ಬೆಂಗಳೂರು: ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವ ಹಿಂದಿನ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಬದಲಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.
ಕನಕಪುರಕ್ಕೆ ವೈದ್ಯಕೀಯ ಕಾಲೇಜ್ ಕೊಡುವುದಿಲ್ಲ. ಕೇವಲ ಜಿಲ್ಲಾ ಕೇಂದ್ರಗಳಿಗೆ ಮಾತ್ರ ಎನ್ನುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆಗೆ ಕೆಪಿಸಿಸಿ ಕಚೇರಿಯಲ್ಲಿ ಪ್ರತಿಕ್ರಿಯಿಸಿರುವ ಅವರು, ಅಧಿಕಾರ ಶಾಶ್ವತ ಅಲ್ಲ. ದ್ವೇಷದ ರಾಜಕೀಯ ಮಾಡುವುದಾದರೆ ಮಾಡಲಿ. ನಾನು ದ್ವೇಷದ ರಾಜಕಾರಣ ಮಾಡುತ್ತೇನೆ ಎನ್ನುವ ಸಂದೇಶವನ್ನು ಮುಖ್ಯಮಂತ್ರಿ ಯಡಿಯೂರಪ್ಪ ರವಾನೆ ಮಾಡಿದ್ದಾರೆ. ಸುಧಾಕರ್ ಅವರದು ತಪ್ಪು$ ಎಂದು ನಾನು ಹೇಳುವುದಿಲ್ಲ. ಎಲ್ಲಿಗಾದರೂ ಕೊಡಲಿ. ಆದರೆ, ನಮ್ಮ ಸರ್ಕಾರ ಕನಕಪುರಕ್ಕೆ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಒಪ್ಪಿಗೆ ನೀಡಿತ್ತು. ಅದನ್ನು ಕಿತ್ತುಕೊಳ್ಳುವುದು ನ್ಯಾಯವಲ್ಲ ಎಂದರು.
ಕನಕಪುರಕ್ಕೂ ಕಾಲೇಜು ಕೊಡಲಿ. ಚಿಕ್ಕಬಳ್ಳಾಪುರಕ್ಕೂ ಕೊಡಲಿ.ಯಡಿಯೂರಪ್ಪನವರು ಅವರು ಈ ಬಗ್ಗೆ ನನ್ನ ಜೊತೆ ಮಾತನಾಡಲಿ. ನಾನು ಕೂಡ ಅವರಿಗೆ ಪತ್ರ ಬರೆಯುತ್ತೇನೆ. ಕನಕಪುರಕ್ಕೆ ಕಾಲೇಜು ನೀಡುವ ವಿಚಾರದಿಂದ ಅವರು ಹಿಂದೆ ಹೋಗುವುದು ಬೇಡ. ಯಾರನ್ನೋ ಹೊಸದಾಗಿ ಪಕ್ಷಕ್ಕೆ ಸೇರಿಸಿಕೊಂಡೆ ಎನ್ನುವ ಕಾರಣಕ್ಕೆ ಅಲ್ಲಿನ ಕಾಲೇಜು ತೆಗೆದು ಇಲ್ಲಿಗೆ ಕೊಡುವುದು ಸರಿಯಲ್ಲ ಎಂದು ಹೇಳಿದರು.
ಬೇರೆ ಬೇರೆ ಜಿಲ್ಲೆಗಳಲ್ಲಿ ವಿಶ್ವವಿದ್ಯಾಲಯ ಕೊಟ್ಟಿದ್ದೇವೆ. ಕೆಲವರು ಅಕ್ಕಿ ಕೊಟ್ಟೆ ಅಂತಾರೆ. ಕೆಲವರು ಸೈಕಲ್ಕೊಟ್ಟೆ ಎನ್ನುತ್ತಾರೆ. ಕೆಲವರು ಸಾಲ ಮನ್ನಾ ಮಾಡಿದೆ ಎಂದು ಹೇಳುತ್ತಾರೆ. ಹೀಗಾಗಿ ನಾನು ನನ್ನ ಕ್ಷೇತ್ರಕ್ಕೆ ಏನಾದರೂ ಮಾಡಬೇಕು ಅನ್ನೋದು ನನ್ನ ಲೈಫ್ ಟೈಮ್ ಗುರಿ. ಹೀಗಾಗಿ ಕನಕಪುರ ಕ್ಷೇತ್ರಕ್ಕೆ ಮೆಡಿಕಲ್ಕಾಲೇಜು ಕೊಡಬೇಕು. ಒಂದು ವೇಳೆ ಸರ್ಕಾರ ಕೊಡದಿದ್ದರೆ ನಾನು ಸುಮ್ಮನೆ ಕೂರುವುದಿಲ್ಲ ಎಂದು ಹೇಳಿದರು.
ಇದೇ ವೇಳೆ, ಟಿಪ್ಪು ಸುಲ್ತಾನ್ ವಿಷಯವನ್ನು ಪಠ್ಯ ಪುಸ್ತಕದಿಂದ ಕೈ ಬಿಡುವ ಸರ್ಕಾರದ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದ ಅವರು, ರಾಷ್ಟ್ರಪತಿಗಳೇ ಇಲ್ಲಿಗೆ ಬಂದು ಟಿಪ್ಪು$ಪರ ಭಾಷಣ ಮಾಡಿದ್ದಾರೆ. ಆದ್ದರಿಂದ ಇದರಲ್ಲಿ ಹೊಸದಾಗಿ ನಾನೇನು ಹೇಳುವುದಿದೆ. ಇತಿಹಾಸ ತಿರುಚಬಾರದು ಎಂದರು.