Advertisement

Budget 2024: ತುಮಕೂರು- ಪ್ರಧಾನಿ ಮೋದಿ ಸರ್ಕಾರದಲ್ಲಿ ಜಿಲ್ಲೆಗೆ ಬಂದಿದ್ದೇನು?

06:13 PM Jan 30, 2024 | Team Udayavani |

ಉದಯವಾಣಿ ಸಮಾಚಾರ.
ತುಮಕೂರು: ಕೈಗಾರಿಕಾ ಕ್ಷೇತ್ರದಲ್ಲಿ ಪ್ರಗತಿಯ ದಾಪುಗಾಲು ಹಾಕುತ್ತಾ ದೇಶದ ಗಮನ ಸೆಳೆಯುತ್ತಿರುವ ತುಮಕೂರು ಜಿಲ್ಲೆಗೆ ಕೇಂದ್ರ ಸರ್ಕಾರದ ಎಚ್‌.ಎ.ಎಲ್‌, ಸೋಲಾರ್‌ ಪಾರ್ಕ್‌ ಹಾಗೂ ಸ್ಮಾರ್ಟ್‌ ಸಿಟಿ ಯೋಜನೆಯ ಪ್ರಗತಿ. ಕೈಗಾರಿಕಾ ಕಾರಿಡಾರ್‌ ಘೋಷಣೆ ಮಾಡುವ ಮೂಲಕ ದೇಶದ ಗಮನ ಸೆಳೆದಿರುವ ಕಲ್ಪತರು ನಾಡಿಗೆ ಈ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೊಸ ಯೋಜನೆ ಘೋಷಿಸುತ್ತಾರೆಯೇ? ಹಳೆಯ ಯೋಜನೆಗಳ ಚಾಲನೆಗೆ ಒತ್ತು ನೀಡುತ್ತಾರೆಯೇ?
ಎಂದು ನಿರೀಕ್ಷೆಯಲ್ಲಿದ್ದಾರೆ ಜಿಲ್ಲೆಯ ಜನರು.

Advertisement

ಪ್ರತಿವರ್ಷ ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ಬಜೆಟ್‌ ಮಂಡನೆಯಾದ ಮೇಲೆ ಸಾಮಾನ್ಯ ಬಜೆಟ್‌ ಮಂಡನೆಯಾಗುತ್ತಿತ್ತು. ಆದರೆ, ಇತ್ತೀಚೆಗೆ ಸಾಮಾನ್ಯ ಬಜೆಟ್‌ ಜೊತೆಯಲ್ಲಿ ರೈಲ್ವೆ ಬಜೆಟ್‌ ಸೇರಿಸಿ ಮಂಡನೆಯಾಗುತ್ತಿದೆ. ಜಿಲ್ಲೆಗೆ ಕಳೆದ 2009-10ರಲ್ಲಿ ಮಂಜೂರಾದ ಹಲವು ರೈಲ್ವೆ ಯೋಜನೆಗಳು ಇಂದಿಗೂ ಕಾರ್ಯಗತವಾಗಿಲ್ಲ, ಕಳೆದ ರೈಲ್ವೆ ಬಜೆಟ್‌ನಲ್ಲಿ ಮಂಡಿಸಿದ್ದ ಯೋಜನೆಗಳು ನಿಂತಲ್ಲೇ ನಿಂತಿವೆ. ಹೀಗಿರುವಾಗ ಈಗ ಮಂಡಿಸಲಿರುವ ಬಜೆಟ್‌ನಲ್ಲಿ ಕಲ್ಪತರು ನಾಡಿಗೆ ರೈಲ್ವೆ ಯೋಜನೆಯಲ್ಲಿ ಏನು ಕೊಡುಗೆ ನೀಡಬಹುದು ಎಂಬ ಕುತೂಹಲವಿದೆ.

