Advertisement

ಅಮೃತ ಕಾಲಕ್ಕೆ ನಾಲ್ಕು ಸ್ತಂಭಗಳು

12:03 AM Feb 02, 2023 | Team Udayavani |

ಅಮೃತ ಕಾಲದ ಭಾರತ ಕಟ್ಟಲು ಶುಭ ಮುಹೂರ್ತವಿಟ್ಟಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇದಕ್ಕಾಗಿ ಮಹಿಳೆಯರ ಆರ್ಥಿಕ ಸಶಕ್ತೀಕರಣ, ಸಾಂಪ್ರದಾಯಿಕ ಕರಕುಶಲಕರ್ಮಿಗಳ ಕೌಶಲ, ಪ್ರವಾಸೋದ್ಯಮ ಮತ್ತು ಹಸುರು ಪ್ರಗತಿ ಎಂಬ ನಾಲ್ಕು ಸ್ತಂಭಗಳನ್ನು ಗುರುತಿಸಿದ್ದಾರೆ.

Advertisement

ದೇಶದಲ್ಲಿನ ಅಸಂಘಟಿತ ಕರಕುಶಲ ಕರ್ಮಿಗಳಿಗೆ ಆರ್ಥಿಕ ಸಹಾಯ, ಆಧುನಿಕ ಕೌಶಲ ತರಬೇತಿ, ಹೊಸ ತಂತ್ರಜ್ಞಾನದ ನೆರವು, ಅತೀ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆಗಳ ಜತೆ ಸೇರುವಿಕೆ, ಪೇಪರ್‌ರಹಿತ ಹಣ ಪಾವತಿ, ಜಾಗತಿಕ ಮಾರುಕಟ್ಟೆ ಅಥವಾ ವಿಶಾಲ ಮಾರುಕಟ್ಟೆ ಒದಗಿಸುವ ಚಿಂತನೆಯೊಂದಿಗೆ ಪ್ರಧಾನ ಮಂತ್ರಿ ವಿಶ್ವಕರ್ಮ ಕೌಶಲ ಸಮ್ಮಾನ (ಪಿಎಂ ವಿಕಾಸ್‌) ಯೋಜನೆಯನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ಶತಮಾನಗಳಿಂದ ಸಾಂಪ್ರದಾಯಿಕ ಕರಕುಶಲ ಕರ್ಮಿಗಳು ದೇಶಕ್ಕೆ ಖ್ಯಾತಿ ತಂದಿದ್ದು ಅವರ ಕಲೆ ಮತ್ತು ಕರ ಕುಶಲತೆ ಆತ್ಮ ನಿರ್ಭರ ಭಾರತದ ನೈಜ ಚೈತನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಥಮ ಬಾರಿಗೆ ಅವರಿಗೆ ನೆರವು ನೀಡುವ ಪ್ಯಾಕೇಜ್‌ ಅನ್ನು ಪ್ರಕಟಿಸುತ್ತಿದ್ದೇವೆ ಎಂದು ವಿತ್ತ ಸಚಿವರು ಹೇಳಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡ, ಇತರ ಹಿಂದುಳಿದ ವರ್ಗಗಳು, ಮಹಿಳೆಯರು ಮತ್ತು ಇತರ ದುರ್ಬಲ ವರ್ಗದ ಕೌಶಲವನ್ನು ಬಳಸಿಕೊಂಡು ಅವರಿಗೆ ಆರ್ಥಿಕ ಚೈತನ್ಯ ತುಂಬಿ ದೇಶದ ಜಿಡಿಪಿಗೆ ಅವರ ಕೊಡುಗೆಯು ಸಿಗುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.

ಕಮ್ಮಾರ, ವಿಶ್ವಕರ್ಮ, ಅಕ್ಕಸಾಲಿಗರು, ಬಡಗಿ ಮುಂತಾದ ಕೆಲಸ ಮಾಡುವವರು ವಿಶ್ವಕರ್ಮ ವಿಭಾಗದಲ್ಲಿ ಬರುತ್ತಾರೆ. ವಿತ್ತ ಸಚಿವರು ತಮ್ಮ ಯೋಜನೆಯ ಉದ್ದೇಶವನ್ನು ಬಜೆಟ್‌ನಲ್ಲಿ ಪ್ರಕಟಿಸಿದ್ದರೂ ಸಹ ಯೋಜನೆಯ ರೂಪುರೇಷೆ, ಅನು ದಾನ ಮುಂತಾದ ಅಂಶಗಳು ಇನ್ನಷ್ಟೆ ಹೊರಬೀಳಬೇಕಿದೆ.

