 2015ರಲ್ಲಿ ಕೌಶಲ ವೃದ್ಧಿಗಾಗಿ ಕೇಂದ್ರ ಸರಕಾರ ಯೋಜನೆ ಜಾರಿಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next