Advertisement

ಬಿಎಸ್‌ವೈ ಮಾತಿಗೆ “ಆಳಿಗೊಂದು ಕಲ್ಲು’

09:46 AM Nov 06, 2019 | Team Udayavani |

ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಪ್ರಕರಣ ತೀವ್ರ ಚರ್ಚೆಗೆ ಕಾರಣವಾಗಿದೆ. ಬಿಎಸ್‌ವೈ ಮಾತು ಕಮಲ ಪಾಳೆಯದ ಪ್ರಮುಖರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರೆ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ರಾಜಕೀಯವಾಗಿ ಹೊಸ ಅಸ್ತ್ರ ಸಿಕ್ಕಂತಾಗಿದೆ. ಈ ನಡುವೆ, ಸಚಿವ ಸೋಮಣ್ಣ “ಅನರ್ಹ ಶಾಸಕರಿಗೆ ರಾಜೀನಾಮೆ ಕೊಟ್ಟು ನಮ್ಮ ಪಕ್ಷಕ್ಕೆ ಬನ್ನಿ ಎಂದು ಆಹ್ವಾನ ನೀಡಿಲ್ಲ’ ಎಂದರೆ, “ದೊಡ್ಡ ಹುದ್ದೆಗಳಿದ್ದೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರ ಕುರಿತು ತನಿಖೆಯಾಗಲಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಆಗ್ರಹಿದ್ದಾರೆ.

Advertisement

ರಾಜೀನಾಮೆ ಕೊಟ್ಟು ಬಿಜೆಪಿಗೆ ಬನ್ನಿ ಎಂದು ಆಹ್ವಾನ ನೀಡಿರಲಿಲ್ಲ
ಬೆಳಗಾವಿ: “ಅನರ್ಹ ಶಾಸಕರಿಗೆ ನಾವೇನು ರಾಜೀನಾಮೆ ಕೊಟ್ಟು ನಮ್ಮ ಪಕ್ಷಕ್ಕೆ ಬನ್ನಿ ಎಂದು ಆಹ್ವಾನ ನೀಡಿಲ್ಲ. ನಾವಾಗಲಿ ಅಥವಾ ಅವರಾಗಲಿ ಅರ್ಜಿ ಹಾಕಿರಲಿಲ್ಲ. ಅವರೆಲ್ಲ ಸಿದ್ದರಾಮಯ್ಯ ಫೋಟೊ ಹಿಡಿದುಕೊಂಡೇ ಗೆದ್ದು ಬಂದವರು. ಅವರ ರಾಜೀನಾಮೆಗೆ ಸಿದ್ದರಾಮಯ್ಯ ಅವರೇ ನೇರ ಕಾರಣ’ ಎಂದು ವಸತಿ ಸಚಿವ ಸೋಮಣ್ಣ ಆರೋಪಿಸಿದರು. ಸೋಮವಾರ ಸುದ್ದಿಗಾರರ ಜತೆ ಮಾತನಾಡಿ, ನಾವು ಯಾರನ್ನೂ ರಾಜೀನಾಮೆ ಕೊಟ್ಟು ಬನ್ನಿ ಎಂದು ಕರೆದಿರಲಿಲ್ಲ. ಸಿದ್ದರಾಮಯ್ಯ ಅವರಿಂದ ಬೇಸತ್ತು ಅನರ್ಹರು ರಾಜೀನಾಮೆ ನೀಡಿದ್ದಾರೆ. ಅವರು ಯಾವ ಕಾರಣಕ್ಕೆ ರಾಜೀನಾಮೆ ಕೊಟ್ಟರು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿನ ಅವ್ಯವಸ್ಥೆ, ಅಲ್ಲಿ ತಮಗೆ ಗೌರವ ಸಿಗದ್ದಕ್ಕೆ ಬೇಸತ್ತು ಅವರೆಲ್ಲ ರಾಜೀನಾಮೆ ನೀಡಿದ್ದರು ಎಂದರು.