ಮಹಿಳೆಯರ ಆರ್ಥಿಕ ಸಶಕ್ತೀಕರಣ: ಹೆಣ್ಣು ಕುಟುಂಬದ ಕಣ್ಣು ಎಂಬ ಸಾಮಾಜಿಕ ನೆಲೆಯಿಂದ ಆಕೆಯನ್ನು ದೇಶದ ಆರ್ಥಿಕತೆಯ ಬೆನ್ನುಲುಬನ್ನಾಗಿ ರೂಪಿಸುವ ಪ್ರಯತ್ನದಲ್ಲಿ ಕೇಂದ್ರ ಸರಕಾರವಿದೆ. ಗ್ರಾಮೀಣ ಮಹಿಳೆಯರ 81 ಲಕ್ಷ ಸ್ವಸಹಾಯ ಸಂಘಗಳಿದ್ದು ಇದರ ಯಶಸ್ಸಿನಿಂದ ಪ್ರಭಾವಿತವಾಗಿರುವ ಸರಕಾರ ಅವರನ್ನು ಮುಂದಿನ ಹಂತದ ಆರ್ಥಿಕ ಚಟುವಟಿಕೆಗೆ ಸೆಳೆಯುವ ಪ್ರಯತ್ನ ನಡೆಸಿದೆ. ಸಣ್ಣ ಸ್ವಸಹಾಯ ಗುಂಪುಗಳಿಂದ ಬೃಹತ್‌ ಉತ್ಪಾದನ ಉದ್ದಿಮೆ ಅಥವಾ ಸಾವಿರಾರು ಸದಸ್ಯರಿರುವ ಗುಂಪನ್ನು ರಚಿಸುವುದಾಗಿ ಸರಕಾರ ಹೇಳಿದೆ. ಈ ಗುಂಪಿಗೆ ಕಚ್ಚಾ ವಸ್ತುಗಳ ಪೂರೈಕೆ, ಉತ್ತಮ ವಿನ್ಯಾಸ, ಗುಣಮಟ್ಟ, ಬ್ರ್ಯಾಂಡಿಂಗ್‌ ಮತ್ತು ಮಾರುಕಟ್ಟೆಯ ನೆರವನ್ನು ಸರಕಾರ ನೀಡಲಿದೆ. ಮಹಿಳೆಯರ ಉತ್ಪಾದನೆಗೆ ದೊಡ್ಡ ಮಾರುಕಟ್ಟೆ ಒದಗಿಸುವುದು ಸರಕಾರದ ಉದ್ದೇಶವಾಗಿದೆ.

Advertisement

ಪ್ರವಾಸೋದ್ಯಮ: ಪ್ರವಾಸೋದ್ಯಮದಲ್ಲಿರುವ ಸಾಧ್ಯತೆ ಯನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಎಂಬ ಆಶಯವನ್ನು ಸರಕಾರ ವ್ಯಕ್ತಪಡಿಸಿದೆ. ಉದ್ಯೋಗ ಮತ್ತು ಉದ್ದಿಮಶೀಲತೆಗೆ ಅವಕಾಶವಿದ್ದು, ಯುವ ಜನಾಂಗ ಈ ರಂಗವನ್ನು ಬಳಸಿಕೊಳ್ಳಬೇಕು ಎಂಬ ಉದ್ದೇಶ ಹೊಂದಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಚಟುವಟಿಕೆಯನ್ನು ಆದ್ಯತೆಯ ಮೇಲೆ ಕೈಗೊಳ್ಳಲಾಗುವುದು ಎಂದು ಸರಕಾರ ಹೇಳಿದೆ. 50 ಪ್ರವಾಸಿ ತಾಣಗಳನ್ನು ದೇಶ ವಿದೇಶದ ಪ್ರವಾಸಿಗರನ್ನು ಸೆಳೆಯುವಂತೆ ಅಭಿವೃದ್ಧಿ ಪಡಿಸುವ ಉದ್ದೇಶವಿರುವುದಾಗಿ ಸರಕಾರ ಹೇಳಿದೆ.

ಹಸುರು ಪ್ರಗತಿ
ಹಸುರು ಇಂಧನ, ಹಸುರು ಶಕ್ತಿ, ಹಸುರು ಕೃಷಿ, ಹಸುರು ಸಾರಿಗೆ, ಹಸುರು ಕಟ್ಟಡ ಮತ್ತು ಹಸುರು ಉಪಕರಣ ಮತ್ತು ಎಲ್ಲ ವಲಯದಲ್ಲಿಯೂ ಹಸುರು ಬಳಕೆಗೆ ಒತ್ತು ನೀಡುವ ನಿಯಮಗಳ ರೂಪಣೆ ಮಾಡುವ‌ ಆಶಯವನ್ನು ಸರಕಾರ ಸ್ಪಷ್ಟವಾಗಿ ತಿಳಿಸಿದೆ. ಇಂಗಾಲಾಮ್ಲದ ಹೊರಸೂಸುವಿಕೆ ಯನ್ನು ತಡೆಯುವುದು ಹಸುರೀಕರಣದ ಉದ್ದೇಶ ಎಂದು ಸರಕಾರ ಹೇಳಿದೆ. ಇದರ ಜತೆಗೆ ಹಸುರು ವಲಯದಲ್ಲಿ ಭಾರತ ಉತ್ತಮ ಸಾಧನೆ ಮಾಡುತ್ತಿದ್ದು ಸ್ವಾವಲಂಬಿ ಯಾಗುವ ಹೆಚ್ಚಿನ ಅವಕಾಶವಿದೆ. ಇದನ್ನು ಬಳಸಿಕೊಂಡು ವಿದೇಶಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ ವಿದೇಶಿ ವಿನಿಮಯ ಉಳಿಸುವ‌ ಆಶಯವನ್ನು ಸರಕಾರ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next