ಯೋಜನೆಗಳು ಪೂರ್ಣಗೊಂಡಿಲ್ಲ: ಈವರೆಗೂ ರೈಲ್ವೆ ಬಜೆಟ್‌ನಲ್ಲಿ ಮಂಡನೆಯಾಗಿರುವ ಹಲವು ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ. ಕಳೆದ 2009-10ರಲ್ಲಿ ರೈಲ್ವೆ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ತುಮಕೂರು – ದಾವಣಗೆರೆ ಮತ್ತು ತುಮಕೂರು – ರಾಯದುರ್ಗ ರೈಲು ಮಾರ್ಗಗಳು ಇನ್ನೂ ಮಂದಗತಿಯಲ್ಲಿಯೇ ಇವೆ. ಇಷ್ಟು ವರ್ಷವಾದರೂ ರೈಲುಗಳು ಮಾತ್ರ ಓಡಾಡುತ್ತಿಲ್ಲ. ಕೇಂದ್ರ ಸರ್ಕಾರ ರೈಲ್ವೆ ಬಜೆಟ್‌ನಲ್ಲಿ ಹಲವಾರು ಯೋಜನೆಗಳನ್ನು ಘೋಷಣೆ ಮಾಡುತ್ತದೆ. ಆದರೆ, ಆ ಯೋಜನೆಗಳು ಎಷ್ಟರ ಮಟ್ಟಿಗೆ ಕಾರ್ಯಗತವಾಗಿವೆ ಎನ್ನುವುದನ್ನು ತುಲನೆ ಮಾಡಿದರೆ, ಯೋಜನೆಗಳು ಕಾರ್ಯಗತವಾಗದೇ ನಿಂತಲ್ಲೇ ನಿಂತಿರುತ್ತವೆ ಎನ್ನುವುದಕ್ಕೆ ಜಿಲ್ಲೆಗೆ ಬಜೆಟ್‌ನಲ್ಲಿ ಮಂಜೂರಾಗಿರುವ ಯೋಜನೆಗಳೇ ಸಾಕ್ಷಿಯಾಗಿವೆ.

ತುಮಕೂರು-ದಾವಣಗೆರೆ ರೈಲು ಮಾರ್ಗ, ರಾಯದುರ್ಗ-ತುಮಕೂರು ಮಾರ್ಗದ ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ. ಈ ಯೋಜನೆ ಅನುಷ್ಠಾನಕ್ಕೆ ಹಣಕಾಸಿನ ಕೊರತೆಯಿಲ್ಲ. ಹಣದ ಕೊರತೆ ಇಲ್ಲದಿದ್ದರೂ ಕೆಲಸ ಮಂದಗತಿಯಲ್ಲಿ ನಡೆಯುತ್ತಿದೆ.

ಅಲ್ಲಲ್ಲಿ ಭೂಸ್ವಾಧೀನ: ರೈಲ್ವೆ ಯೋಜನೆಗೆ ಅಗತ್ಯವಾಗಿ ರಾಜ್ಯ ಸರ್ಕಾರ ಹೆಚ್ಚು ಆಸಕ್ತಿವಹಿಸಿ ಭೂಸ್ವಾಧೀನ ಮಾಡಿಕೊಡಬೇಕು. ಈಗ ಅಲ್ಲಲ್ಲಿ ಭೂ ಸ್ವಾಧೀನವಾಗಿದೆ. ಕಾಮಗಾರಿ ಈಗ ಚುರುಕಾಗುತ್ತಿದೆ. ಶೀಘ್ರವೇ ಈ ರೈಲ್ವೇ ಯೋಜನೆಗಳು ಪೂರ್ಣಗೊಳ್ಳಲಿ ಎನ್ನುತ್ತಾರೆ  ಅಧಿಕಾರಿಗಳು. ತುರುವೇಕೆರೆ – ಚಿಕ್ಕನಾಯಕನಹಳ್ಳಿ -ಹುಳಿಯಾರು ಮಾರ್ಗವಾಗಿ ಮಂಜೂರಾಗಿದ್ದ ರೈಲ್ವೆ ಯೋಜನೆ ಇನ್ನೂ ಯಾವುದೇ ಹಂತದಲ್ಲೂ ಕಾರ್ಯಾರಂಭವಾಗಿಲ್ಲ. ಜಿಲ್ಲೆಯ ಮಟ್ಟಿಗೆ ಅಗತ್ಯವಾಗಿದ್ದ ಯೋಜನೆಗಳು ಮಂಜೂರಾಗಿವೆ. ಆದರೆ, ಅವು ಕಾರ್ಯಗತವಾಗದೇ ಇರುವುದು ನಿರಾಶೆ ಮೂಡಿದ್ದು, ಈ ವರ್ಷದ ರೈಲ್ವೆ ಬಜೆಟ್‌ನಲ್ಲಿ ಯಾವ ಯೋಜನೆಗೆ ಯಾವ ರೀತಿ ಹಣ ಮೀಸಲಿಡುವರು, ಯಾವ ಯೋಜನೆ ಶೀಘ್ರ ಕಾರ್ಯಪ್ರವೃತ್ತಿಗೆ ಚಾಲನೆ ದೊರೆಯುವುದು ಕಾದು ನೋಡಬೇಕಾಗಿದೆ.