ಶಾಸಕರ ರಾಜೀನಾಮೆ ತನಿಖೆಯಾಗಲಿ: ನಳಿನ್‌
ಕುಂದಾಪುರ: ದೊಡ್ಡ ಹುದ್ದೆಗಳಿದ್ದೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರ ಕುರಿತು ತನಿಖೆಯಾಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲು ಆಗ್ರಹಿದ್ದಾರೆ. ಮಾಧ್ಯಮದವರ ಜತೆ ಮಾತನಾಡಿ, ಅನರ್ಹರಾಗಿ ಕೋರ್ಟ್‌ ಮೆಟ್ಟಿಲೇರಿದ ಅಷ್ಟೂ ಶಾಸಕರ ರಾಜೀನಾಮೆಯ ಹಿಂದಿನ ಕಾರಣಗಳನ್ನು ತನಿಖೆ ನಡೆಸಲಿ. ಆಗ ಎಲ್ಲವೂ ಹೊರಬರುತ್ತದೆ. ಅವರ ರಾಜೀನಾಮೆಗಿದ್ದ ಕಾರಣ, ಅವರಿಗೆ ಒಡ್ಡಿದ ಆಮಿಷ ಇತ್ಯಾದಿಗಳೆಲ್ಲ ಹೊರಬರಲಿ. ಆಗ ಬಿಎಸ್‌ವೈ ಅವರ ಅಡಿಯೋದ ಅಸಲಿ ಕಥೆ ಕೂಡ ಹೊರಬೀಳಲಿದೆ ಎಂದರು. ಆಡಿಯೊ ಕುರಿತು ಪ್ರತ್ಯೇಕ ತನಿಖೆ ನಡೆಯ ಲಿದೆಯೇ ಎಂದು ಕೇಳಿದಾಗ, ಪ್ರತ್ಯೇಕ ತನಿಖೆ ಅಗತ್ಯವಿಲ್ಲ. ಅದನ್ನು ಹೊರ ಹಾಕಿದವರು ಬಿಜೆಪಿ ಕಾರ್ಯಕರ್ತರು ಅಲ್ಲ. ಅದು ಪಕ್ಷದ ಸಭೆಯಾಗಿದ್ದರೂ ಆಂತರಿಕ ಸಭೆಯಲ್ಲ. ಬಿಜೆಪಿ ಕಾರ್ಯಕರ್ತರ ಸೋಗಿನಲ್ಲಿ ಯಾರೋ ಬಂದು ಕುಳಿತು ಇಂತಹ ಕೃತ್ಯ ಎಸಗಿದ್ದಾರೆ ಎಂದರು. ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್‌ ಖಚಿತವೇ ಎಂದು ಕೇಳಿದಾಗ, ಅದು ನ್ಯಾಯಾಲಯದ ತೀರ್ಮಾನದ ಬಳಿಕ ನಿರ್ಧಾರವಾಗಲಿದೆ. ಅಲ್ಲಿವರೆಗೆ ಯಾವುದೂ ಖಚಿತವಲ್ಲ ಎಂದರು.

ವಿಡಿಯೋ ಸೋರಿಕೆ ಮಾಡಿದ್ದು ಕಟೀಲು
ಬೆಳಗಾವಿ: ಅನರ್ಹ ಶಾಸಕರ ಬಗ್ಗೆ ಮುಖ್ಯಮಂತ್ರಿ ಯಡಿ ಯೂರಪ್ಪ ಮಾತನಾಡಿರುವ ವಿಡಿಯೋ ಸೋರಿಕೆ ಮಾಡಿ ರುವುದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆರೋಪಿಸಿದ್ದಾರೆ. ಸೋಮವಾರ ಸುದ್ದಿಗಾರರ ಜತೆ ಮಾತನಾಡಿ, ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ಆಗದೇ ಇರುವವರ ಗುಂಪು ಈ ಆಡಿಯೋ- ವಿಡಿಯೋ ಬಿಡುಗಡೆ ಮಾಡಿದೆ. ಅನರ್ಹರಿಗೆ ಟಿಕೆಟ್‌ ಕೊಡಬಾರದು ಎಂಬ ಲಾಬಿ ಹಾಗೂ ಯಡಿಯೂರಪ್ಪ ವಿರುದ್ಧ ಇರುವ ಮತ್ತೂಂದು ಲಾಬಿ ಈ ಕೆಲಸ ಮಾಡಿವೆ. ಅನರ್ಹ ಶಾಸಕರ ಬಗ್ಗೆ ಮೃದು ಧೋರಣೆ ತೋರುತ್ತಿರುವ ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ನಡೆದ ಪಕ್ಷದ ಚುನಾವಣಾ ಸಿದ್ಧತಾ ಸಭೆಯಲ್ಲಿ ಇದೇ ಮಾತನಾಡಿದ್ದರು. ಈ ಭಾಷಣದ ವಿಡಿಯೋ ಸಾರಾಂಶವನ್ನು ನಳಿನಕುಮಾರ ಕಟೀಲ್‌ ಬಹಿರಂಗಪಡಿಸಿದ್ದಾರೆ. ಇಲ್ಲವೇ ಸವದಿ ಬೆಂಬಲಿಗರೇ ಇದನ್ನು ಮಾಡಿರಬಹುದು ಎಂದರು.

ವಿಡಿಯೋ ಸೋರಿಕೆ ಮಾಡಿದವರು ಬಿಜೆಪಿಯವರೇ
ಬೆಳಗಾವಿ: ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿ ಸಭೆಯಲ್ಲಿ ಅನರ್ಹ ಶಾಸಕರ ಕುರಿತು ಮಾತನಾಡಿದ ವಿಡಿಯೋ ಸೋರಿಕೆ ಮಾಡಿ ದವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲು, ಉಪಮುಖ್ಯ ಮಂತ್ರಿ ಲಕ್ಷ್ಮಣ ಸವದಿ ಅಥವಾ ಗೃಹ ಸಚಿವ ಬಸವರಾಜ ಬೊಮ್ಮಾಯಿ ಇರಬಹುದು ಎಂದು ಹೇಳುವ ಮೂಲಕ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೊಸ ವಿವಾದ ಹುಟ್ಟು ಹಾಕಿದ್ದಾರೆ. ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಸ್ವತಃ ಮುಖ್ಯಮಂತ್ರಿಗಳೇ ಆಪರೇಷನ್‌ ಕಮಲದ ಸತ್ಯಾಂಶವನ್ನು ಹೇಳಿದ್ದಾರೆ. ಬಿಜೆಪಿ ಸಭೆಯಲ್ಲಿ ಅವರ ಪಕ್ಷದವರೇ ಇದ್ದರು. ಬೇರೆಯವರು ಇರಲಿಲ್ಲ. ಹಾಗಿರುವಾಗ ಇದ್ದ ಮೂವರಲ್ಲಿ ಕದ್ದವರು ಯಾರು ಎಂಬಂತಿದೆ ಎಂದು ಲೇವಡಿ ಮಾಡಿದರು. ಆರಂಭದಲ್ಲಿ ಪಕ್ಷದ ಸಭೆಯಲ್ಲಿ ಅನರ್ಹ ಶಾಸಕರ ಬಗ್ಗೆ ನಾನು ಮಾತನಾಡಿದ್ದು ನಿಜ ಎಂದು ಹೇಳಿದ್ದ ಯಡಿಯೂರಪ್ಪ ಪಕ್ಷದ ವರಿಷ್ಠರ ಗಮನಕ್ಕೆ ವಿಷಯ ಬಂದ ನಂತರ ಈಗ ಉಲ್ಟಾ ಹೊಡೆದಿದ್ದಾರೆ. ಅನರ್ಹ ಶಾಸಕರನ್ನು ಮುಂಬೈನಲ್ಲಿ ಇಟ್ಟಿದ್ದೇ ಅಮಿತ್‌ ಶಾ. ಅವರಿಗೆ ರಕ್ಷಣೆ ಕೊಟ್ಟಿದ್ದೇ ಅಮಿತ್‌ ಶಾ ಎಂದು ಸಿದ್ದರಾಮಯ್ಯ ನೇರ ಆರೋಪ ಮಾಡಿದರು.

Advertisement

ಅನರ್ಹ ಶಾಸಕರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ
ಕೊಪ್ಪಳ: ಅನರ್ಹ ಶಾಸಕರು ರಾಜೀನಾಮೆ ನೀಡಿದ್ದರಿಂದಲೇ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿರೋದು, ನಾನು ಸಚಿವನಾಗಿರುವುದು. ಅವರನ್ನು ಯಾವುದೇ ಕಾರಣಕ್ಕೂ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ಅನರ್ಹ ಶಾಸಕರು ಸಮ್ಮಿಶ್ರ ಸರ್ಕಾರದಲ್ಲಿ ಅಭಿವೃದ್ಧಿ ಯಾಗುತ್ತಿಲ್ಲ ಎಂದು ಬೇಸತ್ತು ರಾಜೀನಾಮೆ ನೀಡಿದ್ದಾರೆ. ಅವರಿಂದ ನಮ್ಮ ಸರ್ಕಾರ ಅಧಿಕಾರದಲ್ಲಿದೆ. ಅವರ ರಾಜೀನಾಮೆಯಿಂದ ನಾನು ಸಚಿವನಾಗಿದ್ದೇನೆ. ಅವರನ್ನು ಎಂದಿಗೂ ಕೈ ಬಿಡಲ್ಲ ಎಂದರು. ವಿಡಿಯೋ ಬಿಡುಗಡೆ ವಿಚಾರ ಬಿಎಸ್‌ವೈ ಹಾಗೂ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲು ಅವರು ನೋಡಿಕೊಳ್ಳುತ್ತಾರೆ. ಈ ಬಗ್ಗೆ ಹೆಚ್ಚು ಪ್ರತಿಕ್ರಿಯಿಸಲ್ಲ. ಆಡಿಯೋ ಬಿಡುಗಡೆ ಮಾಡೋದರಲ್ಲಿ ಸಿದ್ದು ಎಕ್ಸ್‌ಫರ್ಟ್‌, ಇದಕ್ಕಾಗಿ ಅವರಿಗೆ ನೊಬೆಲ್‌ ಪ್ರಶಸ್ತಿ ಕೊಡಬೇಕು ಎಂದರು.