Advertisement

ಮೋದಿ ಸರ್ಕಾರದಲ್ಲಿ ಜಿಲ್ಲೆಗೆ ಬಂದಿದ್ದೇನು?
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಜಿಲ್ಲೆಗೆ ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನಗೊಂಡಿದೆ. ಈ ಯೋಜನೆಯಲ್ಲಿ ಕೆಲಸ ಪೂರ್ಣಗೊಳ್ಳುವ ಹಂತ ತಲುಪಿದೆ. ಪಾಸ್‌ಪೋರ್ಟ್‌ ಕಚೇರಿ ಆರಂಭಗೊಂಡಿದೆ. ತುಮಕೂರು ಎಚ್‌.ಎಂ.ಟಿ ಕೈ ಗಡಿಯಾರ ಕಾರ್ಖಾನೆ ಜಾಗವನ್ನು ಇಸ್ರೋಗೆ ನೀಡಲಾಗಿದ್ದು, ಅದರ ಕಾಮಗಾರಿಗಳು ನಡೆಯುತ್ತಿದೆ. ಅದರ ಕಾರ್ಯಾರಂಭವೂ ಶೀಘ್ರದಲ್ಲಿ ಆಗಲಿದೆ.

ಜಿಲ್ಲೆಯ ಗುಬ್ಬಿ ತಾಲೂಕು ನಿಟ್ಟೂರು ಬಳಿ ಎಚ್‌.ಎ.ಎಲ್‌ ಹೆಲಿಕ್ಯಾಫ್ಟರ್‌ ಘಟಕ ಉದ್ಘಾಟನೆಯಾಗಿದೆ. ವಸಂತ ನರಸಾಪುರದಲ್ಲಿ ಫುಡ್‌ಪಾರ್ಕ್‌ ಆರಂಭಗೊಂಡಿದೆ. ಹಲವು ರೈಲ್ವೆ ಯೋಜನೆಗಳು ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿ ಕಾಮಗಾರಿ ಮುಗಿಯುವ ಹಂತಕ್ಕೆ ಬಂದರೆ, ಕೆಲವು ಚಾಲನೆಯಲ್ಲಿವೆ. ಜಲಜೀವನ್‌ ಯೋಜನೆ ಚಾಲನೆಯಾಗುತ್ತಿದೆ. ಕೈಗಾರಿಕಾ ಕಾರಿಡಾರ್‌ ಯೋಜನೆ ಈ ಹಿಂದಿನ ಬಜೆಟ್‌ನಲ್ಲಿ ಘೋಷಣೆಯಾಗಿತ್ತು. ಅದು ಇನ್ನೂ ಅನುಷ್ಠಾನವಾಗಿಲ್ಲ. ಕೆಲವು ರೈಲ್ವೆ ಯೋಜನೆಗಳು ಘೋಷಣೆ ಆಗಿದ್ದರೂ ಅವುಗಳ ಕಾರ್ಯ ಆರಂಭವಾಗಿಲ್ಲ. ತುಮಕೂರು ಜಿಲ್ಲೆಯ ತೆಂಗು, ಅಡಕೆ, ರೇಷ್ಮೆ ಬೆಳೆಗಾರರು ಸಂಕಷ್ಟದಲ್ಲಿದ್ದು, ಈ ಬಜೆಟ್‌ನಲ್ಲಿ ತೆಂಗು ಬೆಳೆಗಾರರಿಗೆ ಅನುಕೂಲವಾಗುತ್ತಾ? ಏನೆಲ್ಲಾ ಬಜೆಟ್‌ನಲ್ಲಿ ಇರುತ್ತೆ ಎನ್ನುವುದೇ ಕುತೂಹಲ ಮೂಡಿದೆ.

ಜಿಲ್ಲೆಯ ಹೊಸ ಬೇಡಿಕೆಗಳಿಗೆ ಪ್ರಸ್ತಾವನೆ
ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಮಾಣಕ್ಕೆ ಒತ್ತು ನೀಡುವುದು. ಮಟ್ರೋ ಯೋಜನೆ ಪ್ರಸ್ತಾಪ ಮಾಡುವುದು, ತುಮಕೂರು ನಗರ ಬೆಳವಣಿಗೆಯಾಗುತ್ತಿರುವುದರಿಂದ ಮತ್ತೊಂದು ರಿಂಗ್‌ ರಸ್ತೆಗೆ ಹಣ ಮೀಸಲಿಡುವ ಕುರಿತು, ಮೆಘಾ ಡೈರಿ ನಿರ್ಮಾಣ, ತೆಂಗು ಅಭಿವೃದ್ಧಿಗೆ ಒತ್ತು ನೀಡುವುದು, ಪ್ರವಾಸೋಧ್ಯಮಕ್ಕೆ ಒತ್ತು ನೀಡುವುದು. ವಸಂತ ನರಸಾಪುರ ಕೈಗಾರಿಕಾ ಅಭಿವೃದ್ಧಿಗೆ ಒತ್ತು ನೀಡುವುದು ಸೇರಿದಂತೆ ಹಲವಾರು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.