“ನ್ಯಾಯಮೂರ್ತಿಗಳಿಂದ ತನಿಖೆಗೆ ಆಗ್ರಹ’
ಬೆಂಗಳೂರು: ವಿಡಿಯೋ ಪ್ರಕರಣವನ್ನು ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿ ಸುವಂತೆ ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲು ವಿಡಿಯೋ ಪ್ರಕರಣವನ್ನು ಪಕ್ಷದ ಆಂತರಿಕ ತನಿಖೆಗೆ ಆದೇಶ ನೀಡಿರುವುದು ಯಡಿಯೂರಪ್ಪ ಮಾತನಾಡಿರುವುದನ್ನು ಅವರು ಒಪ್ಪಿಕೊಂಡಂತಾಗಿದೆ. ಈ ಪ್ರಕರಣದ ನಂತರ ಬಿಜೆಪಿ ಸಚಿವರು ಹಾಗೂ ನಾಯಕರು ಸಮೂಹ ಸನ್ನಿ ಹಿಡಿದಂತೆ ಮಾತನಾಡುತ್ತಿದ್ದಾರೆ. ಅವರು ಆರೋಗ್ಯವಾಗಿರಬೇಕಾದರೆ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಿ ಸುವ ಅಗತ್ಯವಿದೆ ಎಂದು ಹೇಳಿದರು. ಬಿಎಸ್‌ವೈ ಅವರು ಯಡಿಯೂರು ಸಿದ್ದಲಿಂಗೇಶ್ವರನ ಸನ್ನಿಧಾನದಲ್ಲಿ ಅಮಿತ್‌ ಶಾ ನಿರ್ದೇಶನದಂತೆ ಅನರ್ಹ ಶಾಸಕರನ್ನು ಮುಂಬೈನಲ್ಲಿ ಇಟ್ಟುಕೊಂಡಿರುವುದಾಗಿ ಹೇಳಿಲ್ಲ ಎಂದು ಪ್ರಮಾಣ ಮಾಡಲಿ, ನಾವು ನೀವೇ ಹೇಳಿದ್ದು ಎಂದು ಪ್ರಮಾಣ ಮಾಡಲು ಸಿದ್ಧರಿದ್ದೇವೆ ಎಂದು ಸವಾಲು ಹಾಕಿದರು.

ಅನರ್ಹಗೊಂಡ ಶಾಸಕರು ಅವರವರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದಲೇ ಹಿಂದಿನ ಸರಕಾರ ಬಿದ್ದು ಹೋದದ್ದು. ಅದೇ ಕಾರಣಕ್ಕಾಗಿ ಯಡಿಯೂರಪ್ಪನವರು ಸರಕಾರ ರಚನೆಗೆ ರಾಜ್ಯಪಾಲರನ್ನು ಕೋರಿಕೊಂಡದ್ದು. ಇದರಲ್ಲಿ ತಪ್ಪೇನಿದೆ ಕುಮಾರಸ್ವಾಮಿ ಸರಕಾರವಿರುವಾಗ ಕಾಂಗ್ರೆಸ್‌ ಹೇಗೆ ನಡೆದುಕೊಂಡಿತ್ತು ಎನ್ನುವುದು ಗೊತ್ತಿದೆ. ಸರಕಾರ ಬಿದ್ದು ಹೋಗುವುದಕ್ಕೂ ಸಿದ್ದರಾಮಯ್ಯ ಕಾರಣ ಎಂದು ಜೆಡಿಎಸ್‌ನವರೇ ಹೇಳುತ್ತಿದ್ದಾರೆ.
-ಶೋಭಾ ಕರಂದ್ಲಾಜೆ, ಸಂಸದೆ

Advertisement

Udayavani is now on Telegram. Click here to join our channel and stay updated with the latest news.

Next