ಹಣ ಬಿಡುಗಡೆಯಾಗಿಲ್ಲ:ಬರಪೀಡಿತ ಜಿಲ್ಲೆಗಳಿಗೆ ನೀರಾವರಿ ಯೋಜನೆ ಕಲ್ಪಿಸುವ ಭದ್ರಾಮೇಲ್ದಂಡೆ ಯೋಜನೆಗೆ ಕಳೆದ ಬಜೆಟ್‌ನಲ್ಲಿ 5000 ಕೋಟಿ ಘೋಷಣೆ ಮಾಡಿದ್ದರು. ಈ ಯೋಜನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಮಪಾಲು ಇರುತ್ತದೆ. ಆದರೆ, ಈ ಎರಡು ಸರ್ಕಾರಗಳ ಹೊಂದಾಣಿಕೆಯ ಕೊರತೆಯಿಂದ ಇದುವರೆಗೂ ಕೇಂದ್ರದ 5000 ಕೋಟಿ ಹಣ ಬಿಡುಗಡೆಯಾಗಿಲ್ಲ ಎಂದು ತಿಳಿದು ಬಂದಿದೆ.

ಕೇಂದ್ರದ 2024-2025ನೇ ಸಾಲಿನ ಮುಂಗಡ ಪತ್ರದಲ್ಲಿ ಜಿಲ್ಲೆಗೆ ಹೊಸದಾಗಿ ಸೇರ್ಪಡೆ ಮಾಡುವ ಮತ್ತು ಮಂಜೂರಾಗಿರುವ ಯೋಜನೆಗಳಿಗೆ ಹೆಚ್ಚಿನ ಅನುದಾನ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಮತ್ತು ವಿವಿಧ ಇಲಾಖೆ ಸಚಿವರಿಗೆ ಮನವಿ ಮಾಡಿದ್ದೇನೆ. ಹಳೆಯ ಯೋಜನೆಯ ಪ್ರಗತಿ ಜೊತೆಗೆ ವಿವಿಧ ಹೊಸ ಯೋಜನೆಗಳ ಪ್ರಸ್ತಾಪ ಮಾಡಿದ್ದೇನೆ. ಎಚ್‌ಎಎಲ್‌ನಲ್ಲಿ ಯುದ್ಧ ವಿಮಾನ ಘಟಕ ಆರಂಭಕ್ಕೆ ಮನವಿ ಮಾಡಿದ್ದೇನೆ.
● ಜಿ.ಎಸ್‌.ಬಸವರಾಜ್‌, ಸಂಸದ

ಕೇಂದ್ರ ರಾಯದುರ್ಗ ಮತ್ತು ದಾವಣಗೆಗೆ ರೈಲ್ವೆ ಯೋಜನೆಗೆ ಹೆಚ್ಚಿನ ಹಣ ನೀಡಿ ಕಾಮಗಾರಿ ಪೂರ್ಣಗೊಳಿಸಬೇಕು. ಎಚ್‌ ಎಎಲ್‌ ಕಾರ್ಖಾನೆ ಪೂರ್ಣಗೊಳಿಸಬೇಕು. ಇಸ್ರೋ ಶೀಘ್ರವಾಗಿ ಕಾರ್ಯಾರಂಭ ಮಾಡಬೇಕು. ಸ್ಮಾರ್ಟ್‌ ಸಿಟಿ ಯೋಜನೆಗೆ ಇನ್ನೂ ಅನುದಾನ ನೀಡಿ ಮುಂದುವರಿಸಬೇಕು. ಕೊಬ್ಬರಿಗೆ ಬೆಂಬಲ ಬೆಲೆ  ಘೋಷಣೆ ಮಾಡಬೇಕು ಎಂದು ಕೇಂದ್ರಕ್ಕೆ ಒತ್ತಾಯ ಮಾಡುತ್ತೇನೆ.
ಎಸ್‌.ಪಿ ಮುದ್ದಹನುಮೇಗೌಡ, ಮಾಜಿ ಸಂಸದ

ಕಳೆದ ಬಜೆಟ್‌ನಲ್ಲಿ ಭದ್ರಾಮೇಲ್ದಂಡೆ ಯೋಜನೆಗೆ 5000 ರೂ ಮೀಸಲಿಟ್ಟಿದ್ದರು. ಅದು ಇನ್ನೂ ಕಾಯಾರಂಭವಾಗಿಲ್ಲ. ತಕ್ಷಣ ಈ
ಬಗ್ಗೆ ಗಮನ ನೀಡಬೇಕು. ಜಿಲ್ಲೆಯ ರೈತರಿಗೆ ಅನುಕೂಲವಾಗುವ ಯೋಜನೆಯನ್ನು ಬಜೆಟ್‌ನಲ್ಲಿ ಮೀಸಲಿಡಬೇಕು.
ಕುಂದರನಹಳ್ಳಿ ರಮೇಶ್‌, ದಿಶಾ ಸಮಿತಿ ಸದಸ್ಯ

■ ಚಿ.ನಿ. ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next